May 31, 2021

ಗುಲಾಮಿ ಮಾನಸಿಕತೆ; ಮೆಕಾಲೆ ಭಾರತಕ್ಕೆ ಕೊಟ್ಟ ಉಡುಗೊರೆ!

ಭಾರತಕ್ಕೆ ಇಂಗ್ಲೀಷ್ ಶಿಕ್ಷಣ ತಂದಿದ್ದು ಥಾಮಸ್ ಬಾಬಿಂಗ್ಟನ್ ಮೆಕಾಲೆ. ೧೯೩೫ರಲ್ಲಿ ವಿಲಿಯಮ್ ಬೆನ್ಟಿಕ್ ನ ಆದೇಶದ ಮೇರೆಗೆ ಮೆಕಾಲೆ ಭಾರತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಪರಿಚಯಿಸುತ್ತಾನೆ. ಜಗತ್ತಿಗೆ ಭಾರತವನ್ನು ಅನಾಗರೀಕ ನಾಡೆಂದು ಪರಿಚಯಿಸಿದ ಆಂಗ್ಲರು ನಮ್ಮನ್ನು ಉದ್ಧರಿಸಲೆಂದೇ ಇಂಗ್ಲೀಷ್ ಶಿಕ್ಷಣ ತಂದಿದ್ದು ಎಂದು ಎಲ್ಲರನ್ನು ನಂಬಿಸಿದರು. ಈಗಲೂ ನಮ್ಮ ಪಠ್ಯ ಪುಸ್ತಕಗಳು ಅದನ್ನೇ ಹೇಳುತ್ತವೆ. 

  • ಇಲ್ಲಿನ ಪ್ರಾದೇಶಿಕ ಭಾಷೆಯ ಬದಲಾಗಿ ಇಂಗ್ಲೀಷ್ ಅಧಿಕೃತ ಭಾಷೆಯಾಗಬೇಕು.
  • ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ, ಆಡಳಿತ ಕಛೇರಿಗಳಲ್ಲಿ ಇಂಗ್ಲೀಷ್ ಕಡ್ಡಾಯವಾಗಿ ಮಾಧ್ಯಮವಾಗಬೇಕು. ಇದರಿಂದ ವ್ಯವಹಾರ ಸುಲಭವಾಗುತ್ತದೆ.
  • ಭಾರತೀಯರಿಗೆ ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಾಹಿತ್ಯದ ಪರಿಚಯವಾಗುತ್ತದೆ. ಅದರ ಮೂಲಕ ಅವರ ಬುದ್ಧಿಮಟ್ಟ ಹೆಚ್ಚುತ್ತದೆ.

ಈ ೩ ವಿಚಾರವನ್ನು ಆಂಗ್ಲರು ಜಗತ್ತಿನೆದುರಿಗೆ ಮುಂದಿಟ್ಟು ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಶುರು ಮಾಡುತ್ತಾರೆ. ಆದರೆ, ವಾಸ್ತವ ಬೇರೆನೆ ಇತ್ತು. ಭಾರತೀಯರಿಗೆ ಇಂಗ್ಲೀಷ್ ಶಿಕ್ಷಣ ಕೊಡುವ ಮೂಲಕ ತಮ್ಮ ಪರಂಪರೆಯನ್ನೇ ಮರೆಸುವ ಹುನ್ನಾರ ಅದರಲ್ಲಿ ಅಡಗಿತ್ತು. ಮೆಕಾಲೆಯೇ 'ಇಂಗ್ಲೀಷ್ ಪದ್ದತಿ ಪ್ರಕಾರ ಶಿಕ್ಷಣ ಪಡೆದ ಭಾರತೀಯರು, ಅದೇ ಪದ್ಧತಿಯನ್ನು ಅವರೇ ಮುಂದುವರೆಸುತ್ತಾರೆ. ನೋಡಲಿಕ್ಕೆ ಭಾರತೀಯರಾಗೆ ಕಂಡರೂ ಮಾನಸಿಕವಾಗಿ ಆಂಗ್ಲರಾಗಿರುತ್ತಾರೆ.' ಎಂದು ಲಂಡನ್ನಿನ 'ಹೌಸ್ ಆಫ಼್ ಕಾಮನ್ಸ್' ಅಲ್ಲಿ ಹೇಳುತ್ತಾನೆ. ಇದರ ಒಳ ಅರ್ಥವೆಂದರೆ ಭಾರತೀಯರು ತಮ್ಮ ತನವನ್ನು ಕಳೆದುಕೊಂಡು ಆಂಗ್ಲರಂತೆ ಜೀವಿಸುವುದು ಅರ್ಥಾತ್ ಮಾನಸಿಕವಾಗಿ ಬ್ರಿಟೀಷರಿಗೆ ಗುಲಾಮರಾಗುವುದು. ಅಬ್ಬ ಎಂತಹ ಷಡ್ಯಂತ್ರ! ಈ ಷಡ್ಯಂತ್ರ ಏಷ್ಟು ಕೆಲಸ ಮಾಡಿದೆ ಎಂದರೆ ಸ್ವಾತಂತ್ರ್ಯ ಬಂದು ೭೦ ವರ್ಷವಾದರೂ ನಾವುಗಳು ಈ 'ಗುಲಾಮಿ ಮಾನಸಿಕತೆ' ಇಂದ ಹೊರ ಬಂದಿಲ್ಲ.

Macaulay's address at House of Commons in 1835

ಹೌದು, ಈ ಮಾತನ್ನು ಹೇಳಲು ಬಲವಾದ ಕಾರಣವಿದೆ. ಈ ವಿಚಾರದ ಕುರಿತು ೩ ಉದಾಹರಣೆಗಳನ್ನು ಕೊಡಲು ಬಯಸುತ್ತೇನೆ

೧. ವಾಟ್ಸಪ್ ಅಲ್ಲಿ ಬಂದ ಸಂದೇಶ:

"ಆಧಾರ್ ಕಾರ್ಡನ್ನು ಫ಼ೇಸ್ಬುಕ್ಕಿಗೆ ಲಿಂಕ್ ಮಾಡಿದರೆ ನಮಗೆ ಅರ್ಥವಾಗುತ್ತದೆ... Angel Priya ಅನ್ನುವವರು ತಿಮ್ಮಕ್ಕ". Angel Priya ಅನ್ನುವ ಹೆಸರಿನಡಿ ಬಿಳಿ ಚರ್ಮದ ಹೆಣ್ಣು ಮಗಳ ಚಿತ್ರ ಮತ್ತು ತಿಮ್ಮಕ್ಕ ಎನ್ನುವ ಹೆಸರಿನಡಿ ಕಂದು ಬಣ್ಣದ ಹೆಣ್ಣು ಮಗಳ ಚಿತ್ರವಿತ್ತು. ಈ ಸಂದೇಶ ಹಾಸ್ಯವೆಂದು ತುಂಬ ಕಡೆ ಓಡಾಡಿತು. ಇದರಲ್ಲಿ ಹಾಸ್ಯ ಎಂಬುದು ಏನಿದೆ ಅನ್ನೋದು ಪ್ರಶ್ನೆ. ಇಲ್ಲಿ ಬಳಸಿರುವ 'Angel' ಎಂಬ ಪದ ಆಂಗ್ಲರ ಕಲ್ಪನೆಯ ಸುಂದರವಾದ ಹೆಣ್ಣು ಮಗಳನ್ನು ಸೂಚಿಸುತ್ತದೆ. 'ತಿಮ್ಮಕ್ಕ' ಅನ್ನೋದು ಭಾರತದ ಹೆಣ್ಣು ಮಗಳ ಹೆಸರು. ಅದನ್ನು ಇಲ್ಲಿ ಕುರೂಪಿ ಅಥವಾ ನೋಡಲಿಕ್ಕೆ ಚೆನ್ನಾಗಿಲ್ಲ ಅನ್ನೋ ರೀತಿ ಬಿಂಬಿಸಿದ್ದಾರೆ. 

ಬ್ರಿಟೀಷರು ಹೀಗೆ ಮಾಡುತ್ತಿದ್ದರು. ಸರ್ದಾರ್ಜಿ ಅಂದರೆ 'ಬಾರ ಬಜ್ ಗಯೆ ಕ್ಯಾ (ಹನ್ನೆರಡು ಗಂಟೆ ಆಯ್ತ?)' ಎಂದು ಮೂದಲಿಸುತ್ತಿದ್ದರು. 'ಬಾರ ಬಜ್ ಗಯೆ ಕ್ಯಾ' ಅನ್ನೋದಕ್ಕೆ ಹಿನ್ನಲೆ ಇದೆ. ಮೊಘಲರು ಹಿಂದು ಹೆಣ್ಣು ಮಕ್ಕಳನ್ನು ಅಪಹರಿಸಿದಾಗ ಅವರ ಮನೆಯವರು ಸಿಖ್ಖರ (ಸರ್ದಾರ) ಹತ್ತಿರ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು. ಆಗ ಖಾಲ್ಸ ಎಂಬ ಪಂಥದ ಸಿಖ್ಖರು ರಾತ್ರಿ ೧೨ಕ್ಕೆ ದಾಂಧಲೆ ಮಾಡಿ ಅಪಹರಣಕ್ಕೊಳಗಾದ ಹೆಣ್ಣು ಮಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದರು. ಬ್ರಿಟೀಷರಿಗೆ ತಲೆ ನೋವಾಗಿ ಪರಿಣಮಿಸಿದ್ದು 'ಗದ್ದರ್ ಪಾರ್ಟಿ'ಯ ಸಿಖ್ಖರು. ಆದ್ದರಿಂದ ಅವರನ್ನು ಮೂರ್ಖರು ಎಂದು ಬಿಂಬಿಸಿ, ಸರ್ದಾರ್ಜೀ ಜೋಕುಗಳನ್ನು ಸೃಷ್ಟಿ ಮಾಡಿದರು. ಇಗಲೂ ನಮ್ಮವರೇ ಸಿಖ್ಖರನ್ನು ಈ ಜೋಕುಗಳ ಮೂಲಕ ಆಡಿಕೊಳ್ಳುತ್ತಾರೆ. ಅದೇ ರೀತಿ ಈ 'Angel Priya' ಮತ್ತು 'ತಿಮ್ಮಕ್ಕ'ರ ಜೋಕು. ಬ್ರಿಟೀಷರು ಮಾಡಿದ್ದನ್ನೇ ನಾವು ಈಗಲೂ ಮಡುತ್ತಿದ್ದೇವೆ.

೨. 'ಅರ್ಧಸತ್ಯ'ವನ್ನು ತಿಳಿಸುವ ಪಠ್ಯ ಪುಸ್ತಕ:

ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿ 'ನಮ್ಮ ಸಮಾಜ ಸುಧಾರಕರು' ಎಂಬ ಪಾಠವಿದೆ. ಅದರಲ್ಲಿ ರಾಜ ರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಈಶ್ವರ್ ಚಂದ್ರ ವಿದ್ಯಾಸಾಗರ್ ಮತ್ತು ಮತ್ತಿತರರ ಬಗ್ಗೆ ಬಣ್ಣಿಸುತ್ತಾರೆ. 'ಈ ಸಮಾಜ ಸುಧಾರಕರು ಸತಿ ಪದ್ಧತಿ, ಬಾಲ್ಯ ವಿವಾಹವನ್ನು ವಿರೋಧಿಸುತ್ತಿದ್ದರು, ವಿಧವ ವಿವಾಹವನ್ನು ಎತ್ತಿ ಹಿಡಿಯುತ್ತಿದ್ದರು ಮತ್ತು ಇವರ ಈ ತತ್ವಕ್ಕೆ ಬ್ರಿಟೀಷರು ಬೆಂಬಲ ನೀಡುತ್ತಿದ್ದರು' ಎಂದು ವರ್ಣಿಸುತ್ತಾರೆ. ನಮ್ಮ ಪಠ್ಯ ಪುಸ್ತಕಗಳು ಹೇಳೋದು ಇಷ್ಟನ್ನೇ. ಹೌದು, ಇದು ಸತ್ಯವೇ, ಆದರೆ ಅರ್ಧಸತ್ಯ!

ಮೊಘಲರ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋಗಿ ಜನಾನದಲ್ಲಿ ಕೂಡಿ ಹಾಕುತ್ತಿದ್ದರು. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸೌಂದರ್ಯವೇ ಶಾಪವಾಗಿತ್ತು. ತಮ್ಮ ಮಾನವನ್ನು ಕಾಪಾಡಿಕೊಳ್ಳಲು ಗಂಡ ಪ್ರಾಣಬಿಟ್ಟ ನಂತರ ಚಿತೆಗೆ ಹಾರುತ್ತಿದ್ದರು, ಚಿಕ್ಕವಯಸ್ಸಿನ ಹೆಣ್ಣು ಮಕ್ಕಳನ್ನು ದೂರದ ಊರಿಗೆ ಮದುವೆ ಮಾಡಿ ಕಳಿಸುತ್ತಿದ್ದರು. ಕಾಲಕ್ರಮೇಣ ಇದು 'ಅಪ್ಪ ಹಾಕಿದ ಆಲದ ಮರಕ್ಕೆ ತೂಗಿ ಹಾಕೋ' ಎಂಬ ಗಾದೆಯಂತೆ ಒಂದು ಸಂಪ್ರದಾಯವಾಗಿ ಬೆಳೆದು ಬಂತು. ನೆನಪಿಡಿ ವೇದಗಳಾಗಲಿ, ಪುರಾಣವಾಗಲಿ ಈ ಪದ್ಧತಿಯನ್ನು ಪ್ರಸ್ತಾಪಿಸುವುದಿಲ್ಲ.

ಬ್ರಿಟೀಷರು ಇಂತಹ ಸುಧಾರಕರನ್ನು ೨ ಕಾರಣಕ್ಕಾಗಿ ಬೆಂಬಲಿಸುತ್ತಿದ್ದರು. ಒಂದು, ಭಾರತದಲ್ಲಿ ತಮ್ಮ ನೆಲವನ್ನು ಗಟ್ಟಿಮಾಡಿಕೊಳ್ಳಲು. ಎರಡು, ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು. ವಿಲಿಯಂ ಆಡಮ್ಸ್ ಎಂಬ ಪಾದ್ರಿ ಭಾರತಕ್ಕೆ ಈ ಸಮಾಜ ಸುಧಾರಕರೊಬ್ಬರನ್ನ ತಮ್ಮ ಮತಕ್ಕೆ ಸೆಳೆದುಕೊಳ್ಳಲು ಬಂದ. ಸುಧಾರಕರ ಮೂಲಕ ಇಡೀ ಬಂಗಾಳವನ್ನು ಮತಾಂತರ ಮಾಡುವ ಷಡ್ಯಂತ್ರ ಅಡಗಿತ್ತು. ಆಡಮ್ಸ್ ರಾಜ ರಾಮರನ್ನು ಭೇಟಿ ಮಾಡಿ "ಕ್ರೈಸ್ತ ಮತ ಹೇಳುವುದು 'ಏಕದೇವೋಪಾಸನೆ' ಆದರೆ, ಹಿಂದುಗಳಲ್ಲಿ ಕೋಟಿ ದೇವರುಗಳಿದ್ದಾರೆ, ಇದರಲ್ಲಿ ಅರ್ಥವಿಲ್ಲ ಹಾಗಾಗಿ ನೀವ್ಯಾಕೆ ಕ್ರೈಸ್ತಮತಕ್ಕೆ ಮತಾಂತರಗೊಳ್ಳಬರದು?" ಎನ್ನುತ್ತಾನೆ.

ರಾಜರಾಮರು ಉತ್ತರಿಸುತ್ತಾ - "ನಿಮ್ಮ ಕ್ರೈಸ್ತ ಮತದಲ್ಲಿ ನಂಬುವುದು ೩ ದೇವರುಗಳನ್ನು

  • ಗಾಡ್; ದಿ ಹೋಲಿ ಫ಼ಾಧರ್
  • ಗಾಡ್; ದಿ ಹೋಲಿ ಸನ್
  • ಗಾಡ್; ದಿ ಹೋಲಿ ಘೋಸ್ಟ್

ಹೀಗಿದ್ದು ಅದು ಏಕದೇವೋಪಾಸನೆ ಹೇಗೆ ಆಗುತ್ತದೆ. ಈ ಮೂವರೊಟ್ಟಿಗೆ ೩ ಕೋಟಿ ಸೇರಿದರೆ ಸಮಸ್ಯೆ ಏನು? ಬ್ರಹ್ಮತತ್ವವನ್ನು ಮುಂದಿಡುತ್ತಾ ವೇದಗಳು ಏಕದೇವ ಸೂತ್ರ ಮಂಡಿಸುತ್ತದೆ" ಎಂದು ಆತನನ್ನು ವಾದದಲ್ಲಿ ಸೋಲಿಸುತ್ತಾರೆ. ನಂತರ ವಿಲಿಯಂ ಆಡಮ್ಸ್ ವೇದಾಧ್ಯಾಯನಕ್ಕಾಗಿ ಹಿಮಾಲಯಕ್ಕೆ ಹೋದ ಅಂತಲೂ ಇತಿಹಾಸವಿದೆ. ಈ ಪೂರ್ಣ ಸತ್ಯವನ್ನು ನಮ್ಮ ಪಠ್ಯ ಪುಸ್ತಕಗಳು ಹೇಳುವುದಿಲ್ಲ. "ಭಾರತೀಯರು ಅವಿಧ್ಯಾವಂತರು, ಅನಾಗರೀಕರು ಎಂದೂ, ಅದೇ ರೀತಿ ಭಾರತದಲ್ಲಿ ಸತಿ ಪದ್ಧತಿ, ಬಾಲ್ಯ ವಿವಾಹವಿತ್ತು, ವಿಧವಾ ವಿವಾಹಕ್ಕೆ ಅವಕಾಶವಿರಲಿಲ್ಲ" ಎಂದು ಆಂಗ್ಲರು ಪ್ರಚಾರ ಮಾಡಿದರು. ಅದರಂತೆ ನಾವು ಈಗಲೂ ಅದನ್ನೇ ಓದುತ್ತಿದ್ದೇವೆ.

William Adams' letter on Raja Ram Mohan Roy

೩. ಹಿಂದಿ ಹೇರಿಕೆಯ ಹಿಂದಿನ ರಾಜಕೀಯ:

ಜೂನ್ ೨೦೧೭ ರಲ್ಲಿ ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ'ದ ಒಂದು ಹಂತವನ್ನು ಮಾಜಿ ರಾಷ್ಟ್ರಾಧ್ಯಕ್ಷ ಶ್ರೀ ಪ್ರಣವ್ ಮುಖರ್ಜಿ ಉದ್ಘಾಟಿಸಿದರು. ನಂತರದ ದಿನಗಳಲ್ಲಿ #nammametrohindibeda, #banhindimposition ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ಶುರುವಾಯಿತು. ಕರ್ನಾಟಕ ಸರ್ಕಾರ ಕೂಡ ಇದು ಕೇಂದ್ರ ಸರ್ಕಾರದ ನೀತಿ ಎಂದು ವಿರೋಧಿಸಿತು. ಇಲ್ಲಿ ನಾವು ಗಮನಿಸಬೇಕಾಗಿರುವುದು ಎರಡು ವಿಚಾರ:

೧. ಪ್ರತಿಭಟನೆ ಮಾಡುತ್ತಿರುವ ಸಾಮಾನ್ಯ ಜನ ಇಂಗ್ಲೀಷ್ ಇರಲಿ, ಅದು ಅನಿವಾರ್ಯ ಆದರೆ, ಹಿಂದಿ ಬೇಡ ಎನ್ನುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಕನ್ನಡ. ಆದರೆ, ಲಿಪಿ ಮಾತ್ರ ಇಂಗ್ಲೀಷ್! ಸಂಸ್ಕೃತ ಭಾರತದಲ್ಲೇ ಹುಟ್ಟಿದ ಭಾಷೆ. ಅದರಿಂದಲೇ ಕನ್ನಡ, ಹಿಂದಿ ಮುಂತಾದ ಭಾರತೀಯ ಭಾಷೆಗಳು ಹುಟ್ಟಿದವು ಅನ್ನೋದು ವಾಸ್ತವ. ಇಂಗ್ಲೀಷ್ ಈ ದೇಶದ ಭಾಷೆ ಅಲ್ಲ. ವಿಪರ್ಯಾಸವೆಂದರೆ ಇಲ್ಲಿ ಜನ ಇಂಗ್ಲೀಷನ್ನು ಒಪ್ಪಿಕೊಂಡು ನಮ್ಮ ದೇಶದ್ದೇ ಭಾಷೆಯಾದ ಹಿಂದಿಯನ್ನು ವಿರೋಧಿಸುವುದು.

೨. ರಾಜಕೀಯವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಇಲ್ಲಿನ ಕಾಂಗ್ರೇಸ್ ಪಕ್ಷದ ಉದ್ದೇಶ. ೧೯೬೮ ರಲ್ಲಿ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು 'ತ್ರಿ ಭಾಷಾ ಸೂತ್ರ' ಎಂಬ ತತ್ವವನ್ನು ಜಾರಿಗೆ ತಂದಿತು. ಇದರ ಪ್ರಕಾರ ಇಂಗ್ಲೀಷ್, ಹಿಂದಿ ಮತ್ತು ಆಯಾ ರಾಜ್ಯಕ್ಕೆ ಅನುಗುಣವಾಗಿ ಪ್ರಾದೇಶಿಕ ಭಾಷೆಯೊಂದನ್ನು ಕಲಿಯತಕ್ಕದು ಎಂಬ ಆದೇಶ ಹೊರಡಿಸಿದರು. ತಮಿಳುನಾಡು ಮಾತ್ರ ಇದಕ್ಕೆ ವಿರೋಧವಾಗಿ ಈಗಲೂ ಇಂಗ್ಲೀಷ್ ಮತ್ತು ತಮಿಳನ್ನು ಮಾತ್ರ ಅಭ್ಯಾಸ ಮಾಡುತ್ತದೆ. ಇದು ಆಗಿನ ಕೇಂದ್ರ ಸರ್ಕಾರದ ನಿರ್ಣಯ. ಹೊಸದಾಗಿ ಹೊರಡಿಸಿದ ಆದೇಶವೇನಲ್ಲ. ಹಾಗಾಗಿ ಈ ವಿಷಯಕ್ಕೂ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೂ ಸಂಬಂಧವೇ ಇಲ್ಲ.

ನಮ್ಮದನ್ನು ವಿರೋಧಿಸಿ, ಹೊರ ದೇಶದಿಂದ ಆಮದಾದದ್ದನ್ನು ಒಪ್ಪಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ? ಬ್ರಿಟೀಷರು ನಮ್ಮವರ ಎದುರಿಗೆ ನಮ್ಮವರನ್ನೇ ಎತ್ತಿಕಟ್ಟುತ್ತಿದ್ದ ವಿಧಾನದಲ್ಲಿ ಇದೂ ಒಂದು. ಈಗಲೂ ಸಹ ನಮ್ಮದನ್ನು ನಾವೇ ವಿರೋಧ ಮಾಡುತ್ತಿದ್ದೇವೆ.

ಈ ಮೂರು ಉದಾಹರಣೆಯಲ್ಲಿ ಗಮನಿಸಬೇಕಾದ ಅಂಶ; ಬ್ರಿಟೀಷರು ಯಾವ ಇಂಗ್ಲೀಷ್ ಶಿಕ್ಷಣದ ಮೂಲಕ ನಮ್ಮ ಸಂಸ್ಕೃತಿಯನ್ನು ನಾಶ ಮಾಡಿದರೋ ಅದೇ ಶಿಕ್ಷಣ ಪದ್ಧತಿಯಲ್ಲೇ ನಾವು ಇಂದಿಗೂ ಅಭ್ಯಸಿಸುತ್ತಿದ್ದೇವೆ. ಆದ್ದರಿಂದ, ನಮ್ಮನ್ನೇ ನಾವು ಬೇರೆಯವರ ಕಾರಣಕ್ಕಾಗಿ ವಿರೋಧಿಸುತ್ತಿದ್ದೇವೆ. ಆಂಗ್ಲರು ನಮ್ಮನ್ನು ಬಿಟ್ಟು ಹೋದ ಮೇಲೂ ಅವರು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದೇವೆ. ೭೦ ವರ್ಷಗಳ ಹಿಂದೆ ಆಂಗ್ಲರ ಕೆಳಗೆ ನಾವು ಗುಲಾಮರು. ಈಗ ನಮ್ಮವರ ಕೆಳಗೆ ನಾವು ಗುಲಾಮರು. ಮೆಕಾಲೆ ತನ್ನ ಒಂದು ಶಿಕ್ಷಣ ಪದ್ದತಿಯಿಂದ ಇಡೀ ದೇಶದ ಜನರನ್ನು 'ಗುಲಾಮಿ ಮಾಸಸಿಕತೆ'ಗೆ ಒಗ್ಗುವಂತೆ ಮಾಡಿಬಿಟ್ಟ! ಇನ್ನಾದರು ನಾವು ಬದಲಾಗೋಣ. ಸ್ವಾಮೀ ವಿವೇಕಾನಂದರು ನಮಗೆ ಆದರ್ಶವಾಗಲಿ, ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಷಿಸೋಣ. ಭಾರತೀಯರ ಭೌತಿಕ ಮಟ್ಟ ಹೆಚ್ಚಾಗಲಿ, ಭಾರತ ಭವ್ಯವಾಗಲಿ.

May 25, 2021

ಜಗತ್ತಿಗೆ ಸಂಕಟ ತಂದು ಸಂಭ್ರಮಿಸುತ್ತಿರುವ ಚೀನಾ!

ಕೊರೋನಾ ಎಂಬ ಮಹಾಮಾರಿ ಒಂದು ರೀತಿ ವಿಶ್ವಯುದ್ಧವಾಗಿ ಪರಿಣಮಿಸಿದೆ. 2020 ರಿಂದ ನಮ್ಮ ಜೀವನವು ತೀವ್ರವಾಗಿ ಬದಲಾಗಿದೆ. ಆರ್ಥಿಕವಾಗಿ ಜಗತ್ತು ಕುಸಿದಿದೆ. ಜನನ ಪ್ರಮಾಣದ ಹೆಚ್ಚಳ, ವಿಚ್ಚೇದನ , ಬೊಜ್ಜು, ಮಾನಸಿಕ ಖಿನ್ನತೆ, ಮದ್ಯಪಾನ, ಅಪರಾಧ, ನಿರುದ್ಯೋಗ, ಕೌಟುಂಬಿಕ ಕಲಹಗಳು ಹೆಚ್ಚಾಗಿವೆ ಎಂದು ಸಂಶೋಧನೆಗಳು ಸೂಚಿಸುತ್ತಿವೆ. ಭಾರತ, ಜಪಾನ್ ಅಥವಾ ಬ್ರೆಜಿಲ್ನಂತಹ ಯಾವುದಾದರು ದೇಶವು ಇಂತಹ ಮಾರಕ ವೈರಸ್ ಅನ್ನು ತನ್ನ ಭೂಭಾಗದಿಂದ ಪಾರಾಗಲು ಬಿಟ್ಟಿದ್ದೇ ಆಗಿದ್ದಲ್ಲಿ ಇಂದು ಅಂತರಾಷ್ಟ್ರೀಯವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲ್ಪಡುತ್ತಿತ್ತು. ಆದರೆ, ಜಗತ್ತಿನಲ್ಲಿ ಇಷ್ಟೊಂದು ಸಾವು ನೋವುಗಳಿಗೆ ಕಾರಣವಾಗಿರುವ ಕೊರೋನಾದ ಜನ್ಮಸ್ಥಳವಾದ ಚೀನಾ ಇಂದಿನವರಿಗೂ ಯಾವುದೇ ಶಿಕ್ಷೆ ಅನುಭವಿಸಿಲ್ಲ. ಪ್ರಪಂಚದಾದ್ಯಂತ ಜನರೆಗೆ ಸೋಂಕು ತಗುಲಿದ ನಂತರ, ಚೀನೀ ಕಮ್ಯುನಿಸ್ಟ್ ಪಾರ್ಟಿ (ಸಿ.ಸಿ.ಪಿ) ತನ್ನ ಒಂದು ಪ್ರಕಟಣೆಯ ಮೂಲಕ ಸಿನಿಕತನದಿಂದ "ವಿಶ್ವದ ಎಲ್ಲರನ್ನೂ ಜೊತೆಯಾಗಿಸುವ ಅಪರೂಪದ ಸನ್ನಿವೇಶ ಕೊರೋನಾ ಮಹಾಮಾರಿ" ಎಂದು ಹೇಳಿತು.

ಚೀನಾ ಕೋವಿಡ್ ಅನ್ನು ತಾನು ತಡೆದುಕೊಳ್ಳುವುದಲ್ಲದೇ ವೈರಸ್ಸಿನ ಉಗಮದ ಬಗ್ಗೆ ಪ್ರತ್ಯೇಕವಾದ, ಸಮಗ್ರವಾದ ತನಿಖೆಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಮಾಹಾಮಾರಿ ತಂದೊಡ್ಡಿರುವ ಈ ಪರಿಸ್ಥಿತಿಯನ್ನು ಚೀನಾ ತನ್ನ ಆರ್ಥಿಕ ಲಾಭಕ್ಕಾಗಿ ಬಳಸಿಕೊಂಡಿದೆ. ಇದೇ ಸಂದರ್ಭದಲ್ಲಿ ಚೀನಾದ ರಫ಼್ತಿನ ಪ್ರಮಾಣ ದಾಖಲೆ ಏರಿಕೆ ಕಂಡಿದೆ. ಇದಕ್ಕೆ ಪೂರಕವಾಗಿ ಪರಗ್ವೆ ಒಂದು ಉದಾಹರಣೆ ಕೊಡುತ್ತದೆ. ತನಗೆ ಲಸಿಕೆ ಕೊಡಬೇಕಾದರೆ ತಾನು ತೈವಾನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಚೀನಾ ಹೇಳಿತ್ತು ಎಂಬ ವಿಚಾರವನ್ನು ಪರಗ್ವೆ ಮಾರ್ಚ್ 22 ರಂದು ಬಹಿರಂಗ ಪಡಿಸಿತು.

The Economic Times reports spike in chinese export during Covid pandemic

ಇದಲ್ಲದೇ ಮತ್ತೊಂದು ಸೂಕ್ಷ್ಮವಾದ ವಿಚಾರವನ್ನು ಇಲ್ಲಿ ಗಮನಿಸಬೇಕು. ಕೊರೋನಾ ಹುಟ್ಟಿದ್ದು ಚೀನಾದ ಮಧ್ಯಭಾಗದಲ್ಲಿರುವ ವೂಹಾನಿನಲ್ಲಿ. ವೈರಾಣು ಹುಟ್ಟಿದ ದೇಶವನ್ನು ಹೊರತುಪಡಿಸಿ ಜಾಗತಿಕವಾಗಿ ತಡೆಯಲಾಗದಂತೆ ಹರಡಿರುವುದು ಸ್ಪಷ್ಟವಾಗಿದೆ. ಚೀನಾ ಈ ರೋಗದಿಂದ ಕನಿಷ್ಟ ಪ್ರಮಾಣದಲ್ಲಿ ಸಾವು ನೋವು ಅನುಭವಿಸಿರುವ ದೇಶವಾಗಿದೆ. ಸಧ್ಯದ ಲೆಕ್ಕದ ಪ್ರಕಾರ 90 ಸಾವಿರ ಪ್ರಕರಣ ಮತ್ತು 4 ಸಾವಿರದಷ್ಟು ಸಾವಿನ ಸಂಖ್ಯೆ ಚೀನಾದ್ದು! ನೆರೆಯ ರಾಷ್ಟ್ರಗಳಾದ ಜಪಾನ್ - ಕೊರಿಯಾ ಇಂದ ಹಿಡಿದು ನೇಪಾಳ - ಭಾರತದವರೆಗೆ ಕೊರೋನಾ ತಾಂಡವವಾಡುತ್ತಿರಬೇಕಾದರೆ ಚೀನಾದಲ್ಲೇ ಹುಟ್ಟಿದ ಕೊರೋನಾ ಹೆಚ್ಚಿನ ಪರಿಣಾಮ ಬೀರದಂತೆ ಕಾಪಾಡಿ ಕೊಂಡಿರುವುದು ಹೇಗೆ ಎಂಬುದು ಆಶ್ಚರ್ಯವಾಗಿದೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊರೋನಾದ ಮೂಲವನ್ನು ತಿಳಿದುಕೊಳ್ಳುವ ಎಲ್ಲಾ ಪ್ರಯತ್ನಗಳಿಗೂ ಚೀನಾ ವ್ಯವಸ್ಥಿತವಾಗಿ ಅಡ್ಡಯಾಯಿತು. ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಕುರಿತು ತನಿಖೆಗೆ ಚೀನಾಕ್ಕೆ ಹೋಗುವ 1 ವಾರದ ಮುನ್ನ ಚೀನಾದಲ್ಲಿ ಇದ್ದಿಕ್ಕಿದ್ದ ಹಾಗೆ ಮಳೆಗಾಲವಲ್ಲದ ಸಮಯದಲ್ಲೂ ಪ್ರವಾಹ ಬಂದಿದ್ದು ಗಮನಿಸಬೇಕಾದ ಅಂಶ. ವೈರಸ್ಸಿನ ಕುರಿತು ಸ್ಪಷ್ಟವಾದ ಮಾಹಿತಿಯನ್ನು ಕೊಡುವುದನ್ನು ಚೀನಾ ನಿರಾಕರಿಸಿತು ಬದಲಾಗಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಎಪ್ರಿಲ್ 30 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊರೋನಾ ಎರಡನೆ ಅಲೆಯಿಂದ ಉಂಟಾಗಿರುವ ಅನಾಹುತ ಕುರಿತು ಸಹಾನುಭೂತಿ ಪತ್ರವನ್ನು ಕಳುಹಿಸಿದರು. ಚೀನಾ ತನ್ನ ಜಾಗತಿಕ ಪ್ರಭಾವದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಸೇರಿದಂತೆ ಚೀನಾ ವೈರಸ್ಸಿನ ಉಗಮದ ಕುರಿತ ಚರ್ಚೆಯನ್ನು ನಿಗ್ರಹಿಸಲು ಬಹುತೇಕ ಯಶಸ್ವಿಯಾಗಿದೆ. ಜಗತ್ತಿನ ಗಮನವನ್ನು ವೈರಸ್ಸಿನ ರೂಪಾಂತರದ ಮೇಲೆ, ನಿರ್ದಿಷ್ಟ ದೇಶಗಳೊಂದಿಗೆ ಗುರುತಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಮಾಧ್ಯಮಗಳು ಸಹ 'ಭಾರತೀಯ ರೂಪಾಂತರಿ, ಬ್ರೆಜಿಲ್ ರೂಪಾಂತರಿ, ದಕ್ಷಿಣ ಆಫ಼್ರಿಕಾ ರೂಪಾಂತರಿ' ಎಂದೆಲ್ಲಾ ಉಲ್ಲೇಖ ಮಾಡಿವೆ. ದೆಹಲಿಯ ಮುಖ್ಯಮಂತ್ರಿ ಇತ್ತೀಚೆಗೆ ಸಿಂಗಾಪುರದ ರೂಪಾಂತರದ ಬಗ್ಗೆ ಮಾತಾಡಿ ಸುದ್ದಿಯಾದರು. ಆದರೆ, ಇದೇ ಮಾಧ್ಯಮಗಳು ವುಹಾನಿನಲ್ಲಿ ಹುಟ್ಟಿದ ಕೊರೊನಾಕ್ಕೆ 'ಚೀನೀ ವೈರಸ್' ಎಂದು ಉಲ್ಲೇಖಿಸುವುದಿಲ್ಲ. ಚೀನಾದ ಚೇಲಾಗಳು ಎನ್ನಬಹುದಾದ ಕಮ್ಯೂನಿಸ್ಟರು ಚೀನಾ ವಿರುದ್ಧ ಒಂದೇ ಒಂದು ಪದವನ್ನು ಮಾತಾಡಿದ್ದು ಇತಿಹಾಸದಲ್ಲೇ ಇಲ್ಲ. ಚೀನಾ ವೈರಸ್ ಎಂದು ಕರೆಯುವುದನ್ನು ಆಕ್ಷೇಪಿಸಿದ ಪಾಶ್ಚಿಮಾತ್ಯ ಮಾಧ್ಯಮಗಳು ಹೊಸ ರೂಪಾಂತರಿಗಳನ್ನು ಅವು ಹುಟ್ಟಿದ ದೇಶಗಳ ಜೊತೆ ಹೆಸರಿಸುತ್ತಿವೆ. 

ಇದೆಲ್ಲದರ ನಡುವೆ ಲದಾಖ್ ಪ್ರಾಂತ್ಯದಲ್ಲಿ ಚೀನಾ ಮತ್ತೊಮ್ಮೆ ಹೆಚ್ಚು ಸೈನಿಕರನ್ನು ತರಬೇತಿ ಎಂದು ಜಮಾಮಾಡಿದೆ. ಮೇ 11ರ ಉಪಗ್ರಹದ ಚಿತ್ರದ ಪ್ರಕಾರ ಪಾಂಗಾಂಗ್ ಸರೋವರದ ಪೂರ್ವಕ್ಕೆ ಹತ್ತಿರವಾಗಿರುವ ಕ್ಸಿಂಗಿಯಾಂಗ್-ಟಿಬೆಟ್ ಹೆದ್ದಾರಿಯಲ್ಲಿರುವ ರುಟೋಗ್ ಕೌಂತೆಯಲ್ಲಿ ಚೀನಾದ ಸೈನ್ಯ ಜಮಾವಣೆಗೊಂಡಿರುವುದು ಸ್ಪಷ್ಟವಾಗಿದೆ. ಭಾರತದ ಫ಼ಾರ್ವರ್ಡ್ ಸ್ಥಳದ 75-100 ಕೀ.ಮೀ. ದೂರದಲ್ಲಿ ಚೀನೀ ಸೈನ್ಯ ಮೂಲಸೌರ್ಯಗಳನ್ನು ಹೆಚ್ಚಿಸಿಕೊಳ್ಳುವತ್ತಾ ಗಮನಹರಿಸಿದೆ. ಭಾರತೀಯ ಸೈನ್ಯದ ಮಾಹಿತಿ ಪ್ರಕಾರ ಹೋತಾನ್ ಮತ್ತು ಕಾಶ್ಗರ್ ವಾಯುನೆಲೆಗಳಲ್ಲಿ ಯುದ್ಧ ವಿಮಾನಗಳ ಸಂಖ್ಯೆ ಏರಿಳಿತ ಕಾಣುತ್ತಲೇ ಇದೆ. ಭಾರತದ ಜೊತೆ ಮಾತುಕತೆಯ ಸಂದರ್ಭದಲ್ಲೂ ಸಹ ಚೀನಾ ಗೋಗ್ರಾ ಮತ್ತಿತರ ಎತ್ತರದ ಪ್ರದೇಶಗಳಿಂದ ಇಳಿದು ದೂರವಿರಲು ಹಿಂದೇಟು ಹಾಕಿತು. ಚೀನೀ ಸೈನ್ಯ ಹಿಂದಕ್ಕೆ ಹೋದರೆ ಮಾತ್ರ ವಿಸರ್ಜನೆ ಪ್ರಕ್ರಿಯೆಯನ್ನು ಪರಿಗಣಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ. ಲದಾಖ್ ಪ್ರಾಂತ್ಯದಲ್ಲಿ ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳು ಈಗಾಗಲೇ ನಿಯೋಜನೆಗೊಂಡಿವೆ.

Reports showing chinese troops at Rutog County

ಕೊರೋನಾಕ್ಕೆ ಔಷಧವೆಂದು ಚೀನಾ 'ಸೀನೋವಾಕ್' ಎಂಬ ಲಸಿಕೆಯನ್ನು ಇತರ ದೇಶಗಳಿಗೆ ಮಾರಾಟ ಮಾಡುತ್ತಿದೆ. ಬ್ರಜಿಲ್, ಟಕ್ರಿ ಇದಾಗಲೇ ಚೀನಾದ ಲಸಿಕೆ ಸರಿಯಾದ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿವೆ. ಸಿಂಗಾಪುರ, ಫ಼ಿಲಿಫ಼ೈನ್ಸ್,  ಮಲೇಷ್ಯಾ ಚೀನಾದಿಂದ ಲಸಿಕೆ ಆಮದು ಮಾಡಿಕೊಂಡಿದ್ದರೂ ಲಸಿಕೆಯ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಡು ಸಾಬೀತಾದರೆ ಮಾತ್ರ ಅದನ್ನು ಅನುಮೋದಿಸುತ್ತೇವೆ ಎಂದಿದೆ.

ALJAZEERA reports the low effectiveness of chinese vaccine

ಸಮೋವಾದ ಪ್ರಧಾನಿ ಚೀನಾದ 100 ಮಿಲಿಯನ್ ಡಾಲರ್ ಬಂದರು ಯೋಜನೆಯನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ. ಚೀನಾದ ಆಕ್ರಮಣಶೀಲತೆಗೆ ವಿರುದ್ಧವಾಗಿ ನಿಲ್ಲುವ ಪೆಸಿಫಿಕ್ ದ್ವೀಪಗಳ ಸಾಲಿಗೆ ಸಮೋವಾ ಸೇರಿಕೊಂಡಿದೆ. ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸುವುದಕ್ಕೆ ಚೀನಾದೊಂದಿಗಿನ ಹೂಡಿಕೆ ಒಪ್ಪಂದವನ್ನು ಸ್ಥಗಿತಗೊಳಿಸಲು ಯೂರೋಪಿನ ಒಕ್ಕೂಟ ತನ್ನ ಸಂಸತ್ತಿನಲ್ಲಿ ಅನುಮೋದಿಸಿದೆ.

Samoa's new leader scraps china funded port project

ಜಗತ್ತಿಗೆ ಸಂಕಟವನ್ನು ತಂದೊಡ್ಡಿ ತಾನು ಸಂಭ್ರಮಿಸುತ್ತಿದೆ ಚೀನಾ! ಇದನ್ನು ಕಟ್ಟಿಹಾಕಲು ಕ್ವಾಡ್ ರಾಷ್ಟ್ರಗಳು ಮತ್ತು ಯುರೋಪಿನ ರಾಷ್ಟ್ರಗಳು ಒಂದಾಗಬೇಕಿದೆ. ಕರ್ಮ ಸಿದ್ಧಾಂತದ ಪ್ರಕಾರ ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇ ಬೇಕು. ಹಾಗೆ, ಜಗತ್ತಿಗೆ ಕೋರೋನಾ ಎಂಬ ಸಂಕಷ್ಟವನ್ನು ತಂದೊಡ್ಡಿದ ಚೀನಾ ಮುಂದೆ ಅನುಭವಿಸಲೇಬೇಕು.

May 15, 2021

ಪ್ರೇಮಾಂತರ್ಧ್ವನಿ


ಕಾರ್ಮುಗಿಲ ಮಡಿಲಲ್ಲಿ ಭರವಸೆಯ ಮಿಂಚು
ಆ ಮಿಂಚಲ್ಲಿ ಹುದುಗಿತ್ತು ವಿಧಿಯಾಟದ ಸಂಚು
ಕಣ್ಣಲ್ಲಿ ಕಂಡೆನು ಹೂ ಮನಸಿನ ಒಲವು
ನಾನಿರಲಿಲ್ಲ ಅವಳಾ... ಮನದಲ್ಲಿ ಕಲೆತು |

ಬಾಳೆಂಬ ಪಯಣದಲಿ ಒಲವೆಂಬುದು ಮಾಯೆ
ಉಳಿದಿತ್ತು ನನ್ನಲ್ಲಿ ನೆನಪುಗಳ ಛಾಯೆ ||

ಮೌನದಲಿ ಕೇಳುವುದು ಅವಳ ಮಾತಿನ ಲಹರಿ 
ಸ್ವಪ್ನದಲೂ ಪೂಜಿಸುವೆ ನೂರೆಂಟು ಬಾರಿ
ಚೂರಾಯಿತು ಕನಸು... ಬರಿದಾಯಿತು ಮನಸು
ಅವಳಿಲ್ಲದ ಬದುಕಲಿ... ಕಾಣಲೆಂತು ಸೊಗಸು |

ವೈಣಿಕನೇ ಇಲ್ಲದ ವೀಣೆಯಾಯ್ತು ಬದುಕು
ನೋವನ್ನು ಮರೆಮಾಚಿತು ನಗುವಿನ ಮುಸುಕು ||

ಒಂದೊಂದು ಮಾತಿನಲೂ ಅವಳದೇ ನೆನಪು
ಮನದಾಳದ ತೋಟದಲಿ ನೆನಪುಗಳ ಕಂಪು
ಕನಸಲ್ಲೂ ಅವಳೇ... ನನಸಲ್ಲೂ ಅವಳೇ
ಹೃದಯದ ಪ್ರತಿ ಬಡಿತದ ಧ್ವನಿಯಲ್ಲೂ ಅವಳೇ |

ಪ್ರೀತಿಸಿದೆ ಪ್ರೇಮಿಸಿದೆ ಮನಸಿನ ದನಿ ಕೇಳಿ
ಸಾವನ್ನೂ ಬಿಗಿದಪ್ಪುವೆ ಅವಳದೆ ಹೆಸರೇಳಿ ||
 

May 5, 2021

ನಮ್ಮೊಳಗಿನ ಭ್ರಷ್ಟತೆಯನ್ನು ಹೊರ ಹಾಕುತ್ತಿರುವ ಕರೋನಾ!

ಕಷ್ಟಗಳು ಎದುರಾದಾಗಲೇ ನಮ್ಮೊಳಗಿನ ಶಕ್ತಿ, ಸಾಮರ್ಥ್ಯ ಹೊರಬರುವುದು. ಕರೋನಾದಂತಹ ಮಹಾಮಾರಿ ಬಂದಿರುವಂತಹ ಈ ಸಂದರ್ಭದಲ್ಲಿ ಶಿಸ್ತು, ಸಂಯಮಗಳೇ ನಮ್ಮನ್ನು ಕಾಪಾಡಬೇಕು. ಕಳೆದ ವರ್ಷ ಮಾರ್ಚ್ ತಿಂಗಳಲ್ಲೇ ಸಿಂಗಾಪುರಿನ ವೈದ್ಯಕೀಯ ವಿಜ್ಞಾನಿಗಳು ಕರೋನಾ ವೈರಸ್ ಗಾಳಿಯಲ್ಲಿ ಹದಿನೇಳು ಅಡಿಗಳಷ್ಟು ಚಲಿಸಬಲ್ಲದು ಎಂದು ಹೇಳಿದ್ದರು. ಅರೋಗ್ಯ ತಜ್ಞರ ಪ್ರಕಾರ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಮಯಕ್ಕೆ ಸರಿಯಾಗಿ ನಮ್ಮನ್ನು ನಾವು ಶುಚಿಯಾಗಿಟ್ಟುಕೊಳ್ಳುವುದರಿಂದ ಈ ರೋಗ ಹರಡದಂತೆ ತಡಗಟ್ಟಬಹುದು. ಕರೋನಾದ ಎರಡನೆ ಅಲೆಯ ಭೀಕರತೆಯನ್ನು ನಾವಿಂದು ಅನುಭವಿಸುತ್ತಿದ್ದೇವೆ. ಮನೆಯಲ್ಲಿ ಒಬ್ಬರಿಗೆ ಕರೋನಾ ಬಂದರೆ ಎಲ್ಲರಿಗೂ ಸೋಂಕು ಅಂಟಿರುವ ಹಲವು ಪ್ರಕರಣಗಳು ಹೊರಬಂದಿವೆ. ನಮ್ಮ ನಿರ್ಲಕ್ಷ್ಯದ ಕಾರಣ ಮನೆಯಲ್ಲಿದ್ದರೂ ಮಾಸ್ಕ್ ಧರಿಸಬೇಕಾದಂತಹ ಪರಿಸ್ಠಿತಿ ಬಂದಿದೆ ಎಂದು ಕರೋನಾ ಟಾಸ್ಕ್ ಫ಼ೋರ್ಸಿನ ಮುಖ್ಯಸ್ಥ ಡಾ. ವಿ.ಕೆ. ಪಾಲ್ ಹೇಳಿದ್ದಾರೆ. ಎರಡನೆ ಅಲೆಯಲ್ಲಿ ಸೋಂಕು ತಗುಲಿರುವ ಮತ್ತು ಸಾವಿನ ಪ್ರಕರಣದ ಸಂಖ್ಯೆ ಅಧಿಕವಾಗಿದೆ. ಇದಕ್ಕೆಲ್ಲಾ ಕಾರಣ ಯಾರು? ನಮ್ಮಲ್ಲಿ ಇದಕ್ಕಿರುವ ಉತ್ತರ ಒಂದೆ - ಸರ್ಕಾರ! ಸರ್ಕಾರದ ಹೊರತಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿಯಬೇಕಾಗಿದೆ.

ಕಳೆದ ವರ್ಷದಿಂದ ಇಲ್ಲಿಯವರೆಗೆ ಭಾರತದಲ್ಲಿ ಅನೇಕ ಪ್ರತಿಭಟನೆ ಸಮಾವೇಶಗಳು ನಡೆದಿವೆ. ಮೊದಲೆ ಬಾರಿ ದೇಶದೆಲ್ಲೆಡೆ ಲಾಕ್ಡೌನ್ ಮಾಡಿದಾಗ ವಲಸೆ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು. ಕೃಷಿ ಸುಧಾರಣೆ ಬಿಲ್ ಕುರಿತು ಕಳೆದ ಡಿಸೆಂಬರಿನಲ್ಲಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದವು. 2021 ಜನವರಿ 26 ರಂದು ದೆಹಲಿಯಲ್ಲಿ ದೇಶವೇ ನಾಚಿಸುವಂತಹ ಘಟನೆಗಳು ನಡೆದವು. ಕರ್ನಾಟಕದಲ್ಲಿ ಕೂಡ ಕೃಷಿ ಮಸೂದೆಯ ವಿರುದ್ಧ, ಮರಾಠಾ ಪ್ರಾಧಿಕಾರದ ಸ್ಥಾಪನೆ ವಿರುದ್ಧ ಪ್ರತಿಭಟನೆ ಮತ್ತು ರ್ಯಾಲಿಗಳು ನಡೆದವು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೆಹಲಿಯಲ್ಲಿ ಸುಮಾರು 40 ಸಾವಿರ ಮಹಿಳೆಯರು ಹರಿಯಾಣ, ಪಂಜಾಬ್, ಉತ್ತರ ಪ್ರದೇಶದ ಭಾಗಗಳಿಂದ ಪ್ರತಿಭಟನೆಗೆಂದು ಸೇರಿದ್ದರು. ಪಂಜಾಬಿನ 401 ಮಾದರಿಗಳಲ್ಲಿ 81% ರಷ್ಟು ಬ್ರಿಟನ್ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ಪಂಜಾಬಿನ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಹೇಳಿದ್ದಾರೆ. ಈ ಎಲ್ಲಾ ಪ್ರತಿಭಟನೆಗಳಲ್ಲಿ ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಜನರು ಪಾಲಿಸಲಿಲ್ಲ. ಪ್ರತಿಭಟನೆ ಮಾಡುವುದು ಸಾಂವಿಧಾನಿಕವಾಗಿ ನಮಗೆ ಸಿಕ್ಕಿರುವ ಹಕ್ಕು ಆದರೆ, ಯಾವ ಸಂದರ್ಭದಲ್ಲಿ ಪ್ರತಿಭಟಿಸಬೇಕು ಎಂಬ ಪರಿಜ್ಞಾನ ನಾವು ಕಳೆದುಕೊಂಡೆವು.
 
Migrants protest during 1st lock down and Women protesting on International Women's Day

Farmers protesting against Agricultural Bill

Statement from CM of Punjab

ಕಳೆದ 2 ತಿಂಗಳಲ್ಲಿ ಕರ್ನಾಟಕಲ್ಲಿ ಉಪಚುಣಾವಣೆಯೂ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೆರಿಯಲ್ಲಿ ವಿಧಾನ ಸಭೆ ಚುಣಾವಣೆಗಳು ನಡೆದವು. ಈ ಸಂದರ್ಭದಲ್ಲಿ ಅನೇಕ ರಾಜಕೀಯ ಸಮಾವೇಶಗಳು, ರೋಡ್ ಶೋಗಳು ನಡೆದವು. ಇಲ್ಲಿಯೂ ಕೂಡ ಲಕ್ಷಾಂತರ ಜನಗಳು ಸೇರಿದ್ದರು ಮತ್ತು ನೆನಪಿಡಿ, ಸಾಮಾಜಿಕ ಅಂತರ ಎಂಬುದು ಮರೆತು ಹೋದ ಸಂಗತಿಯಾಗಿತ್ತು. ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಆಸೆಗೆ ಸಮಾವೇಶ, ರ್ಯಾಲಿಗಳನ್ನು ನಡೆಸಿದರು ಆದರೆ, ಇಂತಹ ಪರಿಸ್ಥಿತಿಯಲ್ಲಿ ಅಷ್ಟು ಜನ ಸೇರುವ ಅಗತ್ಯತೆ ಏನಿತ್ತು? ಎಂದು ನಾವು ಯೋಚಿಸಲೇ ಇಲ್ಲ. ಕರೋನಾ ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬ ಅರಿವು ನಮ್ಮಲ್ಲಿ ಇರಲಿಲ್ಲವ? ಡಿಸೆಂಬರ್ ಇಂದ ಫ಼ೆಬ್ರವರಿ ತನಕ ಅನೇಕ ಮದುವೆ, ಜಾತ್ರೆ ಮತ್ತಿತರ ಸಮಾರಂಭಗಳನ್ನು ನಾವೆಲ್ಲರೂ ನಡೆಸಿದೆವು. 8-9 ತಿಂಗಳ ನಂತರ ಲಾಕ್ಡೌನ್ ಮುಗಿದಿತ್ತು ಎಂಬ ಕಾರಣಕ್ಕೆ ಎಂದಿನಂತೆ ಸಮಾರಂಭಗಳಲ್ಲಿ ಜನಜಂಗುಳಿ ಶುರುವಾಯಿತು. ಸಂಭ್ರಮದಲ್ಲಿ ಮೈಮರೆತ ನಾವು ಕರೋನಾ ತಡೆಗಟ್ಟುವ ನಿಯಮಗಳನ್ನು ಮೀರಿದೆವು. ಮದುವೆ ಮತ್ತಿತಿರ ಸಭೆ, ಸಮಾರಂಭಗಳಲ್ಲಿ ಫ಼ೋಟೊ ತೆಗೆಸಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸಲೇ ಇಲ್ಲ. 
 
ಕಳೆದ ವಾರದಿಂದ ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಎಂದು ಸರ್ಕಾರ ಘೋಷಣೆ ಮಾಡಿತು. ಬೆಳಿಗ್ಗೆ 6 ರಿಂದ 10 ತನಕ ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂಗಡಿ ಮತ್ತು ಮಾರುಕಟ್ಟೆಗಳನ್ನು ತೆರೆಯಬಹುದು ಎಂದು ಸರ್ಕಾರ ಹೇಳಿತು. 3-4 ದಿನಗಳ ಹಿಂದೆ ಈ ಸಮಯವನ್ನು ಸಂಜೆ 6 ತನಕ ವಿಸ್ತರಿಸಿದರು. ಕರ್ಫ್ಯೂ ಸಡಿಲಗೊಳಿಸಿರುವ ಈ ಹೊತ್ತಲ್ಲಿ ಜನರು ತರಕಾರಿ, ದಿನಸಿ ಇತರ ವಸ್ತುಗಳಿಗಾಗಿ ಮುಗಿಬಿದ್ದರು. ಇಲ್ಲಿಯೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನ ವಿಫಲವಾದರು. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರಿಗೂ, ಎಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗು ಲಸಿಕೆ ಕೊಡುವುದಾಗಿ ಸರ್ಕಾರ ಘೋಷಿಸಿತು. ಮೊದಲ ಕೆಲವು ದಿನಗಳು ಲಸಿಕೆ ತೆಗೆದುಕೊಳ್ಳುವಲ್ಲಿ ಜನ ಉತ್ಸಾಹ ತೋರಿಸಿದರಷ್ಟೇ ಅದರೆ, ಎಪ್ರಿಲ್ 10 ರ ನಂತರ ಪ್ರತಿದಿನ ಲಸಿಕೆ ತೆಗುದುಕೊಳ್ಳುವ ಸರಾಸರಿ ಇಳಿಯುತ್ತಾ ಬಂತು.ಇದಕ್ಕೆ ಲಸಿಕೆ ಪೂರೈಸುವಲ್ಲಿ ಸರ್ಕಾರದ ವೈಫಲ್ಯ ಕಾರಣವೋ ಅಥವಾ ನಮ್ಮ ಜನಗಳ ನಿರ್ಲಕ್ಷ್ಯ ಕಾರಣವೊ ಎಂಬುದು ಪ್ರಶ್ನಾರ್ಹ!
 
Average number of people vaccinated per day in India

ಚಾಮರಾಜನಗರಲ್ಲಿ ಆಮ್ಲಜನಕ ಸಿಗಲಿಲ್ಲವೆಂದು 24 ಜನ ಮೃತಪಟ್ಟರು ಎಂಬ ಸುದ್ದಿ ಹೊರಬಂತು. ನಂತರ ಆ ಸಂಖ್ಯೆ 34ಕ್ಕೆ ಹೋಯಿತು. ಸರ್ಕಾರವನ್ನು ಲೆಕ್ಕ ಕೇಳಿದರೆ 3 ಜನ ಮಾತ್ರ ಆಮ್ಲಜನಕದ ಕೊರತೆಯಿಂದ ಸತ್ತರು ಎನ್ನುತ್ತದೆ. 04 ಮೇ 2021, ಮಂಗಳವಾರ ಕೋವಿಡ್ ವಾರ್ ರೂಂ ಮೇಲೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ರೇಡ್ ಮಾಡಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಹೊರಗೆಳೆದರು. ಸರ್ಕಾರ, ವಿರೋಧ ಪಕ್ಷಗಳು, ಮಾಧ್ಯಮಗಳು ಏನು ಮಾಡುತ್ತಿವೆ ಎನ್ನುವುದಕ್ಕಿಂತಲೂ ಕರೋನಾದಂತಹ ಸಮಯದಲ್ಲೂ ಈ ರೀತಿ ದಂಧೆ ಮಾಡುವ ಭ್ರಷ್ಟ ಮನಸ್ಥಿತಿ ನಮ್ಮ ಜನರಲ್ಲಿ ಇರುವುದು ನಿಜಕ್ಕೂ ಅಸಹ್ಯಕರವಾದುದು. ಈ ವಿಚಾರದಲ್ಲೂ ರಾಜಕೀಯದವರು, ಕಮ್ಯೂನಿಷ್ಟರು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ರೇಡ್ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯದ ನಡುವೆ ಹುಳಿಹಿಂಡುವ ಕೆಲಸಕ್ಕೆ ತೇಜಸ್ವಿ ಮುಂದಾಗಿದ್ದಾರೆ ಎಂದು, ಭ್ರಷ್ಟಾಚಾರ ಹಿಂದೆಯೂ ಇತ್ತು, ಅದು ಕೋವಿಡ್ ಸಮಯದಲ್ಲಿ ಹೆಚ್ಚಾಗಿದೆ ಎಂಬಂತಹ ಮಾತುಗಳನ್ನಾಡಿದ್ದಾರೆ. ಹೌದು, ಕಷ್ಟದ ಪರಿಸ್ಥಿತಿ ಬರುತ್ತದೆ, ಹಾಗೆಂದು ಭ್ರಷ್ಟತೆಯನ್ನು ಬೆಂಬಲಿಸುವಷ್ಟರ ಮಟ್ಟಿಗೆ ನಾವು ಇಳಿಯಬಾರದು. ಕೆಲವು ಪತ್ರಕರ್ತರಂತೂ ಭಾರತದಲ್ಲಿ ಹೆಣ ಸುಡುವ ಚಿತ್ರಗಳನ್ನು ಆನ್ಲೈನ್ ಅಲ್ಲಿ ಮಾರಾಟ ಮಾಡುವ ಕೀಳುಮಟ್ಟಕ್ಕೂ ಇಳಿದಿದ್ದಾರೆ.
 


ಕರೋನಾ ರೋಗವೇ ಸರಿ ಆದರೆ, ನಮ್ಮ ಸಮಾಜದ, ಸರ್ಕಾರದ ಹುಳುಕುಗಳನ್ನೆಲ್ಲಾ ಹೊರತರುತ್ತಿದೆ ಎಂಬುದಂತೂ ಸತ್ಯ! ಮಾ.ಹಿರಣ್ಣಯ್ಯ ತಮ್ಮ ನಾಟಕದಲ್ಲಿ ಹೇಳಿರುವ ಮಾತು ನೆನಪಿಗೆ ಬರುತ್ತದೆ. "ಈಗ switch ಹಾಕಿದ್ರೆ fan ತಿರುಗುತ್ತದೆ. ಇನ್ಮುಂದೆ ನಮ್ಮ ಮಕ್ಕಳ ಕಾಲಕ್ಕೆ switch ಹಾಕಿ fan ಮೇಲೆ 20 ರೂಪಾಯಿ ಇಟ್ರೇನೇ ಅದು ತಿರುಗೋದು". ಈ ಮಾತು ಇಂದು ಸತ್ಯವಾಗಿರೋದು ನಮ್ಮ ದೌರ್ಭಗ್ಯ. 
 
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವಿದೆ. ಕರ್ನಾಟಕದ್ದೇ ಉದಾಹರಣೆ ತೆಗುದುಕೊಳ್ಳೋಣ. ಚುಣಾವಣೆ ಮತ್ತದರ ಪ್ರಚಾರ ನಡೆದದ್ದು ಬೆಳಗಾವಿಯಲ್ಲಿ ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಮತ್ತು ಸಾವು ಸಂಭವಿಸುತ್ತಿರುವುದು ಬೆಂಗಳೂರಿನಲ್ಲಿ. ನಮ್ಮ ಸುತ್ತಲಿನ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ನೇಪಾಳ, ಮಯನ್ಮಾರಿನಲ್ಲಿ ಕಳೆದ 1.5 ತಿಂಗಳಿನಿಂದ ಕರೋನಾ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿಲ್ಲ. ಇದ್ದಕಿದ್ದ ಹಾಗೆ ಚೀನಾ ಕೋವಿಡ್ ವಿರುದ್ಧ ಭಾರತಕ್ಕೆ ಸಹಾಯ ಮಾಡುವ ಮಾತಾಡುತ್ತಿದೆ. ಚೀನಾ ಸಹಾಯ ಮಾಡುತ್ತಿದೆ ಎಂದಾದರೆ ಅದರಲ್ಲೇನೊ ಷಡ್ಯಂತ್ರವಿರುವುದಂತೂ ಸತ್ಯ. ಭಾರತದ ರೂಪಾಂತರಿ ವೈರಸ್ ಚೀನಾದ ಕೆಲವು ನಗರಗಳಲ್ಲಿ ಕಾಣಿಸಿಕೊಂಡಿದೆ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿದೆ.
 
chinese media reporting about Indian variant of Covid-19
 
ಇದನ್ನೆಲ್ಲಾ ಗಮನಿಸಿದರೆ ಕರೋನಾದ ಎರಡನೆ ಅಲೆ ಭಾರತದ ವಿರುದ್ದದ ಯೋಜಿತ ಜೈವಿಕ ಯುದ್ಧವೇ ಎಂಬ ಅನುಮಾನ ಕಾಡುತ್ತಿದೆ.