August 30, 2021

ಮಧ್ಯ ಏಷ್ಯಾ ಪ್ರಾಂತ್ಯವನ್ನು ಆಳುವವರು ಯಾರು?

ಕಳೆದ 15-20 ದಿನಗಳಿಂದ ಎಲ್ಲೆಡೆ ಅಫ್ಘಾನಿಸ್ತಾನದ್ದೇ ಸುದ್ಧಿ. ಆಗಸ್ಟ್ 11 ರಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹುಚ್ಚಾಟ ಶುರುವಾಯಿತು. ಮೂರೇ ದಿನಗಳಲ್ಲಿ ಅಂದರೆ ಆಗಸ್ಟ್ 15 ರಂದು ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಕೊಳ್ಳುತ್ತಾರೆ. ಇದರೊಂದಿಗೆ ಅಫ್ಘಾನಿಸ್ತಾನ ಮತ್ತೆ ತಾಲಿಬಾನಿಗಳ ತೆಕ್ಕೆಗೆ ಬಿತ್ತು. ರಷ್ಯಾ, ಚೀನಾ, ಪಾಕೀಸ್ತಾನ, ಇರಾನ್ ದೇಶಗಳ ರಾಯಭಾರ ಕಚೇರಿಗಳು ಅಫ್ಘಾನಿಸ್ತಾನದಲ್ಲಿ ಇನ್ನೂ ಕಾರ್ಯ ಮಾಡುತ್ತಿವೆ. ತನ್ನ ನಾಗರೀಕರನ್ನು ವಾಪಸ್ಸು ಕರೆದೊಯ್ಯಲು ತಾಲಿಬಾನಿಗಳು ಆಗಸ್ಟ್ 31 ತನಕ ಅಮೇರಿಕಾಕ್ಕೆ ಗಡುವು ನೀಡಿದೆ. ಇದರ ಬೆನ್ನಲ್ಲೇ ಆಗಸ್ಟ್ 27 ಮತ್ತು 29 ರಂದು ಐಸಿಸ್ ಕಾಬುಲ್ ವಿಮಾನ ನಿಲ್ದಾಣ ಸೇರಿದಂತೆ ಕೆಲವು ಕಡೆ ಬಾಂಬ್ ದಾಳಿ ಮಾಡಿದೆ. ಅದಕ್ಕೆ ಪ್ರತಿಯಾಗಿ ಅಮೇರಿಕಾ ಡ್ರೋನ್ ದಾಳಿ ನಡೆಸಿ ಐಸಿಸ್ನ ಇಬ್ಬರು ಪ್ರಮುಖ ಉಗ್ರರನ್ನು ಕೊಂದಿದ್ದೇವೆ ಎಂದಿದೆ. ಅಚ್ಚರಿ ಎಂದರೆ ಐಸಿಸ್ನ ಈ ದಾಳಿಯನ್ನು ತಾಲಿಬಾನಿಗಳು ಸಹ ಖಂಡಿಸಿದ್ದಾರೆ! ಅಧ್ಯಕ್ಷ ಬೈಡನ್ ಐಸಿಸ್ ವಿರುದ್ಧ ಮಾತಾಡಿದ್ದಾರೆ ಹೊರತು ತಾಲಿಬಾನಿಗಳ ವಿರುದ್ಧ ಅಲ್ಲ. ತಾಲಿಬಾನಿಗಳ ಕುರಿತು ಅಮೇರಿಕಾಕ್ಕೆ ಮೃದು ಧೋರಣೆ ಯಾಕೆ? ರಷ್ಯಾ, ಚೀನಾ, ಇರಾನ್ ತಾಲಿಬಾನಿಗಳ ಜೊತೆಗೆ ಮಾತುಕತೆಗೆ ತಾವು ತಯಾರು ಎಂದು ಹೇಳಲು ಕಾರಣವೇನು?

ಹತ್ತೊಂಬತ್ತನೆ ಶತಮಾನದ ದ್ವಿತಿಯಾರ್ಧದಲ್ಲಿ ರಷ್ಯಾ ಮತ್ತು ಆಂಗ್ಲರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಕ್ರಮವಾಗಿ ಉತ್ತರ ಮತ್ತು ದಕ್ಷಿಣದಿಂದ ಈಗಿರುವ ಅಫ್ಘನ್ ಭಾಗವನ್ನು ತಲುಪುತ್ತಾರೆ. ಖೋಕಂಡ್ ಖಾನೇಟ್, ಬುಖಾರಾ ಎಮಿರೇಟ್ ಮತ್ತು ಖಿವಾ ಖಾನೇಟ್ ಪ್ರಾಂತ್ಯಗಳನ್ನು ರಷ್ಯಾ ವಶಪಡಿಸಿಕೊಳ್ಳುತ್ತದೆ. ರಷ್ಯಾದ ಈ ಕ್ರಮ ಭಾರತವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಆಡ್ಡಿಯಾಗಬಹುದು ಎಂದು ಆಂಗ್ಲರ ಚಿಂತೆಯಾಗುತ್ತದೆ ಮತ್ತು ರಷ್ಯನ್ನರನ್ನು ತಡೆಯುವುದು ಆಂಗ್ಲರಿಗೆ ಅತೀ ಮುಖ್ಯವಾಗುತ್ತದೆ. ಯುದ್ಧ ಮತ್ತು ಒಪ್ಪಂದದ ಪರಿಣಾಮವಾಗಿ ರಷ್ಯಾ ಮತ್ತು ಆಂಗ್ಲರ ಭಾರತದ ಮಧ್ಯೆ ಒಂದು ಬಫರ್ ದೇಶವನ್ನಾಗಿ ಅಫ್ಘಾನಿಸ್ತಾನವನ್ನು ಸ್ಥಾಪಿಸಲಾಯಿತು. ಇದರ ಮೂಲಕ ಆಂಗ್ಲರು ರಷ್ಯಾವನ್ನು ತಮ್ಮ ಸಾಮ್ರಾಜ್ಯದತ್ತ ಬರುವುದನ್ನು ತಡೆಯುತ್ತಾರೆ. ನಂತರ ಜಗತ್ತಿನಲ್ಲಿ ಎರಡು ಮಹಾಯುದ್ಧಗಳು ನಡೆದು, ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಉಕ್ರೇನ್, ಜಾರ್ಜಿಯಾ, ಬೆಲಾರಸ್, ಅರ್ಮೇನಿಯಾ, ಅಜರ್ಬೈಜಾನ್, ಕಿರ್ಗಿಸ್ತಾನ, ಖಜಕಿಸ್ತಾನ, ಮೊಲ್ಡೊವಾ, ತುರ್ಕ್ಮೇನಿಸ್ತಾನ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳು ಸೋವಿಯಟ್ ಒಕ್ಕೂಟದ ಭಾಗದಿಂದ ಹೊರಬರುವುದಾಗಿ ಘೋಷಿಸಿತ್ತು. ಇದರೊಂದಿಗೆ ಸೋವಿಯಟ್ ರಷ್ಯಾ ಒಡೆದು ಹೋಯಿತು. ಆದರೆ, ತೈಲ ನಿಕ್ಷೇಪದ ಮೇಲೆ ತೇಲುತ್ತಿರುವ ಈ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಇತರ ರಾಷ್ಟ್ರಗಳು ಕಾಯುತ್ತಿದ್ದವು.

 

Central Asian Khanates and Tribes

ಸೋವಿಯಟ್ ಒಕ್ಕೂಟವನ್ನು ಒಡೆಯಲು ಮತ್ತು ಮಧ್ಯ ಏಷ್ಯಾ ಪ್ರಾಂತ್ಯವನ್ನು ತೆಕ್ಕೆಗೆ ಪಡೆದುಕೊಳ್ಳಲು ಅಮೇರಿಕಾ ಮುಂದಾಯಿತು. ಆಗ ಹುಟ್ಟಿಕೊಂಡದ್ದೇ ಒಸಾಮ ನೇತೃತ್ವದ ಸುನ್ನಿ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಅಲ್-ಕೈದಾ! ರಷ್ಯಾ ವಿರುದ್ದ ಯುದ್ಧ ಮಾಡಲು ಇದೇ ಅಲ್-ಕೈದಾಕ್ಕೆ ಪಾಕಿಸ್ತಾನದ ಐ.ಎಸ್.ಐ ಮೂಲಕ ಹಣ, ಶಸ್ತ್ರಾಸ್ತ್ರ ಮತ್ತು ತರಬೇತಿಯನ್ನು ನೀಡಿತು. ಪಾಕಿಸ್ತಾನದ ಐ.ಎಸ್.ಐ ಅಲ್-ಕೈದಾವನ್ನು ಬೆಳೆಸುವದರ ಜೊತೆಗೆ ವಿದ್ಯಾರ್ಥಿಗಳ ಸಂಘಟನೆ ಎನ್ನಿಸಿಕೊಂಡ ತಾಲಿಬಾನಿಗಳನ್ನು ಬೆಳೆಸಿದರು! ತನ್ನ ಕೆಲಸವಾದ ನಂತರ ಮೂಲೆಗುಂಪು ಮಾಡುವುದು ಅಮೇರಿಕಾದ ಬುದ್ಧಿ. ಅದರಂತೆ, ರಷ್ಯಾ ಒಡೆದ ನಂತರ ಅಮೇರಿಕಾ ಅಲ್-ಕೈದಾವನ್ನು ಕಡೆಗಾಣಿಸಿತು. ರಕ್ತದ ರುಚಿಕಂಡ ಹುಲಿಯಂತ್ತಿದ್ದ ಮತಾಂಧ ಉಗ್ರಗುಂಪು ಪಾಕಿಸ್ತಾನ, ತನ್ಮೂಲಕ ಕಾಶ್ಮೀರಕ್ಕೆ ನುಸುಳಿತು. ಇಸ್ಲಾಂ ವಿಚಾರಕ್ಕೆ ವಿರುದ್ಧ ಇದ್ದ ಅಮೇರಿಕಾ ವಿರುದ್ಧ ಒಸಾಮಾ 2001 ರಲ್ಲಿ ತಿರುಗಿಬಿದ್ದ. ಅಮೇರಿಕಾದ ಆಕ್ರಮಣದಿಂದಾಗಿ ಅಲ್-ಕೈದಾ ಇಂದ ಹೊರಬಂದ ಮತಾಂಧ ಉಗ್ರ ಗುಂಪು ಐಸಿಸ್ ಅನ್ನು ಕಟ್ಟಿಕೊಂಡಿತು!


ಅಮೇರಿಕಾ ತನ್ನ ವಿರುದ್ಧ ಯಾರೇ ಎಗರಾಡಿದರೂ ಪಾಠ ಕಲಿಸುತ್ತಾ ಬಂದಿದೆ. ಲಾಡೆನ್ ಅನ್ನು ಕೊಂದಿತು, ಅನೇಕರನ್ನು ಗ್ವಾಂಟನಾಮೊ ಬೇ ಅಲ್ಲಿ ಬಂಧಿಸಿ ಶಿಕ್ಷಿಸುತ್ತಿದೆ. ಆದರೆ, ತಾಲಿಬಾನಿನ ಮುಲ್ಲಾ ಓಮರ್ ನಾಗಲಿ ಅಥವಾ ಅಬ್ದುಲ್ ಬರಾದರ್ ನಾಗಲಿ ಅಮೇರಿಕಾಗೆ ಒಯ್ಯಲಿಲ್ಲ. ಓಮರ್ ಅಫ್ಘಾನ್ ಅಲ್ಲೇ ಸತ್ತರೇ, ಬರಾದರನ್ನು ಪಾಕಿಸ್ತಾಸನದಲ್ಲಿ ಬಂಧನದಲ್ಲಿಟ್ಟು, 2018 ರಲ್ಲಿ ಅಮೇರಿಕಾ ಬಿಡುಗಡೆ ಮಾಡಿತು. ಅಮೇರಿಕಾ ತಾಲಿಬಾನ್ ಬದಲಾಗಿದೆ ಎಂಬ ಭ್ರಮೆಯಲ್ಲಿದೆ. ರಷ್ಯಾ ಮತ್ತು ಚೀನಾವನ್ನು ತಡೆಯಲು ತಾಲಿಬಾನಿಗಳ ಜೊತೆ ಸಂಬಂಧ ಸರಿಯಿರಬೇಕು ಎಂಬ ಯೋಚನೆ ಇರಬಹುದು. ಅಮೇರಿಕಾ ಬಿಟ್ಟುಹೋದ ನಂತರ ಅಫ್ಘಾನಿಸ್ತಾನದ ಮೇಲೆ ತನ್ನ ಹಿಡಿತ ಸಾಧಿಸಲು ರಷ್ಯಾ ತಾಲಿಬಾನಿಗಳ ಜೊತೆ ಮಾತಿಗಿಳಿದಿದೆ. ಪಂಜಶೀರ್ನಲ್ಲಿ ಮಸೂದ್ ಅಜರ್ ನೇತೃತ್ವದ ತಂಡ ತಾಲಿಬಾನಿಗಳನ್ನು ತಡೆಯುವ ಪ್ರಯತ್ನ ಮಾಡಿತು. ಇವರಿಗೆ ತಜಕಿಸ್ತಾನದಿಂದ ಶಸ್ತ್ರಾಸ್ತ್ರದ ಬೆಂಬಲ ದೊರಕಿದೆ ಎಂಬ ಸುದ್ಧಿ ಅಫ್ಘಾನಿಸ್ತಾನದ ಮಾಧ್ಯಮ ಬಿತ್ತರಿಸಿತು ಆದರೆ, ತಜಕಿಸ್ತಾನದ ಸರ್ಕಾರ ಈ ಸುದ್ದಿಯನ್ನು ಅಲ್ಲಗೆಳದಿದೆ. ಅಕಸ್ಮಾತ್ ತಜಕಿಸ್ತಾನ ಬೆಂಬಲ ಕೊಟ್ಟಿದೆ ಎಂದಾದರೆ ಅದರಲ್ಲಿ ರಷ್ಯಾದ ಕೈವಾಡವಿದೆ ಎಂಬುದರಲ್ಲಿ ಅನುಮಾನವಿಲ್ಲ.

 

Datei Camp Delta, Guantanamo Bay

 

ಮಧ್ಯಪ್ರಾಚ್ಯದಲ್ಲಿ ಚೀನಾ ಸಹ ಅತ್ಯಾಸಕ್ತಿ ಹೊಂದಿದೆ. ಚೀನಾದ ಅಗ್ರ ಹತ್ತು ತೈಲ ಮೂಲಗಳಿಗೆ ಈ ಪ್ರದೇಶವು ನೆಲೆಯಾಗಿದೆ. ಇದು ಚೀನಾದ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ಸಂಪನ್ಮೂಲವಾಗಿದೆ. ಜೊತೆಗೆ ತನ್ನ ಬೆಲ್ಟ್ ರೋಡ್ ಯೋಜನೆಯನ್ನು ಭದ್ರಪಡಿಸಿಕೊಳ್ಳಲು ತಾಲಿಬಾನಿಗಳ ಜೊತೆ ನಿಕಟವಾದ ಸಂಬಂಧ ಹೊಂದುವ ಅಗತ್ಯ ಚೀನಾಕ್ಕೆ ಇದೆ. ಅಫ್ಘಾನಿಸ್ತಾನ ಬಹುಶಃ ವಿಶ್ವದ ಅತಿದೊಡ್ಡ ಲೀಥಿಯಂ ನಿಕ್ಷೇಪ ಹೊಂದಿರುವ ನೆಲೆಯಾಗಿದೆ. ವಿಧ್ಯುತ್ಛಾಲಿತ ವಾಹನಗಳಿಗೆ ಬಳಸುವ ಬ್ಯಾಟರಿ ಹಾಗೂ ನವೀಕರಿಸಬಹುದಾದ ಇಂಧನ ಉದ್ಯಮದಲ್ಲಿ ಉಪಯೋಗವಾಗುವ ಪ್ರಮುಖ ವಸ್ತು ಲೀಥಿಯಂ ಅದಿರು. ಪ್ರಪಂಚದಾದ್ಯಂತ ಲಿಥಿಯಂ-ಅಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ, ಗಣಿಗಾರಿಕೆ ಹಕ್ಕುಗಳು ಮತ್ತು ಮಾಲಿಕತ್ವದ ವ್ಯವಸ್ಥೆಗಳಿಗೆ ಪ್ರತಿಯಾಗಿ ತಾಲಿಬಾನ್‌ನೊಂದಿಗೆ ದೀರ್ಘಾವಧಿಯ ಒಪ್ಪಂದವನ್ನು ಮಾಡಿಕೊಳ್ಳಲು ಚೀನಾ ಮುಂದಾಗಿದೆ. ಅಫ್ಘಾನಿಸ್ತಾನವು ಚಿನ್ನ, ತೈಲ, ಬಾಕ್ಸೈಟ್, ಕ್ರೋಮಿಯಂ, ತಾಮ್ರ, ನೈಸರ್ಗಿಕ ಅನಿಲ, ಯುರೇನಿಯಂ, ಕಲ್ಲಿದ್ದಲು, ಕಬ್ಬಿಣದ ಅದಿರು, ಸೀಸ, ರತ್ನದ ಕಲ್ಲುಗಳು, ಟಾಲ್ಕ್, ಗಂಧಕ, ಟ್ರಾವರ್ಟೈನ್, ಜಿಪ್ಸಮ್ ಮತ್ತು ಅಮೃತಶಿಲೆಯಂತಹ ಇತರ ಸಂಪನ್ಮೂಲಗಳಿಂದ ಕೂಡಿದೆ. ಇದೆಲ್ಲದರ ಮೌಲ್ಯ ಸುಮಾರು 1 ಟ್ರಿಲಿಯನ್ ಡಾಲರ್ ಗಿಂತಲೂ ಹೆಚ್ಚು! ಇದರ ಮೇಲೆ ಚೀನಾ ಕಣ್ಣಿಟ್ಟಿರುವುದು ಅಕ್ಷರಶಃ ನಿಜ.

 

Abdul Ghani Baradar; the Taliban co-founder and the chinese foreign minister; Wang Yi meeting in tianjin, china

 

ತಾಲಿಬಾನಿಗಳು ಬದಲಾಗಿದ್ದಾರೆ ಎಂದು ಈ ಮೂರೂ ದೇಶಗಳು ಹೇಳುತ್ತಿರುವ ಕಾರಣ ಈಗ ಊಹಿಸಿಕೊಳ್ಳಿ. ಅಫ್ಘಾನ್ ತಾಲಿಬಾನಿಗಳಿಗೂ ಮತ್ತು ಪಾಕಿಸ್ತಾನದ ತಾಲಿಬಾನಿಗಳಿಗೂ ತಿಕ್ಕಾಟವಿದೆ. ಅಮೇರಿಕಾ ಹೇಳುವಂತೆ ಐಸಿಸ್ ತಾಲಿಬಾನಿಗಳಿಗಿಂತ ಹೆಚ್ಚು ಉಗ್ರ ಮೂಲಭೂತವಾದಿಗಳು. ಅಕಸ್ಮಾತ್, ಅಫ್ಘಾನಿಸ್ತಾನದ ತಾಲಿಬಾನಿಗಳು ಇಸ್ಲಾಂ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಐಸಿಸ್ ಜೊತೆಯಾದರೆ ಏನಾಗುತ್ತದೆ ಎಂಬುದು ಭೀಕರವಾದ ಪ್ರಶ್ನೆ.


ಈ ಎಲ್ಲಾ ಘಟನೆಗಳು ಭಾರತದ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ಯುದ್ಧ ನಡೆದಾಗಲೆಲ್ಲ ನಿರಾಶ್ರಿತರು ಇದ್ದೆ ಇರುತ್ತಾರೆ. ಅಂತಹವರೆಲ್ಲರಿಗೂ ಅನೇಕ ಬಾರಿ ಆಶ್ರಯ ನೀಡಿದೆ ಭಾರತ. ಇದು ನಮ್ಮ ಶಕ್ತಿಯೇ ಹೌದು. ಚಿಕಾಗೋದ ಭಾಷಣದಲ್ಲಿ ಕ್ರಿಶ್ಚಿಯನ್ನರನ್ನು ಕುರಿತು 'ನಿಮ್ಮವರನ್ನು ನೀವೇ ಓಡಿಸಿದಾಗ ಯಾರು ಜಾಗ ಕೊಡಲಿಲ್ಲ. ಅಂತಹವರಿಗೂ ಆಶ್ರಯ ನೀಡಿದ ದೇಶ ಭಾರತ' ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಮೊಘಲರ ಬಹಾಉದ್ದಿನ್ಗೆ ಆಶ್ರಯ ನೀಡಿ ಕುತುಬುದ್ದೀನ್ ಐಬಕ್ನ ವಿರೋಧ ಕಟ್ಟಿಕೊಂಡ ಕರ್ನಾಟಕದ ಗುಮ್ಮಟದ ಗಂಡುಗಲಿ ಕುಮಾರರಾಮ ಇಲ್ಲಿ ನೆನಪಾಗುತ್ತಾನೆ. ಎರಡನೆ ವಿಶ್ವಯುದ್ಧ ಸಮಯದಲ್ಲಿ ಪೋಲಾಂಡನ್ನು ಹಿಟ್ಲರ್ ಆಕ್ರಮಿಸಿಕೊಂಡಾಗ 500 ಮಹಿಳೆಯರು, 200 ಮಕ್ಕಳು ನಿರಾಶ್ರಿತರಾಗುತ್ತಾರೆ. ಯೂರೋಪಾಗಲಿ, ಇರಾನಾಗಲಿ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಬಾಂಬೆಗೆ ಬಂದ ಅವರನ್ನು ಆಂಗ್ಲರು ಕೂಡ ಸೇರಿಸುವುದಿಲ್ಲ. ಆದರೆ, ಗುಜರಾತಿನ ರಾಜ ಜಾಮ್ ಸಾಹೇಬ್ ಅವರೆಲ್ಲರಿಗೂ ಆಶ್ರಯ ನೀಡಿ, ಯುದ್ಧವಾದ ನಂತರ ತಮ್ಮ ದೇಶಕ್ಕೆ ಮರಳಲು ಸಹಾಯ ಮಾಡುತ್ತಾನೆ. ಪೋಲಾಂಡಿನಲ್ಲಿ ಆ ರಾಜನ ಹೆಸರಿನಲ್ಲಿ ಇಂದಿಗೂ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈಗಲೂ ಸಹ ಅಫ್ಘಾನ್ನರಿಗೆ ಪಾಕಿಸ್ತಾನವಾಗಲಿ, ಇರಾನಾಗಲಿ, ಉಜ್ಬೇಕಿಸ್ತಾನವಾಗಲಿ, ಅರಬ್ ದೇಶಗಳಾಗಲಿ ಆಶ್ರಯ ನೀಡುತ್ತಿಲ್ಲ. ಭಾರತ ಮಾತ್ರ ತುರ್ತು ವೀಸಾ ನೀಡಿ ಆಶ್ರಯ ನೀಡುತ್ತಿದೆ. ಯಾರಿಗೆ ಆಶ್ರಯ ನೀಡಬೇಕು ಎಂಬುದನ್ನು ಇತಿಹಾಸದ ಪುಟಗಳಿಂದ ನಾವು ಕಲಿಯಬೇಕು.


School Name and Pole raised in Poland as a tribute to Maharaja Jam Saheb
 
ಅಮೇರಿಕಾ, ರಷ್ಯಾ, ಚೀನಾ ಅಥವಾ ಇನ್ಯಾವುದೇ ದೇಶ ತಾಲಿಬಾನಿಗಳು ತಮ್ಮ ಪರವಾಗಿದ್ದರೆ ಒಳ್ಳೆಯವರು, ಇಲ್ಲವಾದರೆ ಕೆಟ್ಟವರು ಎಂಬ ಧೋರಣೆಯನ್ನು ಮೊದಲು ಬಿಡಬೇಕು. ಭಯೋತ್ಪಾದನೆಯನ್ನು ಮಟ್ಟಹಾಕಲು ಜಗತ್ತು ಒಂದಾಗಬೇಕಾಗಿದೆ. ಚೀನಾದ ಕುಟಿಲತೆ, ವಿಸ್ತರಣವಾದ ಮತ್ತು ಸ್ವಾರ್ಥದ ವಿರುದ್ಧ ಜೊತೆಯಾಗಬೇಕಾಗಿದೆ. ಐಸಿಸ್, ತಾಲಿಬಾನ್, ಇಂಡಿಯನ್ ಮುಜಾಹಿದ್ದೀನ್, ಅಲ್ ಕೈದಾ, ಐ.ಎಸ್.ಐ ಗಳೆಲ್ಲವೂ ಬೇರೆ ಬೇರೆ ಸಂಘಟನೆಗಳು ಎಂಬ ಭ್ರಮೆಯಿಂದ ಹೊರಬರಬೇಕಾಗಿದೆ. ಆದರೆ, ತಮ್ಮ ಸ್ವಾರ್ಥಕ್ಕಾಗಿ ಮತಾಂಧರನ್ನು ಬೆಂಬಲಿಸುತ್ತಿದೆ ಜಗತ್ತಿನ ದೊಡ್ಡ ರಾಷ್ಟ್ರಗಳು. ಐಸಿಸ್ ಅನ್ನು ಮಟ್ಟ ಹಾಕಿದ್ದೇವೆ ಎಂದು ಅಮೇರಿಕಾ ಹೇಳಿದರೂ ಅದು ಮತ್ತೆ ಬುಸುಗುಡುತ್ತಿದೆ. ಇಂತಹ ಮತಾಂಧ ಭಯೋತ್ಪಾದಕ ಸಂಘಟನೆ ಹಿಂದೆ ಇರುವವರು ಯಾರು? ಇನ್ನು ಮುಂದೆ ಮಧ್ಯ ಏಷ್ಯಾ ಪ್ರಾಂತ್ಯವನ್ನು ಆಳುವವರು ಯಾರು?

August 25, 2021

ಅಂತಃಪ್ರಜ್ಞೆ ಮತ್ತು ಸಹಜತೆ ಬದುಕಿಗೊಂದು ದಾರಿ

ನಮ್ಮ ಬದುಕಿನಲ್ಲಿ ನಮ್ಮ ಹೊರತಾಗಿ ಇತರರ ಪ್ರಭಾವಕ್ಕೆ ಒಳಗಾಗಿ ಅನೇಕ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಕೆಲವು ಸಲ ಪರಿಸ್ಥಿತಿಯ ಒತ್ತಡಕ್ಕೆ ಅಥವಾ ಮತ್ಯಾವುದೋ ಬಾಹ್ಯ ಪ್ರಭಾವಕ್ಕೆ ಒಳಗಾಗಿ ನಮ್ಮ ಬದುಕಿನ ಪಥ ನಿರ್ಧಾರವಾಗುತ್ತದೆ. ಜೀವನದಲ್ಲಿ ಅನೇಕ ಸಲ ನಾವು ಅಂದುಕೊಂಡದ್ದೆಲ್ಲಾ ನಡೆಯುವುದಿಲ್ಲ ಎನ್ನುವುದು ಕಹಿಯಾದರೂ ಸತ್ಯ. ಇತರರ ಅನುಭವದ ಆಧಾರದ ಮೇಲೆ ನಾವು ಪಾಠ ಕಲಿಬೇಕು ಎನ್ನುವುದು ಬುದ್ದಿವಂತರ ಮಾತು. ನಮ್ಮ ಜೀವನಾನುಭವ ಮತ್ತು ಇತಿಹಾಸ ಪುಟಗಳು ನಮಗೆ ಪಾಠ ಕಲಿಸುತ್ತದೆ. ಮತ್ತೊಂದು ವಿಧದಲ್ಲಿ ಬದುಕನ್ನು ಗಮನಿಸಿದಾಗ 'ಪ್ರಯತ್ನ ಪೂರ್ವಕವಾಗಿ ಮಾಡುವ ಪ್ರಕ್ರಿಯೆಗಿಂತ ಸಹಜತೆಯ ಪ್ರಕ್ರಿಯೆ ಶ್ರೇಷ್ಠ' ಮತ್ತು ನಮ್ಮ ಅಂತಃಪ್ರಜ್ಞೆ ಹೇಳಿದಂತೆ ನಡೆಯುವುದು ಎಲ್ಲಕ್ಕಿಂತ ಶ್ರೇಷ್ಠ ಎಂಬುದು ನನ್ನ ಅನಿಸಿಕೆ.

ಸಹಜತೆ ಶ್ರೇಷ್ಠ ಎಂಬುದುಕ್ಕೆ ಉತ್ತಮ ಉದಾಹರಣೆಗಳು ಇತಿಹಾಸದ ಪುಟಗಳಿಂದ ನಮಗೆ ದೊರಕುತ್ತದೆ. ಸ್ವಾಮೀ ವಿವೇಕಾನಂದ ಮತ್ತು ಅಕ್ಕ ನಿವೇದಿತೆಯರ ಬದುಕು ಇದಕ್ಕೆ ನಿಜಕ್ಕೂ ಉತ್ತಮ ಉದಾಹರಣೆ. ಸ್ವಾಮೀಜೀ ತರುಣಾವಸ್ಥೆಯಲ್ಲಿದ್ದಾಗ ದೇವರ ಕುರಿತು ಪ್ರಶ್ನೆ ಕಾಡುತ್ತಿರುತ್ತದೆ. ಹಲವರನ್ನು ದೇವರ ಕುರಿತು ಪ್ರಶ್ನೆಗಳನ್ನು ಕೇಳುತ್ತಾ ತಮ್ಮ ಪ್ರಯತ್ನ ಮುಂದುವರೆಸುತ್ತಾರೆ. ಗುರುದೇವ ರವೀಂದ್ರರನ್ನು ಭೇಟಿಯಾದಗಲೂ ದೇವರ ಕುರಿತು ಪ್ರಶ್ನೆಯನ್ನು ಕೇಳುತ್ತಾರೆ. ಗುರುದೇವ "ನಿನ್ನದು ಯೋಗಿಯ ಕಣ್ಣು, ನೀನು ಬಯಸಿದರೆ ದೇವರನ್ನು ನೋಡಬಹುದು' ಎಂದು ಉತ್ತರಿಸುತ್ತಾರೆ. ಕೇಳಿದವರೆಲ್ಲರೂ ನೇರವಾದ ಉತ್ತರ ಕೊಡುವ ಬದಲು ಇಂತಹುದೆ ಉತ್ತರ ಕೊಡುತ್ತಿದ್ದರು. ಈ ಉತ್ತರಗಳಾವುದು ಸ್ವಾಮೀಜಿಗೆ ಸಮಾಧಾನ ತರುವುದಿಲ್ಲ. ಯಾರಿಂದಲೂ ಸ್ಪಷ್ಠ ಉತ್ತರ ಸಿಗದ ಕಾರಣ ಬ್ರಹ್ಮ ಸಮಾಜಕ್ಕೆ ಹೋಗಲು ಶುರುಮಾಡುತ್ತಾರೆ. ನಾವು ನಂಬಿರುವ ತತ್ವದ ಮೇಲೆ ದೃಢವಾದ ವಿಶ್ವಾಸವಿದ್ದಲ್ಲಿ ಯಾವುದೋ ಕಾಸ್ಮಿಕ್ ಶಕ್ತಿ ನಮಗೆ ಸಹಾಯ ಮಾಡುತ್ತದೆ. ಅದೊಂದು ದಿವಸ ವ್ಯಕ್ತಿಯೊಬ್ಬರು ದಕ್ಷಿಣೇಶ್ವರಕ್ಕೆ ಹೋಗಿ ಶ್ರೀ ರಾಮಕೃಷ್ಣರನ್ನು ಭೇಟಿಯಾಗು ಎಂದು ಸ್ವಾಮೀಜೀಗೆ ಸಲಹೆ ಕೊಡುತ್ತಾರೆ. ಅದರಂತೆ ಸ್ವಾಮೀಜೀ ರಾಮಕೃಷ್ಣರನ್ನು ಭೇಟಿಯಾಗುತ್ತಾರೆ. ಮುಂದಿನದ್ದು ಇತಿಹಾಸ!

Sri Ramakrishna Paramahamsa and Swami Vivekananda

ಐರ್ಲೆಂಡಿನ ಮಾರ್ಗ್ರೇಟ್ ನೋಬೆಲ್ ಬದುಕು ಕೂಡ ಇದಕ್ಕೆ ಉದಾಹರಣೆ. ಮಾರ್ಗ್ರೇಟ್ ಧರ್ಮ ಜಿಜ್ಞಾಸುವಾಗಿ ತಾನು ನಂಬಿದ್ದ ಸಿದ್ಧಾಂತಗಳ ಮೇಲೆ ಅನೇಕ ಸಂದೇಹಗಳಿರುತ್ತದೆ. ತನ್ನ ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳುಲು ಚರ್ಚಿನ ಪಾದ್ರಿ, ತನ್ನ ತಂದೆ, ತಾಯಿ, ಸ್ನೇಹಿತರು, ಶಿಕ್ಷಕರು ಮತ್ತು ತತ್ವಜ್ಞಾನಿ ಎನ್ನಿಸಿಕೊಂಡ ಅನೇಕರನ್ನು ಪ್ರಶ್ನಿಸುತ್ತಾಳೆ. ಆದರೆ, ಪ್ರಯತ್ನ ಮಾತ್ರ ವರ್ಥ್ಯ. ಯಾರಿಂದಲೂ ಸಮಾಧಾನಕರವಾದ ಉತ್ತರ ದೊರಕುವುದಿಲ್ಲ. ಒಂದು ಹಂತದಲ್ಲಿ ಚರ್ಚಿಗೆ ಹೋಗುವುದನ್ನು ನಿಲ್ಲಿಸಿ, ಮಕ್ಕಳಿಗೆ ಪಾಠ ಹೇಳುತ್ತಾ ಜೀವನ ಮುಂದುವರೆಸುತ್ತಾಳೆ ಮಾರ್ಗ್ರೇಟ್. ಮತ್ತೆ ಅದೊಂದು ದಿವಸ ಸ್ನೇಹಿತೆಯ ಬಲವಂತದ ಕಾರಣ ತನ್ನ ಸಂದೇಹಗಳಿಗೆ ಉತ್ತರ ಸಿಗಬಹುದು ಎಂಬ ನಂಬಿಕೆ ಇಲ್ಲದಿದ್ದರೂ ವಿವೇಕಾನಂದರನ್ನು ಭೇಟಿಯಾಗಲು ಹೋಗುತ್ತಾಳೆ. ಅಂದು ಸ್ವಾಮೀಜೀಯನ್ನು ಭೇಟಿಯಾಗಲು ಬಂದವರಲ್ಲಿ ಮಾರ್ಗ್ರೇಟ್ ಕೊನೆಯವಳು! ಅಚಾನಕ್ಕಾಗಿ, ಕೊನೆಯವಳಾಗಿ ಬಂದರೂ ಆಕೆಯ ಸಂದೇಹವೆಲ್ಲಾ ಪರಿಹಾರವಾಗಿ ಭಾರತಕ್ಕೆ ಅಕ್ಕ ನಿವೇದಿತಾಳಾಗಿ ನೀವೇದನಗೊಳ್ಳುತ್ತಳೆ. ಇತಿಹಾಸದಲ್ಲಿ ಅಕ್ಕನ ಹೆಸರು ಅಜರಾಮರವಾಗುತ್ತದೆ.

Swami Vivekananda and Sister Nivedita

ಕನ್ನಡಿಗರಿಗೆ ಚಂದ್ರಶೇಖರ ಆಜಾದರನ್ನು 'ಅಜೇಯ' ಕೃತಿಯ ಮೂಲಕ ಪರಿಚಯಿಸಿದ್ದು ಶ್ರೀ ಬಾಬೂ ಕೃಷ್ಣಮೂರ್ತಿ. ಅಜೇಯ ಬರೆಯಬೇಕಾದರೂ ಸಹ ಅವರ ಅಂತಃಪ್ರಜ್ಞೆ ಜಾಗೃತವಾಗಿ ಅಮೂಲ್ಯ ನಿಧಿಯೊಂದು ಹೊರಬಂದದ್ದನ್ನು ಗಮನಿಸಬಹುದು. ಆ ಘಟನೆಯನ್ನು ಬಾಬೂಜೀ ಅಜೇಯದ ಮುನ್ನುಡಿಯಲ್ಲಿ ದಾಖಲಿಸಿದ್ದಾರೆ. ಆಜಾದರು 1923ರಲ್ಲಿ ಕಾಶಿ ವಿದ್ಯಾಪೀಠದ ಗಂಥ ಭಂಡಾರಕ್ಕೆ ಒಂದು ಚರಿತ್ರೆಯ ಪುಸ್ತಕವನ್ನು ತಮ್ಮ ಹಸ್ತಾಕ್ಷರದೊಂದಿಗೆ ಕೊಡುಗೆಯಾಗಿ ನೀಡಿದ್ದರು. ಅದು ಕಳೆದುಹೋಗಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಗ್ರಂಥಾಲಯದ ಮೇಲ್ವಿಚಾರಕರ ಅನುಮತಿ ಪಡೆದುಕೊಂಡು ಬಾಬೂಜೀ ಮತ್ತೊಮ್ಮೆ ಹುಡುಕುವ ಪ್ರಯತ್ನ ಮಾಡುತ್ತಾರೆ. ಗ್ರಂಥಾಲಯದಲ್ಲಿದ್ದ 3-4 ಸಹಾಯಕರು ಹುಡುಕಲು ಶುರು ಮಾಡುತ್ತಾರೆ. ಸ್ವಲ್ಪ ಹೊತ್ತು ಸುಮ್ಮನಿದ್ದ ಬಾಬೂಜೀ ಕಪಾಟುಗಳ ನಡುವೆ ಒಂದೊಂದೆ ಪುಸ್ತಕವನ್ನು ತೆಗೆದು ಹುಡುಕುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನ ಹನ್ನೆರಡುವರೆ ಒಂದಾದರೂ ಹುಡುಕಾಟ ನಿಲ್ಲಲಿಲ್ಲ ಆದರೆ, ಬೇಕಾದ್ದು ಸಿಗಲಿಲ್ಲ. ಅಷ್ಟರಲ್ಲಿ ನಡೆದಿದ್ದು ಯೋಗಾಯೋಗ ಘಟನೆ! ಇಂಗ್ಲೆಂಡಿನ ಚರಿತ್ರೆಯ ಪುಸ್ತಕಗಳಿದ್ದ ಕಪಾಟಿನಲ್ಲಿ ಹುಡುಕುತ್ತಿದ್ದರು ಬಾಬೂಜೀ. ಯಾವ ಪ್ರೇರಣೆಯಿಂದಲೋ ಬಾಬೂಜೀ ಒಂದು ಪುಸ್ತಕವನ್ನು ತೆಗೆಯುತ್ತಾರೆ. ಹೌದು, ಅದು ಅವರು ಹುಡುಕುತ್ತಿದ್ದ ಪುಸ್ತಕವೇ. ಅದು ಅಜಾದರ ಹಸ್ತಾಕ್ಷರವಿದ್ದ ಪುಸ್ತಕ - 'ದಿ ಶಿಲ್ಲಿಂಗ್ ಹಿಸ್ಟರಿ ಆಫ್ ಇಂಗ್ಲೆಂಡ್' (The Shilling History of England)!' ಕಾಶೀವಿದ್ಯಾ ಪೀಠ್ ಪುಸ್ತಕಾಲಯ್ ಕೋ ಸಾದರ್ ಸಪರ್ಪಿತ್, ಚಂದ್ರಶೇಖರ್ ಆಜಾದ್, 14-04-1923' ಎಂಬ ಹಸ್ತಾಕ್ಷರ ಅದರಲ್ಲಿರುತ್ತದೆ.

Hand Writing with Autograph of Chandrashekar Azad

ಭಾರತದ ಶ್ರೇಷ್ಠ ಗಣಿತಜ್ಞ ಎಂದರೆ ಶ್ರೀ ಶ್ರೀನಿವಾಸ ರಾಮಾನುಜನ್. ಅವರು ಮೊಕ್ ಥೀಟಾ (Mock Theeta) ತತ್ವದ ಮೇಲೆ ಕೊಟ್ಟಿರುವ ಗಣಿತ ಸೂತ್ರಗಳನ್ನು 50 ವರ್ಷಗಳ ಮೇಲೆ ಸಹ ಬಿಡಿಸಲು ಸುಲಭವಾಗಿರಲಿಲ್ಲ. ಅವರು ಬರೆದಿಟ್ಟಿದ್ದ ಯಾವುದೇ ಸೂತ್ರಗಳಿಗೆ ಸಾಕ್ಷ್ಯ ಒದಿಗಿಸಿರಲಿಲ್ಲ. ಲಂಡನ್ನಿನ ಗಣಿತಜ್ಞ ಹಾರ್ಡಿ ಇದರ ಕುರಿತು ಕೇಳಿದಾಗ ರಾಮಾನುಜನ್ "ಇದಕ್ಕೆ ಸಾಕ್ಷ್ಯ ನನ್ನ ಹತ್ತಿರವೂ ಇಲ್ಲ ಆದರೆ, ಗಣಿತದ ಮೇಲೆ ಕೆಲಸ ಮಾಡಬೇಕಾದರೆ ಈ ಸೂತ್ರಗಳು ನನಗೆ ಹೊಳೆಯುತ್ತದೆ" ಎಂದಿದ್ದರು. ರಾಮಾನುಜನ್ ಅದೊಂದು ದಿವಸ ಆರೋಗ್ಯ ಸರಿಯಿಲ್ಲದ ಕಾರಣ ಮಲಗಿದ್ದರು. ಹಾರ್ಡಿ ಅವರ ಮನೆಗೆ ಬಂದು 'ಇಂದು ಗಣಿತಜ್ಞನೊಬ್ಬನಿಗೆ ಬೇಸರದ ದಿನ. ಇಂದು ಟ್ಯಾಕ್ಸಿಯೊಂದರಲ್ಲಿ ಬಂದೆ. ಆ ಗಾಡಿಯ ಸಂಖ್ಯೆ 1729 ಆಗಿತ್ತು ಆದರೆ, ಈ ಸಂಖ್ಯೆಯಲ್ಲಿ ಏನು ವಿಶೇಷತೆ ನನಗೆ ಕಾಣಿಸಲಿಲ್ಲ' ಎಂದು ಹೇಳಿತ್ತಾರೆ. ಬಹುಶಃ ಒಂದು ನಿಮಿಷ ಆಗಿರಬಹುದು ನಂತರ ರಾಮಾನುಜನ್ - "ಈ ಸಂಖ್ಯೆ ಕೂಡ ವಿಶೇಷವಾದದ್ದೆ. ಎರಡು ವಿಭಿನ್ನ ಜೋಡಿ ಸಂಖ್ಯೆಗಳ ಘನಗಳನ್ನು ಕೂಡಿಸಿದಾಗ ವ್ಯಕ್ತವಾಗುವ ಏಕೈಕ ಸಂಖ್ಯೆ 1729!" ಎಂದು ಸಹಜವಾಗಿ ಹೇಳುತ್ತಾರೆ. ಇದನ್ನು a. 103 + 93 = 1729 ಮತ್ತು b. 123 + 13 = 1729 ಎಂದು ವಿವರಿಸುತ್ತಾರೆ. ಇದನ್ನು ಕೇಳಿದ ಹಾರ್ಡಿ ಮೂಕವಿಸ್ಮಿತರಾಗುತ್ತಾರೆ. 'You are a born Mathematician' ಎಂದು ಮನಸ್ಪೂರ್ತಿಯಾಗಿ ಹೊಗಳುತ್ತಾರೆ. ರಾಮಾನುಜನ್ ಅವರ ಅಂತಃಪ್ರಜ್ಞೆ ಹೇಗೆ ಕೆಲಸ ಮಾಡುತ್ತಿತ್ತು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.

G.H. Hardy and Srinivasa Ramanujan

ನಮ್ಮ ಬದುಕಿನಲ್ಲಿ ಸಹ ಇಂತಹ ಘಟನೆಗಳು ನಡೆದಿರುತ್ತದೆ, ನಾವು ಗಮನಿಸಬೇಕು ಅಷ್ಟೇ. ಬದುಕಿನಲ್ಲಿ ಎಲ್ಲಾ ಕಾರ್ಯದಲ್ಲೂ ನಮ್ಮ ಪ್ರಯತ್ನವಿರಬೇಕು ಹೌದು ಅದರೆ, ಸಹಜವಾಗಿ ದೊರಕುವ ಅಥವಾ ನಡೆಯುವ ಪ್ರಕ್ರಿಯೆ ಮತ್ತು ಅಂತಃಪ್ರಜ್ಞೆ ಹೇಳಿದಂತೆ ನಡೆದುಕೊಳ್ಳುವುದು ಶ್ರೇಷ್ಠ. ಪ್ರಕೃತಿ ಅಥವಾ ದೈವದ ಮುಂದೆ ನಮ್ಮ ದೃಷ್ಠಿಕೋನ ತೀರ ಸಂಕುಚಿತ. ನಮ್ಮ ಬದುಕನ್ನು ನಾವು ತೀರ್ಮಾನಿಸುವುದರ ಬದಲು ದೈವಕ್ಕೆ ಅರ್ಥಾತ್ ಅಂತಃಪ್ರಜ್ಞೆಗೆ ಶರಣಾಗುವುದು ಹೆಚ್ಚು ಒಳಿತನ್ನು ಮಾಡುತ್ತದೆ. ಸ್ವಾಮೀಜೀ ಶ್ರೀ ರಾಮಕೃಷ್ಣರನ್ನು ಭೇಟಿಯಾಗಿದ್ದಾಗಲಿ, ಅಕ್ಕ ನಿವೇದಿತಾ ಸ್ವಾಮೀಜೀಯನ್ನು ಭೇಟಿಯಾಗಿದ್ದಾಗಲಿ, ಬಾಬೂಜೀಗೆ ಆಜಾದರ ಹಸ್ತಾಕ್ಷರ ಇರುವ ಪುಸ್ತಕ ಸಿಕ್ಕಿದ್ದಾಗಲಿ ಅಥವಾ ರಾಮಾನುಜನ್ ರವರಿಗೆ ಗಣಿತದ ಸೂತ್ರ ಹೊಳೆದದ್ದು ಸಹಜತೆ ಮತ್ತು ಅಂತಃಪ್ರಜ್ಞೆಯ ಸಂಕೇತ. ನಮಗೆ ಬದುಕಿನಲ್ಲಿ ಯಾರದರು ಸ್ನೇಹಿತರು ಆಥವಾ ಸಂಗಾತಿ ಸಿಗಬೇಕಾದರೂ ಸಹಜತೆ ಇದ್ದರೆ ಒಳಿತು. ಕೆ.ವಿ. ಅಯ್ಯರ್ ರವರು ತಮ್ಮ 'ಶಾಂತಲ' ಕಾದಂಬರಿಯಲ್ಲಿ 'ಜಗನ್ನಿಯಾಮಕನು ಯಾವ ಪುರುಷನಿಗೆ ಯಾವ ಸ್ತ್ರೀ ಎಂದು ವಿಧಾಯಕ ಮಾಡಿರುವನೋ, ಪ್ರಾಪ್ತ ಸಮಯದಲ್ಲಿ ಆ ಜಗನ್ನಿಯಾಮಕನೇ ಆ ಸ್ತ್ರೀಗೂ ಆ ಪುರುಷನಿಗೂ ಒಬ್ಬರನ್ನೊಬ್ಬರು ಕಣ್ಮನಗಳಿಂದ ಆಕರ್ಷಿಸುವ, ಅಪೇಕ್ಷಿಸುವ, ತನ್ನ ಧರ್ಮ ಪತ್ನಿ(ಪತಿ) ಎಂದು ಅರಿಯುವ ಶಕ್ತಿಯನ್ನೂ ಕರುಣಿಸುತ್ತಾನೆ'' ಎಂದು ಹೇಳಿದ್ದಾರೆ. ಈ ಸಾಲು ಸಹ ಅಂತಃಪ್ರಜ್ಞೆಯನ್ನು ಸೂಚಿಸುತ್ತದೆ. ಆದ್ದರಿಂದಲೇ ಅಂತಃಪ್ರಜ್ಞೆ ಮತ್ತು ಸಹಜತೆ ಬದುಕಿಗೊಂದು ದಾರಿ. ಅದನ್ನು ಆನುಭವಿಸುವ ಮನಸ್ಸು ನಮ್ಮದಾಗಬೇಕು ಅಷ್ಟೇ.

August 18, 2021

ಅಫ್ಘಾನಿಸ್ತಾನದಲ್ಲಿ ದಿ ತಾಲಿಬಾನ್ ರಿಟರ್ನ್ಸ್!

2001 ರಲ್ಲಿ ತಾಲಿಬಾನಿಗಳು ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಿ ಮಾಡಿ ಉರುಳಿಸಿದರು. ಒಸಾಮಾ ಬಿನ್ ಲಾಡೆನ್ ಮತ್ತು ಅಲ್-ಕಾಯ್ದಾಗಳಿಗೆ ಬುದ್ದಿ ಕಲಿಸಬೇಕೆಂದು ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ನಿಶ್ಚಯಿಸಿದ. ಅಮೇರಿಕಾದ ಅಸಲಿ ಉದ್ದೇಶವೇ ಬೇರೆ ಇತ್ತು. ಏಷ್ಯಾದ ಮಧ್ಯ ಭಾಗದಲ್ಲಿ ತನ್ನ ಬಲವನ್ನು ವೃದ್ಧಿಸಿಕೊಳ್ಳಬೇಕಿತ್ತು, ತೈಲ ನಿಕ್ಷೇಪದ ಮೇಲೆ ತನ್ನ ಸ್ವಾಮ್ಯ ಸ್ಥಾಪಿಸುವ ಉದ್ದೇಶವಿತ್ತು. ಒಂದು ಕಾಲದಲ್ಲಿ ರಷ್ಯಾ ವಿರುದ್ಧವಾಗಿ ಇದೇ ತಾಲಿಬಾನನ್ನು ಮತ್ತು ಅಲ್-ಕಾಯ್ದಗಳನ್ನು ಅಮೇರಿಕಾ ಬೆಂಬಲಿಸಿತ್ತು. ಭಯೋತ್ಪಾದನೆಯನ್ನು ಮಟ್ಟ ಹಾಕಿ, ಅಫ್ಘಾನ್ ಸೇನೆಯನ್ನು ತನ್ನ ದೇಶವನ್ನು ರಕ್ಷಿಸಿಕೊಳ್ಳುವ ಹಾಗೆ ತಯಾರು ಮಾಡಿ, ಪ್ರಜಾಪ್ರಭುತ್ವ ಸ್ಥಾಪಿಸುವ ಉದ್ದೇಶವನ್ನು ಜಗತ್ತಿನೆದುರಿಗೆ ಹೇಳಿಕೊಳ್ಳಿತ್ತಿತ್ತು. 20 ವರ್ಷಗಳ ಕಾಲ ಅಮೇರಿಕಾ ಅಫ್ಘಾನ್ ಅನ್ನು ನಿಯಂತ್ರಿಸಿತ್ತು. ಈ ಅವಧಿಯಲ್ಲಿ ಅಮೇರಿಕಾ 144 ಮಿಲಿಯನ್ ಡಾಲರ್ ಅಷ್ಟು ಖರ್ಚು ಮಾಡಿದೆ, 2500 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ, 22 ಸಾವಿರಕ್ಕೂ ಅಧಿಕ ಸೈನಿಕರು ಗಾಯಗೊಂಡರು! ಈ ನಷ್ಟದಿಂದಾಗಿ ಡೋನಾಲ್ಡ್ ಟ್ರಂಪ್ ಸೆಪ್ಟೆಂಬರ್ ಹೊತ್ತಿಗೆ ಹಿಂದೆ ಸೈನ್ಯವನ್ನು ತೆಗೆದುಕೊಳ್ಳುವ ಯೋಚನೆ ಮಾಡಿದ್ದ. ಆದರೆ, ಜೋ ಬೈಡನ್ ಈಗಲೇ ಒಂದು ರೀತಿ ಯೋಜನೆ ಇಲ್ಲದೆ ಹಿಂತೆಗೆದುಕೊಂಡಿದ್ದಾನೆ. ಅಮೇರಿಕಾ ಹೇಳಿದಂತೆ ಅಫ್ಗಾನ್ ಸೈನ್ಯವನ್ನು 20 ವರ್ಷಗಳ ಕಾಲ ತಯಾರು ಮಾಡಿದ್ದೆ ಆದರೆ, ಅವರ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ. ಕೇವಲ 10 ದಿನಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡಿದ್ದಾರೆ. ಮತ್ತೊಮ್ಮೆ ಅಫ್ಘಾನಿಸ್ತಾನದಲ್ಲಿ ದಿ ತಾಲಿಬಾನ್ ರಿಟರ್ನ್ಸ್!

 
The Taliban Returns

ಅಮೇರಿಕಾ 88 ಬಿಲಿಯನ್ ಡಾಲರ್ ಅಷ್ಟು ಹಣವನ್ನು ಅಫ್ಘಾನಿಸ್ತಾನದ ಸೈನ್ಯ ಮತ್ತು ಪೋಲೀಸ್ ವ್ಯವಸ್ಥೆಯನ್ನು ಕಟ್ಟಲು ಖರ್ಚು ಮಾಡಿದೆ. 36 ಬಿಲಿಯನ್ ಡಾಲರ್ ಅಷ್ಟು ಮೊತ್ತವನ್ನು ಆಡಳಿತ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ವ್ಯಯಿಸಿದೆ ಎಂದು ಹೇಳಿಕೊಂಡಿದೆ. ಯೂರೋಪಿನ ಯು.ಕೆ. ಮತ್ತು ಜರ್ಮನಿ ದೇಶಗಳು 50 ಬಿಲಿಯನ್ ಡಾಲರ್ ಅಷ್ಟು ಮೊತ್ತವನ್ನು ಖರ್ಚು ಮಾಡಿದೆ. ಭಾರತ ಕೂಡ 3 ಬಿಲಿಯನ್ ಡಾಲರ್ರಷ್ಟು ಮೊತ್ತವನ್ನು ಅಫ್ಘಾನಿಸ್ತಾನದಲ್ಲಿ 500 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳಿಗಾಗಿ ಹೂಡಿಕೆ ಮಾಡಿತ್ತು. ಅವರ ದೇಶದ ಸಂಸತ್ ಭವನವನ್ನು 90 ಮಿಲಿಯನ್ ಡಾಲರ್ ಅಷ್ಟು ಖರ್ಚು ಮಾಡಿ ಭಾರತ ಕಟ್ಟಿಕೊಟ್ಟಿತು. ಭಾರತದ ಅಮುಲ್ ಸಂಸ್ಥೆ ಅಫ್ಘಾನಿಸ್ತಾನ್ ಕ್ರಿಕೇಟ್ ತಂಡದ ಅಧಿಕೃತ ಪ್ರಧಾನ ಪ್ರಾಯೋಜಕರಾಗಿದ್ದಾರೆ. ಕೆಲವು ದಿನಗಳ ಘಟನೆಗಳನ್ನು ಗಮನಿಸುವುದಾದರೆ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ತಜಕಿಸ್ತಾನದಲ್ಲಿ ಅನುಮತಿ ಸಿಗದ ಕಾರಣ ಒಮನ್ ಗೆ ಓಡಿದ್ದಾನೆ. ಭ್ರಷ್ಟನಾಗಿದ್ದ ಆತ ತನ್ನ ಆಸ್ತಿಯನ್ನೆಲ್ಲಾ ಕರಗಿಸಿ ಹಣವನ್ನು ವಿಮಾನದಲ್ಲಿ ತುಂಬಿಸಿಕೊಂಡು ಓಡಿದ್ದಾನೆ. ನೆನಪಿಡಿ, ಅಫ್ಘಾನಿಸ್ತಾನದ ಸೈನ್ಯದ ಸಂಖ್ಯೆ ಮೂರುವರೆ ಲಕ್ಷವಾದರೆ, ತಾಲಿಬಾನಿಗಳ ಸಂಖ್ಯೆ 85 ಸಾವಿರ. ಸಂಖ್ಯೆ ದೃಷ್ಠಿಯಲ್ಲಿ ಮೂರು ಪಟ್ಟು ಹೆಚ್ಚು ಬಲವಾಗಿದ್ದರೂ ಸೈನ್ಯ ಮತ್ತು ಪೋಲೀಸ್ ವ್ಯವಸ್ಥೆ ಯಾವುದೇ ಪ್ರತಿರೋಧವಿಲ್ಲದೆ ಮತಾಂಧ, ಡಕಾಯಿತರ ಗುಂಪು ಆ ದೇಶವನ್ನು ಆಕ್ರಮಿಸಿಕೊಂಡಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಿದ್ದರೆ ಇದೇ ಸ್ಥಿತಿ ಇರುತ್ತಿತ್ತಾ? ಆ ದೇಶದಲ್ಲಿ ಹೂಡಿಕೆ ಮಾಡಿದ ಇಷ್ಟು ಮೊತ್ತ ಮತ್ತು ಸಮಯ ಏನಾಯಿತು? ತಾಲಿಬಾನಿಗಳು ಇಷ್ಟು ವ್ಯವಸ್ತಿತವಾಗಿ, ಆಧುನಿಕ ಶಸ್ತ್ರಾಸ್ತ್ರ ಮತ್ತು ವಾಹನಗಳನ್ನು ಬಳಸುತ್ತಿದ್ದಾರೆ ಎಂದರೆ ಅವರಿಗೆ ಹಣ ಹರಿದು ಬರುತ್ತಿರುವುದಾದರೂ ಎಲ್ಲಿಂದ? ಈ ಪ್ರಶ್ನೆಗಳು ನಮ್ಮನ್ನು ಸಧ್ಯದ ಪರಿಸ್ಥಿತಿಯಲ್ಲಿ ಕಾಡುವುದು ಅತ್ಯಂತ ಪ್ರಸ್ತುತ.

ಅಮೇರಿಕಾದ ಗುಪ್ತಚರ ಇಲಾಖೆ - ತಾಲಿಬಾನಿಗಳು ಕಾಬುಲ್ ಸೇರಿದಂತೆ ಅಫ್ಘಾನಿಸ್ತಾನವನ್ನು ತಮ್ಮ ಸೈನ್ಯ ತೊರೆದ 90 ದಿನಗಳಲ್ಲಿ ವಶಪಡಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟಿತ್ತು! ಆದರೆ, ಅವರ ಅಭಿಪ್ರಾಯ ತಲೆಕೆಳಗಾಗುವಂತೆ ಮಾಡಿದ್ದು ತಾಲಿಬಾನಿಗಳು. ಇಷ್ಟು ವೇಗವಾಗಿ ತಾಲಿಬಾನಿಗಳು ಮುನ್ನುಗಲು ಕಾರಣವೇನಿರಬಹುದು? ವಿಚಿತ್ರ, ಆಶ್ಚರ್ಯ ಮತ್ತು ಅರಗಿಸಿಕೊಳ್ಳಲಾಗದ ವಿಷಯ ಇಲ್ಲೊಂದಿದೆ. ಲಕ್ಷಾಂತರ ಅಫ್ಘನ್ ನಾಗರಿಕರು ತಾಲಿಬಾನ್ ಅನ್ನು ಒಪ್ಪಿಕೊಳ್ಳುತ್ತಾರೆ. ಈ ವಿಚಾರ ಕೇವಲ ಊಹೆಯಲ್ಲ. 2013 ಅನುಸಾರ PEW ಸಂಶೋಧನೆಯ ಪ್ರಕಾರ, 99% ಆಫ್ಘನ್ನರು ಶರಿಯಾ ಕಾನೂನನ್ನು ಬಯಸುತ್ತಾರೆ ಮತ್ತು 43% ರಷ್ಟು ಜನ ತಾಲಿಬಾನ್ ಹೇಳುವಂತಹ ಶರಿಯಾ ಕಾನೂನನ್ನು ಒಪ್ಪುತ್ತಾರೆ. ಮತ್ತಷ್ಟು ಹೆಚ್ಚು ಆಘಾತಕಾರಿ ಸಂಗತಿಯೆಂದರೆ, PEW ಸಂಶೋಧನೆಯಿಂದ ಸಮೀಕ್ಷೆಗೆ ಒಳಪಟ್ಟಿರುವ 39% ಆಫ್ಘನ್ನರು ಇಸ್ಲಾಂ ಧರ್ಮದ ರಕ್ಷಣೆಗಾಗಿ ಆತ್ಮಹತ್ಯಾ ಬಾಂಬ್ ದಾಳಿ ಸಮರ್ಥನೀಯ ಎಂದು ಭಾವಿಸಿದ್ದಾರೆ. ತಾಲಿಬಾನಿಗಳು ಈ ರೀತಿ ವ್ಯವಸ್ಥಿತ ದಾಳಿ ಮಾಡಲು ಅಂತರಿಕವಾಗಿ ಗೌಪ್ಯತೆ ಕಾಪಾಡಿಕೊಂಡು ತಾಯಾರಿ ಮಾಡಿಕೊಂಡಿದ್ದು ಹೇಗೆ ಎಂಬುದು ಪ್ರಶ್ನಾರ್ಹ! ಪಾಕಿಸ್ತಾನದ ಐ.ಎಸ್.ಐ. ತಾಲಿಬಾನಿಗಳ ಹ್ಯಾಕರ್ಗಳನ್ನು ಸುಮಾರು ವರ್ಷಗಳಿಂದ ಬೆಂಬಲಿಸುತ್ತಾ ಇದ್ದಾರೆ. ಈ ಮೂಲಕ ಅಫ್ಘಾನಿಸ್ತಾನ ಸರ್ಕಾರದ ಮಾಹಿತಿ ತಾಲಿಬಾನಿಗಳಿಗೆ ಸಿಗುವಂತಾಯಿತು. ತಾಲಿಬಾನಿಗಳು ಅನೇಕ ನಕಲಿ ಸಾಮಾಜಿಕ ಜಾಲತಾಣದ ಪ್ರೊಫೈಲ್ಗಳನ್ನು (Social Media Fake Profiles) ಹೊಂದಿದ್ದಾರೆ ಮತ್ತು ಐ.ಎಸ್.ಐ. ತಾಂತ್ರಿಕವಾಗಿ ಯುದ್ಧ ತಂತ್ರಗಳೊಂದಿಗೆ ತಾಲಿಬಾನಿಗಳನ್ನು ಬೆಂಬಲಿಸಿದೆ. ಈ ಮೂಲಕವಾಗಿ ತಾಲಿಬಾನಿಗಳು ಮತ್ತಷ್ಟು ಬಲಾಢ್ಯವಾಗಿದ್ದಾರೆ.

PEW Survey Report

Reference: The World’s Muslims: Religion, Politics and Society 

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ನಂತರ ಕೆಲವು ದೇಶಗಳ ಪ್ರತಿಕ್ರಿಯೆಯನ್ನು ಗಮನಿಸಬೇಕು. ಇಂಗ್ಲೆಂಡಿನ ಪ್ರಧಾನಿ ಬೋರಿಸ್ ಜಾನ್ಸನ್ "ತಾಲಿಬಾನ್ ಜೊತೆಗೆ ಯಾವುದೇ ದೇಶ ದ್ವಿಪಕ್ಷೀಯವಾಗಿ ಗುರುತಿಸಿಕೊಳ್ಳುವುದನ್ನು ನಾವು ಬಯಸುವುದಿಲ್ಲ" ಎಂದು ಸಣ್ಣ ಧ್ವನಿಯಲ್ಲಿ ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ "ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಎಲ್ಲಕ್ಕಿಂತ ಶ್ರೇಷ್ಠ" ಎಂದು ತಾಲಿಬಾನಿಗಳ ಪರ ಎನ್ನುವಂತೆ ಮಾತಾಡಿದ್ದಾರೆ. UNSC ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ರಚಿಸಲು ಮತ್ತು ದಾಳಿಯನ್ನು ಕೊನೆಗೊಳಿಸಲು ಮಾತುಕತೆಗೆ ಕರೆ ನೀಡಿದೆ. ಅಮೇರಿಕಾದ ಅಧ್ಯಕ್ಷ ಬೈಡನ್ "ನಾವು ಸುಮಾರು 20 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಸ್ಪಷ್ಟ ಗುರಿಯೊಂದಿಗೆ ಹೋಗಿದ್ದೆವು. ಸೆಪ್ಟೆಂಬರ್ 11, 2001 ರಂದು ನಮ್ಮ ಮೇಲೆ ದಾಳಿ ಮಾಡಿದವರನ್ನು ಕೊಂದು ಮತ್ತೆ ನಮ್ಮ ಮೇಲೆ ಆಕ್ರಮಣ ಮಾಡದಂತೆ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ಅವರ ಸೈನ್ಯವೇ ಅವರ ದೇಶವನ್ನು ರಕ್ಷಿಸಿಕೊಳ್ಳಲಾಗಲಿಲ್ಲ ಎಂದ ಮೇಲೆ ನಾವು ಏಕೆ ಅವರನ್ನು ಕಾಯಬೇಕು" ಎಂದು ಹೇಳಿದ್ದಾರೆ. ಬಂಗ್ಲಾದೇಶ, ಟರ್ಕಿ ನಿರಾಶ್ರಿತರನ್ನು ಒಪ್ಪಿಕೊಳ್ಳುವಿವುದಿಲ್ಲ ಎಂದು ಹೇಳಿದೆ. ನೆನಪಿಡಿ, ಈ ದೇಶಗಳೇ CAA ವಿರುದ್ಧ ಮಾತಾಡಿದ್ದು. ಭಾರತ ಇದುವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲಿರುವ ಸಿಖ್ ಮತ್ತು ಹಿಂದುಗಳನ್ನು ಒಪ್ಪಿಕೊಳ್ಳುತ್ತೇವೆ ಎಂದಷ್ಟೇ ಹೇಳಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಚೀನಾದ ಪ್ರತಿಕ್ರಿಯೆಯನ್ನು ಗಮನಿಸೋಣ. ಕಳೆದ 2-3 ದಿನಗಳ ಹಿಂದೆ "ತಾಲಿಬಾನ್ ಜೊತೆ ಸ್ನೇಹ ಸಂಭಂದ ಬೆಳೆಸಲು ಸಿದ್ಧ. ಅಫ್ಘಾನ್ ಜನರಿಗೆ ತಮ್ಮ ಹಣೆಬರಹವನ್ನು ಸ್ವತಂತ್ರವಾಗಿ ನಿರ್ಧರಿಸುವ ಹಕ್ಕನ್ನು ಚೀನಾ ಗೌರವಿಸುತ್ತದೆ ಮತ್ತು ಅಫ್ಘಾನಿಸ್ತಾನದೊಂದಿಗೆ ಸ್ನೇಹಪರ ಸಹಕಾರವನ್ನು ಮುಂದುವರಿಸಲು ಸಿದ್ಧವಾಗಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ತಿಳಿಸಿದರು. ಲೀಥಿಯಮ್ ಮತ್ತು ವಜ್ರ ನಿಕ್ಷೇಪ ಮತ್ತು ಮಾದಕದ್ರವ್ಯ ಅಫ್ಘಾನಿಸ್ತಾನದಲ್ಲಿ ಸಮೃದ್ಧವಾಗಿದೆ. ಇದನ್ನು ಉಪಯೋಗಿಸಿಕೊಳ್ಳಲು ಚೀನಾ ಆ ದೇಶಕ್ಕೆ ಹಣ ಸಹಾಯ ಮಾಡಿ ತಾನು ನಿಯಂತ್ರಣ ಮಾಡುವ ಸಾಧ್ಯತೆ ಕೂಡ ಇದೆ. ಪಾಕಿಸ್ತಾನದ ಇಮ್ರಾನ್ ಖಾನ್ ಅಂತೂ "ದಶಕಗಳ ಗುಲಾಮಗಿರಿಯನ್ನು ಅಳಿಸಿ ಸ್ವಾತಂತ್ರ್ಯ ಪಡೆದುಕೊಂಡಿದ್ದಾರೆ ತಾಲಿಬಾನಿಗಳು" ಎಂದು ಹೇಳಿದ್ದಾನೆ. ಹಮಾಸ್ ಎಂಬ ಉಗ್ರ ಸಂಘಟನೆಯ ಮುಖ್ಯಸ್ತ ಇಸ್ಮಾಯಿಲ್ ಹನಿಯಾ ತಾಲಿಬಾನಿಯರಿಗೆ ಶುಭಾಶಯ ಕೋರಿದ್ದಾರೆ.

china speaks supporting Taliban

Hamas leader congratulates Taliban

ಈ ಎಲ್ಲಾ ಬೆಳವಣಿಗೆ ಭಾರತಕ್ಕೆ ಅಪಾಯಕರ ಸೂಚನೆ. ಭಯೋತ್ಪಾದನ ಸಂಘಟನೆಯೊಂದು ಸರ್ಕಾರ ನಿರ್ಮಾಣ ಮಾಡಿಕೊಂಡ ದೇಶದೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶವೊಂದು ಸಂಭಂದ ಬೆಳೆಸಬಾರದು ಎಂದು ಮೇಲ್ನೋಟಕ್ಕೆ ಹೊಳೆಯುತ್ತದೆ. ಒಂದು ಕಡೆ ಚೀನಾ ಮತ್ತೊಂದು ಕಡೆ ಪಾಕೀಸ್ತಾನ ನಮಗೆ ಶತ್ರು ರಾಷ್ಟ್ರಗಳಾಗಿದೆ. ಇದರೊಟ್ಟಿಗೆ ಅಫ್ಘಾನಿಸ್ತಾನದ ಶತ್ರುತ್ವ ಕಟ್ಟಿಕೊಳ್ಳುಬೇಕೆ ಎಂಬ ಪ್ರಶ್ನೆ ಉಳಿದಿದೆ. ಹಾಗೆಂದು ತಾಲಿಬಾನಿಗಳನ್ನು ನಂಬಬಹುದ ಎಂಬುದಕ್ಕೆ ನಕಾರಾತ್ಮಕವಾದ ಉತ್ತರ ಇತಿಹಾಸ ನಮಗೆ ಹೇಳುತ್ತದೆ. ಭಾರತದ ಕಮ್ಯೂನಿಸ್ಟರಂತೂ ಎಡಬಿಡಂಗಿ ಸ್ಥಿತಿಯಲ್ಲಿದ್ದಾರೆ. ಇಸ್ಮಾಂ ತಾಲಿಬಾನಿಗಳ ವಿರುದ್ಧ ಮಾತಾಡಲು ಅವರ ತವರಾದ ಚೀನಾ ಅಡ್ಡಬರುತ್ತದೆ. ಮಾನವತಾವಾದದ ಮುಖವಾಡ ಹೊಂದಿರುವ ಅವರಿಗೆ ಚೀನಾದ ರೀತಿ ತಾಲಿಬಾನಿಗಳ ಪರ ಮಾತಾಡಲು ಆಗುತ್ತಿಲ್ಲ. ಅವರ ಮನಸ್ಥಿತಿ "Look for the bigger evil" ಅನ್ನುವ ರೀತಿ ಆಗಿದೆ. ಅದಕ್ಕಾಗಿ ಅವರು ಅಮೇರಿಕಾ ಮಾಡಿದ್ದು ಸರಿನಾ, ಭಾರತದಲ್ಲಿ ಹಿಂದೂಗಳು ದಲಿತರನ್ನು ನಡೆಸಿಕೊಂಡ ರೀತಿ ಸರೀನಾ ಎಂಬಂತಹ ಹುಚ್ಚು ಮಾತುಗಳನ್ನಾಡುತ್ತಿದ್ದಾರೆ. 

ಬಿಗಿಯಾದ ಬುರ್ಖಾ ಹಾಕಿಕೊಂಡು ಗಂಡಸರಿಲ್ಲದೆ ಮನೆಯಿಂದ ಹೊರಬಂದಳು ಎಂದು ಶರಿಯಾ ಕಾನೂನಿಗಿದು ವಿರುದ್ಧವಾಗಿದೆ ಎಂದು ಆಕೆಗೆ ಸಾರ್ವಜನಿಕವಾಗಿ ಛಡಿ ಏಟನ್ನು ಕೊಡಲಾಗಿದೆ. ಆಧುನಿಕ ಜಗತ್ತಿನಲ್ಲಿ ನಡೆಯಬಾರದಂತಹ ಘಟನೆಗಳು ಅಫ್ಘಾನಿಸ್ತಾನದಲ್ಲಿ ನಡೆದಿದೆ. ತಾಲಿಬಾನರ ವಿರುದ್ಧ ಮಾತಾಡುವ ಬದಲು ಅಫ್ಘಾನಿಸ್ತಾನದಲ್ಲಿರುವ ಮುಸಲ್ಮಾನರಿಗೆ ಭಾರತದ ರಕ್ಷಣೆಕೊಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡುತ್ತಿದ್ದಾರೆ ಈ ಎರಡು ತಲೆ ಹಾವುಗಳಾದ ಕಮ್ಯೂನಿಸ್ಟರು. ಅಫ್ಘಾನಿಸ್ತಾನದಲ್ಲಿರುವ ಮುಸಲ್ಮಾನರ ಪರವಾಗಿ ಟ್ವಿಟ್ಟರ್ ನಲ್ಲಿ ಮಾತಾಡುತ್ತಿದ್ದಾರೆ ಭಾರತಕ್ಕೆ ಕಮ್ಮಿ ನಿಷ್ಟೆಯನ್ನು ಹೊಂದಿರುವ ಕಮ್ಯುನಿಸ್ಟರು. ಇಂತಹ ಬಹಿರಂಗ ಮತ್ತು ಆಂತರಿಕ ಶತ್ರು ಮತ್ತು ದ್ರೋಹಿಗಳ ವಿರುದ್ಧ ಹೋರಾಡಿ ಭಾರತ ಬಲಾಢ್ಯವಾಗಿ ಬೆಳೆಯಬೇಕಾಗಿದೆ.

August 9, 2021

ಹೊಯ್ಸಳರ ಶಿಲ್ಪಕಲಾ ವೈಭವಕ್ಕೆ ಮತ್ತೊಂದು ಸಾಕ್ಷಿ - ದೊಡ್ಡಗದ್ದವಳ್ಳಿ ಲಕ್ಷ್ಮೀದೇವಿ

ಸಾಮಾನ್ಯವಾಗಿ ಬಹುತೇಕ ಜನ ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಸಾಮ್ರಾಜ್ಯದ ದೇಗುಲಗಳು ಎಂದರೆ ಬೇಲೂರಿನ ಚನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಸ್ಥಾನಗಳನ್ನು ಮಾತ್ರ ನೋಡಿ ಬರುತ್ತಾರೆ. ಈ ಎರಡೂ ದೇವಸ್ಥಾನಗಳು ವಾಸ್ತುಶಿಲ್ಪಕ್ಕೆ ಕಳಶಪ್ರಾಯ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಹೊರತಾಗಿ ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಸಾಮ್ರಾಜ್ಯದ ಮತ್ತೊಂದು ದೇವಸ್ಥಾನವಿದೆ. ಅದುವೆ, ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಿ ದೇವಸ್ಥಾನ.

Lakshmi Devi Temple, Doddagaddavalli 

ರಂಗ ಮಂಟಪ

ಬೇಲೂರಿನಿಂದ ಸುಮಾರು 32 ಕೀ.ಮೀ ಹಾಸನಕ್ಕೆ ಬರುವ ದಾರಿಯಲ್ಲಿ ದೊಡ್ಡಗದ್ದವಳ್ಳಿ ಎಂಬ ಸಣ್ಣ ಹಳ್ಳಿ ಸಿಗುತ್ತದೆ. ಹಳ್ಳಿಯ ಕೊನೆಯಲ್ಲಿ ಈ ದೇವಾಲಯ ನಿರ್ಮಿತವಾಗಿದೆ. 12ನೇ ಶತಮಾನದಲ್ಲಿ ನಿರ್ಮಿತವಾದ ಈ ದೇವಾಲಯವು ಹೊಯ್ಸಳರ ಕಾಲದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಹೊಯ್ಸಳರು ನಿರ್ಮಿಸಿದ ಏಕೈಕ ಚತುಷ್ಕೂಟ ದೇವಾಲಯ ಇದಾಗಿದೆ. ಹೊಯ್ಸಳ ಶೈಲಿಯ ಇತರ ದೇವಾಲಯಗಳಲ್ಲಿ ಇಲ್ಲದಿರುವ ವಿಶಿಷ್ಟವಾದ ವಾಸ್ತುಶಿಲ್ಪದ ಅಂಶಗಳು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಪ್ರಾಚೀನ ಕಾಲದ ದೇವಾಲಯಗಳ ವಾಸ್ತುಶಿಲ್ಪದ ಬಗ್ಗೆ ಆಸಕ್ತಿ ಇರುವವರು 3-4 ಘಂಟೆಗಳಷ್ಟು ಹೊತ್ತು ನೋಡಬಹುದಾದ ದೇವಾಲಯ ಇದಾಗಿದೆ. ಹೊಯ್ಸಳ ಸಮ್ರಾಜ್ಯದ ಬೇಲೂರು, ಹಳೆಬೀಡು, ನುಗ್ಗೇನಹಳ್ಳಿ, ತಲಕಾಡುಗಳಲ್ಲಿ ನಿರ್ಮಿಸಲಾದ ದೇವಾಯಗಳೆಲ್ಲವೂ ವಿಷ್ಣು ಅಥವಾ ಶಿವನಿಗೆ ಸಮರ್ಪಿತವಾದವು. ಆದರೆ, ದೊಡ್ಡಗದ್ದವಳ್ಳಿಯ ಈ ದೇವಸ್ಥಾನ ಲಕ್ಶ್ಮೀದೇವಿಗೆ ಸಮರ್ಪಿತವಾಗಿದೆ. ಪೂರ್ವಕ್ಕೆ ಅಭಿಮುಖವಾಗಿ ಲಕ್ಷ್ಮೀದೇವಿ ಇದ್ದರೆ, ಆಕೆಯ ಎದುರಿಗೆ ಶಿವನ ಗುಡಿಯು ಪಶ್ಚಿಮಕ್ಕೆ ಅಭಿಮುಖವಾಗಿದೆ. ಕಾಳಿ ದೇವಿಯು ದಕ್ಷಿಣಕ್ಕೆ ಹಾಗೂ ವಿಷ್ಣು ಉತ್ತರಕ್ಕೆ ಅಭಿಮುಖವಾಗಿ ನಿಂತಿದ್ದಾರೆ.

ದೇವಾಲಯದ ಆವರಣವನ್ನು ಪ್ರವೇಶಿಸುತ್ತಿದ್ದಂತೆ 8-10 ಕಂಬಗಳಿರುವ ಸಣ್ಣ ದ್ವಾರ ಮಂಟಪ ಸಿಗುತ್ತದೆ. ಬೇಲೂರಿನ ಚೆನ್ನಕೇಶವ ಮಂದಿರದಲ್ಲಿ ಇರುವ ಶೈಲಿಯಲ್ಲೇ ಇಲ್ಲಿನ ಕಂಬಗಳು ಇವೆ. ನಂತರ, ಹೊಯ್ಸಳರ ಲಾಂಛನಗಳನ್ನು ಒಳಗೊಂಡ ನಾಲ್ಕು ಗೋಪುರಗಳನ್ನು ಕಾಣಬಹುದು. ಮುಂದೆ ಚತುಷ್ಕೂಟದ ಬಾಗಿಲನ್ನು ಸಮೀಪಿಸುತ್ತಿದ್ದಂತೆ ವಿವಿಧ ಆಭರಣಗಳನ್ನು ಹೊಂದಿರುವ ಎರಡು ಹೆಣ್ಣು ಶಿಲ್ಪಗಳನ್ನು ಕಾಣಬಹುದು. ರಂಗ ಮಂಟಪವನ್ನು ಪ್ರವೇಶ ಮಾಡುತ್ತಿದಂತೆ ಎಡ ಭಾಗದಲ್ಲಿ ಮಹಾಕಾಳಿಯ ಮಂದಿರವನ್ನು ಕಾಣಬಹುದು. ಮಹಾಕಾಳಿಯು ಶಾಂತ ಸ್ವರೂಪಿಯಲ್ಲಿದ್ದು ಆಕೆಯ ಕಾವಲಿಗಾಗಿ ಆರು ಅಡಿಗಿಂತಲೂ ಎತ್ತರವಾದ ಎರಡು ನಗ್ನ ಬೇತಾಳಗಳು ನಿಂತಿವೆ. ಎರಡೂ ಬೇತಾಳಗಳ ವಿಗ್ರಹಗಳು ನಿಜಕ್ಕೂ ಭಯಂಕರವಾಗಿವೆ. ಕಾಳಿ ಮಂದಿರದ ಎದುರಿಗೆ ಮೇಲ್ಛಾವಣಿಯಲ್ಲಿ ನೃತ್ಯ ಮಾಡುತ್ತಿರುವ ಮತ್ತು ರುದ್ರವೀಣೆಯನ್ನು ನುಡಿಸುತ್ತಿರುವ ಶಿವನ ಮೂರ್ತಿಗಳನ್ನು ಕೆತ್ತಲಾಗಿದೆ. ಮೇಲ್ಛಾವಣಿಯನ್ನೇ ಗಮನಿಸಿದರೆ ವಿವಿಧ ದಿಕ್ಕುಗಳಲ್ಲಿ ವಾಸ್ತುದೇವತೆಗಳನ್ನು ಕೆತ್ತಲಾಗಿದೆ. ಕುದುರೆಯ ಮೇಲೆ ಕುಬೇರ ಮತ್ತು ರಂಭೆ. ಕೋಣದ ಮೇಲೆ ಸವಾರಿ ಮಾಡುತ್ತಿರುವ ಯಮ, ಅಗ್ನಿ, ಶಕ್ತಿದೇವತೆ, ಮೊಸಳೆಯ ಮೇಲೆ ಸವಾರಿ ಮಾಡುತ್ತಿರುವ ವರುಣ ದೇವತೆಗಳನ್ನು ನೋಡಬಹುದಾಗಿದೆ. ಸಭಾಂಗಣದ ಮಧ್ಯದಲ್ಲಿ ಪತ್ನಿಯ ಸಮೇತ ಐರಾವತದ ಮೇಲೆ ಇಂದ್ರದೇವನನ್ನು ಕಾಣಬಹುದು.

ಶಿಲಾ ಶಾಸನ
ಗೋಪುರ















ಗೋಪುರದ ಮೇಲಿನ ಕೆತ್ತನೆ - 1
ಆವರಣ















ಗೋಪುರದ ಮೇಲಿನ ಕೆತ್ತನೆ - 2
ಗೋಪುರದ ಮೇಲಿನ ಕೆತ್ತನೆ - 3
   














ಗೋಪುರದ ಮೇಲೆ ಹೊಯ್ಸಳರ ಲಾಂಛನ

ಭಯಂಕರ ಬೇತಾಳ
ದೇವಾಲಯದ ಪ್ರಮುಖ ದೇವರಾದ ಲಕ್ಷ್ಮೀದೇವಿಗೆ ನಾಲ್ಕು ಕೈಗಳಿದ್ದು, ಮೇಲಿನ ಬಲಗೈಯಲ್ಲಿ ಶಂಖ, ಎಡಗೈಯಲ್ಲಿ ಚಕ್ರವನ್ನು ಹಿಡಿದಿದ್ದಾಳೆ. ಕೆಳಗಿನ ಕೈಗಳಲ್ಲಿ ಗದೆ ಮತ್ತು ಜಪಮಾಲೆಯನ್ನು ಹಿಡಿದಿದ್ದಾಳೆ. ಎದುರಿಗೆ ಲಿಂಗ ರೂಪದಲ್ಲಿರುವ ಭೂತನಾಥ ಅರ್ಥಾತ್ ಶಿವನ ಮಂದಿರವಿದೆ. ಆತನ ಎರಡು ಬದಿಯಲ್ಲಿ ಸುಬ್ರಮಣ್ಯ ಮತ್ತು ಗಣೇಶನ ಮೂರ್ತಿಯನ್ನು ಕಾಣಬಹುದು. ದೇವಾಲಯದ ಆವರಣದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಮೇಲ್ಛಾವಣಿಯ ಕೆತ್ತನೆಗಳನ್ನು ಗಮನಿಸಲು ಹೆಚ್ಚು ಬೆಳಕು ಚೆಲ್ಲುವಂತಹ ಬ್ಯಾಟರಿ ತೆಗೆದುಕೊಂಡು ಹೋದರೆ ಒಳಿತು. ಇದಲ್ಲದೇ ಎರಡೂ ಕಡೆ ಆನೆಗಳುಳ್ಳ ಗಜಲಕ್ಷ್ಮೀ, ತಾಂಡವೇಶ್ವರ ಮತ್ತು ಯೋಗನರಸಿಂಹ ದೇವರುಗಳ ಪ್ರಮುಖ ಶಿಲ್ಪಗಳು ದೇವಾಲಯದ ದ್ವಾರದಲ್ಲಿ ನೋಡಬಹುದು.

ಗರ್ಭಗುಡಿಯನ್ನು ಪ್ರವೇಶಿಸಿ ಹಸಿರು ವಸ್ತ್ರದಿಂದ ಅಲಂಕೃತವಾಗಿರುವ ಲಕ್ಷ್ಮೀದೇವಿಯನ್ನು ನಾವೇ ಸ್ವತಃ ಪೂಜಿಸಿ, ಆರಾಧಿಸುವ ಅವಕಾಶ ಇಲ್ಲಿದೆ. ಈ ಪ್ರಕ್ರಿಯೆ ದೇವಾಲಯದ ಮತ್ತೊಂದು ಪ್ರಮುಖ ಆಕರ್ಷಣೆ. ದೇವಾಲಯದ ಪ್ರಾಂಗಣದಲ್ಲಿ ಕೆಲವು ಶತಮಾನಗಳಷ್ಟು ಹಳೆಯದಾದ ಒಂದೆರಡು ಶಾಸನಗಳನ್ನು ನೋಡಬಹುದಾಗಿದೆ. ಹೊಯ್ಸಳ ಸಾಮ್ರಾಜ್ಯದ ಪ್ರಮುಖ ರಾಜನಾದ ವಿಷ್ಣುವರ್ಧನನ ಕಾಲದ ಶಿಲ್ಪಕಲೆಯ ವೈಭವಕ್ಕೆ ಮತ್ತೊಂದು ಸಾಕ್ಷಿ ಎನ್ನಬಹುದಾಗಿದೆ ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಿ ದೇವಸ್ಥಾನ.

3 Idiots