December 22, 2021

ಅನಂತವನ್ನು ಅರಿತಿದ್ದ ಗಣಿತಜ್ಞ ರಾಮಾನುಜನ್

ಪ್ರಾಚೀನ ಕಾಲದಿಂದಲೂ ಜಗತ್ತಿಗೆ ಅನೇಕ ಭಾರತೀಯರು ಅದ್ಭುತ ಕೊಡುಗೆಗಳನ್ನು ಕೊಟ್ಟಿದ್ದಾರೆ. ಗಣಿತದಲ್ಲಿ ಶೂನ್ಯದ ಕಲ್ಪನೆ ಕೊಟ್ಟಿದ್ದು ಆರ್ಯಭಟ, ಟ್ರಿಗ್ನಾಮಿಟ್ರಿ ಎಂದು ಕರೆಯುವ ತ್ರಿಕೋನಮಿತಿ ಶಾಸ್ತ್ರವನ್ನು ಕೊಟ್ಟಿದ್ದು ಕೇರಳದ ಖಗೋಳಶಾಸ್ತ್ರಜ್ಞ ಮಾಧವ, ಶಸ್ತ್ರಚಿಕಿತ್ಸ ಪಿತಾಮಹ ಎಂದು ಕರೆಯಲ್ಪಡುವ ಸುಶ್ರುತ, ಸೂರ್ಯ ಸಿದ್ಧಾಂತವನ್ನು ಕೊಟ್ಟಿದ್ದು ಬ್ರಹ್ಮರ್ಷಿ ಯಾಜ್ಞವಲ್ಕ್ಯರು, ಪರಮಾಣು ಸಿದ್ಧಾಂತ ಪ್ರಸ್ತುತಪಡಿಸಿದ್ದು ಆಚಾರ್ಯ ಕಣಾದ, ರಸಾಯನ ಶಾಸ್ತ್ರ ಗ್ರಂಥ 'ರಸರತ್ನಾಕರ'ದ ಕರ್ತೃ ಆಚಾರ್ಯ ನಾಗಾರ್ಜುನ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ. ಹತ್ತೊಂಬತ್ತನೆ ಶತಮಾನದಲ್ಲಿ ಗಣಿತ ಕ್ಷೇತ್ರದಲ್ಲಿ ಭಾರತದ ಕೊಡುಗೆ ಎಂದರೆ ಶ್ರೀನಿವಾಸ ರಾಮಾನುಜನ್.

ರಾಮಾನುಜನ್ ಜನಿಸಿದ್ದು ತಮಿಳುನಾಡಿನ ಈರೋಡಿನಲ್ಲಿ, ಬೆಳದದ್ದು ಕುಂಬಕೋಣಂನಲ್ಲಿ. ಅವರದ್ದು ಬಡತನದ ಕುಟುಂಬ ಮತ್ತು ಅದರೊಟ್ಟಿಗೆ ಬಂದ ಅಸಹಾಯಕತೆ. ಬರೆಯಲು ಹೆಚ್ಚು ಕಾಗದವಿರದ ಕಾರಣ ಒಂದು ಕಾಗದದ ಮೇಲೆ ಬೇರೆ ಬೇರೆ ಬಣ್ಣದ ಲೇಖನಿಗಳಿಂದ ಬರೆಯುವಂತಹ ಪರಿಸ್ಥಿತಿ. ಶಾಲಾ-ಕಾಲೇಜುಗಳಲ್ಲಿ ಓದಬೇಕಾದರೆ ಆಸಕ್ತಿ ಇದ್ದದ್ದು ಗಣಿತದಲ್ಲಿ ಮಾತ್ರ. ಅವರು ಗಣಿತದ ಬಗ್ಗೆ ಅತ್ಯಂತ ಸ್ವಾಮ್ಯಸೂಚಕರಾಗಿದ್ದರು. ಗಣಿತದಲ್ಲಿ ಎಲ್ಲರಿಗಿಂತಲೂ ಹೆಚ್ಚು ಅಂಕ ಪಡೆಯಬೇಕು ಎಂಬ ಯೋಚನೆ ಯಾವಾಗಲೂ ಇತ್ತು. ಪ್ರಾಥಮಿಕ ಶಾಲೆಯಲ್ಲಿ ಒಮ್ಮೆ ಸಹಪಾಠಿಯೊಬ್ಬನಿಗೆ ಗಣಿತದಲ್ಲಿ ತನಗಿಂತ ಹೆಚ್ಚು ಅಂಕ ಬಂದಿತ್ತು ಎಂಬ ಕಾರಣಕ್ಕೆ ಆತನ ಜೊತೆ ಮಾತು ಬಿಟ್ಟವರು ರಾಮಾನುಜನ್. ಗಣಿತದ ಕುರಿತು ಅವರ ಆಸಕ್ತಿ ದಿನೇ ದಿನೇ ಹೆಚ್ಚಾಗುತ್ತಿತ್ತು. ಹೈಸ್ಕೂಲಿನಲ್ಲಿ ಓದಬೇಕಾದರೆ ಕಾಲೇಜು ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡುತ್ತಿದ್ದರು. ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾಗುತ್ತಿದ್ದ ಗಣಿತದ ಲೆಕ್ಕಗಳಿಗೆ ಉತ್ತರ ಬರಿಯುತ್ತಿದ್ದರು ರಾಮಾನುಜನ್. ತಮ್ಮ ಹದಿನಾರನೆ ವಯಸ್ಸಿಗೆ ಗಣಿತದ ವಿವಿಧ ಆಯಮಗಳ ಸೂತ್ರಗಳಿದ್ದಂತಹ ಜಾರ್ಜ್ ಕಾರ್ ರವರ ಪುಸ್ತಕವೊಂದು ಸಿಗುತ್ತದೆ. ಆ ಸೂತ್ರಗಳನ್ನು ಬಿಡಿಸುವುದೇ ಅವರ ಕಾಯಕವಾಗುತ್ತದೆ. ಈ ಸೂತ್ರಗಳನ್ನು ಬಿಡಿಸುತ್ತಾ ಹೋದಂತೆಲ್ಲಾ ಅವರಿಗೊಂದಷ್ಟು ಸೂತ್ರಗಳು ಹೊಳೆಯುತ್ತಿತ್ತು. ಅದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ಯಾವುದೇ ಸಾಕ್ಷ್ಯ ಅಥವಾ ವಿವರಣೆ ಇರದ ಆ ಸೂತ್ರಗಳೇ ಮೂರು ಪುಸ್ತಕದಷ್ಟಾದವು. ರಾಮಾನುಜನ್ನರ ಬದುಕನ್ನು ಬದಲಾಯಿಸಿದ ಪುಸ್ತಕಗಳವು. ಕಾಲೇಜಿನಲ್ಲಂತೂ ಗಣಿತ ಬಿಟ್ಟರೆ ಮಿಕ್ಕ ಎಲ್ಲಾ ವಿಷಯಗಳಲ್ಲಿ ನಪಾಸಾಗಿದ್ದರು. ಬೇರೆ ವಿಚಾರಗಳು ತಿಳಿಯುತ್ತಿರಲಿಲ್ಲ ಎಂದಲ್ಲ. ಆದರೆ, ಅದರ ಕುರಿತು ಆಸಕ್ತಿ ಇರಲಿಲ್ಲ ಅಷ್ಟೇ. ಇದರ ಪರಿಣಾಮ ತನ್ನ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವಂತಹ ಕೆಲಸ ಸಿಗಲಿಲ್ಲ. ಆದರೆ ಇವರ ಗಣಿತ ಜ್ಞಾನವನ್ನು ಗಮನಿಸಿ ನಾರಾಯಣ ಅಯ್ಯರ್ ಎಂಬುವವರು ಮದ್ರಾಸಿನ ಪೋರ್ಟ್ ಟರ್ಸ್ಟಿನಲ್ಲಿ ಸಾಮಾನ್ಯ ಗುಮಾಸ್ತನ ಕೆಲಸ ಕೊಡಿಸುತ್ತಾರೆ. ಅವರ ಇಪ್ಪತ್ತೊಂದನೆ ವಯಸ್ಸಿಗೆ ತಾಯಿಯ ಒತ್ತಾಸೆಯ ಮೇರೆಗೆ ಒಂಬತ್ತು ವರ್ಷದ ಹುಡುಗಿಯೊಂದಿಗೆ ಮದುವೆಯಾಗುತ್ತದೆ.

Ramanujan's House

ಪೋರ್ಟ್ ಟ್ರಸ್ಟಿನ ಅಧಿಕಾರಿ ರಾಮಾನುಜನ್ ಗಣಿತದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಅವರ ವಿಚಾರವನ್ನು ಪತ್ರದಲ್ಲಿ ಬರೆದು ಲಂಡನ್ನಿನ ಗಣಿತಜ್ಞರಿಗೆ ಒಂದಷ್ಟು ಸೂತ್ರಗಳೊಂದಿಗೆ ಕಳಿಸಿ ಕೊಡುತ್ತಾರೆ. ಭಾರತದ ವ್ಯಕ್ತಿಯೊಬ್ಬನ ವಿಚಾರದಲ್ಲಿ ನೋಡುವುದಕ್ಕೇನಿದೆ ಎಂದು ಅನೇಕರು ತಾತ್ಸಾರ ಮಾಡುತ್ತಾರೆ. ಆದರೆ, ಹಾರ್ಡಿ ಎಂಬ ಗಣಿತಜ್ಞ ರಾಮಾನುಜನ್ನರ ಕೆಲಸವನ್ನು ಗಮನಿಸಿ ಆಶ್ಚರ್ಯ ಚಕಿತರಾಗುತ್ತಾರೆ. ಅವರ ಈ ಸೂತ್ರಗಳನ್ನು ತನ್ನ ಸ್ನೇಹಿತ ಲಿಟಲ್ ವುಡ್ ಅಲ್ಲದೇ ಇತರ ಅನೇಕ ಗಣಿತಜ್ಞರಿಗೆ ತೋರಿಸುತ್ತಾರೆ. ಎಲ್ಲರಿಂದಲೂ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತದೆ. ಈ ಕಾರಣದಿಂದಾಗಿ ರಾಮಾನುಜನ್ನರನ್ನು ಲಂಡನ್ಗೆ ಆಹ್ವಾನಿಸುತ್ತಾರೆ. ಜಾತಿಯ ಸಂಕೋಲೆಯಿಂದ ಬಂಧಿತರಾಗಿದ್ದ ಭಾರತೀಯರು ಸಾಗರವನ್ನು ದಾಟಬಾರದು ಎಂದು ನಿಶ್ಚಯಿಸಿದ್ದರು. ಅದರ ಪ್ರಕಾರ ರಾಮಾನುಜನ್ ಹಾರ್ಡಿಯ ಆಹ್ವಾನವನ್ನು ನಿರಾಕರಿಸುತ್ತಾ ತನ್ನ ಬಗ್ಗೆ ಮೆಚ್ಚುಗೆಯ ಮಾತಾಡಿ ಒಂದು ಪತ್ರವನ್ನು ಕೊಡಬಹುದ? ಇದರಿಂದ ತನ್ನ ಕೆಲಸಕ್ಕೆ ಅನುಕೂಲವಾಗುತ್ತದೆ ಎಂದು ಉತ್ತರಿಸುತ್ತಾರೆ. ಇದನ್ನು ನೋಡಿ ಬೇಸರಗೊಂಡ ಹಾರ್ಡಿ ಬ್ರಿಟೀಷ್ ಸರ್ಕಾರದ ಮೂಲಕ ಭಾರತದಲ್ಲಿದ್ದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ಥಾನ ಕೊಡಿಸಿ, ಆತನ ಗಣಿತದ ಕೆಲಸಕ್ಕಾಗಿ ತಿಂಗಳಿಗೆ 75 ರೂಪಾಯಿ ಬರುವಂತಹ ವ್ಯವಸ್ಥೆ ಮಾಡುತ್ತಾರೆ. ನಂತರದ ದಿನಗಳಲ್ಲಿ ನೆವಿಲ್ಲೇ ಎಂಬ ಗಣಿತಜ್ಞನನ್ನು ಭಾರತಕ್ಕೆ ಕಳುಹಿಸಿ ರಾಮಾನುಜನ್ನರನ್ನು ಲಂಡನ್ನಿಗೆ ಕರೆಸಿಕೊಳ್ಳುತ್ತಾರೆ. 1913ರಲ್ಲಿ ರಾಮಾನುಜನ್ ಲಂಡನ್ನಿಗೆ ತೆರಳಿ ಟ್ರಿನಿಟಿ ಕಾಲೇಜಿಗೆ ಸೇರುತ್ತಾರೆ. ಅಲ್ಲಿಂದ ಅವರ ಜೀವನದ ಮತ್ತೊಂದು ಅಧ್ಯಾಯ ಪ್ರಾರಂಭವಾಗುತ್ತದೆ.

Mathematician GH Hardy

Ramanujan (centre) at Trinity College

ಲಂಡನ್ನಿಗೆ ಬಂದ ತಕ್ಷಣ ಹಾರ್ಡಿ ರಾಮಾನುಜನ್ ಬರೆದಿಟ್ಟುಕೊಂಡಿದ್ದ ಸೂತ್ರಗಳಿದ್ದ ಪುಸ್ತಕಗಳನ್ನು ತೆಗೆದು ನೋಡುತ್ತಾರೆ. ಅದರಲ್ಲಿದ್ದ ಸೂತ್ರಗಳಾವುವು ಶಾಸ್ತ್ರೀಯ ಪದ್ಧತಿಯಲ್ಲಿರುವುದಿಲ್ಲ ಹಾಗೂ ಕೆಲವು ಸೂತ್ರಗಳು ಸುಮಾರು 50 ವರ್ಷಗಳ ಹಿಂದೆ ಸೃಜನೆಯಾಗಿದ್ದಂತವು. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಾಮಾನುಜನ್ ಶಾಸ್ತ್ರೀಯ ಪದ್ಧತಿಯಲ್ಲಿ ಗಣಿತವನ್ನು ಅಭ್ಯಾಸ ಮಾಡುತ್ತಾ ತಮ್ಮ ಗಣಿತದ ಮೇಲಿನ ಕೆಲಸಗಳನ್ನು ಮುಂದುವರೆಸುತ್ತಾರೆ. ಇವರ ಪುಸ್ತಕವೊಂದನ್ನು ಹಾರ್ಡಿ ಹಂಗೇರಿಯ ಗಣಿತಜ್ಞ ಜಾರ್ಜ್ ಪೋಲಿಯಾಗೆ ಕೊಡುತ್ತಾರೆ. ಆತ ಅದನ್ನು ನೋಡಿ ಈ ಫಾರ್ಮುಲಾಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡರೆ ನನ್ನ ಜೀವಮಾನದಲ್ಲಿ ಹೊರಬರಲು ಸಾಧ್ಯವಿಲ್ಲ ಎಂಬಂತಹ ಅದ್ಭುತ ಮಾತುಗಳನ್ನಾಡುತ್ತಾ ಪುಸ್ತಕವನ್ನು ಹಿಂದಿರುಗಿಸುತ್ತಾರೆ. ಮಹಲನೋಬಿಸ್ ಒಮ್ಮೆ ಭೇಟಿಯಾಗಿ ಜರ್ನಲ್ ಒಂದರಲ್ಲಿ ಕೊಟ್ಟಿದ್ದಂತಹ ಸಮಸ್ಯೆಯನ್ನು ಹೇಳುತ್ತಾರೆ. ತಕ್ಷಣಕ್ಕೆ ರಾಮಾನುಜನ್ ಆ ಸಮಸ್ಯೆಗೆ ಪರಿಹಾರವಾಗಿ ಒಂದು ಸರಣಿಯನ್ನು ಹೇಳಿ, ಈ ಸರಣಿ ಅನೇಕ ಸಮಸ್ಯೆಗಳಿಗೆ ಉತ್ತರ ಕೊಡುತ್ತದೆ ಎಂದು ಹೇಳಿದ್ದರು. ರಾಮಾನುಜನ್ನರಿಗೆ ಸಮಸ್ಯೆಗಳು ನೋಡುತ್ತಿದ್ದಂತೆ ಅದಕ್ಕೆ ಉತ್ತರ ಅವರಿಗೆ ಗೋಚರವಾಗುತ್ತಿತ್ತು. ಅವರನ್ನು ಇನ್ಟ್ಯೂಟೀವ್ ಮ್ಯಾಥೆಮಾಟೀಷಿಯನ್ ಅನ್ನುತ್ತಿದ್ದರು. ಅವರು ಗಣಿತವನ್ನು ಮಾಡುತ್ತಿದ್ದ ರೀತಿಯೇ ಬೇರೆ, ಶಾಸ್ತ್ರೀಯ ಪದ್ಧತಿ ಅಲ್ಲವೇ ಅಲ್ಲ. 1916ನೇ ಇಸವಿಯಲ್ಲಿ ರಾಮಾನುಜನ್ ಗಣಿತದ ಮೇಲೆ ಬರೆದ ಮಹಾಪ್ರಭಂದಕ್ಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಬಿ.ಏ. ಪದವಿಯನ್ನು ನೀಡುತ್ತದೆ. ಇದು ಬಹುಶಃ ರಾಮಾನುಜನ್ ಬದುಕಲ್ಲಿ ಕಂಡಂತಹ ಮೊದಲ ಜಯ.

Ramanujan's Three Notebooks

ನಂತರದ ದಿನಗಳಲ್ಲಿ ಅವರ ಆರೋಗ್ಯ ಹಾಳಾಗಲು ಪ್ರಾರಂಭವಾಗುತ್ತದೆ. ಕಠಿಣವಾದ ಸಸ್ಯಹಾರಿಯಾಗಿದ್ದ ಅವರು ಕೆಲಸ ಮಾಡಬೇಕಾದರೆ ತರಕಾರಿಯನ್ನು ಟಿನ್ಗಳಲ್ಲಿ ಇಟ್ಟು ಬೇಯಿಸಿ ತಿನ್ನುತ್ತಿದ್ದರು. ಈ ಕಾರಣದಿಂದಾಗಿ ಅವರ ಆರೋಗ್ಯ ಹಾಳಾಗಿರಬಹುದು ಎಂದು ವೈದ್ಯರ ಅಭಿಪ್ರಾಯ. ಅದೊಂದು ದಿನ ಹಾರ್ಡಿ ರಾಮಾನುಜನ್ನರ ಮನೆಗೆ ಬಂದು 'ಇಂದು ಗಣಿತಜ್ಞನೊಬ್ಬನಿಗೆ ಬೇಸರದ ದಿನ. ಇಂದು ಟ್ಯಾಕ್ಸಿಯೊಂದರಲ್ಲಿ ಬಂದೆ, ಆ ಗಾಡಿಯ ಸಂಖ್ಯೆ 1729 ಆಗಿತ್ತು ಆದರೆ, ಈ ಸಂಖ್ಯೆಯಲ್ಲಿ ಏನು ವಿಶೇಷತೆ ನನಗೆ ಕಾಣಿಸಲಿಲ್ಲ' ಎಂದು ಹೇಳುತ್ತಾರೆ. ಬಹುಶಃ ಒಂದು ನಿಮಿಷ ಆಗಿರಬಹುದು ನಂತರ ರಾಮಾನುಜನ್ 'ಈ ಸಂಖ್ಯೆ ಕೂಡ ವಿಶೇಷವಾದದ್ದೆ. ಎರಡು ವಿಭಿನ್ನ ಜೋಡಿ ಸಂಖ್ಯೆಗಳ ಘನಗಳನ್ನು ಕೂಡಿಸಿದಾಗ ವ್ಯಕ್ತವಾಗುವ ಅತ್ಯಂತ ಕಿರಿಯ ಸಂಖ್ಯೆ 1729!' ಎಂದು ಸಹಜವಾಗಿ ವಿವರಿಸುತ್ತಾರೆ. ಇದನ್ನು ಕೇಳಿದ ಹಾರ್ಡಿ ಗಾಬರಿಯಾಗಿ 'ನೀನೊಬ್ಬ ಅಸಾಧಾರಣವಾದ ಗಣಿತಜ್ಞ' ಎಂದು ಹೊಗಳುತ್ತಾರೆ. ಹಾರ್ಡಿಯ ಕಾರಣದಿಂದಾಗಿ ತಮ್ಮ 29ನೇ ವಯಸ್ಸಿಗೆ ರಾಮಾನುಜನ್ನರು ರಾಯಲ್ ಸೊಸೈಟಿಯ ಸದಸ್ಯರಾಗುತ್ತಾರೆ. ಇದು ಆವರ ಜೀವಮಾನದ ಬಹುದೊಡ್ಡ ಗೌರವ ಮತ್ತು ಸಾಧನೆ ಎಂದು ಭಾವಿಸಿದ್ದರು. ಆರೋಗ್ಯ ಹದಗೆಟ್ಟಿದ್ದ ಕಾರಣ ಅವರು ಭಾರತಕ್ಕೆ ಹಿಂತಿರುಗುತ್ತಾರೆ. ತನ್ನ ಮನೆಯವರೊಂದಿಗೆ ಕೆಲ ದಿನಗಳು ಕಳೆಯುವ ಅವಕಾಶವಾಗುತ್ತದೆ. ಅನಾರೋಗ್ಯ ಮತ್ತು ಮನೆಯಲ್ಲಿ ನೆಮ್ಮದಿ ಇಲ್ಲದ ಕಾರಣ ತಮ್ಮ 32ನೇ ವಯಸ್ಸಿಗೆ ತೀರಿಕೊಳ್ಳುತ್ತಾರೆ.

ರಾಮಾನುಜನ್ ಸ್ವಭಾವತಃ ತುಸು ಮುಂಗೋಪಿ ಮತ್ತು ವ್ಯಗ್ರವಾಗಿ ನಡೆದುಕೊಳ್ಳುತ್ತಿದ್ದರು. ಬಹುಶಃ ತನ್ನನ್ನು ಯಾರು ಅರ್ಥ ಮಾಡಿಕೊಳ್ಳದಿದ್ದಾಗ, ತನಗೆ ಆಸಕ್ತಿ ಮತ್ತು ಸಾಮರ್ಥ್ಯವಿರುವ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಾಗದಿದ್ದಾಗ ಹತಾಶೆಯ ಭಾವಕ್ಕೆ ಒಳಗಾಗಿ ಮುಂಗೋಪಿಯಾಗೋದು ಸಹಜ ಎಂದು ತೋರುತ್ತದೆ. ಇದೇ ರಾಮಾನುಜರನ್ನು ಕಾಡಿದ್ದು. ತನ್ನ ಗಣಿತದ ಸಾಮರ್ಥ್ಯವನ್ನು ಮನೆಯವರಾರು ಅರ್ಥೈಸಿಕೊಳ್ಳಲಿಲ್ಲ, ಸುತ್ತಾಮುತ್ತಲಿನ ಜನರೂ ಅರ್ಥ ಮಾಡಿಕೊಳ್ಳಲಿಲ್ಲ, ಕಾಲೇಜಿನಲ್ಲಿ ನಪಾಸಾಗಿದ್ದರು, ತಮ್ಮ ಯವ್ವನದ ಕಾಲದಲ್ಲಿ ಸರಿಯಾದ ಕೆಲಸವಿರಲಿಲ್ಲ, ಮನೆಯಲ್ಲಿ ಅತ್ತೆ ಸೊಸೆಯ ಜಗಳದ ಕಾರಣ ನೆಮ್ಮದಿ ಸಿಗಲಿಲ್ಲ, ವಿದೇಶದಲ್ಲಿ ಒಂಟಿತನ ಕಾಡಿತು. ಈ ಕಾರಣದಿಂದಾಗಿ ಅವರ ಸ್ವಭಾವ ವ್ಯಗ್ರವಾಗಿತ್ತು ಅನ್ನಬಹುದು. ಇಷ್ಟೆಲ್ಲಾ ಇದ್ದರೂ ಅವರು ತೀರಿಕೊಳ್ಳುವ ಕೆಲವು ತಿಂಗಳುಗಳ ಮುನ್ನ 'ಮಾಕ್ ಥೀಟಾ' ಕುರಿತು 650 ಸೂತ್ರಗಳನ್ನು ಹಾಸಿಗೆಯ ಮೇಲೆ ಮಲಗಿಕೊಂಡೆ ಬರೆಯುತ್ತಾರೆ. ಆ ಸೂತ್ರಗಳನ್ನು ಗಣಿತ ಲೋಕದಲ್ಲಿನ ಶ್ರೇಷ್ಠ ಕೊಡುಗೆ ಮತ್ತು ಅದನ್ನು ಬಿಡಿಸಲು ಜಗತ್ತು 60-70 ವರ್ಷಗಳಾದ ಮೇಲೂ ಕಷ್ಟ ಪಡುತ್ತಿತ್ತು. ಅನಂತವನ್ನು ಅರಿತಿದ್ದ ಅದ್ಭುತ ಚೇತನ ರಾಮಾನುಜನ್. ಡಿಸೆಂಬರ್ 22 ಅವರ ಜನ್ಮದಿನ. ಭಾರತ ಅವರ ಜನ್ಮದಿನವನ್ನು 'ರಾಷ್ಟ್ರೀಯ ಗಣಿತ ದಿನ' ಎಂದು ಆಚರಿಸಿ ಗೌರವಿಸುತ್ತದೆ.

***********************************

Picture Source:
Color Library Blogspot
 

Srinivas Ramanujan's Biography:
The Man Who Knew Infinity - Robert Kanigel

The Biography

December 14, 2021

ಕಟ್ಟುವ ಹೊತ್ತಲ್ಲಿ ಯಜಮಾನನನ್ನು ಕಳೆದುಕೊಂಡ ಭಾರತದ ಸೈನ್ಯ!

ನಿಜಕ್ಕೂ ಇದು ದುಃಖಕರವಾದ ಸನ್ನಿವೇಶವೇ ಸರಿ. ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಜನ ಸೈನಿಕರು ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಹುತಾತ್ಮರಾಗಿದ್ದಾರೆ. ಮನೆ ಕಟ್ಟುವ ಸಂದರ್ಭದಲ್ಲಿ ಮನೆಯೊಡೆಯ ತೀರಿಕೊಂಡಂತಹ ಸ್ಥಿತಿ ಭಾರತದ ಸೈನ್ಯದ್ದು. ಡಿಸೆಂಬರ್ 6 ರಂದು ರಷ್ಯಾದ ಅಧ್ಯಕ್ಷ ಭಾರತಕ್ಕೆ ಬಂದು ಪ್ರಧಾನಿ ಮೋದಿಯ ಜೊತೆ ಅನೇಕ ವಿಚಾರಗಳನ್ನು ಚರ್ಚಿಸಿ ಹೋಗಿದ್ದಾರೆ. ಭಾರತ ಮತ್ತು ರಷ್ಯಾದ ಈ ಭೇಟಿಯನ್ನು ಸೂಕ್ಷ್ಮವಾಗಿ ಮತ್ತು ಕುತೂಹಲದಿಂದ ಗಮನಿಸಿದ್ದು ಅಮೇರಿಕಾ ಮತ್ತು ಚೀನಾ. ರಷ್ಯಾ ಜೊತೆಗಿನ ಭೇಟಿಗೂ, ಇಲ್ಲಿ ನಡೆದ ವೈಮಾನಿಕ ಅಪಘಾತಕ್ಕೂ ಸಂಬಂಧ ಇದೆಯಾ? ಇಲ್ಲ ಎಂದನ್ನಿಸಿದರೂ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೌದು, ಹೀಗೆ ಹೇಳಲು ಕಾರಣವಿದೆ. ಇತಿಹಾಸ ಇದಕ್ಕೆ ಪೂರಕ.

Chief of Defense Staff General Bipin Rawat

ನೆಹರೂ ತೀರಿಕೊಂಡ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಯಾದರು. ಚೀನಾ ವಿರುದ್ಧ ಸೋತು, ನೆಹರುವನ್ನು ಕಳೆದುಕೊಂಡಿದ್ದ ಭಾರತವನ್ನು ಸುಲಭವಾಗಿ ಮಣಿಸಬಹುದು ಎಂಬುದು ಪಾಕೀಸ್ತಾನದ ಲೆಕ್ಕಾಚಾರ. ಅಮೇರಿಕಾ ಕೊಟ್ಟಿದ್ದ ಪೆಟನ್ ಟ್ಯಾಂಕ್ಗಳನ್ನು ಬಳಸಿ ಭಾರತವನ್ನು ಸೋಲಿಸುವ ಉತ್ಸಾಹದಲ್ಲಿತ್ತು. ಆದರೆ, ಯಾರೂ ಊಹಿಸದ ರೀತಿಯಲ್ಲಿ ಶಾಸ್ತ್ರಿ ನಿರ್ಧಾರ ತೆಗೆದುಕೊಂಡಿದ್ದರು. ಲಾಹೋರಿನವರೆಗೂ ಸೈನ್ಯವನ್ನು ನುಗ್ಗಿಸಿದರು. ಅಮೇರಿಕಾಕ್ಕಾಗಲಿ, ವಿಶ್ವಸಂಸ್ಥೆಗಾಗಲಿ ಹೆದರಲಿಲ್ಲ. ಭಾರತ ಪಾಕೀಸ್ತಾನ ನಡುವೆ ಹತ್ತಿದ್ದ ಈ ಬೆಂಕಿಯನ್ನು ಶಮನ ಮಾಡಲು ರಷ್ಯಾ ಮುಂದೆ ಬಂತು. ತಾಷ್ಕೆಂಟ್ ಒಪ್ಪಂದ ನಡೆಯಿತು. ಪ್ರಧಾನಿ ಶಾಸ್ತ್ರಿ ತೀರಿಕೊಂಡರು. ಅವರ ಮರಣದ ಪ್ರಕರಣ ಈಗಲೂ ನಿಗೂಢ! ತೊಂಬ್ಬತ್ತರ ದಶಕದಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವ ಪ್ರಯತ್ನದಲ್ಲಿತ್ತು. ಅಮೇರಿಕಾ ಭಾರತದ ಏಳಿಗೆಯನ್ನು ಸಹಿಸದ ರಾಷ್ಟ್ರವಾಗಿತ್ತು ಮತ್ತು ರಷ್ಯಾದ ವಿರುದ್ಧವಾಗಿತ್ತು. ರಾಕೆಟ್ ಉಡಾವಣೆಗೆ ಬೇಕಾದಂತಹ ಇಂಜಿನ್ ಅನ್ನು ರಷ್ಯಾ ಭಾರತಕ್ಕೆ ಕೊಡಲು ಒಪ್ಪಿ ಮೊದಲನೆ ಹಂತದಲ್ಲಿ ಇಂಜಿನ್ನನ್ನು ರವಾನೆ ಮಾಡಿತ್ತು. ಆಗಲೇ ಇಸ್ರೋದ ವಿಜ್ಞಾನಿ ನಂಬಿ ನಾರಯಣನ್ ಬಂಧನಕ್ಕೆ ಒಳಗಾಗಿದ್ದು. ಅಲ್ಲೊಂದು ಷಢ್ಯಂತ್ರ ನಡೆದಿತ್ತು ಎಂದು ತಿಳಿಯಲು 25 ವರ್ಷಗಳೇ ಬೇಕಾಯಿತು!

ಡಿಸೆಂಬರ್ 6 ರಂದು ಪುತಿನ್-ಮೋದಿ ಭೇಟಿಯಾಯಿತು. ಎರಡೂ ದೇಶಗಳ ನಡುವೆ ಅನೇಕ ಒಪ್ಪಂದಗಳು ನಡೆಯಿತು. ನಾಗಾಲಾಂಡಿನಲ್ಲಿ ನುಸುಳುಕೊರರಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ, ಆರ್ಮಿ ಚಕ್ಪೋಸ್ಟ್ನಲ್ಲಿ ಟ್ರಕ್ ನಿಲ್ಲದ ಕಾರಣ ಸೈನಿಕರು ಗುಂಡು ಹಾರಿಸಿದ್ದಾರೆ. ಅವರು ಸಾಮಾನ್ಯ ನಾಗರೀಕರು ಎಂದು ನಂತರ ತಿಳಿದಮೇಲೆ ಒಂದಷ್ಟು ಗದ್ದಲವಾಗಿದೆ. ಇದಾದ ಎರಡೇ ದಿನಕ್ಕೆ ಬಿಪಿನ್ ರಾವತ್ ರವರ ಹೆಲಿಕಾಪ್ಟರ್ ಅಪಘಾತಕ್ಕೀಡಾಗುತ್ತದೆ. ನೆನಪಿಡಿ, ಕಳೆದ ವರ್ಷ ಹೆಲಿಕಾಪ್ಟರ್ ಅಪಘಾತದಲ್ಲಿ ಮಿಲಿಟರಿ ಮುಖ್ಯಸ್ಥ ಸೇರಿದಂತೆ 8 ಜನರು ತೈವಾನ್ ಅಲ್ಲಿ ಸಾವನ್ನಪ್ಪಿದ್ದರು. ತೈವಾನಿಗೂ ಚೀನಾಕ್ಕೂ ಸಂಬಂಧ ಕೆಡಲು ಪ್ರಾರಂಭವಾಗಿತ್ತು. ಭಾರತ ಮತ್ತು ರಷ್ಯಾದ ನಡುವೆ ಸಂಬಂಧ ಹೆಚ್ಚಾದಾಗಲೆಲ್ಲ ಭಾರತಕ್ಕೆ ಏನಾದರೂ ಆಘಾತ ಉಂಟಾಗಿದೆ. ಈ ಹಿನ್ನಲೆಯಲ್ಲಿ ಗಮನಿಸಿದಾಗ ಸಣ್ಣದೊಂದು ಅನುಮಾನ ಕಾಡುವುದು ಸಹಜ. ಇದು ನಿಜವೇ ಆಗಿದ್ದರೆ ಆಂತರಿಕ ಶತ್ರುಗಳ ಪಾಲು ಅದರಲ್ಲಿರುವ ಸಾಧ್ಯತೆಗಳು ಇವೆ. ಈ ಅಪಘಾತ ಆಕಸ್ಮಿಕ, ಇದರಲ್ಲಿ ಯಾವುದೇ ಷಢ್ಯಂತ್ರವಿಲ್ಲ ಎಂದಾಗಲಿ ಎಂಬುದೇ ಎಲ್ಲಾ ಭಾರತೀಯರ ಆಶಯ.

ರಾವತ್ ರವರು ದೇಶಭಕ್ತಿಯುಳ್ಳ ಮತ್ತು ಕರುವಾಕ್ಕಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿತ್ವದವರಾಗಿದ್ದರು. ಭಾರತದ ಮೂರು ಸೈನಿಕದಳಗಳ ನಡುವೆ ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿದ್ದರು. 2015 ರಲ್ಲಿ ಮಯನ್ಮಾರ್ ಗಡಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ನಕ್ಸಲರ ಹುಟ್ಟಡಗಿಸುವ ಕಾರ್ಯಾಚರಣೆಯ ಹಿಂದಿದ್ದದ್ದು ರಾವತ್. ಸರ್ಕಾರದಿಂದ ಸೈನ್ಯಕ್ಕೆ ಬೇಕಾದ ಸ್ವಾತಂತ್ರ್ಯ ಸಿಕ್ಕ ನಂತರ ಭಾರತದ ತಂಟೆಗೆ ಬಂದರೆ ಪಾಕೀಸ್ತಾನದ ಗಡಿಯೊಡಳಗೆ ನುಗ್ಗಿ ಹೊಡೆಯುತ್ತೇವೆಂಬ ಸ್ಪಷ್ಟ ಸಂದೇಶ ರಾವತ್ ಶತ್ರುಗಳಿಗೆ ಕೊಟ್ಟಿದ್ದರು. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಚೀನಾವನ್ನು ಹಿಮ್ಮೆಟ್ಟಿದ ನಂತರ "ಗಾಲ್ವಾನ್ ನಂತರ ಉತ್ತಮ ತರಬೇತಿಯ ಅಗತ್ಯವಿದೆ ಎಂದು ಚೀನಾ ಅರಿತುಕೊಂಡಿದೆ" ಎಂದು ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದರು. ನಮ್ಮ ಸೈನ್ಯವನ್ನು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಲಾಢ್ಯಗೊಳಿಸಿದ ಕೀರ್ತಿ ರಾವತ್ತರದ್ದೇ. ರಷ್ಯಾದ ಎಸ್-400 ಯುದ್ಧೋಪಕರಣ ಖರೀದಿಯಲ್ಲಿ ಅವರ ಪಾತ್ರವಿತ್ತು. ಶತ್ರು ದೇಶದ ಕ್ಷಿಪಣಿ ದಾಳಿಯನ್ನು ಸಮರ್ಥವಾಗಿ ಎದುರಿಸಲು ಈ ಉಪಕರಣದ ಅವಶ್ಯಕತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ವಾಯುಸೇನೆಗೆ ಅಧುನಿಕ ಯುದ್ಧ ವಿಮಾನದ ಅವಶ್ಯಕತೆ ಮನಗಂಡು ರಫೇಲ್ ಖರೀದಿ ವಿಚಾರದಲ್ಲಿ ತೊಡಗಿದ್ದರು. ದೋಖ್ಲಾಂ ವಿಚಾರದಲ್ಲಿ ಭಾರತ ನೇಪಾಳದ ಪರವಾಗಿ ದನಿ ಎತ್ತಿತ್ತು. ಎಲ್ಲಿ ಸೈನ್ಯ ಜಮಾವಣೆ ಮಾಡಿದರೆ ಸರಿ ಎಂಬುದರ ಅರಿವಿದ್ದದ್ದು ರಾವತ್ ರವರಿಗೆ. ಕಾಶ್ಮಿರದಲ್ಲಿ ಕಲ್ಲು ತೂರುತಿದ್ದವನೊಬ್ಬನನ್ನು ಸೇನಾ ವಾಹನದ ಮುಂಭಾಗಕ್ಕೆ ಕಟ್ಟಿ ಎಳತಂದದ್ದು ನೆನಪಿರಬೇಕಲ್ಲ. ಆ ಸೈನಿಕನ ದಿಟ್ಟತನವನ್ನು ಮೆಚ್ಚಿ ಬಹಿರಂಗವಾಗಿ ಕೊಂಡಾಡಿದ್ದು ಇದೇ ರಾವತ್. ಈ ಮೂಲಕ ಆಂತರಿಕ ಶತ್ರುಗಳು ಮತ್ತು ಎಡಚರರಿಗೆ ಎಚ್ಚರಿಕೆ ನೀಡಿದ್ದರು. ಭಾರತದ ಸೈನ್ಯಕ್ಕೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವಂತಹ ವಿಷಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ರಾವತ್ ಮುಂದಿದ್ದರು.

ಕೊರೋನಾ ನಂತರ ಮೊದಲ ಬಾರಿಗೆ ವಿದೇಶದ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿಕೊಟ್ಟದ್ದು ರಷ್ಯಾದ ಪುತಿನ್. ಕಳೆದ ವಾರ ನಡೆದ ಭೇಟಿಯಲ್ಲಿ ಭಾರತ ಮತ್ತು ರಷ್ಯಾ 28 ಒಪ್ಪಂದಗಳಿಗೆ ಸಹಿ ಹಾಕಿದವು. ಒಂಬತ್ತು ಸರ್ಕಾರಗಳ ನಡುವಿನ ಒಪ್ಪಂದಗಳಾದರೆ ಇತರ 19 ವಾಣಿಜ್ಯ ಒಪ್ಪಂದಗಳಾಗಿವೆ. 2021-2031 ನಡುವಿನ ಮಿಲಿಟರಿ-ತಾಂತ್ರಿಕ ಸಹಕಾರದ ಕಾರ್ಯಕ್ರಮ. ಇದರ ಅಡಿಯಲ್ಲಿ ಅಮೇಥಿಯ ಸ್ಥಾವರದಲ್ಲಿ ಏಕೆ-203 ರೈಫಲ್‌ಗಳನ್ನು ತಯಾರಿಸಲು ಒಪ್ಪಂದ, ಬಾಹ್ಯಾಕಾಶದ ಸಂಶೋಧನೆ ಮತ್ತು ಸಹಕಾರ, ವಿಜ್ಞಾನ,-ತಂತ್ರಜ್ಞಾನ-ನಾವೀನ್ಯತೆ ಕುರಿತು ಎರಡು ದೇಶಗಳ ನಡುವಿನ ಸಹಕಾರಕ್ಕಾಗಿ ಮಾರ್ಗಸೂಚಿ ಕುರಿತ ಒಪ್ಪಂದಗಳು ಎರಡು ಸರ್ಕಾರದ ನಡುವಿನ ಮಾಡಿಕೊಂಡ ಮೂರು ಪ್ರಮುಖ ಒಪ್ಪಂದಗಳು. ಈ ಭೇಟಿಯಿಂದಾಗಿ ಭಾರತ ಮತ್ತು ರಷ್ಯಾ ನಡುವೆ ಕ್ವಾಡ್ ಮತ್ತು ಅಮೇರಿಕಾ ಮತ್ತು ಭಾರತ ನಡುವಿನ ಸಂಬಂಧದ ಕುರಿತು ಇರಬಹುದಾಗಿದ್ದ ತಪ್ಪುಗ್ರಹಿಕೆಗಳು ತಕ್ಕ ಮಟ್ಟಿಗೆ ನಿವಾರಣೆಯಾಗಿರುವುದು ಚೀನಾಕ್ಕೆ ಅಸಹನಿಯವಾದ ವಿಚಾರ.

India Russia signs 28 investment deals

ರಾವತ್ ರವರ ನಿಧನದ ಕುರಿತು ಬ್ರಹ್ಮ ಚೆಲಾನಿಯವರು ಕೆಲವು ಅನುಮಾನಗಳನ್ನು ಟ್ವಿಟ್ಟರಲ್ಲಿ ವ್ಯಕ್ತ ಪಡಿಸಿದರು. ಅವರ ಮಾತನ್ನು ರಷ್ಯಾದ ಎಸ್-400 ಕ್ಷಿಪಣಿ ರವಾನೆ, ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದ ಮುಂದುವರೆಯುತ್ತಿರುವುದನ್ನು ಅಮೇರಿಕಾ ಬಲವಾಗಿ ವಿರೋಧಿಸುತ್ತಿದೆ, ಅದು ಕಾರಣ ರಾವತ್ ರವರ ಅಪಘಾತ ಪ್ರಕರಣದಲ್ಲಿ ಅಮೇರಿಕದ ಪಾತ್ರವನ್ನು ಶಂಕಿಸಲಾಗಿದೆ ಎಂದು ಚೀನಾದ ಮುಖವಾಣಿಯಾದ ಗ್ಲೊಬಲ್ ಟೈಮ್ಸ್ ಹೇಳಿತು. ಎಲ್ಲದರಲ್ಲೂ ಕೆಟ್ಟದ್ದು ಕಾಣುವ, ಇತರರ ನಡುವೆ ಹುಳಿಹಿಂಡುವ ಬುದ್ಧಿ ಚೀನಾದ್ದು.

Global Times spin over Gen Bipin Rawat's death

ರಾವತ್ ರವರ ಸಾವನ್ನು ಸಂಭ್ರಮಿಸುವ ಕೆಟ್ಟ ಹುಳಗಳು ಕೆಲವು ಭಾರತದಲ್ಲಿ ಇವೆ. ಅವರನ್ನು ಕಮ್ಯುನಿಷ್ಟರು ಮತ್ತು ದ್ರೋಹಿಗಳು ಎನ್ನಬಹುದು. ಅಂತಹವರಿಗೆ ಶಿಕ್ಷೆ ಕೊಡುವುದಾಗಿ ಸರ್ಕಾರಗಳು ಮುಂದಾಗಿರುವುದು ಸಮಾಧಾನಕರವಾದ ಸಂಗತಿ. ಕೆಲವು ಘಟನೆಗಳು ಹೀಗೆ. ಕೆಟ್ಟದ್ದನ್ನು ಗುರುತಿಸಲು ಸಹಾಯ ಮಾಡುತ್ತದೆ. ಏನೇ ಇರಲಿ, ರಾವತ್ ರವರನ್ನು ಕಳೆದುಕೊಂದದ್ದು ದೇಶಕ್ಕೆ ನಿಜಕ್ಕೂ ನಷ್ಟವಾಗಿದೆ. ಹುತಾತ್ಮರಾದ ರಾವತ್ ಮತ್ತು ಇತರರ ಆತ್ಮಕ್ಕೆ ಸದ್ಗತಿ ದೊರೆಯಲಿ. ಆಸ್ಪತ್ರೆಯಲ್ಲಿರುವ ಗ್ರೂಪ್ ಕಾಪ್ಟನ್ ವರುಣ್ ರವರು ಶೀಘ್ರ ಗುಣಮುಖರಾಗಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ.

Perverted Minds posting derogatory remarks

***********************************

References:

December 1, 2021

ಮತ್ತೊಂದು ಯುದ್ಧಕ್ಕೆ ಭಾರತ ಸಜ್ಜಾಗುತ್ತಿದೆಯಾ?

ಯುದ್ಧವೆಂಬುದು ರಣಾಂಗಣದಲ್ಲಿ ಶಸ್ತ್ರಾಸ್ತಗಳೊಂದಿಗೆ ಮಾಡುವ ಕಾಲ ಈಗ ದೂರವಾಗಿದೆ. ವಿಜ್ಞಾನ ಮುಂದುವರೆದಂತೆಲ್ಲಾ ಯುದ್ಧದ ಸ್ವರೂಪವೂ ಬದಲಾಗಿದೆ. ಸೈನಿಕರು ಮುಖಾಮುಖಿಯಾಗಿ ಪರಸ್ಪರ ಆಯುಧಗಳಿಂದ ಸೆಣಸಾಡುತ್ತಿದ್ದ ಕಾಲವೊಂದಿತ್ತು. ನಂತರ ವಿವಿಧ ಬಗೆಯ ತುಪಾಕಿಗಳು, ಬಂದೂಕುಗಳು ಉಪಯೋಗಕ್ಕೆ ಬಂದವು. ವಿಶ್ವಯುದ್ಧದ ಶತಮಾನದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ಡ್ರೋನ್ಗಳ ಬಳಕೆ ಶುರುವಾಯಿತು. ಪ್ರತ್ಯಕ್ಷ ಯುದ್ಧಕ್ಕೆ ಮುನ್ನ ಶತ್ರು ರಾಷ್ಟ್ರದ ಮಾನಸಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವುದು ಯುದ್ಧದ ಒಂದು ತಂತ್ರವೇ. ಇದು ಈ ಕಾಲದ ಯುದ್ಧ ತಂತ್ರ. ಶತ್ರುರಾಷ್ಟ್ರಗಳು ತಮ್ಮ ಸೈನಿಕರ ಮೂಲಕ ನಮ್ಮ ಗಡಿಯಲ್ಲೋ ಅಥವಾ ಗಡಿಯನ್ನು ದಾಟಿ ನಮ್ಮನ್ನು ಎದುರಿಸುವುದಿಲ್ಲ ಬದಲಾಗಿ, ನಮ್ಮ ದೇಶದ ಕೆಲವು ಜನರನ್ನು ನಮ್ಮ ವಿರುದ್ಧವೇ ಆಯುಧಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರ ಮಾತು ಕೇಳುವ ಈ ಗುಂಪು ನಮ್ಮ ನಡುವೆ ಅಶಾಂತಿ, ಅವಿಶ್ವಾಸ, ಅಂತಃಕಲಹಗಳನ್ನು ಸೃಷ್ಟಿಸಿ ದೇಶವನ್ನು ಬಲಹೀನ ಮಾಡುವುದು. ಭಾರತದಲ್ಲಿರುವ ಕಮ್ಯೂನಿಸ್ಟರು, ಮವೋವಾದಿಗಳು ಮಾಡುವ ಕೆಲಸವನ್ನು ಗಮನಿಸಿ. ಕೇಂದ್ರದಲ್ಲಿ ಸ್ಪಷ್ಟ ಬಹುಮತವಿರುವ ಸರ್ಕಾರವಿದ್ದರೂ ಕೃಷಿಕಾಯ್ದೆಯನ್ನು ಹಿಂಪಡೆಯಬೇಕಾಯಿತು. ಗಲ್ವಾನ್ ಕಣಿವೆಯಲ್ಲಿ ನಡೆದದ್ದು ಪ್ರತ್ಯಕ್ಷ ಕದನವಾದರೆ, ತನ್ನ ಮೇಲೆ ಸೈಬರ್ ಅಟ್ಯಾಕ್ ಆಗಿದೆ ಎಂದು ಹೇಳಿಕೊಂಡ ಚೀನಾ ಮಾತು ಸತ್ಯವೇ ಆದರೆ ಅದು ಪರೋಕ್ಷವಾಗಿ ನಡೆಯುವ ಕದನ.

ಕಳೆದ ವರ್ಷ ಸಂಸತ್ತಿನಲ್ಲಿ ಕೃಷಿಕಾಯ್ದೆ ಬಿಲ್ ಪಾಸಾಯಿತು. ಅಧಿವೇಶನದ ಮುನ್ನ ಕೋವಿಡ್ ಪರಿಹಾರಾರ್ಥ 20 ಲಕ್ಷ ಕೋಟಿ ಘೋಷಿಸಿದಾಗಲೇ ಕೃಷಿ ಕಾಯ್ದೆಯ ಬಗ್ಗೆ ಪ್ರಧಾನಿ ಹೇಳಿದ್ದರು. ನೆನಪಿಡಿ, ಕಿಸಾನ್ ಯೂನಿಯನ್ ನಾಯಕ ರಾಕೇಶ್ ತಿಕಾಯತ್ ಈ ಕಾಯ್ದೆಯನ್ನು ಕೂಡ ಸ್ವಾಗತಿಸಿದ್ದ. ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ಶುರುವಾದ ನಂತರ ಮಾತು ಕಥೆಗಾಗಲಿ, ಕಾಯ್ದೆಯಲ್ಲಿನ ತಿದ್ದುಪಡಿಗಾಗಿ ಸುಪ್ರೀಂ ಕೋರ್ಟ್ ಸಮಿತಿ ರಚಿಸುವ ಪ್ರಸ್ತಾವವನ್ನು ತಿರಸ್ಕರಿಸಿದರು. ಜನವರಿ 26 ರಂದು ಇಡೀ ದೇಶವೇ ತಲೆತಗ್ಗಿಸುವಂತಹ ಪ್ರತಿಭಟನೆ ಮಾಡಿದರು. ಇದಕ್ಕೆ ಕಾಂಗ್ರೇಸ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂಲ್ಕಿಟ್ ಮೂಲಕ ಬೆಂಬಲ ವ್ಯಕ್ತವಾಯಿತು. ಕಾಯ್ದೆಯ ಬಿಲ್ ಪಾಸಾದ ಒಂದು ವರ್ಷವಾದರೂ ಪ್ರತಿಭಟನೆ ನಿಲ್ಲಲಿಲ್ಲ. ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಮುನ್ನುಡಿಯಂತಿದ್ದ ಈ ಪ್ರತಿಭಟನೆಯನ್ನು ನಿಲ್ಲಿಸಲು ಪ್ರಧಾನಿ ಮೋದಿ ಈ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದರು. ಅವರ ಭಾಷಣದಲ್ಲಿ 'ರೈತರಿಗಾಗಿ ಕಾಯ್ದೆಯನ್ನು ತಂದೆ. ದೇಶಕ್ಕಾಗಿ ಈಗ ಹಿಂಪಡೆಯುತ್ತಿದ್ದೇನೆ. ದೇಶದ ಜನರು ನನ್ನನ್ನು ಕ್ಷಮಿಸಬೇಕು' ಎಂದರು. ದೇಶಕ್ಕಾಗಿ ಕಾಯ್ದೆಯನ್ನು ಹಿಂಪಡೆಯುತ್ತಿದ್ದೇನೆ ಎಂಬುದಷ್ಟನ್ನೇ ಮುಂದಿಟ್ಟು ಮೋದಿಯನ್ನು ವಿರೋಧ ಮಾಡಲು ಕಮ್ಯೂನಿಸ್ಟರು ಮರೆಯಲಿಲ್ಲ.

ನಮ್ಮ ನಡುವಿನ ರಾಜಕೀಯದ ನಾಯಕರು ಸಹ ಈ ರೀತಿಯ ಸ್ಥಿತಿಗೆ ಕಾರಣವಾಗಿದ್ದಾರೆ. ಕೃಷಿಕಾಯ್ದೆ ಜಾರಿಗೆ ತಂದ ದಿನದಿಂದ ಈವರೆಗೂ ಭಾಜಾಪದ ಯಾವ ನಾಯಕರೂ ಜನರಿಗೆ ಮತ್ತು ರೈತರಿಗೆ ಈ ಕಾಯ್ದೆಯ ಕುರಿತು ತಿಳಿಸಿಕೊಡಲಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಕಾಯ್ದೆಯ ಬಗೆಗೆ ಕರಪತ್ರಗಳಾಗಲಿ, ಪುಸ್ತಕಗಳಾಗಲಿ ಹೊರತರಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹೊರಬರಲಿಲ್ಲ. ಟೀವಿ ಡಿಬೇಟ್ಗಳನ್ನು ಗಮನಿಸಿದರೆ ಸ್ಥಳಿಯ ನಾಯಕರಿಗೆ ಕಾಯ್ದೆ ಬಗೆಗಿನ ಸ್ಪಷ್ಟತೆ ಇದ್ದದ್ದೇ ಅನುಮಾನ. ಇದಕ್ಕೆ ತದ್ವಿರುದ್ಧ ವಿರೋಧ ಪಕ್ಷ ಮತ್ತು ಕಮ್ಯೂನಿಸ್ಟರ ನಡೆ. ಮೊದಲಿಂದಲೂ ಕಾಯ್ದೆ ಅರ್ಥವಾಗದಿದ್ದರೂ ಅದರ ವಿರುದ್ಧ ಮಾತುಗಳು, ಲೇಖನಗಳು, ಜಾಲತಾಣಗಳಲ್ಲಿನ ಪೋಸ್ಟ್ಗಳು ಸದಾ ಇರುವಂತೆ ನೋಡಿಕೊಂಡರು. ಕೇಂದ್ರ ಸರ್ಕಾರ ನವೆಂಬರ್ 29 ರಂದು ಅಧಿಕೃತವಾಗಿ ಕಾಯ್ದೆಯನ್ನು ಹಿಂಪಡೆಯಿತು. ಇಷ್ಟಾದರೂ ಖಾಲಿಸ್ತಾನಿ ಪ್ರೇರೇಪಿತ ಸೋಕಾಲ್ಡ್ ನಾಯಕರು ಪ್ರತಿಭಟನೆ ಮುಂದುವರೆಸುವ ಸೂಚನೆ ಕೊಟ್ಟಿದ್ದಾರೆ. ಡಿಬೇಟ್ ಮಾಡದೇ ಕಾಯ್ದೆಯನ್ನು ಹಿಂಪಡೆದಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಏನಾದರೂ ಸರಿ ಮೋದಿಯನ್ನು ವಿರೋಧ ಮಾಡಬೇಕು, ಅರಾಜಕತೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಷ್ಟೇ ಇವರ ಉದ್ದೇಶ.

ಗಡಿಭಾಗದಲ್ಲಿ ನಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದರೂ ಭಾರತದ ಪತ್ರಿಕೆಗಳಲ್ಲಿ ತಮ್ಮ ಪರವಾಗಿನ ಸಕಾರಾತ್ಮಕ ಸುದ್ಧಿಯನ್ನು ಪ್ರಕಟ ಮಾಡಿಸುವಲ್ಲಿ ಚೀನಾ ಯಶಸ್ವಿಯಾಗಿದೆ. ಭಾರತದ ಪತ್ರಿಕೋದ್ಯಮದಲ್ಲಿ ಮತ್ತು ವಾರ್ತಾವಾಹಿನಿಗಳ ಮೇಲೆ ನೀತಿಸಂಹಿತೆ ಮತ್ತು ಸ್ವಯಂ-ನಿಯಂತ್ರಣ ಕಾರ್ಯವಿಧಾನಗಳ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತಿದೆ. 'ದಿ ಹಿಂದೂ' ಪತ್ರಿಕೆ ಕಳೆದ ವರ್ಷ ಪುಟಗಟ್ಟಲೆ ಚೀನಾ ಪರವಾದ ಜಾಹಿರಾತನ್ನು ಪ್ರಕಟಿಸಿತ್ತು. ನವೆಂಬರ್ 26 ರಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್‌' ನಾಲ್ಕು ಪುಟಗಳಗಳಲ್ಲಿ ಚೀನಾದ ಮಾಧ್ಯಮ ಸಂಬಂಧಿತ ವಿಚಾರವನ್ನು ಪ್ರಕಟಿಸಿದೆ.

chinese ad in 'The Indian Express'

ಚಾರ್‌ಧಾಮ್‌ ರಾಷ್ಟ್ರೀಯ ಹೆದ್ದಾರಿ ಯೋಜನೆಯು ಉತ್ತರಾಖ೦ಡ್‌ ರಾಜ್ಯದ ನಾಲ್ಕು ಪವಿತ್ರ ಸ್ಥಳಗಳಾದ ಬದರಿನಾಥ, ಕೇದಾರನಾಥ, ಗ೦ಗೋತ್ರಿ ಮತ್ತು ಯಮುನೋತ್ರಿಯನ್ನು ಸ೦ಪರ್ಕಿಸುವ ಎಕ್ಸ್‌ಪ್ರೆಸ್‌ ರಾಷ್ಟ್ರೀಯ ಹೆದ್ದಾರಿಯಾಗಿದೆ. ಚೀನಾದ ಗಡಿಯ ತನಕ ಅಗಲವಾದ ರಸ್ತೆಯ ಅಗತ್ಯವಿದೆ ಎ೦ದು ಸರ್ಕಾರ ಹೇಳುತ್ತದೆ ಮತ್ತದು ವಾಸ್ತವ ಕೂಡ. ಆದರೆ, ಈ ಯೋಜನೆಯನ್ನು ವಿರೋಧಿಸಿ ದಿ ಹಿ೦ದೂ, ದಿ ವೈರ್‌, ಎನ್‌ಡಿಟೀವಿ ಮು೦ತಾದ ಎಡಚರ ಪತ್ರಿಕೆಗಳು ಲೇಖನಗಳನ್ನು ಕಳೆದ ವರ್ಷದಿ೦ದ ಬರೆಯುತ್ತಲೇ ಇದೆ. ಹಣಕ್ಕಾಗಿ ಚೀನಾ ಪರವಾದ ಜಾಹಿರಾತನ್ನು ಪ್ರಕಟಿಸುವ ಪತ್ರಿಕೆಗಳು ಭಾರತದ ಪರವಾದ ಯೋಜನೆಯ ವಿರುದ್ಧ ಬರೆಯುವುದರಲ್ಲಿ ಅಚ್ಚರಿ ಇಲ್ಲ. ಡೀಮಾನಿಟೈಸೇಷನ್ ನಂತರ ನಕ್ಸಲರ ಆಟಾಟೋಪ ಅಡಗಿತ್ತು ಆದರೆ, ಈಗ ಮತ್ತೆ ಅದು ಶುರುವಾದಂತಿದೆ. ನವೆಂಬರಲ್ಲಿ ನಕ್ಸಲರು ಮನೆಯೊಂದನ್ನು ಸ್ಫೋಟಿಸಿ ನಾಲ್ಕು ಜನರನ್ನು ಕೊಂದಿದ್ದಾರೆ. ಇದೇ ವರ್ಷ ಏಪ್ರಿಲ್ ಅಲ್ಲಿ ಛತ್ತೀಸ್ಗಢದಲ್ಲಿ 22 ಭದ್ರತಾ ಸಿಬ್ಬಂದಿಗಳನ್ನು ನಕ್ಸಲರನ್ನು ಕೊಂದರು. ಇದಕ್ಕೆ ಪ್ರತಿದಾಳಿಯಾಗಿ ಗಡ್ಚಿರೋಲಿಯಲ್ಲಿ ಪೋಲೀಸರು ಎನ್‌ಕೌಂಟರ್‌ನಲ್ಲಿ 26 ನಕ್ಸಲರನ್ನು ಕೊಂದು ಬಿಸಾಡಿದ್ದಾರೆ.

Indian newspapers writing against The Char Dham Road Project

ಇದೆಲ್ಲಾ ಆಂತರಿಕ ವಿಚಾರವಾದರೆ ಜಾಗತೀಕ ಮಟ್ಟದಲ್ಲಿ ಚೀನಾ ತನ್ನದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಂದೆಡೆ ತೈವಾನ್ ಮತ್ತೊಂದು ಕಡೆ ಭಾರತ ವಿರುದ್ಧ ಯುದ್ಧದ ತಯಾರಿಯಲ್ಲಿದೆ. ಮಧ್ಯ ಮತ್ತು ಪಶ್ಚಿಮದ ಟಿಬೆಟ್ ಭಾಗದಲ್ಲಿ 10 ಏರ್ಸ್ಟ್ರಿಪ್ಗಳನ್ನು ನಿರ್ಮಿಸಿದೆ ಮತ್ತು 20 ಸಾವಿರ ಟಿಬೆಟ್ಟಿಯನ್ನರಿಗೆ ಸೈನಿಕ ತರಬೇತಿ ಕೊಟ್ಟು ಸೈನ್ಯಕ್ಕೆ ಸೇರಿಸಿಕೊಂಡಿದೆ. ಪಾಕೀಸ್ತಾನಕ್ಕೆ ಸಾಲ ಕೊಟ್ಟಿದ್ದರೂ ಯುದ್ಧನೌಕೆಯನ್ನು ಕೊಟ್ಟು ಅವರ ಮೂಲಕ ಭಾರತವನ್ನು ಕಟ್ಟಿಹಾಕುವ ಹಳೆಯ ಚಾಳಿಯನ್ನು ಮುಂದುವರೆಸುತ್ತಿದೆ. ಒಂದೆಡೆ ಚೀನಾ ಮತ್ತೊಂದು ಕಡೆ ಪಾಕೀಸ್ತಾನ ದೇಶಕ್ಕೆ ಶತ್ರುವಾಗಿ ನಿಂತಿದೆ. ಮಯನ್ಮಾರ್ ಮೂಲಕ ನಕ್ಸಲರು ನುಸುಳುತ್ತಿದ್ದಾರೆ. ಇದರ ಜೊತೆಗೆ ಅಫ್ಘಾನಿಸ್ತಾನವನ್ನು ಮರೆಯುವಂತಿಲ್ಲ. ತಾಲಿಬಾನ್ ಭಯೋತ್ಪಾದಕ ಸಂಘಟನೆ ಎಂಬುದಂತು ಸತ್ಯ. ಈಗ ಅಲ್ಲಿ ಶುರುವಾಗಿರುವುದು ಮಾದಕವಸ್ತುವಿನ ಭಯೋತ್ಪಾದನೆ. ಅಫ್ಘಾನಿಸ್ತಾನ ತನ್ನ ಮೆಥಾಂಫೆಟಮೈನ್ ಉತ್ಪಾದನೆಯನ್ನು ತೀವ್ರವಾಗಿ ಹೆಚ್ಚುಮಾಡಿದೆ. ವಾಸ್ತವವಾಗಿ ಮೆಥ್ ಹೆರಾಯಿನ್ ಗಿಂತ ಹೆಚ್ಚಿನ ಲಾಭ ನೀಡುತ್ತದೆ. ತಾಲಿಬಾನ್ ಮಾದಕವಸ್ತುಗಳಿಂದ ಬರುವಂತಹ ಆದಾಯವನ್ನು ಸಾಧ್ಯವಾದಷ್ಟು ವೃದ್ಧಿಸಿಕೊಳ್ಳಲು ಆಶಿಸುತ್ತಿದೆ. ಅಫ್ಘಾನಿಸ್ತಾನದ ಸ್ವಾಧೀನದ ನಂತರ, ಅಫೀಮಿನ ಬೆಲೆ 3 ಪಟ್ಟು ಹೆಚ್ಚಿದೆ. ಅಫೀಮು ಕೃಷಿಯಡಿಯಲ್ಲಿ ಜಾಗತಿಕ ವಿಸ್ತೀರ್ಣದಲ್ಲಿ ಅಫ್ಘಾನಿಸ್ತಾನವು 85% ರಷ್ಟು ಭಾಗವನ್ನು ಹೊಂದಿದೆ. ತಾಲಿಬಾನ್ ವಿಶ್ವದ ಅತಿದೊಡ್ಡ ಮಾದಕವಸ್ತುವಿನ ಒಕ್ಕೂಟ ಆಗಿದೆ! ಈ ಮಾದಕ ವಸ್ತುಗಳನ್ನು ಸಾಗಿಸಲು ತಾಲಿಬಾನ್ ಅನೇಕ ಕಳ್ಳಸಾಗಣೆ ಮಾರ್ಗಗಳನ್ನು ಕಂಡುಕೊಂಡಿದೆ. ತಾಲಿಬಾನ್ ಅಲ್ಲದೆ ಬೋಕೋ ಹರಾಮ್, ಅಲ್-ಶಬಾಬ್ ಮತ್ತು ಅಲ್-ಖೈದಾ ಕೂಡ ಈ ಕಳ್ಳಸಾಗಣಿಕೆಯಲ್ಲಿ ತೊಡಗಿಸಿಕೊಂಡಿದೆ. ಪಶ್ಚಿಮ ಯೂರೋಪ್, ರಷ್ಯಾ ಮತ್ತು ಭಾರತಕ್ಕೆ ಮಾದಕವಸ್ತುವನ್ನು ತಲುಪಿಸಲು ತಯಾರಿ ಮಾಡಿಕೊಂಡಿದೆ, ತನ್ಮೂಲಕ ಭಾರತವನ್ನು ಆಂತರಿಕವಾಗಿ ಬಲಹೀನ ಮಾಡುವ ತಂತ್ರ ಇದಾಗಿದೆ.

ದೇಶದ ಹೊರಗೆ ಮತ್ತು ಒಳಗೆ ಇಷ್ಟೆಲ್ಲಾ ನಡೆಯುತ್ತಿದ್ದು, ಭಾರತ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳುತ್ತಿದೆ. ಕಳೆದ ಎರಡು ತಿಂಗಳಲ್ಲಿ ರಕ್ಷಣಾ ಇಲಾಖೆಯಲ್ಲಿ ನಡೆದಿರುವ ಬೆಳವಣಿಗೆ ಗಮನಾರ್ಹವಾದದ್ದು. ಕಳೆದ ವಾರ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರಿಗೆ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಉಪಕರಣಗಳನ್ನು ಹಸ್ತಾಂತರಿಸಿದರು. ಹೆ‍ಚ್ಏಎಲ್ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಲೈಟ್ ಕಾಂಬಾಟ್ ಹೆಲಿಕಾಪ್ಟರ್ ಅನ್ನು ವಾಯುಪಡೆಗೆ, ಭಾರತೀಯ ಸ್ಟಾರ್ಟಪ್ಗಳು ವಿನ್ಯಾಸಗೊಳಿಸಿದ ಡ್ರೋನ್ಗಳನ್ನು ಆರ್ಮಿ ಮುಖ್ಯಸ್ಥರಿಗೆ, ಡಿ.ಅರ್.ಡಿ.ಓ ವಿನ್ಯಾಸ ಮಾಡಿದ, ಬಿಇಎಲ್ ನಿರ್ಮಿಸಿದ ಆತ್ಯಾಧುನಿಕ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅನ್ನು ನೌಕಾಪಡೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದ್ದಾರೆ. ರಕ್ಷಣಾ ವಿಭಾಗದಲ್ಲಿ ಭಾರತ ಆತ್ಮನಿರ್ಭರವಾಗುವುದು ಆರ್ಥಿಕ ಸದೃಢತೆಯ ಸಂಕೇತ. ಕಳೆದ ತಿಂಗಳು ಅಗ್ನಿ-5 ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಚೀನಾಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಭಾರತದ ರಕ್ಷಣೆಯ ದೃಷ್ಟಿಯಿಂದ ಕೃಷಿಕಾಯ್ದೆ ಹಿಂಪಡೆದಿದ್ದಾರೆ. ಅಜಿತ್ ದೋವಲ್ 'ಹೊಸಬಗೆಯ ಯುದ್ಧನೀತಿಯನ್ನು ಗಮನಿಸಿ ಭಾರತವನ್ನು ರಕ್ಷಣೆ ಮಾಡುವುದು ನಿಮ್ಮ ಹೊಣೆ' ಎಂದು ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸುತ್ತಾ ಹೇಳಿದ್ದರು. ಸೈನಿಕರಷ್ಟೇ ಅಲ್ಲ, ವೈಚಾರಿಕವಾಗಿ ನಾವು ಸಹ ದೇಶಕ್ಕಾಗಿ ಯುದ್ಧ ಮಾಡಬೇಕಾಗಿದೆ.

***********************************

References: