October 27, 2020

ದೇಶಭಕ್ತಿಯ ಮುಂದೆ ಜಾತಿ, ಮತ, ಧರ್ಮಗಳು ನಗಣ್ಯ

ನನ್ನ ದೇಶವನ್ನು ನಾನು ಪೂಜಿಸುತ್ತೇನೆ, ಅದಕ್ಕಾಗಿ ನನ್ನ ಸರ್ವಸ್ವವನ್ನೂ ಧಾರೆ ಎರೆಯುತ್ತೇನೆ ಎನ್ನುವವರಿಗೆ ಜಾತಿ, ಮತ, ಪಂಥ, ಶ್ರೀಮಂತ, ಬಡವ ಎಂಬ ಯಾವ ಕಟ್ಟುಪಾಡಾಗಲಿ, ಬೇಲಿಯಾಗಲಿ ಇರುವುದಿಲ್ಲ. ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮ ಧರ್ಮಗಳನ್ನು ಮೀರಿ, ದೇಶದ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ಹೋರಾಡಿ, ಒಟ್ಟಾಗಿ ಪ್ರಾಣಾರ್ಪಣೆ ಮಾಡಿದ ವೀರರು ರಾಂ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಪಾಕ್ ಉಲ್ಲಾ ಖಾನ್. ಉತ್ತರಪ್ರದೇಶದ ಶಹಜಹಾನ್ ಪುರದಲ್ಲಿ ಮೂರು ವರ್ಷದ ಅಂತರದಲ್ಲಿ ಇಬ್ಬರ ಜನನ. ಶಾಲಾ ದಿನಗಳಿಂದಲೇ ಇಬ್ಬರೂ ಸಹ ಒಟ್ಟಾಗಿ ಇದ್ದವರು. ಸಮಾನ ಮನಸ್ಕರಾಗಿದ್ದರಿಂದ ಇಬ್ಬರಲ್ಲೂ ಸ್ನೇಹ ಹೆಮ್ಮರವಾಗಿ ಬೆಳೆಯಿತು. ಬ್ರಿಟೀಷರ ವಿರುದ್ಧ ಒಟ್ಟಿಗೆ ಹೋರಾಡಲು ಈ ಸಖ್ಯವೇ ಮುಖ್ಯ ಅಡಿಪಾಯವಾಯಿತು. ಎಲ್ಲರಿಗೂ ಆಶ್ಚರ್ಯದ ಸಂಗತಿ ಎಂದರೆ ಒರ್ವ ಕಟ್ಟಾ ಆರ್ಯಸಮಾಜಿ, ಮತ್ತೋರ್ವ ಮುಸಲ್ಮಾನ. ಇವರಿಬ್ಬರ ಜೋಡಿ ಹೇಗೆ? ಅದಕ್ಕೆ ಉತ್ತರ ದೇಶಭಕ್ತಿ ಎಂಬ ಮಂತ್ರ.

ಬಾಲ್ಯದಲ್ಲಿ ರಾಂ ಕೆಟ್ಟ ಹುಡುಗರ ಸಹವಾಸಕ್ಕೆ ಬಿದ್ದ ಕಾರಣ ಅವನಲ್ಲಿ ದುರ್ಗುಣಗಳು ಮನೆಮಾಡಿದವು. ಯಾವ ಅಮೃತ ಘಳಿಗೆಯಲ್ಲೋ ರಾಂ ದೇವಸ್ಥಾನಕ್ಕೆ ಹೋಗಲು ಪ್ರಾರಂಭಿಸಿದ. ಆ ಘಳಿಗೆಯಿಂದ ಆವನ ಜೀವನದ ದಿಕ್ಕು ಬದಲಾಯಿತು. ದುಶ್ಚಟಗಳು ದೂರವಾದವು. "ದಯಾನಂದ ಸರಸ್ವತಿಯವರ 'ಸತ್ಯಾರ್ಥ ಪ್ರಕಾಶ'ವನ್ನು ಓದಿ ನನ್ನ ಜೀವನದ ಒಂದು ಹೊಸಪುಟ ತೆರೆಯಿತು" ಎಂದು ರಾಂ ತನ್ನ ಆತ್ಮಕಥೆಯಲ್ಲಿ ಬರೆದ್ದಿದ್ದಾನೆ. ಅಂದಿನಿಂದ ಸಾಧು, ಸಂತರೊಂದಿಗಿನ ಓಡನಾಟ, ಆರ್ಯಸಮಾಜದ ನಿಷ್ಠಾವಂತ ಅನುಯಾಯಿಯಾದ ರಾಂ. ನಂತರದ ದಿನಗಳಲ್ಲಿ ರಾಂ ರಾಜಕೀಯ ಪ್ರವೇಶ ಮಾಡುತ್ತಾನೆ, ದೇಶಭಕ್ತಿ ಪೂರಿತ, ಅಧ್ಯಾತ್ಮದ ಕುರಿತ ಪುಸ್ತಕಗಳನ್ನು ಓದುತ್ತಾನೆ. ಲಕ್ನೋವಿನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಭಾಗಿಯಾಗಿ, ಲೋಕಮಾನ್ಯ ತಿಲಕರ ಮಾತಿನಿಂದ ಪ್ರೇರೆಪಿತನಾಗಿ, ಸ್ವಾತಂತ್ರ್ಯ ಹೋರಾಟದ ಹಾದಿ ಹಿಡಿಯುತ್ತಾನೆ.

ರಾಂ ಪ್ರಸಾದ್ ಬಿಸ್ಮಿಲ್

ರಾಂ ಹುಟ್ಟಿದ ಊರಿನಲ್ಲೇ ಶ್ರೀಮಂತ ಜಮೀನ್ದಾರ, ಮುಸಲ್ಮಾನ್ ಕುಟುಂಬದಲ್ಲಿ ಅಶ್ಪಾಕನ ಜನನವಾಗುತ್ತದೆ. ಕನೈಲಾಲ್ ದತ್ತಾ ಮತ್ತು ಖುದಿರಾಂ ಬೋಸರ ಕ್ರಾಂತಿಕಾರಿ ಜೀವನ ಅಶ್ಪಾಕನನ್ನು ಕ್ರಾಂತಿಕಾರ್ಯ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸುತ್ತದೆ. ಗೆಂಡಲಾಲ್ ದೀಕ್ಷಿತ್ ನೇತೃತ್ವದಲ್ಲಿ ಮೈನ್‌ಪುರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜರಾಮ್ ಭಾರ್ತಿಯಾ ಎಂಬ ವಿದ್ಯಾರ್ಥಿಯನ್ನು ಬಂಧಿಸುವ ಸಲುವಾಗಿ ಅಶ್ಪಾಕನ ಶಾಲೆಯ ಮೇಲೆ ಪೊಲೀಸ್ ದಾಳಿ ನಡೆಯುತ್ತದೆ. ಈ ಘಟನೆಯ ನಂತರ ಆಶ್ಪಾಕ್ ಕ್ರಾಂತಿಕಾರ್ಯಕ್ಕೆ ಧುಮುಕುತ್ತಾನೆ. ಉತ್ತರ ಭಾರತದ ಕ್ರಾಂತಿಕಾರಿ ಗುಂಪನ್ನು ಸೇರಿಕೊಳ್ಳಲು ಹುಡುಕಾಟ ಆರಂಭಿಸಿ, ಬನಾರ್ಸಿಲಾಲ್ ಎಂಬ ಸ್ನೇಹಿತನ ಮೂಲಕ ರಾಂ ಪ್ರಸಾದ್ ಬಿಸ್ಮಿಲ್ ನ ಪರಿಚಯವಾಗುತ್ತದೆ. ಇವರಿಬ್ಬರ ಮಿಲನ ಗದರ್ ಪಾರ್ಟಿಯ ನಂತರ ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಮತ್ತೊಂದು ಘಟ್ಟ ಪ್ರಾರಂಭವಾಗುತ್ತದೆ.

ಅಶ್ಪಾಕ್ ಉಲ್ಲಾ ಖಾನ್

ಮುಂದಿನ 7 ವರ್ಷಗಳಲ್ಲಿ ರಾಂ ಮತ್ತು ಅಶ್ಪಾಕ್ ನಡುವೆ ಅತ್ಯಂತ ಆತ್ಮೀಯ ಬಾಂಧವ್ಯ ಬೆಳೆಯುತ್ತದೆ. ಇಬ್ಬರೂ ಗಾಂಧೀಜೀ ಕರೆಕೊಟ್ಟ ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಾರೆ, ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರೂರವರ ಸ್ವರಾಜಿಸ್ಟ್ ಪಾರ್ಟಿಯ ಪರವಾಗಿ ಒಟ್ಟಿಗೆ ಪ್ರಚಾರ ಮಾಡುತ್ತಾರೆ. ಇಬ್ಬರಲ್ಲೂ ಸಮಾನವಾಗಿದ್ದ ಸಂಗತಿಗಳೆಂದರೆ - ದೇಶಭಕ್ತಿ ಮತ್ತು ಇಬ್ಬರೂ ಸಹ ಬರಹಗಾರರಾಗಿದ್ದರು. 'ಬೋಲ್ಶೆವಿಕೋಂ ಕೀ ಕರ್ತೂತ್' ಎಂಬ ಬಂಗಾಲಿ ಕೃತಿ, ಅರವಿಂದರ 'ಯೋಗಿಕ್ ಸಾಧನ್' ಎಂಬ ಕೃತಿಗಳ ಅನುವಾದ, 'ಮನ್ ಕೀ ಲಹಾರ್' ಮತ್ತು 'ಸ್ವದೇಶಿ ರಂಗ್' ಎಂಬ ಕವನ ಸಂಕಲನಗಳನ್ನು ರಾಂ ತನ್ನ ಕ್ರಾಂತಿಕಾರಿ ಜೀವನದಲ್ಲಿ ಬರೆಯುತ್ತಾನೆ. ಗೋರಖ್ಪುರ ಬಂದಿಖಾನೆಯಲ್ಲಿ ತನ್ನ ಆತ್ಮಕಥೆಯನ್ನೂ ಸಹ ಬರೆಯುತ್ತಾನೆ. ಬ್ರಿಟೀಷರ ವಿರುದ್ಧ ಯುದ್ಧ ಘೋಷಣೆಯಾಗಿ 'ಸರ್ಫ಼ರೋಶಿ ಕೀ ತಮನ್ನಾ' ಎಂಬ ಪ್ರಸಿದ್ಧ ಕವನವನ್ನು ರಾಂ ರಚಿಸಿದ್ದಾರೆ. ಆಶ್ಪಾಕ್ ಕೂಡ ಉರ್ದು ಕವಿಯಾಗಿದ್ದರು. ವಾರ್ಸಿ ಮತ್ತು ಹಸರತ್ ಎಂಬ ಕಾವ್ಯನಾಮದಲ್ಲಿ ಘಜ಼ಲ್ ಮತ್ತು ಕವನಗಳನ್ನು ಬರೆದಿದ್ದಾರೆ.

ರಾಂ ಮತ್ತು ಅಶ್ಪಾಕ್ 'ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್' ಎಂಬ ಕ್ರಾಂತಿಕಾರಿ ಸಂಸ್ಥೆಯ ಪ್ರಮುಖ ನಾಯಕರಾಗಿದ್ದರು. 1924 ರಲ್ಲಿ ಕೈಹೊತ್ತಿಗೆಯನ್ನು ಮುದ್ರಿಸಿ, ಅದನ್ನು ರಂಗೂನಿನಿಂದ ಪೇಶಾವರ್ ವರೆಗೂ ಹಂಚಿ, ಜನ ಜಾಗೃತಿ ಮೂಡಿಸಲು ಸಂಸ್ಥೆ ಮುಂದಾಗುತ್ತದೆ. ಗದರ್ ಪಾರ್ಟಿಯ ಅಧ್ಯಾಯ ಮುಗಿದ ನಂತರ ಕ್ರಾಂತಿಯ ಕಾಟ ಇಲ್ಲ ಎಂದು ತಿಳಿದಿದ್ದ ಬ್ರಿಟೀಷ್ ಸರ್ಕಾರಕ್ಕೆ ಈ ಕೈಹೊತ್ತಿಗೆಗಳನ್ನು ನೋಡಿ ಛಡಿ ಏಟು ಬಿದ್ದಂತಾಯಿತು. ಅದರಲ್ಲಿದ್ದ ಮಾತುಗಳ ಕಸುವು ಕಂಡು ಬೆಚ್ಚಿಬೀಳುವಂತಾಯಿತು. ಕೈಹೊತ್ತಿಗೆಯ ವಿಷಯ ಸಿದ್ದಪಡಿಸಿದ್ದು ರಾಂ ಮತ್ತು ಅಶ್ಪಾಕ್. ಸಂಸ್ಥೆಗೆ ಹಣದ ಅವಶ್ಯಕತೆ ಹೆಚ್ಚು ಬೀಳುತ್ತದೆ ಅದಕ್ಕಾಗಿ ಸರ್ಕಾರಿ ಹಣವನ್ನು ದರೋಡೆ ಮಾಡಲು ನಿಶ್ಚಯ ಮಾಡುತ್ತಾರೆ. ರಾಂ ನ ಈ ನಿಶ್ಚಯವೇ ನಂತರ ನಡೆದ ಕಾಕೋರಿ ರೈಲು ದರೋಡೆ ಎಂಬ ಪ್ರಮುಖ ಘಟನೆಗೆ ನಾಂದಿಯಾಗುತ್ತದೆ. ಯೋಜನೆ ಸಿದ್ಧಪಡಿಸಿ ಎಲ್ಲರೂ ಉತ್ಸಾಹದಲ್ಲಿ ಮುಂದುವರೆಯಬೇಕಾದರೆ ಅಶ್ಪಾಕ್ - "ನಾವು ಮಾಡಹೊರಟಿರುವ ಈ ಕಾರ್ಯ ಮುಂದೆ ಬಹಳ ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ. ಇಡೀ ಆಂಗ್ಲ ಸಮಾಜಕ್ಕೆ ಸೆಡ್ಡು ಹೊಡೆದು, ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ನಮ್ಮ ಗುರಿ ಮುಟ್ಟುವ ಮುನ್ನವೇ ಸಿಕ್ಕಿಬೀಳಬೇಕಾಗುತ್ತದೆ" ಎಂದು ಶಾಂತನಾಗಿ ಎಚ್ಚರಿಸಿಸುತ್ತಾನೆ. ಆತನ ಮಾತಲ್ಲಿ ಸತ್ಯವಿತ್ತು ಆದರೆ ಸಭೆ ದರೋಡೆ ಮಾಡಲು ನಿರ್ಧರಿಸಿತು. ಅದಕ್ಕೆ ಅನುಗುಣವಾಗಿ ಅಶ್ಪಾಕ್ ದರೋಡೆಗೆ ನಿಲ್ಲುತ್ತಾನೆ. ಸಂಸ್ಥೆಯ ನಿರ್ಧಾರ ಮತ್ತು ರಾಂ ನ ಮಾತು ಆತನಿಗೆ ಕೊನೆಯ ಮಾತು, ತನ್ನ ವಯ್ಯಕ್ತಿಕ ಭಾವನೆಗಿಂತ ರಾಂ, ಸಂಸ್ಥೆ ಮತ್ತು ದೇಶ ದೊಡ್ಡದಾಗಿತ್ತು. ಕಾಕೋರಿ ದರೋಡೆಯಲ್ಲಿ ರಾಂ ಮತ್ತು ಅಶ್ಪಾಕ್ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕಾಕೋರಿಯಲ್ಲಿ ರೈಲನ್ನು ನಿಲ್ಲಿಸಿ ಹಣವನ್ನು ಇಟ್ಟಿದ್ದ ಸಂದೂಕನ್ನು ಒಡೆದು ಪರಾರಿ ಆಗುವುದಾಗಿತ್ತು ಇವರ ಯೋಜನೆ. ಅಶ್ಪಾಕ್ ಮತ್ತು ರಾಂ ದರೋಡೆ ಮಾಡುವ ಕ್ರಿಯೆಯಲ್ಲಿ ಭಾಗವಹಿಸುವ ಎಲ್ಲರನ್ನೂ ಕಾಯುವ ಜವಾಬ್ದಾರಿ ಹೊತ್ತಿದ್ದರು. ಸಂದೂಕನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದರು ಆದರೆ, ಅದು ಒಡೆಯುವ ಸೂಚನೆ ಕಾಣಲಿಲ್ಲ. ಸಂದರ್ಭವನ್ನರಿತ ಅಶ್ಪಾಕ್ ತನ್ನ ಕೈಯ್ಯಲ್ಲಿದ್ದ ಪಿಸ್ತೂಲನ್ನು ರಾಂ ಗೆ ಕೊಟ್ಟು ಸಂದೂಕನ್ನು ಒಡೆಯಲು ಮುಂದಾಗುತ್ತಾನೆ. ಕೆಲವೇ ಪೆಟ್ಟುಗಳ ನಂತರ ಸಂದೂಕು ಒಡೆಯುತ್ತದೆ. ಅಶ್ಪಾಕ್ ಅದನ್ನು ಸಾಧಿಸಿದ್ದ. ಆರಂಭದಲ್ಲಿ ಯಾರು ಬಲವಾಗಿ ವಿರೋಧಿಸಿದ್ದನೋ ಅವನೇ ತನ್ನ ಕೈಯಾರ ಶಿಶ್ತಿನ ಸಿಪಾಯಿಯಂತೆ, ಅಣ್ಣ ರಾಂ ನ ಆಜ್ಞೆಯಂತೆ ಸಂದೂಕನ್ನು ಒಡೆದಿದ್ದ. ನಂತರ ಅದರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗುತ್ತಾರೆ.

ಕಾಕೋರಿ ದರೋಡೆ ಆಂಗ್ಲ ಸರ್ಕಾರ ತನ್ನ ಪ್ರತಿಷ್ಠೆಗೆ ಎಸೆದ ಸವಾಲು ಎಂದು ಸ್ವೀಕರಿಸಿ ತ್ವರಿತವಾಗಿ ಗುಪ್ತಚರ ಜಾಲವನ್ನು ವಿಶಾಲವಾಗಿ ಹರಡುತ್ತದೆ. ಬಿಸ್ಮಿಲ್ ಶಹಜಹಾನ್ ಪುರದಲ್ಲೇ ತಲೆಮರೆಸಿಕೊಂಡಿದ್ದ ಮತ್ತು ಅಶ್ಪಾಕ್ ಬನಾರಸ್ ನಲ್ಲಿ ತಲೆಮರೆಸಿಕೊಂಡಿದ್ದ. ಕೆಲವೇ ದಿನಗಳಲ್ಲಿ ಆಂಗ್ಲರು ರಾಂಪ್ರಸಾದ್ ಬಿಸ್ಮಿಲ್ ರನ್ನು ಬಂಧಿಸುತ್ತಾರೆ. ಆದರೆ, ಅಶ್ಪಾಕ್ ಬನಾರಸಿನಿಂದ ಬಿಹಾರ್ ಮತ್ತು ಅಲ್ಲಿಂದ ದೆಹಲಿಗೆ ತೆರಳುತ್ತಾನೆ. ಲಂಡನ್ನಿನಲ್ಲಿದ್ದ ಲಾಲ ಹರದಯಾಳ್ ರನ್ನು ಕ್ರಾಂತಿಕಾರ್ಯದ ಸಲುವಾಗಿ ಭೇಟಿಯಾಗಲು ವಿದೇಶಕ್ಕೆ ತೆರಳಲು ತಯಾರಿ ನಡೆಸುತ್ತಿದ್ದ ಅಶ್ಪಾಕ್. ದೆಹಲಿಯಲ್ಲಿ ಪಠಾನ್ ಸ್ನೇಹಿತ ಅನ್ನಿಸಿಕೊಂಡವನು ದ್ರೋಹ ಮಾಡಿದ ಕಾರಣ ಅಶ್ಪಾಕ್ ಪೋಲಿಸರಿಗೆ ಸಿಕ್ಕಿ ಬೀಳುತ್ತಾನೆ. ತಸಾದುಖ್ ಹುಸೇನ್ ಎಂಬ ಪೋಲೀಸ್ ಅಧಿಕಾರಿ ರಾಂ ಮತ್ತು ಅಶ್ಪಾಕ್ ಮಧ್ಯೆ ಹಿಂದೂ ಮತ್ತು ಮುಸಲ್ಮಾನ್ ಬೇಧವನ್ನು ಬಿತ್ತಲು ಪ್ರಯತ್ನಿಸುತ್ತಾನೆ. "ಬ್ರಿಟೀಷರ ನೌಕರಿ ಮಾಡುತ್ತಿರುವ ನಿಮ್ಮಂತಹವರು ಖಾಫ಼ಿರ್ ಹೊರತು ಭಾರತಕ್ಕಾಗಿ ಹೋರಾಡುವ ನನ್ನ ರಾಂ ಅಲ್ಲ" ಎಂದು ಉತೃಷ್ಟವಾಗಿ ಪ್ರತಿಕ್ರಿಯಿಸುತ್ತಾನೆ ಅಶ್ಪಾಕ್. ರಾಂ ಕೂಡ ಅಶ್ಪಾಕನ ಬಗ್ಗೆ ಅತೀ ಉನ್ನತ ಭಾವನೆಯನ್ನು ತನ್ನ ಅತ್ಮಕಥೆಯಲ್ಲಿ ವಿವರಿಸಿದ್ದಾನೆ.

ಕಾಕೋರಿ ಮತ್ತು ಇತರ ಕ್ರಾಂತಿಕಾರಿ ಚಟುವಟಿಕೆ ಕಾರಣದಿಂದಾಗಿ ರಾಂ ಮತ್ತು ಅಶ್ಪಾಕನಿಗೆ ಮರಣದಂಡನೆ ವಿಧಿಸುತ್ತದೆ ಬ್ರಿಟೀಷ್ ಸರ್ಕಾರ. ಡಿಸೆಂಬರ್ 11, 1927 ರಂದು ಗೋರಖ್ಪುರದಲ್ಲಿ ರಾಂ ಮತ್ತು ಲಕ್ನೋವಿನ ಫ಼ಸಿಯಾಬಾದಿನಲ್ಲಿ ಅಶ್ಪಾಕರನ್ನು ಒಂದೇ ದಿನ ನೇಣಿಗೇರಿಸುತ್ತಾರೆ. ರಾಂ ಯಾವಾಗಲೂ ಆಶ್ಪಾಕನನ್ನು ತಮ್ಮನಂತೆ ಕಂಡರೆ, ಅಶ್ಪಾಕ್ ರಾಂ ನನ್ನು ಅಣ್ಣ ಮತ್ತು ತನ್ನ ನಾಯಕನನ್ನಾಗಿ ಗೌರವಿಸುತ್ತಿದ್ದ. ಅವರಿಬ್ಬರ ಸ್ನೇಹವನ್ನು ಪರಮಾತ್ಮನಿಂದಲೂ ಬೇರ್ಪಡಿಸಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅವರಿಬ್ಬರಲ್ಲಿ ಸಮಾನವಾಗಿ ಉರಿಯುತ್ತಿದ್ದ ಭಾರತದ ಸ್ವಾತಂತ್ರ್ಯದ ಸಂಕಲ್ಪ. ಇಬ್ಬರಲ್ಲೂ ಒಂದೇ ಧ್ಯೇಯ ಮತ್ತು ಆರಾಧ್ಯ ದೈವ - ಭಾರತಮಾತೆ, ಹೃದಯದಲ್ಲಿದ್ದದ್ದು ದೇಶಭಕ್ತಿ. ಅಶ್ಪಾಕ್ ಮತ್ತು ರಾಂ ಪ್ರಸಾದನ ಜೀವನ ಭಾರತೀಯರಿಗೆ ಒಂದು ಪಾಠ. ದೇಶಭಕ್ತಿಯ ಮುಂದೆ ಜಾತಿ, ಮತ, ಧರ್ಮಗಳು ನಗಣ್ಯ.

October 5, 2020

ಜಗತ್ತಿನ ಪತ್ರಿಕಾ ಮಾಧ್ಯಮದ ಮೇಲೆ ಸವಾರಿ ಮಾಡುತ್ತಿದೆ ಚೀನಾ!

ಜಗತ್ತು ಕೊರೋನಾ ಎಂಬ ಮಹಾಮಾರಿಯಿಂದಾಗಿ 10 ಲಕ್ಷಕ್ಕೂ ಹೆಚ್ಚು ಸಾವನ್ನು ಕಂಡಿದೆ. ಜಗತ್ತಿಗೆ ಇದೊಂದು ಶಾಪವಾಗಿ ಪರಿಣಮಿಸಿದೆ. ಚೀನಾ, ಕೊರೋನಾ ವಿಚಾರವನ್ನು ಮುಚ್ಚಿಟ್ಟುಕೊಳ್ಳದೆ, ಸತ್ಯವನ್ನು ಜಗತ್ತಿಗೆ ತಿಳಿಸಿ ತನ್ನಲ್ಲೇ ಆದಷ್ಟೂ ತಡೆಹಿಡಿಯಬಹುದಿತ್ತು. ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಇತರ ವಾಮ ಮಾರ್ಗವನ್ನು ಬಳಸುತ್ತಿದೆ. ಒಂದೆಡೆ ಕೊರೋನಾ ಮತ್ತೊಂದು ಕಡೆ ಲದಾಖ್ ಭಾಗದಲ್ಲಿ ಚೀನಾದ ಅಪ್ರಚೋದಿತ ಆಕ್ರಮಣವನ್ನು ಭಾರತ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಎಡಪಂಕ್ತಿಯ ಚಿಂತನೆಯುಳ್ಳ ಪತ್ರಿಕೆಯಾದಂತಹ 'ದಿ ಹಿಂದೂ', ಅಕ್ಟೋಬರ್ 1 ರಂದು ಚೀನಾದ ರಾಷ್ಟ್ರೀಯ ದಿನದ ಪ್ರಯುಕ್ತ ಮುಖಪುಟವನ್ನೊಳಗೊಂಡಂತೆ ಬರೊಬ್ಬರಿ 3 ಪುಟಗಳ ಜಾಹಿರಾತನ್ನು ಪ್ರಕಟಿಸಿತು! ಚೀನಾದಿಂದ ಹಣ ಪಡೆಯುತ್ತಿರುವ ಈ ಪತ್ರಿಕೆ ತನ್ನ ಓದುಗರಲ್ಲಿ ಚೀನಾ ಅಥವಾ ಕಮ್ಯೂನಿಸಂ ಪರವಾದ ಚಿಂತನೆಯನ್ನು ಪ್ರಚಾರ ಮಾಡುತ್ತಿದೆ.

ಕೊರೋನಾ ವೈರಸ್ ಹರಡುವಿಕೆಯಲ್ಲಿ ತನ್ನ ಪಾತ್ರದ ಕುರಿತಂತೆ ವಿಶ್ವದಾದ್ಯಂತ ದೇಶಗಳು ಚೀನಾವನ್ನು ಪ್ರಶ್ನಿಸುತ್ತಿದ್ದಂತೆ ಅದು ಪ್ರತಿವಾದ ಮತ್ತು ಇತರ ದೇಶಗಳು ತಮ್ಮ ಜನರನ್ನು ರಕ್ಷಿಸುವಲ್ಲಿ ವಿಫ಼ಲವಾಗಿದೆ ಎಂದು ಆರೋಪ ಮಾಡಲು ಶುರುಮಾಡಿದೆ. ಇದಕ್ಕಾಗಿ ಅಯಾ ದೇಶದ ಪತ್ರಿಕಾ ಮಾಧ್ಯಮಗಳನ್ನೇ ಉಪಯೋಗಿಸಿಕೊಳ್ಳುತ್ತದೆ. ತನ್ನ ವಿಚಾರವನ್ನು ಜಗತ್ತಿನಾದ್ಯಂತ ಹರಡಲು ಇತರ ದೇಶಗಳ ಮಾಧ್ಯಮವನ್ನು ಸಹ ಖರೀದಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾಧ್ಯಮದ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಶತಕೋಟಿ ಡಾಲರ್ಗಳಷ್ಟು ಮೊತ್ತವನ್ನು ಚೀನಾ ಹೂಡಿಕೆ ಮಾಡುತ್ತಿದೆ. ಒಂದು ವರದಿಯ ಪ್ರಕಾರ, ಚೀನಾ ಆಡಳಿತವು ವಾರ್ಷಿಕವಾಗಿ 1.3 ಶತಕೋಟಿ ಡಾಲರ್ ಗಳನ್ನು ಹೂಡಿಕೆ ಮಾಡುತ್ತಿದೆ. ಅಮೇರಿಕಾದ ನ್ಯಾಯಾಲಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಚೀನಾ ಆಡಳಿತ ಮುಖವಾಣಿಯಾದ 'ಚೀನಾ ಡೈಲಿ' ಕಳೆದ 4 ವರ್ಷಗಳಲ್ಲಿ ಜಾಹಿರಾತು ಮತ್ತು ಮುದ್ರಣಕ್ಕಾಗಿ ಅಮೇರಿಕಾದ ಪತ್ರಿಕೆಗಳಿಗೆ 19 ದಶಲಕ್ಷ ಡಾಲರ್ ಪಾವತಿಸಿದೆ. 'ದಿ ವಾಲ್ ಸ್ಟ್ರೀಟ್ ಜರ್ನಲ್' ಅಮೇರಿಕಾದ ಹೆಚ್ಚು ಪ್ರಚಲಿತ ಹೊಂದಿರುವ ಪತ್ರಿಕೆಗಳಲ್ಲೋಂದು. ಈ ಪತ್ರಿಕೆ, ಚೀನಾದ ಜಾಹಿರಾತುಗಳ ಮೂಲಕವೇ 2016 ನವೆಂಬರ್ ನಿಂದ 6 ದಶಲಕ್ಷ ಡಾಲರ್ ಅಷ್ಟು ಮೊತ್ತವನ್ನು ಸಂಪಾದಿಸಿದೆ. ಲಾಸ್ ಏಂಜೆಲ್ಸ್, ಬೋಸ್ಟನ್, ಚಿಕಾಗೋದ ಪ್ರಮುಖ ಪತ್ರಿಕೆಗಳು ಚೀನಾ ಡೈಲಿಯ ಗ್ರಾಹಕರು ಎಂದು ಪಟ್ಟಿ ಮಾಡಲಾಗಿದೆ.

ಯೂರೋಪ್ ರಾಷ್ಟ್ರಗಳಲ್ಲೂ ಸಹ ಚೀನಾ ತನ್ನ ಡ್ರಾಗನ್ ಹಸ್ತವನ್ನು ಚಾಚಿದೆ. ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಗಳ ಚಿತ್ರಣವನ್ನು ಬದಲಾಯಿಸಲು ಚೀನಾದ ಪ್ರಯತ್ನಗಳು ಯೂರೋಪಿನ ಮಾಧ್ಯಮದ ಮೇಲೆ ಪ್ರಭಾವ ಸಾಧಿಸುವ ಕಾರ್ಯತಂತ್ರಕ್ಕೆ ಉದಾಹರಣೆಯಾಗಿದೆ. 2019ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಹಾಂಗ್‌ಕಾಂಗ್‌ ಪ್ರತಿಭಟನೆಯ ಸಮಯದಲ್ಲಿ, ಮಧ್ಯ ಮತ್ತು ಪೂರ್ವ ಯುರೋಪಿನ ಚೀನಾ ರಾಯಭಾರ ಕಚೇರಿಗಳು ಸ್ಥಳೀಯ ಮಾಧ್ಯಮಗಳನ್ನು ರಾಯಭಾರಿಗಳ ಲೇಖನ ಅಥವಾ ಸಂದರ್ಶನಗಳನ್ನು ಪ್ರಕಟಿಸುವ ಪ್ರಸ್ತಾಪದೊಂದಿಗೆ ಸಂಪರ್ಕಿಸಿವೆ ಎಂದು ಚೀನಾದ ತಜ್ಞರು ಹೇಳಿದ್ದಾರೆ. ಜೆಕ್ ಗಣರಾಜ್ಯದಲ್ಲಿ, ಚೀನಾದ ರಾಯಭಾರಿ ಜಾಂಗ್ ಜಿಯಾನ್ಮಿನ್ ಹಾಂಗ್‌ಕಾಂಗ್‌ ಪ್ರತಿಭಟನೆಯನ್ನು ಟೀಕಿಸಿ, ವಿದೇಶಿ ಪ್ರಭಾವವನ್ನು ಉಲ್ಲೇಖಿಸಿ ಬರೆದ ಲೇಖನ ಅಲ್ಲಿನ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಎಸ್ಟೋನಿಯಾದಲ್ಲಿ, ಚೀನಾದ ರಾಯಭಾರಿಯ ಲೇಖನ ದೇಶದ ಅತಿದೊಡ್ಡ ಪತ್ರಿಕೆ 'ಪೋಸ್ಟ್‌ಮೀಸ್‌' ನಲ್ಲಿ ಪ್ರಕಟವಾಯಿತು. ಲಿಥುವೇನಿಯಾದ 'ವಿಲ್ನಿಯಸ್ ಡೀನಾ', ಎಡಪಂಕ್ತಿಯ ಚಿಂತನೆಯುಳ್ಳ ಪೋಲಾಂಡಿನ 'ಟ್ರೈಬುನಾ' ಮತ್ತು ಸ್ಲೊವಾಕಿಯಾದ 'ನೋವೆ ಸ್ಲೊವೊ' ಚೀನಾದ ಹಣ ಪಡೆದು ಅವರ ಪರವಾದ ಲೇಖನಗಳನ್ನು ಪ್ರಕಟಮಾಡಿದೆ. ಇದಕ್ಕೆಲ್ಲ ಸ್ಲೊವಾಕಿಯಾದಲ್ಲಿದ್ದ ಚೀನಾದ ಅಂದಿನ ರಾಯಭಾರಿ ಲಿನ್ ಲಿನ್ ಸಾಕ್ಷಿ. ಇದಲ್ಲದೇ, ಉತ್ತರ ಮ್ಯಾಸಿಡೋನಿಯಾ, ಬೋಸ್ನಿಯಾ, ಹರ್ಜೆಗೋವಿನಾ ಮತ್ತು ಮಾಂಟೆನೆಗ್ರೊಗಳಲ್ಲಿನ ಮಾಧ್ಯಮಗಳಲ್ಲಿ ಇದೇ ರೀತಿಯ ಲೇಖನಗಳು ಪ್ರಕಟವಾಗಿವೆ. 

ಆಸ್ಟ್ರೇಲಿಯಾ ಮತ್ತು ಚೀನಾಕ್ಕೂ ವ್ಯಾವಹಾರಿಕವಾಗಿ ನಿಕಟ ಸಂಬಂಧವಿದೆ. ಆಸ್ಟ್ರೇಲಿಯಾದ ಮೂರನೇ ಒಂದು ಭಾಗದಷ್ಟು ರಫ್ತನ್ನು ಚೀನಾ ಕೊಂಡುಕೊಳ್ಳುತ್ತದೆ. ಚೀನಾ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುತ್ತದೆ. ಆಸ್ಟ್ರೇಲಿಯಾದಲ್ಲಿ ವ್ಯಾಸಾಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳಿಂದ 17% ರಷ್ಟು ಆದಯವನ್ನು ಅಲ್ಲಿನ ವಿಶ್ವವಿದ್ಯಾಲಯಗಳು ಸಂಪಾದಿಸಿದರೆ, ಚೀನಿ ಪ್ರವಾಸಿಗರಿಂದ ಸುಮಾರು 11 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಅಷ್ಟು ಆದಾಯವನ್ನು ಆಸ್ಟ್ರೇಲಿಯಾ ಸಂಪಾದಿಸುತ್ತದೆ. ಆಸ್ಟ್ರೇಲಿಯಾದ ರಾಜಕೀಯ ನೀತಿಯನ್ನು ಬದಲಾಯಿಸಲು ದೊಡ್ಡ ಮೊತ್ತದ ದೇಣಿಗೆಗಳನ್ನು ನೀಡಿ, ನಾಗರೀಕ ಸಮಾಜದ ಚರ್ಚೆಗಳಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಪಟ್ಟಿವೆ. ದಕ್ಷಿಣ ಚೀನಾ ಸಮುದ್ರ ನೀತಿಯ ಕುರಿತು 2017 ಅಲ್ಲಿ ಸರ್ಕಾರದ ಚಟುವಟಿಕೆ ಸಂಬಂಧಿತ ರಾಜಕೀಯ ಸುಳಿವನ್ನು ಚೀನಾದ ಮಾಧ್ಯಮಕ್ಕೆ ಬಿಟ್ಟುಕೊಟ್ಟರೆಂದು ಜನಪ್ರಿಯ ರಾಜಕಾರಣಿ; ಸ್ಯಾಮ್ ಡಸ್ತಾರಿ ಅವರನ್ನು ಆಸ್ಟ್ರೇಲಿಯಾದ ಸಂಸತ್ತಿನಿಂದ ಹೊರಹಾಕಲಾಯಿತು. ಈ ಘಟನೆ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯಗಳ ಮೇಲೆ ಮತ್ತು ಅಲ್ಲಿನ ಮಾಧ್ಯಮಗಳ ಮೇಲೆ ಬೆಳೆಯುತ್ತಿರುವ ಚೀನಾದ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಇನ್ನು 'ದಿ ಹಿಂದೂ' ಪತ್ರಿಕೆಯ ವರದಿಯ ವಿಚಾರಕ್ಕೆ ಬರೋಣ. ಭಾರತದಲ್ಲಿ 'ದಿ ಹಿಂದೂ' ಪತ್ರಿಕೆ ಚೀನಾದ ಗ್ರಾಹಕವಾಗಿದೆ. ಅಗತ್ಯವಾದ ಹಕ್ಕು ಮತ್ತು ಇತರ ನಿಯಮಗಳನ್ನು ಪಾಲಿಸಿಕೊಂಡು ಜಾಹಿರಾತುಗಳನ್ನು ಪ್ರಕಟಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೇ, ಚೀನಾದಂತಹ ಶತ್ರು ರಾಷ್ಟ್ರದ ಹಣ ಪಡೆದುಕೊಂಡು ಅದರ ಪರವಾಗಿ ನಮ್ಮ ದೇಶದ ದೈನಂದಿನ ಪತ್ರಿಕೆಯ ಮುಖವಾಣಿಯಲ್ಲಿ ಸುದ್ಧಿ ಪ್ರಕಟವಾಗುವುದು ನಿಜಕ್ಕೂ ಅಪಾಯಕಾರಿ. ಅಕ್ಟೋಬರ್ 1 ರಂದು ಪ್ರಕಟವಾದ ಆ ಜಾಹಿರಾತಿನ ಆರಂಭದಲ್ಲಿ ಚೀನಾದ ರಾಯಭಾರಿ - ಚೀನಾ ಕೋರೋನಾ ವಿರುದ್ಧ ಜಗತ್ತಿಗೆ ಎಷ್ಟು ಧೈರ್ಯದಿಂದ ಸಹಾಯ ಮಾಡಿದೆ, ಕೊರೋನಾ ವೈರಸ್ ಹರಡುವಿಕೆಯಲ್ಲಿ ಚೀನಾದ ಪಾತ್ರವಿಲ್ಲ ಎಂದು ಹೇಳುತ್ತಾ ಭಾರತ- ಚೀನಾ ಸಂಬಂಧ ಮತ್ತು ಇತ್ತೀಚಿನ ಗಡಿ ಉದ್ವಿಗ್ನತೆಯ ಬಗ್ಗೆ ಮತಾಡಿದ್ದಾರೆ. ಗಲ್ವಾನ್ ಪ್ರದೇಶದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ, ಭಾರತೀಯ ಸೈನ್ಯದ ಮೇಲೆ ಆಕ್ರಮಣ ಮಾಡಿ, ಈಗ ಶಾಂತಿ, ಸಹಕಾರ ಮತ್ತು ಸಂವಹನದ ಅಗತ್ಯತೆಯ ಕುರಿತು ಭಾರತಕ್ಕೆ ಪಾಠ ಮಾಡುವಂತಹ ಮಾತುಗಳನ್ನು ಆ ಜಾಹಿರಾತಿನಲ್ಲಾಡಿದೆ. ಬಡತನವನ್ನು ನಿರ್ಮೂಲನೆ ಮಾಡಿ, ಹೇಗೆ ತನ್ನನ್ನು ಸಮೃದ್ಧ ರಾಷ್ಟ್ರವನ್ನಾಗಿ ಪರಿವರ್ತಿಸಿಕೊಂಡಿದೆ ಎಂಬುದರ ಬಗ್ಗೆ ಆ ಜಾಹಿರಾತಿನಲ್ಲಿ ಚೀನಾ ಹೇಳಿಕೊಂಡಿದೆ.

'ದಿ ಹಿಂದೂ' ಪತ್ರಿಕೆ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮುಖವಾಣಿ ಎಂಬಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಆದರೆ, ಚೀನಾದಲ್ಲಿ ಮಸೀದಿಯನ್ನು ಒಡೆದು ಶೌಚಾಲಯವನ್ನಾಗಿ ಪರಿವರ್ತಿಸಿದ ಕುರಿತು, ಖುರಾನ್ ಅನ್ನು ತಿದ್ದುತ್ತಿರುವ ಕುರಿತು, ಉಯ್ಘರ್ ಮುಸಲ್ಮಾನರನ್ನು ಸಾಯಿಸುತ್ತಿರುವ ಕುರಿತು ಮತ್ತು ಚೀನಾದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಎಂದೂ ಮಾತಾಡುವುದಿಲ್ಲ. ಜಗತ್ತಿನಲ್ಲಿ ಭಯೋತ್ಪಾದನೆಯ ಮೂಲವಾಗಿರುವ ಪಾಕೀಸ್ತಾನದ ಆಪ್ತಮಿತ್ರ ಚೀನಾ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಭಯೋತ್ಪಾದನೆಯನ್ನು ಹತ್ತಿಕ್ಕಲು ಮುಂದಾಗಿರುವ ಜಾಗತಿಕ ಶಕ್ತಿ - ಚೀನಾ ಎಂದು ಹೇಳುವುದನ್ನು 'ದಿ ಹಿಂದೂ' ಮರೆಯಲಿಲ್ಲ. ಗಲ್ವಾನ್ ಘರ್ಷಣೆ ಕುರಿತು ಚೀನಾ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಯು ತನ್ನ ಮುಖಪುಟವನ್ನೇ ಬಿಟ್ಟುಕೊಟ್ಟಿದೆ ಮತ್ತು ಈ ಕ್ರಮಕ್ಕಾಗಿ ಚೀನಾ 'ದಿ ಹಿಂದೂ' ಗೆ ಧನ್ಯವಾದವನ್ನೂ ತಿಳಿಸಿದೆ. ರಾಷ್ಟ್ರದ ಹಿತಾಸಕ್ತಿ ಮತ್ತು ಸತ್ಯಾಂಶ ಹೊರತಾಗಿ ಹಣ ಮಾತ್ರ ಈ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯವನ್ನು ನಿರ್ಧರಿಸುತ್ತದೆ ಎಂಬುದು ಸಾಬೀತಾಗಿದೆ. ಜಗತ್ತಿಗೆ ಕೊರೋನಾವನ್ನು ಹರಡಿದ ದೇಶ - ಚೀನಾ ಎಂದು ಬಿಂಬಿಸುವ ಬದಲು, ಜಾಗತಿಕ ನಾಯಕ - ಚೀನಾ ಎಂದು ಬಿಂಬಿಸಲು ಹೊರಟಿದೆ 'ದಿ ಹಿಂದೂ' ಪತ್ರಿಕೆ! ಇದು ಭಾರತದ ಕಳಂಕ ಎಂದೇ ಹೇಳಬಹುದು. 

ಚೀನಾ, ಕೊರೋನಾ ವಿಚಾರವಾಗಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪರದೇಶದ ಪತ್ರಿಕೆಗಳಿಗೆ ಹಣದ ಆಮಿಷ ಒಡ್ಡುತ್ತಿದೆ. ತಾನು ಬೆಳೆಯುವುದಕ್ಕಾಗಿ ಇತರರನ್ನು ಹಾಳು ಮಾಡುವುದರಲ್ಲಿ ಎತ್ತಿದ ಕೈ ಚೀನಾ. ಅದಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಉಪಯೋಗಿಸಿಕೊಳ್ಳುತ್ತಿದೆ. ಅವರ ಆಮಿಷಕ್ಕೆ ಒಳಗಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಟ್ಟು ಚೀನಾದ ಪರವಾಗಿ ನಿಲ್ಲುವವರು ಎಡಪಂಕ್ತಿಯ ಕಮ್ಮ್ಯುನಿಸ್ಟರು. ಇಂತಹ ದೇಶದ್ರೋಹಿ ಪತ್ರಿಕೆಗಳನ್ನು ಪ್ರತ್ಯೇಕವಾಗಿರಿಸಿ ನಾವು ಎಚ್ಚರಿಕೆಯಿಂದರಬೇಕು. ಸರ್ಕಾರ ಮತ್ತು ತಂತ್ರಜ್ಞಾನ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಮುಖ್ಯವಾಗಿ ಚೀನಾದ ಪ್ರಭಾವವನ್ನು ತಗ್ಗಿಸಲು ಮುಂದಾಗಬೇಕು. ಪತ್ರಿಕಾ ಮಾಧ್ಯಮದ ಮೇಲೆ ಸವಾರಿ ಮಾಡುತ್ತಿರುವ ಚೀನಾದ ಆಟಾಟೋಪ ಅಂತ್ಯವಾಗಬೇಕು.