August 20, 2012

ನಾವೇಕೆ ಹೀಗೆ ... ? - 2

ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತ, ಅವರ ಊರಲ್ಲಿ function ಮುಗಿಸಿಕೊಂಡು ಬಂದಿದ್ದ. ಹೇಗಿತ್ತು ಎಂದು ಕೇಳಿದೆ. "ಚೆನ್ನಾಗಿತ್ತು ಮಗ, ನಾವೆಲ್ಲ ತುಂಬಾನೇ enjoy ಮಾಡಿದ್ವಿ" ಎಂದ. ಹಾಗೆ ನಮ್ಮ ಹರಟೆ ಮುಂದುವರೆದಿತ್ತು ಮಾತಿನ ಮಧ್ಯೆ ಅವನು ಈ ಹಳ್ಳಿಗರನ್ನು ಕುರಿತು ಹೇಳಿದ; "ತುಂಬಾ ಅತೀ ಮಾತಾಡುತ್ತಾರೆ ಮಗ, ಅತೀಯಾದ ಪ್ರೀತಿ ತೋರ್ಸುವಂತೆ ಮಾತಾಡುತ್ತಾರೆ, ನಾಲ್ಕು ಜನ ಸೇರಿದಾಗ ಹೇಗೆ ನಡೆದುಕೊಳ್ಳಬೇಕು ಎನ್ನುವುದೇ ತಿಳಿದಿಲ್ಲ. ಅದೇ ನಗರದ ಜನಗಳಿಗೂ, ಹಳ್ಳಿಯ ಜನಗಳಿಗೂ ಇರುವ ವ್ಯತ್ಯಾಸ. ಅವರ ಜೊತೆ ಹೊರಗಡೆ ಹೋದರೆ ನಮಗೇನೋ ಒಂದು ತರಹ ಮುಜುಗರವಾಗುತ್ತದೆ" ಎಂದು. ಅವನಿಗನ್ನಿಸಿದ್ದನ್ನು ಹೇಳಿದ. ನಂತರ ಅವನ ಹತ್ತಿರ ನಾನಿದರ ಬಗ್ಗೆ ಚರ್ಚೆ ಮಾಡಲು ಹೋಗಲಿಲ್ಲ. ಈ ವಿಚಾರವಾಗಿ ನನ್ನ ಮನಸ್ಸಿನಲ್ಲಿ ಬಂದ ಆಲೋಚನೆಯನ್ನು ಇಲ್ಲಿ ಹೇಳಲು ಇಚ್ಚಿಸುತ್ತೇನೆ.

ನನ್ನ ಸ್ನೇಹಿತ ಹೇಳುವುದನ್ನು ಒಪ್ಪುವುದೇ ಆದರೆ; ನಾವು ನಗರದ ಜನಗಳು ಯೋಗ್ಯರ ? ಎಂಬ ಪ್ರಶ್ನೆ ಮೂಡುತ್ತದೆ..!! ನಾವುಗಳು ಹೇಳುವ Common Sense (ಜನಗಳೊಂದಿಗೆ ನಡೆದುಕೊಳ್ಳಬೇಕಾದ ರೀತಿ) ಇಲ್ಲದಿರಬಹುದು. ಆದರೆ ನಾಲ್ಕು ಜನಗಳೊಂದಿಗೆ ಒಂದು ರೀತಿ, ಅವರವರ ಮನೆಗಳಲ್ಲೇ ಒಂದು ರೀತಿ ನಡೆದುಕೊಳ್ಳುವ ನಾಟಕ ಅವರಿಗೆ ತಿಳಿದಿಲ್ಲ. ಅವರದು ಎಲ್ಲಾ ಕಡೆ ಒಂದೇ ರೀತಿಯ ನಡವಳಿಕೆ. ನಮ್ಮ ಹಾಗೆ ಬೂಟಾಟಿಕೆ ಜೀವನ ಅವರಿಗೆ ತಿಳಿಯದು.

ಹತ್ತಿರದ ಸಂಬಂಧಿಕರೊಂದಿಗೆ ಬಹಳ ಪ್ರಿಯರಂತೆ ವರ್ತಿಸಿ, ನಾಲ್ಕು ಮಂದಿಯ ಮುಂದೆ ಮಹಾ ಸಭ್ಯರ ಹಾಗೆ ವರ್ತಿಸಿ, ಮತ್ತೆ ಮನೆಗೆ ಹಿಂತುರಿಗಿದ ಮೇಲೆ ಅವರಿವರ ನಡವಳಿಕೆಯನ್ನು ಆಡಿಕೊಳ್ಳುವ ಸ್ವಭಾವ ಹಳ್ಳಿಯವರಲ್ಲಿ ಕಾಣಲಾಗುವುದಿಲ್ಲ.

ಅವರ ಜೊತೆ ಹೊರಗಡೆ ಹೋಗಲು ಮುಜುಗರವಂತೆ. ನಮ್ಮದು City Culture ಎಂದು ಹೇಳುತ್ತಾರಲ್ಲ, ದಿನಾಗಲೂ ಪಾನಮತ್ತರಾಗಿ, ಮಹಾವಿದ್ಯಾವಂತರಿನಿಸಿಕೊಂಡರೂ ಲಂಚ ಸ್ವೀಕಾರ ಮಾಡುತ್ತ ಬದುಕುತ್ತಿದ್ದಾರಲ್ಲ ಇಂತವರು ಸಮಾಜದಲ್ಲಿ ಗೌರವಸ್ಥರು, ಜನರ ನಡುವೆ ನಟಿಸುವವರನ್ನು ನಾವು ಸಭ್ಯರು ಎಂದು ಕರೆಯಬೇಕು...!!!

ವಿಧ್ಯೆ, ವಿನಯತೆ ಮತ್ತು ವಿಧೇಯತೆ ತರಬೇಕು ಯಾವುದೋ ದೊಡ್ಡ ಪರೀಕ್ಷೆಗಳನ್ನು ಕಟ್ಟಿ, ಸರ್ಕಾರಿ ಕೆಲಸಗಿಟ್ಟಿಸಿಕೊಂಡು ಲಂಚವನ್ನು ಸ್ವೀಕರಿಸಿ, ಶ್ರೀಮಂತರೆನಿಸಿಕೊಂಡವರಿಗೆ ಸಮಾಜದಲ್ಲಿ ಗೌರವ; ಇಂತವರನ್ನು ನಾವು ಸಭ್ಯರು ಎಂದು ಒಪ್ಪಿಕೊಳ್ಳಬೇಕು. ಇದು ವಿನಯತೆನಾ ? ಇತರರನ್ನು ಅವರ ಬೆನ್ನ ಹಿಂದೆ ಆಡಿಕೊಳ್ಳುವುದು ವಿಧೇಯತೆನಾ ? ಎಂಬ ಪ್ರಶ್ನೆ ಅವರು ಕೇಳಿಕೊಳ್ಳಬಾರದೇಕೆ ?

ಇಂತಹ ಕೆಲವು ಗುಣಗಳು, ಕೆಲವರಿಗೆ ಹುಟ್ಟಿನಿಂದ, ಅವರು ಬೆಳೆದ ಪರಿಸರದಿಂದ, ತಂದೆ ತಾಯಿಯ ಸಂಸ್ಕಾರದಿಂದ ಬಂದಿರುತ್ತದೆ, ಅದನ್ನು ನಾವು ಬದಲಾಯಿಸುವುದು ಅಸಾಧ್ಯ. ಎಷ್ಟೇ ವಿಧ್ಯೆ, ಹಣ ಸಂಪಾದಿಸಿದರೂ, ಎಂತಹ ದೊಡ್ಡ ನೌಕರಿಯಲ್ಲಿದ್ದರೂ ತಮ್ಮ ಅಲ್ಪ ಬುದ್ದಿ ತೋರಿಸುತ್ತಿರುತ್ತಾರೆ. ಇದಕ್ಕೆ ಉತ್ತಮ ಹೋಲಿಕೆ ಎಂದರೆ 'ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸುವ ಹಾಗೆ'. ನನ್ನ ಸ್ನೇಹಿತ ಹೇಳಿದ ಹಾಗೆ ಹಳ್ಳಿಯವರದು ಅತೀಯಾದ ಪ್ರೀತಿಯೆ ಇರಬಹುದು, ಆದರೆ ಅವರ ಪ್ರೀತಿಯಲ್ಲಿ ಕಲ್ಮಷವಿರುವುದಿಲ್ಲ, ಅವರ ನಡತೆಯಲ್ಲಿ ನಾಟಕವಿರುವುದಿಲ್ಲ, ಬೂಟಟಿಕೆಯಿರುವುದಿಲ್ಲ.

ಇದನ್ನೆಲ್ಲಾ ಯೋಚಿಸಿದ ಮೇಲೆ ನನಗೆ ಹೊಳೆದ್ದಿದ್ದು ಒಂದು ಪ್ರಶ್ನೆ; ಸಮಾಜ ಎನ್ನುವುದಕ್ಕಿಂತ ಈ ದಿನದ ಸಮಾಜ ಗೌರವಿಸುವುದು ವ್ಯಕ್ತಿಯ ವ್ಯಕ್ತಿತ್ವವನ್ನೋ ಅಥವಾ ಅವರ ಬಳಿಯಿರುವ ಹಣವನ್ನೋ ?

August 4, 2012

ನಾವೇಕೆ ಹೀಗೆ ...? - ಎಲ್ಲರೊಳಗೊಂದಾಗು ಮಂಕುತಿಮ್ಮ

ಮನುಷ್ಯನ ಮನಸ್ಸು ಎಂಬುದು ಅತೀ ಸೂಕ್ಷ್ಮ. ನಾವು ಮಾನಸಿಕವಾಗಿ ಸದೃಢವಾಗಿದ್ದೇವೆ ಎಂದು ಏನೇ ಹೇಳಿಕೊಂಡು ಓಡಾಡಬಹುದು. ಆದರೆ, ಜೀವನದಲ್ಲಿ ಬರುವ ಘಟನೆಗಳು, ವ್ಯಕ್ತಿಗಳು, ಸಂದರ್ಭಗಳು ನಮ್ಮ ಮನೋಸ್ಥೈರ್ಯವನ್ನು ನಿರ್ಧರಿಸುತ್ತದೆ. ಅದಾವುದೋ ಒಂದು ಸಂದರ್ಭದಲ್ಲಿ ಮಾನಸಿಕವಾಗಿ ನಾವು ಕುಗ್ಗಬಹುದು ಅಥವಾ ಹಿಗ್ಗಿ ಮಹತ್ವವಾದದ್ದನ್ನು ಸಾಧಿಸಬಹುದು. ನಾನಿಲ್ಲಿ ಹೇಳಲು ಹೊರಟಿರುವ ವಸ್ತುವೆಂದರೇ ನಮ್ಮ ಈ ಎರಡು ರೀತಿಯ ಬದಲಾವಣೆ ಜೊತೆಗೆ ಬದಲಾಗುವ ಸಮಾಜದ ಪ್ರತಿಕ್ರಿಯೆ.

ವ್ಯಕ್ತಿಯೊಬ್ಬ ಮಹತ್ವವಾದದನ್ನು ಸಾಧಿಸಿ ಪ್ರಸಿದ್ದಿಹೊಂದಿದಾಗ ಸಮಾಜ ಆ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತದೆ. ವ್ಯಕ್ತಿಯ ಹೆಸರನ್ನು ಉಪಯೋಗಿಸಿಕೊಂಡು ಲಾಭಹೊಂದುವವರೂ ಇದ್ದಾರೆ. ಅದೇ ಅಮಲಿನಲ್ಲಿ ತನ್ನ ಹಿನ್ನಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸದಿದ್ದರೆ ಅವನು ಮತ್ತೆ ಅಧಃಪತನಕ್ಕೆ ಇಳಿಯುತ್ತಾನೆ. ಆ ಸಂದರ್ಭದಲ್ಲಿ ಇದೇ ಸಮಾಜ ಆ ವ್ಯಕ್ತಿಯನ್ನು ಧೂಷಿಸುತ್ತದೆ.

ಅದೇ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ, ಅವನೊಂದಿಗೆ ಯಾರು ಬರುವುದಿಲ್ಲ, ಅವನಾಗೆ ತಿಳಿದುಕೊಂಡು ಮನಸ್ಸನ್ನು ಕಲ್ಲಾಗಿಸಿಕೊಂಡು ಒಬಂಟಿಗನಾಗಿ ಹೊರಬಂದರೆ ಅವನಿಗೆ ಸಮಾಜದಲ್ಲಿ ಗೌರವ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಪರಸ್ಪರ ಸಹಾಯಕವಾಗಿ ಮುಂದೆಬರಲು ನಾವೇಕೆ ಒಪ್ಪಿಕೊಳ್ಳುವುದಿಲ್ಲ? ನಮ್ಮ ಮನಸ್ಸು ಬಯಸುವಂತೆ, ನಾವು ಯರನ್ನಾದರೂ ಅರ್ಥ ಮಾಡಿಕೊಳ್ಳುವುದರಲ್ಲಾಗಲಿ, ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವುದರಲ್ಲಿ ಏನು ತಪ್ಪಿದೆ ? ನಾನು, ನನ್ನಿಂದ ಅನ್ನುವುದಕ್ಕಿಂತ ನಾವು, ನಮ್ಮಿಂದ, ನಮ್ಮೊಟ್ಟಿಗೆ ಎಂದು ಹೇಳಿಕೊಳ್ಳುವುದರಲ್ಲಿರುವ ಸುಖ ನಮಗೆ ಯಾಕೆ ಅರ್ಥವಾಗುತ್ತಿಲ್ಲ ?

ಮನೋರೋಗಿಯ ಸ್ಥಿತಿ ಸಹಜವಾಗಲು ಹಲವು ಕಾರಣವಿರುತ್ತದೆ. ಅವರು ಇರುವ ಪರಿಸರ, ಅವರನ್ನು ನೋಡಿಕೊಳ್ಳುವ ರೀತಿ, ಅವರ ಸುತ್ತ ನಡೆಯುವ ಘಟನೆಗಳು, ಹೀಗೆ ವಿವರಿಸಬಹುದು. ಹುಷಾರಾಗಿ ಬಂದ ವ್ಯಕ್ತಿಗೆ ತಾನು ಹುಷಾರಾಗಲು ಪ್ರಭಾವ ಬೀರಿದ ಕೊನೆಯ ವ್ಯಕ್ತಿ ಅಥವಾ ಘಟನೆ ಮಾತ್ರವೇ ಮನಸ್ಸಿನಲ್ಲಿ ನಿಲ್ಲುತ್ತದೆ. ಆ ವ್ಯಕ್ತಿ / ಘಟನೆಯನ್ನು ಪದೇ, ಪದೇ ಮೆಲಕುಹಾಕಬಹುದು. ಅದರ ಬಗ್ಗೆಯೇ ಹೆಚ್ಚು ಮಾತಾಡಲೂಬಹುದು. ಅದು ತಪ್ಪಾ? ಆದರೆ, ಯಾವುದಾದರು ಕಾರಣದಿಂದ ಆತ ಸರಿಹೋದ ಎಂದು ಯೋಚಿಸಿ ಸಂತೋಷಪಡುವ ಬದಲು, ನನ್ನ ಕಾರಣದಿಂದ ಯಾಕೆ ಸರಿ ಹೋಗಲಿಲ್ಲ ಎಂದು ಯೋಚಿಸುತ್ತಾರಲ್ಲ ಯಾಕೆ? ಸಮಾಜಕ್ಕೆ ವ್ಯಕ್ತಿಯೊಬ್ಬ ಸರಿಹೋಗುವುದು ಮುಖ್ಯವೋ ಅಥವಾ ತಮ್ಮ ದೆಸೆಯಿಂದ ಎಂಬ ಪ್ರತಿಷ್ಟೆ ಮುಖ್ಯವೋ ತಿಳಿಯುತ್ತಿಲ್ಲ. ನಾನು, ನನ್ನಿಂದ ಎಂಬುದು ಸ್ವಾರ್ಥ ಭಾವ ಎಂದು ಈ ಸಮಾಜಕ್ಕೆ ಯಾಕೆ ಅರ್ಥವಾಗುತ್ತಿಲ್ಲ?

ಇಂತಹ ಸ್ವಾರ್ಥ ಭಾವ ನನ್ನಲ್ಲಿ ಬೆಳೆಯಕೂಡದು ಎಂದೆನ್ನಿಸಿ "ಎಲ್ಲರೊಳಗೊಂದಾಗು ಮಂಕುತಿಮ್ಮ" ಅಂತಲ್ಲದಿದ್ದರೂ ಕಡೇ ಪಕ್ಷ ಯಾರಾದರು ಒಬ್ಬರಿಗೆ ನನನ್ನು ನಾನು ಅರ್ಪಿಸಿಕೊಳ್ಳೋಣವೆಂದರೇ ಸಮಾಜ ನನ್ನನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ? ಬಹುದಿನಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ ನಾವ್ಯಾಕೆ ಹೀಗೆ ?