April 22, 2019

ಸಭ್ಯ ಸಂಸೃತಿಯ ವಿರುದ್ಧಾರ್ಥಕ - ಚೀನಾ

ಸಂಸ್ಕೃತಿ, ಸಂಪ್ರದಾಯದ ವಿಚಾರ ಬಂದಾಗ ಪ್ರಾಚೀನ ಕಾಲದಿಂದಲೂ ಭಾರತ ಮುಂಚೂಣಿಯಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್ ಕಾಲದ ಮೌಲ್ಯಗಳು ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿತು. ತ್ರೇತಾಯುಗದಲ್ಲಿ ರಾಮ, ತನ್ನ ಶ್ರೇಷ್ಠ ಬದುಕನ್ನು ಬದುಕಿ ಲೋಕಕ್ಕೆಲ್ಲ ಮಾದರಿಯಾದ. ಪಿತೃವಾಕ್ಯ ಪರಿಪಾಲಕನಾಗಿ, ತ್ಯಾಗದ ಅತ್ಯುನ್ನತ ಮಟ್ಟವನ್ನು ತೋರಿಸಿಕೊಟ್ಟ. ರಾಕ್ಷಸರನ್ನು ಸಂಹಾರ ಮಾಡಿ, ಸಜ್ಜನರಿಗೆ ಒಳಿತು ಮಾಡಿದ. ದ್ವಾಪರಯುಗದಲ್ಲಿ ಶ್ರೀ ಕೃಷ್ಣ, ತನಗಾಗಿ ಬಂದ ಎಲ್ಲವನ್ನು ತ್ಯಾಗ ಮಾಡುತ್ತಾ, ಭಗವದ್ಗೀತೆ ಎಂತಹ ಅತ್ಯುನ್ನತ ಮಂತ್ರವನ್ನು ಬೋಧಿಸಿ ಗೀತಾಚಾರ್ಯನಾಗಿ ಜಗತ್ತಿಗೆ ಗುರುವಾಗಿ ಬಾಳಿದ. ಇನ್ನು ಕಲಿಯುಗದಲ್ಲಿ, ಶ್ರೀ ರಾಮಕೃಷ್ಣ, ಗೌತಮ ಬುದ್ಧ, ಸ್ವಾಮೀ ವಿವೇಕಾನಂದ, ಯೋಗಿ ಅರವಿಂದ, ಮಹಾತ್ಮ ಗಾಂಧೀಜಿ ಹೀಗೆ ಮುಂತಾದವರು ನಮ್ಮ ಭಾರತೀಯ ಸಂಸ್ಕೃತಿಯ ಕನ್ನಡಿಯಾಗಿ ಜಗತ್ತಿಗೆ ಮಾರ್ಗದರ್ಶಕರಾಗಿದ್ದಾರೆ. ಹಾಗೆಂದರೆ ಭಾರತದಲ್ಲಿ ಕೆಟ್ಟದ್ದು ಇರಲಿಲ್ಲ ಎಂದರೆ ತಪ್ಪಾಗುತ್ತದೆ. ರಾಮನ ಕಾಲದಲ್ಲಿ ರಾವಣ, ಕೃಷ್ಣನ ಕಾಲದಲ್ಲಿ ಕಂಸ, ಕೌರವರು ಇದ್ದರು. ಏನೇ ಹೇಳಿ, ೧೦೦೦೦ ವರ್ಷ ಇತಿಹಾಸವಿರುವ ಭಾರತದ ಸಂಸೃತಿ, ಜಗತ್ತಿಗೆ ಎಂದಿಗೂ ಮಾರಕ ಆಗಲಿಲ್ಲ. ಜಗತ್ತಿನಲ್ಲಿ ಎಂದಿಗೂ ಭಯೋತ್ಪಾದನೆ ಮಾಡಲಿಲ್ಲ. ಆದರೆ ಜಗತ್ತಿನ ಅನೇಕ ಭಾಗ ಈ ವಾದಕ್ಕೆ ಹೊರತು. ಕಾಲದಿಂದ ಕಾಲಕ್ಕೆ ಸಂಸೃತಿ ನಾಶವಾಗಿತ್ತಲೇ ಇದೆ.

ಭಾರತದಲ್ಲಿ ಯಾವುದೇ ಯುದ್ಧವಾದರೂ ಜನಜೀವನ ಬದಲಾಗುತ್ತಿರಲಿಲ್ಲ. ರಾಜರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಕಾದಾಡುತ್ತಿದ್ದರೆ ಹೊರತು ಸಾಮಾನ್ಯ ಜನತೆಗೆ ತೊಂದರೆ ಉಂಟು ಮಾಡುತ್ತಿರಲಿಲ್ಲ. ಯುದ್ಧವೆಂದರೆ ಅದು ಧರ್ಮ ಯುದ್ಧವಾಗಿರುತ್ತಿತ್ತು. ಅದರೆ, ಜಗತ್ತಿನ ಮೇಲೆ ದಾಳಿ ಮಾಡಿದ ಅಲೆಕ್ಸಾಂಡರ್, ಹೂಣರು, ಶಖರು, ಕುಶಾನರು ತಾವು ದಾಳಿ ಮಾಡಿ ಆಯಾ ಪ್ರಾಂತ್ಯದ ರಾಜರುಗಳನ್ನು ಕೊಲ್ಲುವುದಲ್ಲದೆ ಸಾಮಾನ್ಯ ಜನರ ಮೇಲೂ ದಾಳಿ ಮಾಡುತ್ತಿದ್ದರು. ಹೂಣರ ಆಕ್ರಮಣಕ್ಕೆ ಗ್ರೀಕಿನ ಸಂಸ್ಕೃತಿ ಸಂಪೂರ್ಣ ನಾಶವಾಯಿತು. ಸ್ಪೇನಿನ ದಾಳಿಯಿಂದಾಗಿ ಅಮೇರಿಕಾದ ನಾಗರೀಕತೆ ಇಲ್ಲವಾಯಿತು. ಯೂರೋಪಿನ್ ಖೈದಿಗಳ ಆಕ್ರಮಣದಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲಾಂಡ್ ನಾಗರೀಕತೆ ಅಂತ್ಯಕಂಡಿತು. ಈಗಲೂ ಆಫ಼್ರಿಕಾ ಖಂಡದ ಅನೇಕರು ಸ್ವೀಡನ್ ಅಂತಹ ರಾಷ್ಟ್ರಗಳಲ್ಲಿ ಟಾಕ್ಸಿ ಚಾಲಕರಾಗಿ ಜೀವನ ನಡೆಸುತ್ತಿದ್ದಾರೆ. ಯೂರೋಪಿನ ಆಕ್ರಮಣದಿಂದಾಗಿ ನೈಲ್ ನದಿ ತೀರದಲ್ಲಿದ್ದ ಈಜಿಪ್ಟಿನ ನಾಗರೀಕತೆ ಇಲ್ಲವಾಯಿತು. ಅರಬ್ ಮತ್ತು ಬ್ರಿಟೀಷರ ಆಕ್ರಮಣ ಭಾರತದ ವೇದ ಮತ್ತು ಗುರುಕುಲ ಶಿಕ್ಷಣ ಪದ್ಧತಿ ನಾಶವಾಗಿ, ನಮ್ಮನ್ನು ಮಾನಸೀಕವಾಗಿ ಗುಲಾಮರನ್ನಾಗಿ ಮಾಡುವ ಆಂಗ್ಲ ಶಿಕ್ಷಣ ಪದ್ಧತಿ ತಂದರು. ನಮ್ಮ ಜವಳಿ ಮತ್ತು ಉಕ್ಕು ಉದ್ಯಮಗಳನ್ನು ನಾಶಮಾಡಿದರು. ಹೀಗೆ, ಇತಾಹಸದ ಉದ್ದಕ್ಕೂ ಜಗತ್ತಿನ ಬಹುತೇಕ ರಾಷ್ಟ್ರಗಳು ಇತರರ ಮೇಲೆ ಆಕ್ರಮಣ ಮಾಡಿ ಅಲ್ಲಿನ ಸಂಸ್ಕೃತಿಯನ್ನು ನಾಶಮಾಡಲು ಯತ್ನಿಸಿದ್ದಾರೆ. 
china; the rogue country
ಇದು ಇತಿಹಾಸದ ಕಥೆಯಾದರೆ, ಇಪ್ಪತ್ತೊಂದನೆ ಶತಮಾನದಲ್ಲಿ ಸಭ್ಯ ಸಂಸ್ಕೃತಿಗೆ ವಿರುದ್ದಾರ್ಥಕ ಎಂಬಂತೆ ಬಾಳುತ್ತಿರುವ ದೇಶವೊಂದಿದೆ. ಅದುವೇ, ಚೀನಾ! ಸರಳವಾಗಿ ಹೇಳುವುದಾದರೆ, ಭಾರತ 'ಅಥಿತಿ ದೇವೋ ಭವ' ಎಂಬುದನ್ನು ಅಕ್ಷರಶಃ ಪಾಲಿಸುತ್ತದೆ. ನಾನು ಕಂಡಿರುವ ಹಾಗೆ, ಯೂರೋಪ್ ರಾಷ್ಟ್ರಗಳು ಭಾರತದವರಷ್ಟು ಅಲ್ಲದಿದ್ದರೂ ಅವರ ಸಂಸ್ಕೃತಿಗೆ ಅನುಗುಣವಾಗಿ ಅಥಿತಿಗಳನ್ನು ಸತ್ಕರಿಸುತ್ತಾರೆ. ಈ ವಿಚಾರದಲ್ಲಿ ಜಪಾನ್ ಭಾರತಕ್ಕೆ ಸರಿ ಸಮಾನವಾಗಿ ನಿಲ್ಲುತ್ತದೆ. ಆದರೆ, ಚೀನಾ ಮಾತ್ರ ಹಾಗಲ್ಲ. ಎಲ್ಲರನ್ನೂ ತಮಗಿಂತಲೂ ಕೆಳಮಟ್ಟದಲ್ಲಿ ನೋಡುವ ಮತ್ತು ಆಡಿಕೊಳ್ಳುವ ಒಂದು ನೀಚ ಮನಸ್ಥಿತಿ.  ಕೆಲ ತಿಂಗಳುಗಳ ಹಿಂದೆ ನಾನು, ನನ್ನ ಸ್ನೇಹಿತ ಮತ್ತು ಸಹೋದ್ಯೋಗಿಗಳು ಕಚೇರಿಯ ಕೆಲಸದ ಮೇರೆಗೆ ಚೀನಾಕ್ಕೆ ಹೋಗಿದ್ದೆವು. ಅದೊಂದು ಸಂಜೆ ನಾನು, ನನ್ನ ಸ್ನೇಹಿತ ಊಟ ಮಾಡಲು ಹೋಟೆಲನ್ನು ಹುಡುಕುತ್ತಾ ಹೊರಟೆವು. ೧೫-೨೦ ನಿಮಿಷ ಹುಡುಕಿದ ನಂತರ ಒಂದು ಹೋಟಿಲಿಗೆ ಹೋದೆವು. ಎಲ್ಲಾ ಚೀನೀ ಭಾಷೆಯಲ್ಲಿದ್ದ ಕಾರಣ ಚಿತ್ರವನ್ನು ನೋಡಿ ನಾವು ಅರ್ಥ ಮಾಡಿಕೊಳ್ಳಬೇಕಿತ್ತು ಅಥವಾ ಗೂಗಲ್ ಬಳಸಿ ಅವರೊಂದಿಗೆ ಸಂಭಾಷಿಸಬೇಕಿತ್ತು. ಇದರ ಮಧ್ಯದಲ್ಲಿ ನಾನು ಸಸ್ಯಾಹಾರಿ ಬೇರೆ. ಮೊಟ್ಟೆ ಅಥವಾ ಮಷ್ರೂಮ್ ಕೂಡ ತಿನ್ನುವುದಿಲ್ಲ. ಇದನ್ನೆಲ್ಲ ಅವರಿಗೆ ಗೂಗಲ್ ಮೂಲಕ ತಿಳಿಸಬೇಕಾದರೆ ನನಗಂತೂ ಸಾಕಾಯಿತು. ಅಷ್ಟೇ ಆಗಿದ್ದರೆ ಇದನ್ನು ಬರೆಯುವ ಅಗತ್ಯವಿರುತ್ತಿರಲ್ಲಿಲ್ಲ. ನಾನು ಅವರಿಗೆ ಭಾಷಂತರಿಸಿ ಹೇಳಬೇಕಾದರೆ ಹೂಟೆಲಿನ ಜನ ನಗುತ್ತಿದ್ದರು, ಅವರ ಮುಖಭಾವವೇ ಹೇಳುತ್ತಿತ್ತು ಆ ನಗು ವ್ಯಂಗ್ಯ ಮತ್ತು ಆಡಿಕೊಳ್ಳುವಿಕೆ ಇಂದ ತುಂಬಿತ್ತು ಎಂದು. ನಾನು ಸಸ್ಯಾಹಾರಿ, ಮೊಟ್ಟೆ ಸಹ ತಿನ್ನುವುದಿಲ್ಲ ಎಂದು ತಿಳಿದ ಕೂಡಲೇ 'ಈತ ಮತ್ತೇನು ತಿನ್ನಬಹುದು?' ಎಂಬಂತೆ ಇದ್ದ ಆ ಹೋಟೆಲಿವರ ಮುಖಭಾವ ನನಗೆ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಈ ರೀತಿ ಭಾಷೆ ಗೊತ್ತಿಲ್ಲದೆ ಊಟಕ್ಕಾಗಿ ಯೂರೋಪಿನಲ್ಲೂ ನಾನು ಒದ್ದಾಡಿದ್ದೆ. ಆದರೆ, ಅಲ್ಲಿನ ಜನರಾರು ಈ ರೀತಿ ವ್ಯಂಗ್ಯ ಮಾಡಿರಲಿಲ್ಲ ಮತ್ತು ಆಡಿಕೊಳ್ಳುವ ನಗು ನಕ್ಕಿರಲಿಲ್ಲ. ಬದಲಾಗಿ, ನಾನು ಹೇಳಿದನ್ನು ಅರ್ಥ ಮಾಡಿಕೊಂಡ ಮೇಲೆ ಖುಷಿಯಿಂದ ನಗೆ ಬೀರಿದ ಅನುಭವ ನನಗೆ ಜರ್ಮನಿ, ಫ಼್ರಾನ್ಸಿನಲ್ಲಿ ಆಗಿದೆ. ಇದು ನಮಗೆ ಪರಿಚಯವಿಲ್ಲದ ಅಲ್ಲಿನ ಸಾಮಾನ್ಯ ನಾಗರೀಕರ ಮನಸ್ಥಿತಿ.
Don't Care Attitude
ನನ್ನ ಸ್ನೇಹಿತ; ತನ್ನ ಚೀನಿ ಸಹೋದ್ಯೋಗಿಗಳೊಂದಿಗೆ ಮತ್ತು ನಾನು ನಮ್ಮ ಸಹೋದ್ಯೋಗಿಗಳೊಂದಿಗೆ ೧೩ ದಿನಗಳ ಮಟ್ಟಿಗೆ 'ಜೀಲಿ' ಕಂಪನಿಯ ಕಚೇರಿಗೆ ಹೋಗಿದ್ದೆವು. ಆ ಕಚೇರಿ ಒಳಗೆ ಹೋಗಬೇಕಾದರೆ ಅವರದೇ ಆದ ನಿಯಮಗಳನ್ನು ಪಾಲಿಸಬೇಕಾಗಿತ್ತು. ಆ ಕಂಪನಿಯ ಅತಿಥಿ ಪಾಸ್ ನಾವು ತೆಗೆದುಕೊಳ್ಳಬೇಕಿತ್ತು. ಇದು ಅಲ್ಲಿದ್ದಷ್ಟು ದಿವಸ ದಿನಾಗಲೂ ಮಾಡಬೇಕಾಗಿತ್ತು. ದಿನವೂ ಚೀನಿ ಸಹೋದ್ಯೋಗಿಗಳಿದ್ದ ಕಾರಣ ನಮಗೆ ಎಲ್ಲವೂ ಸುಗಮವಾಗಿತ್ತು. ನನ್ನ ಸ್ನೇಹಿತನಿಗೂ ಅವರ ಸಹೋದ್ಯೋಗಿಗಳ ಕಾರಣ ಅಲ್ಲಿನ ಪ್ರಕ್ರಿಯೆ ಸುಗಮವಾಗಿತ್ತು. ನಮ್ಮ ೧೩ ದಿನಗಳ ಕೆಲಸಗಳು ಮುಗಿದ ನಂತರ ನಾವು ಹೊರಡಲು ಅಣಿಯಾದೆವು. ನನ್ನ ಸ್ನೇಹಿತ ಮಾತ್ರ ಮತ್ತೊಂದು ದಿನ ಜೀಲಿ ಕಚೇರಿಗೆ ಹೋಗಬೇಕಿದ್ದ ಕಾರಣ ಆತ ಒಂದು ದಿನದ ಮಟ್ಟಿಗೆ ಅಲ್ಲೇ ಉಳಿದುಕೊಂಡ. ಆದರೆ, ಅವನ ಚೀನಿ ಸಹೋದ್ಯೋಗಿಗಳು ಯಾರೂ ಅವನನ್ನು ಲೆಕ್ಕಿಸದೆ ತಮ್ಮ ತಮ್ಮಊರುಗಳಿಗೆ ವಾಪಸ್ಸು ಹೊರಟೇ ಹೋದರು.  ಅವನು ನಮ್ಮ ಹತ್ತಿರ ಅವನ ಪರಿಸ್ಥಿತಿಯನ್ನು ಹೇಳಿಕೊಂಡ. ನಾವುಗಳು ಜೀಲಿ ಉದ್ಯೋಗಿಗಳೊಂದಿಗೆ ಮಾತಾಡಿ, ನನ್ನ ಸ್ನೇಹಿತನಿಗೆ ಮಾರನೆ ದಿವಸದ ವ್ಯವಸ್ಥೆ ಮಾಡಿ ಹೊರಟೆವು. ತಮ್ಮ ದೇಶಕ್ಕೆ ಅತಿಥಿಯಾಗಿ ಬಂದಿರುವ ತಮ್ಮ ಸಹೋದ್ಯೋಗಿಯೊಬ್ಬನನ್ನು ನೋಡಿಕೊಳ್ಳುವ ಕನಿಷ್ಠ ಸೌಜನ್ಯ ಕೂಡ ಅಲ್ಲಿನ ಜನಗಳಿಗೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು ನಮಗೆ. ಒಬ್ಬ ವ್ಯಕ್ತಿಯನ್ನು ತಮ್ಮ ಕೆಲಸಕ್ಕಾಗಿ ಬೇರೆ ದೇಶದಿಂದ ಅತಿಥಿಯಾಗಿ ಕರೆಸಿಕೊಂಡು, ಆತನಿಗೆ ಆಲ್ಲಿನ ಭಾಷೆ ಪರಿಚಯವಿಲ್ಲ ಎಂಬುದು ತಿಳಿದು, ತಮ್ಮ ಕೆಲಸವಾದ ನಂತರ ತಮ್ಮ ಪಾಡಿಗೆ ತಾವು ಇದ್ದು ಬಿಡುವಂತಹ ಹೀನ ಮನಸ್ಥಿತಿ ಅವರದ್ದು. ಹೇಳೋದು ಮರೆತಿದ್ದೆ, ನನ್ನ ಸ್ನೇಹಿತನಿಂದಿಗೆ ಬಂದಿದ್ದ ಆತನ ಸಹೋದ್ಯೋಗಿಗಳ ಸಂಖ್ಯೆ ಬರೋಬ್ಬರಿ ೧೨ ಜನ! ೧೨ ರಲ್ಲಿ ಒಬ್ಬರೂ ಸಹ ಆತನನ್ನು ಅತಿಥಿಯಾಗಿ ನೋಡಲೇ ಇಲ್ಲ.

ಈ ಎರಡು ಘಟನೆಗಳು ತೀರ ಚಿಕ್ಕದಾದರೂ ಭಾಷೆ, ಜನ ಜೀವನ ಪ್ರರಿಚಯವೇ ಇಲ್ಲದ ದೇಶಗಳಲ್ಲಿ ತುಂಬಾ ಮುಖ್ಯವಾಗುತ್ತದೆ. ಅಂತಹ ಸಮಯದಲ್ಲಿ ಅಸಹಾಯಕತೆ ಕಾಡುತ್ತದೆ. ಎಲ್ಲಿ, ಯಾಕೆ, ಯಾರು, ಏನು, ಎತ್ತ ಎಂಬ ಎಲ್ಲಾ ಪ್ರಶ್ನೆಗಳು ದೈತ್ಯಾಕಾರವಾಗಿ ಕಾಡುತ್ತದೆ. ನಮ್ಮ ನೆಂಟರ ಮನೆಗೆ ಹೋಗಿ ಅಲ್ಲಿ ರಾತ್ರಿ ತಂಗಿದರೆ ಮನೆಯನ್ನು ಪರಿಚಯಿಸುವ, 'ಎಚ್ಚರವಾದರೆ, ಏನಾದರೂ ಬೇಕಾದರೆ ಕೇಳಿ' ಎಂಬ ಮಾತುಗಳು ನಮ್ಮ ಮನೆಗಳಲ್ಲಿ ಸರ್ವೇ ಸಾಮಾನ್ಯ. ಭಾರತೀಯ ಸಂಸೃತಿ ಚಿಕ್ಕ ವಯಸ್ಸಿನಿಂದಲ್ಲೂ ಮಕ್ಕಳಿಗೆ 'ಅತಿಥಿ ದೇವೋ ಭವ' ಎಂಬುದರ ಅರ್ಥವನ್ನು ಮನದಟ್ಟು ಮಾಡಿಸುತ್ತದೆ. ಇಂತಹ ಶ್ರೇಷ್ಠ ಸಂಸ್ಕೃತಿಯಲ್ಲಿ ಬೆಳೆದ ನಾವು ಚೀನಾದಲ್ಲಿ ನೋಡಿದ್ದು, ಅನುಭವಿಸಿದ್ದು ಅತ್ಯಂತ ನೀಚ ಮಟ್ಟದ ಸಂಸ್ಕೃತಿಯನ್ನು.  'ಅಧಿಕಾರ ಕೊಟ್ಟ ಮೇಲೆ ಮಾತ್ರ ನಮಗೆ ನಮ್ಮ ಯೋಗ್ಯತೆ ಅರಿವಾಗೋದು' ಎಂಬ ಮಾತು ಹಿರಿಯರು ಹೇಳಿದ್ದನ್ನು ಕೇಳಿದ್ದೆ. ಅಧಿಕಾರವಿಲ್ಲದೆ ಈ ರೀತಿ ನಡೆದುಕೊಳ್ಳುವ ಚೀನಾ ನಾಗರೀಕತೆ, ಇನ್ನು ತಾನು ಆಕ್ರಮಿಸಿಕೊಂಡ ಟಿಬೇಟ್, ಈಗ ಪಾಕೀಸ್ತಾನವನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಿರುವ ಪರಿ ಹೇಗಿರಬಹುದು ಎಂಬುದನ್ನು ಊಹಿಸುವುದು ಕಷ್ಟ. ಚೀನಾದ ಆ ನೀಚತನವನ್ನು ಮುಂದಿನ ಸಂಚಿಕೆಯಲ್ಲಿ ಅನಾವರಣ ಮಾಡುವ ಪ್ರಯತ್ನ ಮಾಡುತ್ತೇನೆ. ಏನೇ ಹೇಳಿ, ಸಭ್ಯ ಸಂಸೃತಿಯ ವಿರುದ್ಧಾರ್ಥಕ - ಚೀನಾ...!!!

March 24, 2019

ಚೀನಾ; ನವಯುಗದ ಜಾಗತಿಕ ಶನಿ

ಜಗತ್ತಿನ ಇತಿಹಾಸವನ್ನು ಗಮನಿಸಿದರೆ ಆಯಾ ಕಾಲದಲ್ಲಿ ಒಂದಲ್ಲ ಒಂದು ಸಾಮ್ರಾಜ್ಯ (ರಾಷ್ಟ) ಮತ್ತೊಂದರ ಮೇಲೆ ಆಕ್ರಮಣ ಮಾಡುತ್ತಲೇ ಬಂದಿವೆ. ಭಾರತದ ಮೇಲಂತೂ ದಾಳಿ ಮಾಡಿದವರ ಪಟ್ಟಿ ದೊಡ್ಡದಾಗೆ ಇದೆ. ಗ್ರೀಕರು, ಶಖರು, ಕುಶಾನರು, ಹೂಣರು, ಮೊಘಲರು, ಅರಬ್ಬರು, ಅಫ಼್ಘನ್ನರು, ತುರ್ಕಿಗಳು, ಪೊರ್ಚುಗಿಸರು, ಫ಼್ರೆಂಚರು, ಡಚ್ಚರು, ಬ್ರಿಟೀಷರು, ಪಾಕೀಸ್ತಾನ, ಚೀನಾ. ಇಷ್ಟೂ ದೇಶದವರು, ಕ್ರಿ.ಪೂ. ೩೩೦ ರ ಗ್ರೀಕಿನ ಅಲೆಕ್ಸಾಂಡರಿಂದ ಹಿಡಿದು ಕ್ರಿ.ಶ. ೧೯೯೯ ರ ಪಾಕೀಸ್ತಾನದ ಪರ್ವೇಜ್ ಮುಷರ್ರಫ಼್ ತನಕ ಬಿಟ್ಟು ಬಿಡದೆ ದಾಳಿ ಮಾಡಿದ್ದಾರೆ. ಇವೆಲ್ಲರನ್ನೂ ಎದುರಿಸಿ ಮೆಟ್ಟಿನಿಂತದ್ದು ಭಾರತ. ೧೯೬೨ರ ವರೆಗಿನ ದಾಳಿಗಳು, ಪಾಕೀಸ್ತಾನ ಮತ್ತು ಅದರ ಪ್ರೇರಿತ ಭಯೋತ್ಪಾದನ ದಾಳಿಗಳನ್ನು ಭಾರತ  ಹೊರಾಡಿ ಮೆಟ್ಟಿನಿಂತ್ತಿತ್ತು. ಆದರೆ, ೧೯೬೨ ರಲ್ಲಿ ಚೀನಾ ಎದುರಿಗೆ ರಾಜಕೀಯದ ಕಾರಣದಿಂದಾಗಿ ಭಾರತ ಸೋತು ನಿಂತ್ತಿತ್ತು.

೧೯೪೯ ತನಕ ನೆಹರು, ಟಿಬೆಟ್ ಮತ್ತು ಚೀನಾಗಳನ್ನು ಎರಡು ಬಿನ್ನ ಬಿನ್ನ ರಾಷ್ಟ್ರಗಳನ್ನಾಗಿ ನೋಡುತ್ತಿದ್ದರು. ನೋಡ ನೋಡುತ್ತಿದ್ದಂತೆ ಚೀನಾ ಟಿಬೆಟನ್ನು ಆಕ್ರಮಿಸಿಕೊಂಡು, ಭಾರತದ ಶಿರದಿಂದ ಭುಜದ ಸಮೀಪ ಬಂದೇ ಬಿಟ್ಟಿತು. ಆಗಲೂ ಸಹ ನೆಹರು, "ಹಿಂದಿ, ಚೀನಿ ಭಾಯಿ ಭಾಯಿ" ಎಂದು ತಮ್ಮ ಪಾಡಿಗೆ ಕೂಗುತ್ತಲೇ ಇದ್ದರು. ಅದರ ಪರಿಣಾಮ, ಭಾರತ ಆಕ್ಸಯ್ಚಿನ್ ಮತ್ತು ೧೯೬೨ ರಲ್ಲಿ ಮತ್ತಷ್ಟು ಭೂ ಭಾಗವನ್ನು ಕಳೆದು ಕೊಂಡಿತು. ೨೦೧೪ರ ಹೊತ್ತಿಗೆ ಚೀನಾ ಅರುಣಾಚಲ ಪ್ರದೇಶವನ್ನು ತನ್ನದ್ದು ಎಂದು ಹೇಳುವ ಮಟ್ಟಕ್ಕೆ ಬೆಳೆಯಿತು. ೧೯೬೨ರ ಯುದ್ಧದ ನಂತರ ಚೀನಾ ಭಾರತದ ಮೇಲೆ ಯುದ್ಧ ಮಾಡುವ ಗೋಜಿಗೆ ಹೊಗಲಿಲ್ಲ. ಬದಲಿಗೆ  ಪಾಕೀಸ್ತಾನದ ಮೂಲಕ ಭಾರತದ ಗಮನವನ್ನು ಬೇರೆಡೆ ಹರಿಸಿತು ಮತ್ತು ತನ್ನ ಆಂತರಿಕ ಬಲವನ್ನು ವೃದ್ಧಿಗೊಳಿಸಿಕೊಳ್ಳುವತ್ತ ಗಮನ ಹರಿಸಿತು. ಹಿಮಾಲಯದ ಬುಡದಲ್ಲಿ ತನ್ನ ಹೆದ್ದಾರಿಯನ್ನು ಚೆನ್ನಾಗಿ ಅಭಿವೃದ್ಧಿಗೊಳಿಸಿಕೊಂಡಿತು. ಇದು ಚೀನಾ ಭಾರತದೊಂದಿಗೆ ನಡೆದುಕೊಂಡ ರೀತಿಯಾದರೆ, ಬೇರೆ ದೇಶದೊಟ್ಟಿಗೆ ಅದು ನಡೆದುಕೊಂಡ ರೀತಿ ಭಿನ್ನವಾದದ್ದು.

china; the rogue country

ಎರಡನೇ ಮಹಾಯುದ್ಧದ ನಂತರ, ಚೀನಾ, ಜಗತ್ತಿನಾದ್ಯಂತ ತನ್ನ ಆಕ್ರಮಣಕಾರಿ ಧೋರಣೆಯನ್ನು ತೋರುತ್ತಾ ಬಂದಿದೆ. ೧೯೫೦ ರಲ್ಲಿ ಟಿಬೆಟ್ ಮೇಲೆ, ೧೯೫೧ರಲ್ಲಿ ಉತ್ತರ ಕೋರಿಯಾ ಜೊತೆಗೂಡಿ ದಕ್ಷಿಣ ಕೊರಿಯಾ ಮೇಲೆ, ೧೯೬೨ ಮತ್ತು ೧೯೬೭ರಲ್ಲಿ ಭಾರತದ ಮೇಲೆ, ೧೯೭೪ರಲ್ಲಿ ದಕ್ಷಿಣ ವಿಯಟ್ನಾಂ ಮೇಲೆ, ೧೯೭೬, ೧೯೭೯, ೧೯೮೮ ರಲ್ಲಿ ಮೂರು ಬಾರಿ ವಿಯಟ್ನಾಂ ಮೇಲೆ ಪದೇ ಪದೇ ದಾಳಿ ಮಾಡಿತು. ಒಂದೊಂದು ದಾಳಿಯೂ ಬರ್ಬರವಾಗೆ ಇತ್ತು. ೧೪ನೇ ದಲೈ ಲಾಮ ರವರ ಹೇಳಿಕೆ ಪ್ರಕಾರ ೧೦ ಲಕ್ಷ ಟಿಬೆಟ್ಟಿಯರನ್ನು ಚೀನಿಯರು ಹತ್ಯೆಗಯ್ದಿದ್ದಾರೆ. ವಿಯಟ್ನಾಂ ಮೇಲಿನ ಆಕ್ರಮಣದಲ್ಲಿ ೭೦ ಸಾವಿರ ಜನರನ್ನು ಹತ್ಯೆ ಮಾಡಿದೆ ಎಂದು ಚೀನಾ ಅಂದಾಜು ಮಾಡುತ್ತದೆ. ಈ ರೀತಿ ಆಕ್ರಮಣ ನಡೆಯುತ್ತಿದ್ದ ಸಂದರ್ಭದಲ್ಲಿ, ೧೯೯೫ ರಲ್ಲಿ "ವಿಶ್ವ ವಾಣಿಜ್ಯ ಸಂಸ್ಥೆ" ಜಾರಿಗೆ ಬಂತು. ಈ ಸಂಸ್ಥೆ, ಅಂತರಾಷ್ಟ್ರೀಯ ಮಟ್ಟದಲ್ಲಿನ ವ್ಯಾಪರ ವಹಿವಾಟಿನ ಮಾಗ್ರದರ್ಶಿಯಾಗಿ, ದೇಶ, ದೇಶದ ನಡುವಿನ ವ್ಯಾಜ್ಯವನ್ನು ಸರಿಪಡಿಸುವ ವೇದಿಕೆ ಆಯಿತು. ಇದರ ಅಡಿಯಲ್ಲಿ ಬರುವ ದೇಶಗಳು ಸಂಸ್ಥೆಯ ಶಾಸನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಾಯಿತು. ಅಂತಹ ದೇಶಗಳ ಪೈಕಿ ಚೀನಾ ಕೂಡ ಒಂದು. ಅಲ್ಲಿಂದಾಚೆಗೆ ಚೀನಾ ತನ್ನ ವರಸೆಯನ್ನು ಬದಲಾಯಿಸಿತು.

೧೯೯೯-೨೦೦೦ ರಲ್ಲಿ ಚೀನಾ, ಶಸ್ತ್ರಾಸ್ತ್ರವನ್ನು ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿತ್ತು. ೨೦೧೭ರ ಹೊತ್ತಿಗೆ ಚೀನಾ; ಶಸ್ತ್ರಾಸ್ತ್ರವನ್ನು ರಫ಼್ತು ಮಾಡುವ ಜಗತ್ತಿನ ೫ನೇ ರಾಷ್ಟ್ರವಾಗಿ ಬೆಳೆಯಿತು. ೨೦೧೩ ರಿಂದ ೨೦೧೭ರವರೆಗೆ ಸುಮಾರು ೪೮ ದೇಶಗಳಿಗೆ ಚೀನಾ ಶಸ್ತ್ರಾಸ್ತ್ರಗಳನ್ನು ರಫ಼್ತು ಮಾಡಿದೆ. ಅದರಲ್ಲಿ ಪಾಕಿಸ್ತಾನ (ಶೇ ೩೫), ಬಾಂಗ್ಲಾದೇಶ (ಶೇ ೧೯) ಮತ್ತು ಅಲ್ಜೀರಿಯಾ (ಶೇ ೧೦) ಪ್ರಮುಖ ಮಾರುಕಟ್ಟೆಗಳಾಗಿವೆ. ೨೦೦೮ ಗೆ ಹೋಲಿಸಿದಲ್ಲಿ ಚೀನಾ ತನ್ನ ರಫ಼್ತಿನ ಸಾಮರ್ಥ್ಯವನ್ನು ಶೇ ೩೮ ರಷ್ಟು ಹೆಚ್ಚಿಸಿಕೊಂಡಿದೆ. ಶ್ರೀಲಂಕಾಕ್ಕೆ ೭ ಶತಕೋಟಿ ಡಾಲರ್ ಅಷ್ಟು ಸಾಲ ಕೊಟ್ಟಿದೆ. ಅದಲ್ಲದೆ, ಹಂಬನ್ಟೋಟ ಬಂದರನ್ನು ಅಭಿವೃದ್ದಿ ಪಡಿಸಲು ಸಹ ಸಾಲ ಕೊಟ್ಟಿದೆ. ೨೦೧೩ ನಂತರ ಚೀನಾ ನೇಪಳದಲ್ಲಿ ೩.೩೨ ಶತಕೋಟಿ ಡಾರಲ್ ಅಷ್ಟು ಹೂಡಿಕೆ ಮಾಡಿದೆ. ನೇಪಳಾದಲ್ಲಿ ತಾನು ಹೆದ್ದಾರಿಗಳನ್ನು ನಿರ್ಮಿಸತ್ತಾ ಅಲ್ಲಿನ ವ್ಯಾಪಾರ ವಹಿವಾಟಿಗೆ ಕೈ ಹಾಕಿದೆ. ೨೦೧೮ರಲ್ಲಿ ಚೀನಾ ಆಫ಼್ರಿಕಾದಲ್ಲಿ ೬೦ ಶತಕೋಟಿ ಡಾಲರ್ ಅಷ್ಟು ಹೂಡಿಕೆ ಮಾಡುವುದಾಗಿ ಹೇಳಿಕೆ ಕೊಟ್ಟಿದೆ. ಇದಲ್ಲದೆ ಪಾಕಿಸ್ತಾನದಲ್ಲಿ ೬೨ ಶತಕೋಟಿ ಡಾಲರ್ ಅಷ್ಟು ಹುಡಿಕೆ ಮಾಡಿ ಹೆದ್ದಾರಿ ನಿರ್ಮಿಸುತ್ತಿದೆ. ಮೇಲು ನೋಟಕ್ಕೆ ಇವೆಲ್ಲವೂ ವ್ಯಾಪಾರದ ಉದ್ದೇಶವೆನಿಸಿದರೂ ಇದರ ಹಿಂದೆ ಷಡ್ಯಂತ್ರ ಅಡಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೂಡಿಕೆ ಎಂಬ ಸೋಗಿನಲ್ಲಿ ಬೃಹತ್ ಮಟ್ಟದಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು. ಸಾಲ ಪಡೆದುಕೊಂಡ ರಾಷ್ಟ್ರಗಳು ಕಾಲಕ್ರಮೇಣ ಅದನ್ನು ತೀರಿಸಲಾಗದೆ ಚೀನಾ ಹಾಕುವ ಶರತ್ತುಗಳನ್ನು ಒಪ್ಪಿಕೊಳ್ಳುತ್ತದೆ. ಅಂತಹ ಶರತ್ತುಗಳ ಮೂಲಕ ಆ ದೇಶಗಳಲ್ಲಿ ಚೀನಾ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತದೆ. ಉದಾಹರಣೆಗಳು ಹೀಗಿವೆ;
  • ಶ್ರೀಲಂಕಾ ತನ್ನ ಉತ್ಪಾದನೆಯ ಶೇ ೯೫ ರಷ್ಟನ್ನು ಸಾಲ ತೀರಿಸುವುದಕ್ಕೆ ವ್ಯಯಿಸುತ್ತದೆ. ಹಂಬನ್ಟೋಟ ಬಂದರನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿತ್ತು ಆದರೆ, ಭಾರತ ಅದನ್ನು ತಡೆಗಟ್ಟಿತು.
  • CPEC ಪ್ರಾಜೆಕ್ಟಿನ ಮೂಲಕ ಚೀನಾ ಪಾಶ್ವಿಮಾತ್ಯ ರಾಷ್ಟ್ರಗಳಿಗೆ ಪರ್ಯಾಯ ಮಾಗ್ರವನ್ನು ಕಂಡುಕೊಂಡಿದೆ. ವಿದ್ಯುತ್ ಅಭಿವೃದ್ಧಿ ಎಂಬ ಸೋಗಿನಲ್ಲಿ ಪಾಕಿಸ್ತಾನವನ್ನು ತನ್ನ ಮುಷ್ಠಿಯಲ್ಲಿ ಹಿಡಿದಿಟ್ಟಿದೆ.
  • ಆಫ಼್ರಿಕಾ ದೇಶದಲ್ಲಿರುವ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿಕೊಂಡು ತನ್ನ ದೇಶದ ಇಂಧನ ಪೂರೈಕೆ ಮಾಡಲು ಚೀನಾ ಬಲೆ ಹೆಣೆದಿದೆ.
ಶ್ರೀಲಂಕಾ, ನೇಪಾಳ, ಪಾಕೀಸ್ತಾನಗಳ ಮೂಲಕ ಭಾರತವನ್ನು ಹತೋಟಿಯಲ್ಲಿಡಲು ಪ್ರಯತ್ನ ಪಡುತ್ತಿದೆ.  ಇವು ಏಷಿಯಾ ಮತ್ತು ಆಫ಼್ರಿಕಾ ಖಂಡದಲ್ಲಿ ಚೀನಾ ಖೆಡ್ಡಾ ತೋಡುತ್ತಿರುವ ಸಣ್ಣ ಜಲಖ್ ಅಷ್ಟೇ.

ಯೂರೋಪ್ ಮತ್ತು ಕೊರಿಯಾ ಮಾರುಕಟ್ಟೆಯನ್ನು ಹಾಳು ಮಾಡುವ ರೀತಿ ಬಲು ವಿಶಿಷ್ಟವಾದದ್ದು. ಇದು ಪಕ್ಕಾ ವ್ಯಾವಹಾರಿಕ ಮತ್ತು ರಾಜಕೀಯ ಒಳಗೊಂಡ ಕುಟಿಲತೆ. ವೊಲ್ವೋ ಕಾರುಗಳ ಬಗ್ಗೆ ಎಲ್ಲರೂ ಕೇಳಿರಬೇಕಲ್ಲ? ಅದೊಂದು, ಕಾರನ್ನು ತಯಾರಿಸುವ ಸ್ವೀಡನ್ ಮೂಲದ ಕಂಪನಿ. ಫ಼ೋರ್ಡ್ ಕಂಪನಿ ಜೊತೆಗಿದ್ದ ವೊಲ್ವೋ, ೨೮ ಅಕ್ಟೋಬರ್ ೨೦೦೯ ರಿಂದ ಚೀನಾ ಮೂಲದ 'Zhejiang Geely Holding Group (ಜೀಲಿ)' ಸಂಸ್ಥೆಗೆ ಮಾರಟವಾಗುತ್ತದೆ.


ಅಲ್ಲಿಂದಾಚೆಗೆ ಯೂರೋಪ್ ಮಾದರಿಯ ವಾಹನ ತಂತ್ರಜ್ಞಾನ (European Automotive Technology) ಚೀನಾಕ್ಕೆ ನೇರವಾಗಿ ಸಿಗುವಂತಾಯಿತು. ವೊಲ್ವೊ ಕಂಪನಿಯ ವಾರ್ಷಿಕ ಲಾಭವನ್ನು ಜೀಲಿ ಪಡೆಯಲು ಶುರುಮಾಡಿತು. ಈ ಮೂಲಕ ಯೂರೋಪಿನ ಮಾರುಕಟ್ಟೆಯಲ್ಲಿ ಜರ್ಮನಿ ಎದುರಿಗೆ ತನ್ನ ಛಾಪು ಮೂಡಿಸಲು ಚೀನಾ ಪ್ರಯತ್ನ ಪಟ್ಟಿತು. ಆದರೆ, 'Cheap Product' ಎಂಬ ಹಣೆಪಟ್ಟಿ ಹೊಂದಿರುವ ಚೀನಾಕ್ಕೆ ಯೂರೋಪಿನಲ್ಲಿ ಬೆಲೆ ಸಿಗಲಿಲ್ಲ. ಆಗ, ಸ್ವೀಡನ್ನಲ್ಲಿ ತನ್ನ ಆಡಿಯಲ್ಲಿ ೨೦೧೩ರಲ್ಲಿ ಹೊಸದೊಂದು ಕಂಪನಿ ತೆರೆಯಿತು. ಆದುವೆ, China Euro Vehicle Technology (CEVT - ಸೆಫ಼್ಟ್). ಈ ಕಂಪನಿ ಮೂಲಕ ಚೀನಾ, ಸಂಶೋಧನಾತ್ಮಕ ಚಟುವಟಿಕೆಗೆ ಮುಂದಾಯಿತು. ವೋಲ್ವೋ ಕಂಪನಿಯಲ್ಲಿದ್ದ ೧೦-೧೬ ಜನರನ್ನು ಸೇಫ಼್ಟ್ ಗೆ ಹಾಕಿ ತನ್ನ ಸಂಶೋಧನೆಯನ್ನು ಮುಂದುವರೆಸಿತು.

CEVT - china Euro Vehicle Technology

ಈಗ, ವೋಲ್ವೊ ಸ್ವಯಂಚಾಲಿತ ಕಾರಿನ ಕುರಿತು ಸಂಶೋಧನೆ ನಡೆಸುತ್ತಿದೆ. ಆದರ ಕೆಲವು ತಂತ್ರಾಂಶಗಳನ್ನು ತೆಗೆದು ಜೀಲಿ ತನ್ನ ಹೊಸ ಕಾರಿಗೆ ಅಳವಡಿಸುತ್ತಿದೆ. ವೋಲ್ವೊ ತನ್ನ ಹೊಸ ಮಾದರಿಯ ಕಾರನ್ನು ೨೦೨೫-೩೦ರ ಹೊತ್ತಿಗೆ ಹೊರತರಲು ತಯಾರಿ ನಡೆಸಿದೆ. ಆದರೆ ಜೀಲಿ; ೨೦೨೧ರ ಹೊತ್ತಿಗೆ ತನ್ನ ಹೊಸ ಮಾದರಿಯ ಕಾರುಗಳನ್ನು ಚೀನಾದಾದ್ಯಂತ ತರಲು ಮುಂದಾಗಿದೆ. ಇದಕ್ಕೆ, ಚೀನಾ ಸರ್ಕಾರದ ಬೆಂಬಲವೂ ಸಹ ಇದೆ. ಸರ್ಕಾರಿ ನೌಕರರಿಗೆ ಜೀಲಿ ಕಾರ್ಗಳನ್ನೇ ಕೊಳ್ಳಲು ಪ್ರೇರೇಪಿಸುತ್ತಿದೆ. ಈ ಮೂಲಕ ಚೀನಾ, ವಾಹನ ತಂತ್ರಜ್ಞಾನದಲ್ಲಿ ಯೂರೋಪನ್ನು ಆಳಲು ತಯಾರಿ ನಡೆಸಿದೆ. ಆದರೆ, ರಾಜಕೀಯಾಗಿ ಮತ್ತು ಸಾಂಸ್ಕೃತಿಕವಾಗಿ ಯೂರೋಪಿಗೂ ಚೀನಾಕ್ಕೂ ಸರಿ ಹೊಂದುವುದಿಲ್ಲ. ಹಾಗಾಗಿ, ಈ ವಿಚಾರದಲ್ಲಿ ಚೀನಾ ಎಷ್ಟ್ರರ ಮಟ್ಟಿಗೆ ಸಫ಼ಲವಾಗುತ್ತದೆ ಎಂಬುದು ಗೊತ್ತಿಲ್ಲ. ಇದೇ ತತ್ವವನ್ನು ಬಳಸಿ ಹ್ಯುನ್ಡಯ್ ನ ಮಾರುಕಟ್ಟೆಯ ವಿರುದ್ಧ ಬೆಳೆದು ನಿಂತು, ತನ್ಮೂಲಕ ಕೊರಿಯಾಕ್ಕೆ ಸೆಡ್ಡು ಹೊಡೆದು ನಿಲ್ಲುವುದು ಅದರ ಉದ್ದೇಶವಾಗಿದೆ.

ಯೂರೋಪು 'ಸಮಾನತೆ'ಗೆ ಬೆಲೆಕೊಡುತ್ತದೆ, ಭಾರತ 'ಸರ್ವೇ ಜನಃ ಸುಖಿನೋ ಭವಂತು', 'ಅತಿಥಿ ದೇವೋ ಭವ' ಎನ್ನುತ್ತದೆ. ಆದರೆ, ಚೀನಾ ಮಾತ್ರ, ಬೇರೆಯವರು ಹಾಳಾದರೂ ಚಿಂತೆ ಇಲ್ಲ ತಾನು ಮಾತ್ರ ಉದ್ದಾರ ಆಗಬೇಕು ಮತ್ತು ಎಲ್ಲರನ್ನು ಆಳುವಂತಾಗಬೇಕು ಎಂಬ ದುರುದ್ದೇಶ ಹೊಂದಿದೆ. ಮೇಲೆ ಹೇಳಿರುವುದೆಲ್ಲವನ್ನು ರಾಜಕೀಯ ಮತ್ತು ವ್ಯಾವಹಾರಿಕ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳಬಹುದು. ಆದರೆ, ಚೀನಾದ ಸಾಮಾನ್ಯ ಜನರಲ್ಲಿರುವ ಅಸಡ್ಡೆಯ ಭಾವ, ಕುಟಿಲತೆ ತೀರ ಅಸಹ್ಯ ಹುಟ್ಟಿಸುವಂತಹುದು. ಅವರ ಆ ಕುಟಿಲತೆಯ ಸ್ವಭಾವ ಮತ್ತು ಭಾರತದ ವಿರುದ್ಧದ ಷಡ್ಯಂತ್ರದ ಕುರಿತು ಮತ್ತೊಂದು ಸಂಚಿಕೆಯಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹೇಗೆ ನೋಡಿದರೂ, ಅಭಿವೃದ್ಧಿ ಹೆಸರಿನಲ್ಲಿ ಚೀನಾ ಜಗತ್ತನ್ನು ಆಕ್ರಮಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಹಿಡಿದರೆ ಸುಲಭವಾಗಿ ಬಿಟ್ಟು ಹೋಗುವಂತಹುದಲ್ಲ. ಆದ್ದರಿಂದಲೇ ಚೀನಾ; ನವಯುಗದ ಶನಿ...!!!

January 1, 2019

ಸ್ಮರಣೆ






















ಅವಳೊಂದು ಕನಸಿನ ಕೂಸಂತೆ
ಮನಸ್ಸೊಂದು ಜೇನಿನ ಸಿಹಿಯಂತೆ |
ಕಣ್ತೆರೆದರೆ ಸುಮ ಅರಳಿದಂತೆ
ನಕ್ಕರೆ ಭುವಿ ಸ್ವರ್ಗವಾದಂತೆ ||

ಚೆಲುವಲ್ಲಿದೆ ನವ ವಸಂತದ ಸೊಗಡು
ಹಂಸವು ನಾಚುವ ಬಳುಕಿನ ಬೆಡಗು |
ಮುನಿದ ಮೊಗವು ಗೋಧೂಳಿ ಆಗಸದ ಸೊಬಗು
ನನ್ನಂತರಂಗದ ಭಾವ ಕುಲುಕಿದೆ ಆ ನಗುವು ||

ಜೊತೆಗಿರಲು ಅಂತರಂಗದ ಭಾವ ಪಸರಿಸಿತು
ಮಡಿಲಲ್ಲಿ ಮಲಗಿರೆ ಹೃದಯ ಹಗುರಾಯಿತು |
ನನ್ನೊಲವಿನ ಪ್ರೇಮ ಬಿಡಿಸದ ಬಂಧವಾಯಿತು
ಅಗಲಿಕೆಯ ನೋವಲ್ಲಿ ನಗುವು ಮರೆಯಾಯಿತು ||

ಮನದೊಳಗಿದೆ ನೆನಪೆಂಬ ಹೂರಣ
ಒಂಟಿತದ ಭಾವ ಎಂದೆಂದಿಗೂ ಧಾರುಣ |
ನಲಿವೊಂದಿಗಿನ ನೋವಿಗೆ ಪ್ರೀತಿಯೇ ಕಾರಣ
ನಾವಿಕನಿಲ್ಲದ ನೌಕೆಯಲ್ಲಿ ಸಾಗಿದೆ ಬದುಕಿನ ಪಯಣ ||