ಅರುಣಾಚಲದ ಈ ಕೊರೆಯುವ ಚಳಿಯಲ್ಲಿ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುವುದು ಅತ್ಯಂತ ಹಿತಕರ. ಪ್ರವಾಸಕ್ಕೆ ಬಂದ ಯವ್ವನದ ಬಿಸಿ ರಕ್ತದ ಹುಡುಗರು ಬೆಂಕಿಯ ಸುತ್ತ ಸುತ್ತುತ್ತಾ, ಕೈಯಲ್ಲಿ ಒಂದು ಬಾಟಲಿ ಹಿಡಿದು ಆಗಾಗ ವೈನ್ ಹೀರುತ್ತಿದ್ದರು. ಆ ಚಳಿಗೆ ವೈನ್ ಕುಡಿಯುವುದು ಸೂಕ್ತ; ಆದರೆ ನನಗದು ಯಾಕೋ ಸರಿ ಬರುತ್ತಿರಲಿಲ್ಲ. ಹದಿನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ಸ್ನೇಹಿತರ ಜೊತೆ ಬಂದಾಗ ಒಂದು ಗುಟುಕು ಹೀರಿದ್ದೆ. ಗಂಟಲು, ಎದೆ ಎಲ್ಲ ಬಿಸಿಯಾಯ್ತು ಆದರೆ ನನಗೆ ಅದರ ರುಚಿ ಸಹ್ಯವಾಗಲಿಲ್ಲ. ಅದೇ ಮೊದಲು, ಅದೇ ಕೊನೆ ಮತ್ತೆಂದಿಗೂ ವೈನ್ ಮುಟ್ಟಲಿಲ್ಲ. ಆದರೆ ಅರುಣಾಚಲಕ್ಕೆ ಬರುವಾಗ ಮಾತ್ರ ಊರಿಂದಲೇ ಒಂದೆರಡು ಕ್ರೇಟ್ ಬೀಯರ್ ತೆಗೆದುಕೊಂಡು ಬರುತ್ತೇನೆ. ಅದು ನಿರ್ಧಿಷ್ಟವಾಗಿ ಒಂದೇ ಬ್ರಾಂಡ್; Heineken. ಅದನ್ನು ಹೀರುತ್ತಾ ನಾನೇ ಬರೆದ ಪತ್ರವನ್ನು ನೋಡುವುದು ಒಂದು ದುರಭ್ಯಾಸ ಅಥವಾ ನಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅನ್ನಬಹುದು. ಅದು ಗಮ್ಯಳಿಗೆ ಬರೆದ, ಅವಳಿಗೆ ತಲುಪಿಸದೆ ನನ್ನಲೇ ಉಳಿದ ನಿವೇದನಾ ಪತ್ರ.
![]()  | 
| ನಿವೇದನಾ! | 
ಪ್ರತಿ ಬಾರಿ ಈ ಪತ್ರ ನೋಡಿದಾಗಲೆಲ್ಲಾ ಗಮ್ಯಳನ್ನು ನಾನು ಆರಾಧಿಸಿದ್ದು, ಅವಳ ಜೊತೆಗಿನ ಜೀವನವನ್ನು ಕಲ್ಪಿಸಿಕೊಂಡಿದ್ದು, ಅವಳ ಮೇಲಿನ ಪ್ರೀತಿಯನ್ನು ಹೇಳುವ ಸಲುವಾಗಿ ಮಾನಸಿಕವಾಗಿ ಅಣಿಯಾದದ್ದು, ಈ ಪತ್ರವನ್ನು ಬರೆಯಲು ಪಟ್ಟ ಪಾಡು.. ಎಲ್ಲವೂ ನೆನಪಿನ ಪುಟಗಳಿಂದ ಎದ್ದು ಬಂದು ನನ್ನನ್ನು ಬಾಧಿಸುತ್ತದೆ. ಈಗಿನ ಪೀಳಿಗೆಯ ಅನೇಕರಿಗೆ ಪ್ರೀತಿಸಿದವರೊಟ್ಟಿಗೆ ಮದುವೆ ಆಗಬೇಕೆಂದೇನಿಲ್ಲ. ಪ್ರೀತಿ ಮಾಡುವ ಸಂದರ್ಭದಲ್ಲಿ long term ಜೀವನದ ಬಗ್ಗೆ ಚಿಂತನೆಯಿಲ್ಲ, ಮನೆಯಲ್ಲಿ ತಂದೆ ತಾಯಂದಿರ ಒತ್ತಡ ನಿಭಾಯಿಸಲಾಗುವುದಿಲ್ಲ, ಇತರ ಯಾವುದೋ ಪರಿಸ್ಥಿತಿಯ ಕಾರಣದಿಂದಾಗಿ ಪ್ರೀತಿಸಿದವರನ್ನು ಹೊರತು ಪಡಿಸಿ ಇನ್ನೊಬ್ಬರನ್ನು ಮದುವೆಯಾಗುವುದು ಸಾಮಾನ್ಯ. ದುರಾದೃಷ್ಟವಶಾತ್ ಸರ್ವಮಾನ್ಯವೂ ಆಗಿದೆ! ಅವರ ಪ್ರಕಾರ ಅದು practical, go with the flow, ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಸಮಾಧಾನಕರ ಸಿದ್ಧಾಂತ. ಅವರ ನಂಬಿಕೆಯ ತಪ್ಪು ಒಪ್ಪುಗಳ ವಿಮರ್ಶೆಯ ಅವಶ್ಯಕತೆ ನನಗಿಲ್ಲ, ವಿಮರ್ಶೆ ಮಾಡುವಷ್ಟು ಶಕ್ತನು ನಾನಲ್ಲ. ಆದರೆ ನನಗೆ ಇಷ್ಟು ವರ್ಷಗಳಾದರೂ ಗಮ್ಯಳ ಮೇಲಿನ ಪ್ರೀತಿ, ಅವಳ ನೆನಪು ಒಂದಿನಿತು ಮಾಸಿಲ್ಲ. ಅವಳ ನೆನಪಿಗಾಗಿಯೇ ಈ ಪತ್ರ ಇಂದಿಗೂ ನನ್ನ ಬಳಿ ಜೋಪಾನವಾಗಿದೆ. 
ಅರಳಿದ ಹೂವು ಗರ್ಭಗುಡಿಯನ್ನು ತಲುಪಿ, ದೇವರಿಗೆ ಅರ್ಪಣೆಯಾದಾಗ ಮಾತ್ರ ಅದರ ಸಾರ್ಥಕತೆ. ಅದೇ ರೀತಿ ಮನಸಲ್ಲಿ ಮೂಡಿದ ಪ್ರೀತಿ ನಿವೇದನೆಯಾಗಿ, ಮನಸ್ಸುಗಳು ಒಂದಾದಾಗ ಮಾತ್ರ ಜೀವನ ಸಾರ್ಥಕ. ಇಲ್ಲವಾದಲ್ಲಿ ಅದು ಮಸಣದ ಹೂವಂತೆ. ಆ ಮಸಣದ ಹೂವಿನ ಕುರುಹೇ ಈ ಪತ್ರ! ಗಮ್ಯಳ ಮೇಲಿನ ಪ್ರೀತಿ ಯಾವಾಗ, ಹೇಗೆ ಅಂಕುರವಾಯ್ತು ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ. ಆದರೆ ಅವಳಿಗೆ ನನ್ನ ಭಾವನೆ ಹೇಳಬೇಕು ಅನ್ನುವ ತುಡಿತ, ಒತ್ತಡ ಮಾತ್ರ ಇಂದಿಗೂ ನನ್ನಲ್ಲಿ ಜೀವಂತವಾಗಿದೆ.
ಗಮ್ಯಳ ಮೇಲೆ ಪ್ರೀತಿಯಾದಾಗ ನನ್ನದು ಅವಳದು ಒಂದುವರೆಯಿಂದ ಎರಡು ವರ್ಷಗಳ ಪರಿಚಯ. ಆ ವರ್ಷ ಕಾಲೇಜಿಗೆ ಹೊಸ ಬ್ಯಾಚ್ ಇನ್ನೂ ಬಂದಿರಲಿಲ್ಲ. ವಿದ್ಯಾರ್ಥಿಗಳಿಲ್ಲದ ಸಮಯದಲ್ಲಿ ಕಾಲೇಜಿನಲ್ಲಿ ಸಾಮಾನ್ಯವಾಗಿ ಲೈಬ್ರರಿಯಲ್ಲಿ ಇರುತ್ತಿದ್ದ ನಾನು ಅಂದು ವಿಜ್ಞಾನ ವಿಭಾಗದ ಕಡೆಗೆ ಹೋದೆ. ಕಾಲೇಜಿನ ಸಾಂಸ್ಕೃತಿಕ ಪ್ರತಿನಿಧಿಯಾದ ನಾನು ಎಲ್ಲಾ ವಿಭಾಗಗಳಿಗೆ ಹೋಗುವ ಮತ್ತು ಅಲ್ಲಿನ ಉಪನ್ಯಾಸಕರನ್ನು, ವಿದ್ಯಾರ್ಥಿಗಳನ್ನು ಸಂಪರ್ಕ ಮಾಡುವ ಸ್ವಾತಂತ್ರ್ಯವಿತ್ತು. ಗಮ್ಯ ನಮ್ಮ ಕಾಲೇಜಿನ ಸಾಂಸ್ಕೃತಿಕ ತಂಡದಲ್ಲಿದ್ದಳು. ಆ ವರ್ಷ ನಡೆಯಬೇಕಿದ್ದ ಕಾರ್ಯಕ್ರಮಗಳು ಹಾಗೂ ನಾಟಕದ ಬಗ್ಗೆ ಚರ್ಚಿಸಿ ನಂತರ ನನ್ನ ಪ್ರೀತಿಯನ್ನು ಹೇಳುವ ಯೋಚನೆ ನನ್ನದು. ಆ ವರ್ಷ ಕಾಲೇಜಿನಲ್ಲಿ ನಾನೇ ಬರೆದಿದ್ದ 'ಮುನ್ನೆಲೆ' ನಾಟಕವನ್ನು ಪ್ರದರ್ಶಿಸುವುದು ಎಂದಾಗಿತ್ತು. ಮುನ್ನೆಲೆ ಒಂದು ಪ್ರೇಮಕತೆಯಾಗಿತ್ತು. ಅಂದು ಮುನ್ನೆಲೆ ನಾಟಕದ ಕುರಿತು ಗಮ್ಯಳೊಂದಿಗೆ ಮಾತಾಡಿದೆ. ನಾಟಕ ತಂಡದ ನಿರ್ವಹಣೆ ಹಾಗೂ ಸಂಭಾಷಣೆ ಗಮ್ಯ ಮಾಡಬೇಕಿತ್ತು. ಇತರರಿಗೆ ಹೇಳುವಂತೆ ಗಮ್ಯಳಿಗೆ ಕತೆ ಹೇಳಲು ನನಗೆ ಸಾಧ್ಯವಾಗಲಿಲ್ಲ. ಅವಳಿಗೆ ಕತೆಯಷ್ಟೇ ಅಲ್ಲದೇ ಕೆಲವು ಸಂಭಾಷಣೆಯನ್ನೂ ಸಹ ಹೇಳುತ್ತಿದ್ದೆ. ಆದರೆ ಆ ವಾಕ್ಯಗಳು ಗಮ್ಯಳ ಮೇಲಿನ ನನ್ನ ಸ್ವಂತ ಭಾವನೆಯಾಗಿತ್ತು. ಹಾಗೆಂದು ನಾನೆಂದು ಅವಳಿಗೆ ಹೇಳಲಾಗಲಿಲ್ಲ, ಅವಳಿಗೂ ಅರ್ಥವಾಗಲಿಲ್ಲ. ಗಮ್ಯ ನನ್ನ ಮಾತುಗಳನ್ನು ಸಂಭಾಷಣೆ ಎಂದೇ ಭಾವಿಸಿದಳು ಹಾಗೂ ನಾಟಕದಲ್ಲೂ ಪ್ರಯೋಗಿಸಿದಳು. 
ನಾಟಕದ ಚರ್ಚೆಯ ನಂತರ ನಾನು ಹೇಳಬೇಕೆಂದಿದ್ದ ವಿಷಯವನ್ನಂದು ಪ್ರಸ್ತಾಪಿಸಲೇ ಇಲ್ಲ. ನಾಟಕದ ಮಾತು ಕೊನೆಗೆ ಬರುತ್ತಿದ್ದಂತೆ ನನ್ನ ಉಸಿರಿನ ಏರಿಳಿತದಲ್ಲಿ ವ್ಯತ್ಯಾಸವಾಗುತ್ತಿತ್ತು. ಅದನ್ನು ತೋರಿಸಿಕೊಳ್ಳಬಾರದೆಂದು ಆಗಾಗ ನೀರು ಕುಡಿಯುತ್ತಿದ್ದೆ. ಎದುರು ಶಾಂತವಾಗಿ ಕಂಡರೂ ಹೃದಯದ ಬಡಿತ ಹೆಚ್ಚಿತ್ತು. ಜೊತೆಗೆ ಭಯವೂ ಆಗುತ್ತಿತ್ತು. ನನ್ನಲ್ಲಿನ ಭಯ ಈಗಿನ ಪೀಳಿಗೆಯವರಿಗೆ ಅಸಹಜ. ಕಾರಣವಿಷ್ಟೇ; ಗಮ್ಯಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಗಮ್ಯ ನನಗೆ ಆಯ್ಕೆಯಾಗಿರಲಿಲ್ಲ, ನನ್ನ ಮನಸ್ಸನ್ನು ಸಂಪೂರ್ಣ ಆವರಿಸಿದ್ದಳು. ಹಾಗಾಗಿ ನನ್ನ ಪ್ರೀತಿಯನ್ನು ಹೇಳದೆ ಬೇರೆ ಮಾರ್ಗವಿರಲಿಲ್ಲ, ಆದರೆ ಹೇಳುವ ಧೈರ್ಯವೂ ಇರಲಿಲ್ಲ! ಅದಕ್ಕೆಂದೇ ನನ್ನದೇ ಆದ ಒಂದು ಉಪಾಯ ಮಾಡಿದೆ. ನಾಟಕದಲ್ಲಿ ಕಥಾನಾಯಕ ತನ್ನ ಪ್ರೇಯಸಿಗೆ ಪತ್ರ ನೀಡುವ ಪ್ರಸಂಗವನ್ನು ತಂದೆ. ಆ ಪತ್ರದ ಸ್ಕ್ರಿಪ್ಟ್ ಜೊತೆಗೆ ನನ್ನ ನಿವೇದನಾ ಪತ್ರವನ್ನು ಗಮ್ಯಳಿಗೆ ನೀಡುವ ಯೋಚನೆ ನನ್ನದು. ಇಂದು ಆ ಉಪಾಯ ಬಾಲಿಷವಾಗಿ ಕಂಡೀತು ಆದರೆ, ಅಂದು ಅದೇ ಸರಿ ಎಂಬ ಭಾವವಿತ್ತು. ಅದರಂತೆ ಕತೆಯನ್ನು ಬದಲಾಯಿಸಿ, ದೀರ್ಘವಾದ ಪತ್ರವನ್ನು ಅರ್ಧ ಗಂಟೆಯಲ್ಲಿ ಬರೆದೆ. ನಂತರ ನೈಜವಾದ ಪತ್ರವನ್ನು ಬರೆಯಲು ಮುಂದಾದೆ. ಅವಳ ಮೇಲಿದ್ದ ಭಾವವನ್ನೆಲ್ಲಾ ಬರೆಯುವ ಯೋಚನೆ ಒಂದೆಡೆ, ಅವಳು ಏನಂದುಕೊಂಡಾಳೋ ಎಂಬ ಒತ್ತಡ ಮತ್ತೊಂದೆಡೆ. ಇದೇ ಕಾರಣದಿಂದ ಪತ್ರ ಬರೆದು ಮುಗಿಸಲು ತೆಗೆದುಕೊಂಡ ಅವಧಿ ಬರೋಬ್ಬರಿ ಎರಡುವರೆ ಗಂಟೆ!
ಮಾರನೇ ದಿವಸ ಕತೆಯ ಸ್ವರೂಪದ ಬದಲಾವಣೆ ಹಾಗೂ ಪತ್ರದ ವಿಷಯ ಹೇಳಿದಾಗ ಎಲ್ಲರೂ ಖುಷಿಪಟ್ಟರು. ನನ್ನ ಗಮನ ಮಾತ್ರ ಗಮ್ಯಳ ಕಡೆಯಿತ್ತು. ಅವಳು ಸಹ ಖುಷಿಪಟ್ಟಳು. ನಾಟಕದ ಭಾಗವೇನೋ ಮುಗಿಯಿತು ಆದರೆ ನೈಜವಾದ ಪತ್ರ ಹೊರತರಲೇ ಇಲ್ಲ. ಗಮ್ಯ ನಟನಾ ತಂಡವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಳು. ನಾಟಕದ ಕರ್ತೃ ನಾನಾದರೂ ನನ್ನ ಗಮನವೆಲ್ಲಾ ಗಮ್ಯಳೆಡೆಗೆ! ನಾಟಕದ ಅಭ್ಯಾಸ ನಡೆಯುವಾಗಲೂ ನಾಯಕನ ಸಂಭಾಷಣೆಯಲ್ಲಿ ಅನೇಕ ಸುಧಾರಣೆಗಳನ್ನು ತಂದೆ. ಆ ಮಾತುಗಳು ಸಹ ಗಮ್ಯಳಿಗೇ ಆಗಿತ್ತು ಆದರದು ಅವಳಿಗೆ ಎಂದು ತಿಳಿಯಲಿಲ್ಲ, ನಾನು ತಿಳಿಸುವಷ್ಟು ಶಕ್ತನೂ ಆಗಿರಲಿಲ್ಲ.
ಮೂರು ತಿಂಗಳ ನಂತರ ಕಾಲೇಜಿನಲ್ಲಿ ನಾಟಕದ ಪ್ರದರ್ಶನ ಅದ್ಭುತವಾಗಿ ಮೂಡಿಬಂತು. ಅತಿಥಿಗಳು, ಪ್ರಾಂಶುಪಾಲರು ನಾಟಕದ ಕತೆ ಹಾಗೂ ಸಂಭಾಷಣೆಯನ್ನು ಬಹಳವಾಗಿ ಪ್ರಶಂಶಿಸಿದರು. ನಾಯಕನ ಸಂಭಾಷಣೆ ಬಹುತೇಕ ನನ್ನದು ಮತ್ತು ಇತರ ಪಾತ್ರಗಳ ಸಂಭಾಷಣೆ ಗಮ್ಯಳದ್ದು. ಅದರ ವಿಚಾರವಾಗಿ ನನಗೆ ಬಹಳಷ್ಟು ಸಂಭ್ರಮವಿತ್ತು. ಇದೇ ಸಂಭ್ರಮದಲ್ಲಿ ಪತ್ರವನ್ನು ಕೊಡಬಹುದಿದ್ದು ಆದರೆ ಸಭಾ ಮರ್ಯಾದೆ ನನ್ನನ್ನು ಕಟ್ಟಿಹಾಕಿತ್ತು. ಸಭಾ ಮರ್ಯಾದೆ ಒಂದೆಡೆಯಾದರೆ ನನ್ನಲ್ಲಿ ಧೈರ್ಯವೂ ಇರಲಿಲ್ಲ!
ಇದಾದ ಕೆಲವು ದಿನಗಳ ನಂತರ ಗಮ್ಯ ನನ್ನನ್ನೇ ಹುಡುಕಿ ಬಂದಳು. ನಾಟಕ, ಅದಕ್ಕೆ ದೊರೆತ ಪ್ರಶಂಸೆ ಕುರಿತ ಮಾತುಗಳು ಮೊದಲ್ಗೊಂಡು ನಂತರ ನಮ್ಮ ಮಾತು ವಯ್ಯಕ್ತಿಕವಾಯ್ತು. 'ಏನಿರಬಹುದು?' ಎಂಬ ಕುತೂಹಲವಿತ್ತು ಆದರೆ ಅವಳ ಮಾತುಗಳಿಗೆ ನನ್ನ ಪ್ರತಿಕ್ರಿಯೆ ಉತ್ಸಾಹದಾಯಕವಾಗಿರಲಿಲ್ಲ. ನಾನು ಗಮನಿಸಿದಂತೆ ಅವಳ ಮುಖದ ಮೇಲೆ ಎಂದಿಗಿಂತ ಹೆಚ್ಚಿನ ಉತ್ಸಾಹ ಕಾಣಿಸುತ್ತಿತ್ತು. ಅವಳ ಆ ಸಂಭ್ರಮ ಹಾಗೂ ಉತ್ಸಾಹ ನನ್ನ ಆಸೆ ಹಾಗೂ ಜೀವದ ಗೆಳೆತನಕ್ಕೆ ಕೊಳ್ಳಿಯಾಗಿತ್ತು. ಗಮ್ಯ ತನ್ನ ಮದುವೆಗೆ ನನ್ನನ್ನು ಆಮಂತ್ರಿಸಲು ಬಂದಿದ್ದಳು! ಅವಳ ವಿನಯತೆ, ಮದುವೆಗೆ ಬರಲೇಬೇಕೆಂಬ ಭಾವ ತುಂಬಿದ ಮಾತುಗಳು ನನ್ನನ್ನು ಇರಿಯುತ್ತಿತ್ತು. ಮುಖ ಹಾರೈಕೆಯ ಮುಖವಾಡ ಧರಿಸಿದರೆ ಮನಸ್ಸಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಮುಖ ಮನಸ್ಸಿನ ಕನ್ನಡಿ; ನನ್ನ ಭಾವನೆಯಲ್ಲಾದ ಬದಲಾವಣೆಯನ್ನು ಗಮ್ಯ ಗಮನಿಸಿದಳು. ನಾನು ಎಚ್ಚೆತ್ತು ನನ್ನನ್ನು ಆ ಕ್ಷಣದಲ್ಲಿ ಸ್ಥಿಮಿತಕ್ಕೆ ತಂದುಕೊಂಡೆ. ನಾಟಕೀಯವಾಗಿ ಖುಷಿಪಟ್ಟು, ಮನಸಾರೆ ಹಾರೈಸಿದೆ. ಅವಳು ಮದುವೆ ದಿನಾಂಕ, ಮಹೂರ್ತದ ಸಮಯ, ಸ್ಥಳ ಎಲ್ಲವೂ ಹೇಳಿ ಬೀಳ್ಕೊಟ್ಟಳು. ಅದಾವುದರ ಪರಿವೇ ಇಲ್ಲದೆ ಗಮ್ಯ ತಲುಪದ, ಎದೆಯ ಜೇಬಲ್ಲಿದ್ದ ಪತ್ರವನ್ನು ಸವರುತ್ತಿದ್ದೆ! ನಂತರ ಅವಳ ಮದುವೆ ಸಂದರ್ಭದಲ್ಲಿಯೇ ನಾನು ಆ ಕಾಲೇಜನ್ನು ಬಿಟ್ಟು ಹೊರಟೆ. ಮತ್ತೆಂದು ನನ್ನ ಗಮ್ಯಳ ಭೇಟಿಯಾಗಲೇ ಇಲ್ಲ.
ಇಷ್ಟು ವರ್ಷಗಳಾದರೂ ಪತ್ರವನ್ನು ಓದಿದಾಗ ಗಮ್ಯಳ ಬಗೆಗಿನ ಅನೇಕ ನೆನಪುಗಳು ನನ್ನನ್ನು ಬಾಧಿಸುತ್ತಲೇ ಇದೆ. ಅವಳ ನೆನಪಿನ ಎದುರು ಬಿಯರ್ ಏನು ಕೆಲಸ ಮಾಡುತ್ತಿರಲಿಲ್ಲ. ಅಂದು ಪತ್ರ ಬರೆಯುವಾಗ ನನ್ನೊಳಗೆ ಉಕ್ಕಿದ ಭಾವ, ಒತ್ತಡಗಳೆಲ್ಲವೂ ಆ ಸಾಲುಗಳನ್ನು ಓದುವಾಗ ಇಂದು ಸಹ ಪುನರಾವರ್ತನೆಯಾಗುತ್ತದೆ. ನನ್ನ ಪ್ರೀತಿಯನ್ನು ಹೇಳಿಕೊಳ್ಳಲಿಲ್ಲವೆಂಬ ಖೇದ ಇಂದಿಗೂ ನನ್ನಲ್ಲಿದೆ.
ಅಂದು ಅಷ್ಟೆಲ್ಲಾ ಭಾವೋದ್ವೇಗ, ಒತ್ತಡದ ನಡುವೆ ನಾನು ಬರೆದದ್ದು ಎರಡೇ ಸಾಲುಗಳು. ಆದರೆ ಅದರಲ್ಲಿ ಅವ್ಯಕ್ತವಾದ ಭಾವ ಮಾತ್ರ ಅನಂತವಾಗಿತ್ತು. ಹೇಳಬೇಕಿತ್ತು, ಹೇಳಬಯಸಿದ್ದು..
"ನಿನ್ನ ಬಾಳಿನ ಬೆಳಕಾಗುವೆ ನಾ..
ನನ್ನ ಮನಸ್ಸಿನ ಶಾಂತಿ ನೀನಾಗು ಬಾ.."
