March 18, 2022

ಸ್ವರ್ಗದಲ್ಲಿ ನಡೆದ ನರಮೇಧವನ್ನು ತೆರೆದಿಟ್ಟ ಚಿತ್ರ!

ದೇಶದೆಲ್ಲೆಡೆ ಚಲನಚಿತ್ರವೊಂದು ದೊಡ್ಡ ಸಂಚಲನ ಉಂಟು ಮಾಡಿದೆ. ಜನತೆ ಇದನ್ನು ಚಲನಚಿತ್ರ ಎಂದು ನೋಡುವ ಬದಲು ನಮ್ಮ ನಡುವೆ ನಡೆದ ಘನಘೋರ ಘಟನೆಯ ಸಾಕ್ಷ್ಯಚಿತ್ರ ಎಂದೇ ವೀಕ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಚಲನಚಿತ್ರವನ್ನು ಮನೋರಂಜನೆಗಾಗಿ ನಾವು ನೋಡುತ್ತೇವೆ ಆದರೆ, ಈ ಚಿತ್ರವನ್ನು ಹಾಗೆ ನೋಡಲು ನಿಜಕ್ಕೂ ಸಾಧ್ಯವಿಲ್ಲ. ಸತ್ಯ ಯಾವತ್ತಿದ್ದರೂ ಬೆಂಕಿ ಎನ್ನುವುದಕ್ಕೆ ಈ ಚಿತ್ರ ಖಂಡಿತವಾಗಿಯೂ ಸ್ಪಷ್ಟ ನಿದರ್ಶನ. ಕಶ್ಮೀರದಲ್ಲಿ ಮೂರು ದಶಕಗಳ ಹಿಂದೆ ಘಟಿಸಿದ ಧರ್ಮಾಧಾರಿತ ಹತ್ಯಾಕಾಂಡ ಮತ್ತು ಪಂಡಿತರ ಮೇಲಿನ ದೌರ್ಜನ್ಯ ಇದುವರೆಗೆ ಜಗತ್ತಿಗೆ ಬಿಡಿ ಭಾರತೀಯರಿಗೆ ಪೂರ ತಿಳಿಯದಿರುವುದು ನಿಜಕ್ಕೂ ವಿಷಾದನೀಯ. ಈ ಕಠೋರ ಸತ್ಯವನ್ನು ಪರಿಣಾಮಕಾರಿ ತೆರೆದಿಟ್ಟುರುವ ಚಿತ್ರವೇ 'ದಿ ಕಶ್ಮೀರ್ ಫೈಲ್ಸ್'.


ಮೂರು ಗಂಟೆಯ ಚಿತ್ರದಲ್ಲಿ ತೋರಿಸಿರುವುದು ಒಂದು ಕುಟುಂಬದ ಕಥೆ, ವ್ಯಥೆ ಮತ್ತು ತನ್ಮೂಲಕ ಇಡೀ ಘಟನೆ. ನಡೆದ ಎಲ್ಲಾ ಘಟನೆಯನ್ನು ಚಿತ್ರಿಸಿದರೆ ಮೂರು ತಿಂಗಳ ವೆಬ್ ಸೀರೀಸ್ ಆಗಬಹುದೇನೊ! ಇಷ್ಟೇಲ್ಲಾ ಘಟಿಸಿದರೂ ಭಾರತೀಯರಾದ ನಮಗೆ ಕಶ್ಮೀರದ ವಿಚಾರ ತಿಳಿದಿರುವುದು ತೀರ ಅಲ್ಪ! ಯಾಕೆ ಹೀಗೆ ಅನ್ನುವುದು ಮುಖ್ಯ ಪ್ರಶ್ನೆ. ಡಿಸೆಂಬರ್ 1989 ಹೊತ್ತಿಗೆ ಕಾಂಗ್ರೇಸಿನ ರಾಜೀವ್ ಗಾಂಧಿ ಅಧಿಕಾರ ಕಳೆದುಕೊಳ್ಳುತ್ತಾರೆ. ದೇಶದಲ್ಲಿ ಎರಡನೇ ಬಾರಿಗೆ ಕಾಂಗ್ರೇಸೇತರ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಇದಾದ ಒಂದೇ ತಿಂಗಳಲ್ಲಿ ಕಶ್ಮೀರದಲ್ಲಿ 'ಆಜಾದಿ' ಎಂಬ ಜಿಹಾದಿಗಳ ಕೂಗು ಎದ್ದು, ಕಾಫೀರ್ಗಳ ಅರ್ಥಾತ್ ಪಂಡಿತರ ನರಮೇಧವಾಯ್ತು ಎಂಬುದು ಗಮನಿಸಬೆಕಾದ ಅಂಶ.  

ಕಶ್ಮೀರದಲ್ಲೇ ಇದ್ದುಕೊಂಡು ತಮ್ಮ ಅಕ್ಕಪಕ್ಕದವರನ್ನೇ ಜಿಹಾದಿನ ಅಮಲಿನಲ್ಲಿ ಕೊಂದು ಕ್ರೌರ್ಯದ ಮೂರ್ತಿಯಂತೆ ಇದ್ದದ್ದು ಜಮ್ಮು ಅಂಡ್ ಕಶ್ಮೀರ್ ಲಿಬರೇಷನ್ ಫ್ರಂಟ್ ಮತ್ತದರ ನಾಯಕ ಯಾಸಿನ್ ಮಲಿಕ್. ಇಂತಹ ರಾಕ್ಷಸನನ್ನು ತಮ್ಮ ಕಛೇರಿಗೆ ಕರೆಸಿಕೊಂಡು ದೊಡ್ದ ನಗುವಿನೊಂದಿಗೆ ಮಾತಾಡಿದ್ದು ಇದೇ ಕಾಂಗ್ರೇಸಿನ ಮನಮೋಹನ್ ಸಿಂಗ್! ನಿಜ ಹೇಳಿ, ಪ್ರಧಾನಿಯಾಗಿ ಮನಮೋಹನ್ ಸಿಂಗರು ನಕ್ಕಿದ್ದು ಯಾರಾದರೂ ನೋಡಿದ್ದು ಉಂಟಾ? ಬಹುಶಃ ಹಿಂದೂಗಳ ಹತ್ಯೆ ಮಾಡಿದವರು ಎದುರಿಗಿದ್ದರೆ ಮಾತ್ರ ಆತ ನಗುವುದು ಎಂದು ತೋರುತ್ತದೆ! ಈಗೇನಾದರೂ ಕಾಂಗ್ರೇಸ್ ಸರ್ಕಾರ ಇದ್ದದ್ದೇ ಆದರೆ ಬಹುಶಃ ಯಾಸಿನ್ ಮಲಿಕ್ ಮತ್ತು ಬಿಟ್ಟ ಕರಾಟೆಗೆ ಪದ್ಮಭೂಷಣವೋ ಅಥವಾ ಭಾರತ ರತ್ನವೋ ಕೊಡುತ್ತಿದ್ದರು ಎಂದರೆ ಅದು ಅತಿಶಯೋಕ್ತಿ ಅಲ್ಲ. ಅಂದಿನ ಪ್ರಧಾನಿಯ ಕಥೆ ಹೀಗಿದ್ದಾಗ ಇನ್ನೂ ಮಾಧ್ಯಮದವರು ಏನು ಮಾಡಿರಬಹುದು ಊಹಿಸಿ. 2008 ರಲ್ಲಿ ಇಂಡಿಯಾ ಟುಡೆ ಸಂಸ್ಥೆ ತನ್ನ ಸಮಾವೇಶಕ್ಕೆ ಮಲಿಕ್ ನನ್ನು ಅಹ್ವಾನಿಸಿದ್ದಲ್ಲದೇ ಅವನನ್ನು 'ಯೂತ್ ಐಕಾನ್' ಎಂದು ಪ್ರಚುರಪಡಿಸಿತು. ಭಾರತ ವಿರೋಧಿ ಪ್ರಚಾರವನ್ನು ಹೆಚ್ಚಿಸುವ ಭಯೋತ್ಪಾದಕನಿಗೆ ಇಂಡಿಯಾ ಟುಡೆ ತನ್ನ ವೇದಿಕೆಯನ್ನು ನೀಡಿತು. ಪ್ರತ್ಯೇಕತಾವಾದದ ಕಾರ್ಯಸೂಚಿಯ ಯಾಸಿನ್ ಮಲಿಕ್ ನ 12 ನಿಮಿಷಗಳ ಭಾಷಣವನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಿತ್ತು!

Manmohan Singh with Yasin Malik

ಇನ್ನು ಇತಿಹಾಸಕಾರರು ಮತ್ತು ನಮ್ಮ ಪಠ್ಯಪುಸ್ತಕಗಳನ್ನು ಕೇಳುವ ಹಾಗೆ ಇಲ್ಲ. ಈ ಕಮ್ಯುಸಿಸ್ಟ್ ಪ್ರೇರಿತ ಪಠ್ಯಪುಸ್ತಕದಲ್ಲಿ ಮೊಘಲರ ವೈಭವೀಕರಣ, ಅಕ್ಬರ್ ಮಹಾತ್ಮ, ತೆರೆಸಾ ಕರುಣಾಮಯಿ, ಕಾಂಗ್ರೇಸ್ ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಕಾರಣ ಎಂಬಂತಹ ತಿರುಚಿದ ಇತಿಹಾಸವನ್ನು ಕಾಣಬಹುದೆ ಹೊರತು ನೈಜವಾದ, ಪರಿಪೂರ್ಣವಾದ ಇತಿಹಾಸದ ದಾಖಲೆ ಇಲ್ಲವೇ ಇಲ್ಲ. ಐ.ಸಿ.ಎಸ್.ಸಿಯ ಸಮಾಜ ವಿಜ್ಞಾನದ ಪಠ್ಯದಲ್ಲಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ತಿಳಿಸಿದ್ದಾರೆ ಹೊರತು ಅದರ ಹಿಂದಿನ ಕಾರಣವನ್ನು ಮಾತ್ರ ತಿಳಿಸಿಲ್ಲ. 'ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ...' ಅಂತ ಶ್ಲೋಕವನ್ನು ಶಾಲೆಯಲ್ಲಿ ಸಂಸ್ಕೃತ ಓದುವ ವಿದ್ಯಾರ್ಥಿಗಳಿಗೆ ಪರೀಕ್ಷೆ ದೃಷ್ಟಿಯಿಂದ ಹೇಳಿಕೊಟ್ಟರೆ ಹೊರತು ಕಶ್ಮೀರದ ಪಂಡಿತರನ್ನು, ಅಲ್ಲಿನ ಲಿಪಿಯನ್ನು ಮತ್ತು ಶಾರದ ಮಂದಿರವನ್ನು ಯಾರು ಮತ್ತು ಯಾತಕ್ಕಾಗಿ ನಾಶ ಮಾಡಿದರು ಎಂಬುದರ ಬಗ್ಗೆ ಒಂದೇ ಒಂದು ಅಕ್ಷರವನ್ನೂ ತಿಳಿಸಿಲ್ಲ. 'ಭಾರತ್ ತೇರೆ ತುಕ್ಡೆ ಹೋಂಗೆ...' ಎನ್ನುವವರ ಪರ ನಿಲ್ಲುವ ಬುದ್ಧಿಜೀವಿಗಳು ಮತ್ತು ಪ್ರೊಫೆಸರ್ಗಳು ಇರಬೇಕಾದರೆ ನೈಜ ಇತಿಹಾಸದ ಪರಿಚಯ ಹೇಗೆ ಸಾಧ್ಯ?

ಈ ಚಿತ್ರ ನೈಜತೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ. ತನ್ನ ಸುತ್ತ ನಡೆಯುತ್ತಿರುವ ಸತ್ಯ ತಿಳಿದಿದ್ದರೂ ಸುಳ್ಳು ಹೇಳುವ ಪತ್ರಕರ್ತ, ತನ್ನ ಸುತ್ತಲಿನ ಜನರನ್ನು ಕಾಪಾಡಬೇಕು ಎಂಬ ಉದ್ದೇಶವಿದ್ದರೂ ಅಸಹಾಯಕನಾಗಿರುವ ಅಧಿಕಾರಿ, ಎದುರಿಗೆ ಜೀವ ಹೋಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಡಾಕ್ಟರ್, ತನ್ನ ಕೈಯ್ಯಲ್ಲಿ ಬಂದೂಕಿದ್ದರೂ ಕಣ್ಣೇದುರಿಗೆ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯವನ್ನು ತಡೆಯಲಾಗದ ಪೋಲೀಸ್ ಅಧಿಕಾರಿ, ನಮ್ಮೆದೇ ದೇಶದ ಪಂಡಿತರನ್ನು ಹೊರದೇಶದಿಂದ ವಲಸೆ ಬಂದಿರುವವರನ್ನು ನಡೆಸಿಕೊಳ್ಳುವ ರೀತಿ. ಇವರೆಲ್ಲರ ಅಸಹಾಯಕತೆಯ ಮತ್ತು ಜಿಹಾದಿ ಮನಸ್ಥಿತಿಯ ಭಯೋತ್ಪಾದನೆಯನ್ನು ಈ ಚಿತ್ರ ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ಯುವಜನತೆಯ ಬ್ರೈನ್ ವಾಶ್ ಮಾಡಲೆಂದೇ ಹುಟ್ಟಿರುವ ಲಿಬರಲ್ ಮತ್ತು ವಿಶ್ವವಿದ್ಯಾಲಯದ ಪ್ರೊಫೆಸ್ಸರ್ ಪಾತ್ರ ಜೆ.ಎನ್.ಯೂ ನ ನಿವೇದಿತಾ ಮೇನನ್ ಅನ್ನು ನೆನೆಪಿಸುತ್ತದೆ. ಪಂಡಿತರನ್ನು ಕೊಂದು ಮರಕ್ಕೆ ಮೊಳೆ ಹೊಡೆದು ನೇತು ಹಾಕಿರುವ, ಕೊನೆಗೆ ಶಾರದಾಳನ್ನು ಮರಕೊಯ್ಯುವ ಯಂತ್ರದಲ್ಲಿ ಜೀವಂತ ಸೀಳುವ ದೃಶ್ಯಗಳು 1990ರಲ್ಲಿ ಪಂಡಿತರು ತಿಲಕ ಇಟ್ಟ ಜಾಗದಲ್ಲಿ ಮೊಳೆ ಹೊಡೆದು ಕೊಂದ, ಗಿರಿಜಾ ಟಿಕ್ಕೂರನ್ನು ಅತ್ಯಾಚಾರ ಮಾಡಿ ಕೊಂದ ಜಿಹಾದಿಗಳ ಕ್ರೌರ್ಯತೆಯನ್ನು ನೆನಪಿಸುತ್ತದೆ. ಪುಶ್ಕರ್ ಪಾತ್ರದಲ್ಲಿ ನಟಿಸಿರುವ ಅನುಮಪಂ ಖೇರ್ ರವರ ನಟನೆಯನ್ನು ವರ್ಣಿಸುವುದು ಕಷ್ಟವೇ ಸರಿ. ಅವರ ಪಾತ್ರ 'ಕಾಶ್ಮೀರಿ ಪಂಡಿತರ ಪಿತಾಮಹ' ಅಮರ್ನಾಥ್ ವೈಷ್ಣವಿ ನೆನಪಾಗುತ್ತಾರೆ.

ಕಶ್ಮೀರದಲ್ಲಿ ನಡೆದ ಈ ಹತ್ಯಾಕಾಂಡದ ವಿಚಾರ ಹೊರಜಗತ್ತಿಗೆ ತಿಳಿದಿಲ್ಲವೆಂದೇನಿಲ್ಲ ಆದರೆ, ಮುಖ್ಯವಾಹಿನಿಗೆ ಬಂದಿಲ್ಲ ಅಷ್ಟೆ! ಸಮಾನ್ಯವಾಗಿ ಓದಿರುವ ವಿಚಾರವನ್ನು ಚಿತ್ರದಲ್ಲಿ ನೋಡಿದಾಗ ಚಿತ್ರ ನೀರಸ ಅನ್ನಿಸುತ್ತದೆ ಆದರೆ, ಈ ಚಿತ್ರ ಓದು ಅಥವಾ ಬರವಣಿಗೆಗಿಂತಲೂ ಹೆಚ್ಚು ಪರಿಣಾಮಕಾರಿ. ಇದಕ್ಕೆ ಕಾರಣವಿದೆ. ಚಿತ್ರಗಳ ವಸ್ತು ಅಸೂಯೆ, ಪ್ರೀತಿ, ಕಾರುಣ್ಯ, ದುಃಖ, ಹಾಸ್ಯವಾದರೆ ನಾವು ನಮ್ಮ ಜೀವನದಲ್ಲಿ ಸಹಜವೆಂಬಂತೆ ಅನುಭವಿಸಿರುತ್ತೇವೆ. ಹಾಗಾಗಿ, ನಿರ್ದೇಶಕನ ಕಲ್ಪನೆಯ ಚಿತ್ರವನ್ನು ನೋಡುವುದಕ್ಕಿಂತ ನಮ್ಮ ಕಲ್ಪನೆಯ ಓದು ನಮಗೆ ಹೆಚ್ಚು ಪ್ರಿಯವಾಗುತ್ತದೆ. ಆದರೆ ಈ ಚಿತ್ರದಲ್ಲಿರುವುದು ಕ್ರೌರ್ಯತೆ! ಇದನ್ನು ನಮ್ಮಲ್ಲಿನ ಹೆಚ್ಚಿನವರು ಅನುಭವಿಸಲ್ಲ. ಇದಲ್ಲದೇ ತಮ್ಮ ನೆಲ, ಪ್ರಾಣ, ಮಾನವನ್ನು ಕಳೆದುಕೊಂಡ ಪಂಡಿತರ ಮೇಲಿನ ಪ್ರೀತಿ ಹಾಗೂ ವ್ಯವಸ್ಥೆ ಅವರಿಗಾಗಿ ಏನು ಮಾಡಿಲ್ಲ ಎಂಬ ಪಶ್ಚಾತ್ತಾಪದ ಭಾವನೆ. ಈ ಕಾರಣಗಳಿಂದ ಈ ಚಿತ್ರ ನಮ್ಮ ಮನಸ್ಸನ್ನು ಕಲುಕುವಂತೆ ಮಾಡಿದೆ.

ಈಗಲೂ ಗಮನಿಸಿ, ಇತರರಂತೆ ಚಿತ್ರ ಬಿಡುಗಡೆ ಮಾಡುವ ಮುನ್ನ ದೊಡ್ಡ ಉದ್ಘಾಟನಾ ಕಾರ್ಯಕ್ರಮ ಈ ಚಿತ್ರತಂಡ ಮಾಡಲಿಲ್ಲ. ಕಪಿಲ್ ಶರ್ಮಾನ ಕಾರ್ಯಕ್ರಮದಲ್ಲಾಗಲಿ, ಯಾವುದೇ ಮಾಧ್ಯಮದಲ್ಲಾಗಲಿ ಪ್ರಚಾರವಾಗಲಿಲ್ಲ. ಎಲ್ಲಾ ಚಿತ್ರಕ್ಕೆ ಸಿಗುವಂತೆ ಥಿಯೇಟರ್ಗಳು ಸಿಗಲಿಲ್ಲ, ಅನೇಕ ಮಲ್ಟಿಪ್ಲೆಕ್ಸ್ಗಳು ಈ ಚಿತ್ರವನ್ನು ಹಾಕಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಪಡೆಯಿತು. ಪ್ರಧಾನಿ ಮಂತ್ರಿಗಳಿಂದಲೂ ಸಹ ಒಳ್ಳೆಯ ಅಭಿಪ್ರಾಯ ವ್ಯಕ್ತವಾಯಿತು. ಚಿತ್ರ ಬಿಡುಗಡೆಯಾದ ಆರೇ ದಿನಗಳಲ್ಲಿ 87 ಕೋಟಿಯನ್ನು ಗಳಿಸಿದೆ. ನಿಜಕ್ಕೂ ಇದು ಜನರೇ ಗೆಲ್ಲಿಸಿದ ಚಿತ್ರ. ಬಾಲಿವುಡ್ ಮಾಫಿಯಾದ ಎದುರಿಗೆ ಇಷ್ಟು ದೊಡ್ಡದಾಗಿ ತೆರೆಕಾಣುತ್ತಿರುವುದು ದೇಶದಲ್ಲಿ ರಾಷ್ಟ್ರೀಯತೆ ಪ್ರಜ್ವಲಿಸುತ್ತಿರುವ ಸಂಕೇತವಾಗಿದೆ.

Box Office Collection is 6 Days

ಹೌದು, ಚಿತ್ರ ಬಿಡುಗಡೆ ಆಯ್ತು, ಬಹಳಷ್ಟು ಜನ ನೋಡಿ ಸಂಕಟ ಪಟ್ಟಿದ್ದು ಆಯ್ತು, ಕಶ್ಮೀರದ ಕುರಿತು, ಪಂಡಿತರ ಕುರಿತು ವಿಚಾರಗಳನ್ನು ತಿಳಿಯಲು ಓದುತ್ತೇವೆ. ಆದರೆ, ಇದರಿಂದ ಕಶ್ಮೀರಿ ಪಂಡಿತರಿಗೆ ನ್ಯಾಯ ಸಿಕ್ಕಿತಾ?  ಇಲ್ಲ, ನಿಜಕ್ಕೂ ಇಲ್ಲ. ಪಂಡಿತರನ್ನು ಕಶ್ಮೀರದಲ್ಲಿ ಮತ್ತೆ ನೆಲೆಗೊಳ್ಳುವಂತೆ ಮಾಡಿ, ಪಾಕ್ ಆಕ್ರಮಿತ ಕಶ್ಮೀರವನ್ನು ಭಾರತಕ್ಕೆ ಸೇರಿಸಿಕೊಂಡು ಮತ್ತೊಮ್ಮೆ ಸರಸ್ವತಿಯ ಆವಾಸಸ್ಥಾನವನ್ನಾಗಿ ಮಾಡಿದಾಗ ಮಾತ್ರ ಪಂಡಿತರಿಗೆ ನ್ಯಾಯ, ಪ್ರಾಣತ್ಯಾಗ ಮಾಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಆರ್ಟಿಕಲ್ 370 ತೆಗೆದ್ದದ್ದು ಆಗಿದೆ. ಇನ್ನು ಮಿಕ್ಕ ಪ್ರಕ್ರಿಯೆಗಳು ಆಗಿ 'ನಮಸ್ತೆ ಶಾರದಾದೇವಿ...' ಶ್ಲೋಕಕ್ಕೆ ನಿಜವಾದ ಅರ್ಥ ಬರಲಿ ಎಂದು ಪ್ರಾರ್ಥಿಸೋಣ.

***********************************************************

References:

March 4, 2022

ಭಾರತ ಎಂದಿಗೂ ಕಷ್ಟಕಾಲದ ಗೆಳೆಯ

ರಷ್ಯಾ ಉಕ್ರೇನ್ ನಡುವಿನ ಯುದ್ಧದ ಕಾರಣ ಸಧ್ಯಕ್ಕೆ ಭಾರತಕ್ಕೆ ಒದಗಿರುವ ಕಷ್ಟವೆಂದರೇ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು. ಯುದ್ಧ ಪ್ರಾರಂಭವಾಗುವುದಕ್ಕೆ ಮುನ್ನ ಉಕ್ರೇನ್ನಲ್ಲಿ ಭಾರತದ ಇಷ್ಟೊಂದು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದಾರೆ ಎನ್ನುವುದು ನಮ್ಮಲ್ಲಿ ಬಹುತೇಕರಿಗೆ ತಿಳಿದೇ ಇರಲಿಲ್ಲ. ಪ್ರಧಾನಿ ಮೋದಿ ಮತ್ತವರ ತಂಡ ಭಾರತೀಯರನ್ನು ಯುದ್ಧ ವಲಯದಿಂದ ತ್ವರಿತವಾಗಿ ಸ್ಥಳಾಂತರಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಉಕ್ರೇನ್ ನೆರೆರಾಷ್ಟ್ರಗಳಾದ ರೋಮಾನಿಯಾಕ್ಕೆ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸ್ಲೋವೇನಿಯಾಕ್ಕೆ ಕಾನೂನು ಮಂತ್ರಿ ಕಿರಣ್ ರಿಜಿಜು, ಹಂಗೇರಿಗೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್, ಪೋಲಾಂಡಿಗೆ ರಾಜ್ಯ ಮಂತ್ರಿ ಜನರಲ್ ವಿ.ಕೆ. ಸಿಂಗ್ ರವರನ್ನು ಕಳಿಸಿ 'ಆಪರೇಷನ್ ಗಂಗಾ' ಮೂಲಕ ಸ್ಥಳಾಂತರಿಸುವ ಕಾರ್ಯಕ್ಕೆ ವೇಗ ನೀಡಿದ್ದಾರೆ.

Operation Ganga in a Nutshell

ಮಾರ್ಚ್ ಮೂರನೇ ತಾರೀಖಿನ ಹೊತ್ತಿಗೆ ಸುಮಾರು 17 ಸಾವಿರ ಭಾರತೀಯರನ್ನು ಉಕ್ರೇನಿನಿಂದ ಸ್ಥಳಾಂತರಿಸಿದ್ದಾರೆ. ರಾಜಧಾನಿ ಕೀವ್ ನಗರದಿಂದ ಎಲ್ಲಾ ಭಾರತೀಯರನ್ನು ಸ್ಥಳಾಂತರಿಸಿದ ಮೇಲೆಯೇ ರಾಯಭಾರ ಕಚೇರಿಯನ್ನು ಮುಚ್ಚಿದ್ದಾರೆ. ಪಿಯೂಷ್ ಗೋಯಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅಂತಹ ಕ್ಯಾಬಿನೆಟ್ ಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಬರಮಾಡಿಕೊಂಡರೆ, ಪ್ರಧಾನಿಯವರು ಸಂಪೂರ್ಣ ಈ ಕಾರ್ಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಕಳೆದ ತಿಂಗಳ 20 ತಾರೀಖಿನಿಂದಲೇ ಭಾರತ ರಾಯಭಾರ ಕಚೇರಿ ಅಲ್ಲಿನ ಪರಿಸ್ಥಿತಿ ಶೀಘ್ರ ಹದಗೆಡಬಹುದು ಎಂಬ ಎಚ್ಚರಿಕೆ ನೀಡುತ್ತಿತ್ತು. ಏರ್ ಸ್ಪೇಸ್ ಮಿತಿಯನ್ನು ಹೆಚ್ಚಿಸಿ ಅದರ ಆಡಿಯಲ್ಲಿ ವಿಶೇಷ ವಿಮಾನಗಳನ್ನು ಸಹ ಪ್ರಾರಂಭಿಸಲಾಯಿತು. ಫೆಬ್ರವರಿ 20 ರಿಂದ 23ರ ನಡುವೆ ಮೂರು ವಿಮಾನಗಳು ಮತ್ತು ಯುದ್ಧ ಪ್ರಾರಂಭವಾಗುವ ಹಿಂದಿನ ದಿನದವರೆಗೂ ಇದೇ ರೀತಿ ವಿಮಾನಗಳು ಭಾರತೀಯರನ್ನು ಹೊತ್ತು ತಂದವು. ಆ ದಿನದ ತನಕ ಸುಮಾರು 4000 ಭಾರತೀಯರು ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದ್ದರು. ಖಾರ್ಕೀವ್ ನಿಂದ ಪೋಲಾಂಡ್ ವರೆಗೆ ಸುಮಾರು 1400 ಕಿಲೋಮೀಟರ್ ಇದೆ ಆದರೆ, ರಷ್ಯಾಕ್ಕೆ ಕೇವಲ 20 ಕಿಲೋಮೀಟರ್. ಇದರ ಉಪಯೋಗ ಪಡೆದುಕೊಳ್ಳಲು ಪ್ರಧಾನಿ ಮೋದಿ ರಷ್ಯಾಧ್ಯಕ್ಷ ಪೂತಿನ್ ಜೊತೆ ಮಾತಾಡಿದ್ದಾರೆ. ರಷ್ಯಾ ಕೂಡ ಅದಕ್ಕೆ ಸ್ಪಂದಿಸಿ, ಭಾರತೀಯರನ್ನು ಕರೆದುಕೊಂಡು ಬರಲು ತಾನು 130 ಬಸ್ಗಳನ್ನು ಕಳಿಸುವುದಾಗಿ ತಿಳಿಸಿದೆ. ರಾಯಭಾರ ಕಚೇರಿ ಇಲ್ಲವೆಂಬ ಕಾರಣ ತನ್ನ ನಾಗರೀಕರನ್ನು ಕರೆದುಕೊಂಡು ಬರಲು ನೇಪಾಳವೂ ಸಹ ಭಾರತವನ್ನು ಕೇಳಿಕೊಂಡಿದೆ. ಇದು ಮೋದಿಯವರ ವಿದೇಶಾಂಗ ನೀತಿಗೆ ಹಿಡಿದ ಕೈಗನ್ನಡಿ.

ಭಾರತಕ್ಕೆ ಇದೇನು ಮೊದಲಲ್ಲ. ಇಂತಹ ಕಷ್ಟ ಕಾಲದಲ್ಲಿ ಹಿಂದಿನಿಂದಲೂ ಭಾರತ ಮೂಂಚೂಣಿಯಲ್ಲಿ ನಿಂತು ತನ್ನ ನಾಗರೀಕರ ಸುರಕ್ಷತೆಯನ್ನು ಕಾಪಾಡಿಕೊಂಡಿದೆ. 1990-91ರ ಗಲ್ಫ್ ಯುದ್ಧದ ಸಮಯದಲ್ಲಿ ಭಾರತವು ಕುವೈತ್‌ನಿಂದ 1,70,000 ಜನರನ್ನು ಸ್ಥಳಾಂತರಿಸಿತು. ಏರ್ ಇಂಡಿಯಾ ಆ ಸಮಯದಲ್ಲಿ ಎರಡು ತಿಂಗಳಲ್ಲಿ ಸುಮಾರು 500 ವಿಮಾನಗಳ ಮೂಲಕ ಈ ಮಹತ್ಕಾರ್ಯವನ್ನು ಸಾಧಿಸಿತು. ಇದು ಇತಿಹಾಸದಲ್ಲಿ ವಿಮಾನದ ಮೂಲಕ ನಡೆದ ಅತೀ ದೊಡ್ಡ ಸ್ಥಳಾಂತರ ಕಾರ್ಯವಾಗಿದೆ. 2006 ರಲ್ಲಿ ಲೆಬನಾನ್ ಯುದ್ಧದ ಸಮಯದಲ್ಲಿ ಆಪರೇಷನ್ ಸುಕೂನ್ ಮೂಲಕ 1764 ಭಾರತೀಯರನ್ನು ಸೇರಿದಂತೆ 112 ಶ್ರೀಲಂಕಾ, 64 ನೇಪಾಳ ಹಾಗೂ 07 ಲೆಬನಾನ್ ದೇಶಗಳ ನಾಗರೀಕರನ್ನು ಸಹ ಭಾರತದ ನೌಕದಳ ಸ್ಥಳಾಂತರಿಸಿತ್ತು. ಹಾಗೆಯೇ 2011 ರಲ್ಲಿ ಭಾರತದ ನೌಕದಳ ಮತ್ತು ವಾಯುದಳ ಜಂಟಿಯಾಗಿ ಒಂದು ತಿಂಗಳಲ್ಲಿ ಸುಮಾರು 15 ಸಾವಿರ ಭಾರತದ ನಾಗರೀಕರನ್ನು ಲಿಬಿಯಾದ ಅಂತರ್ಯುದ್ಧದ ನಡುವೆ ಯಶಸ್ವಿಯಾಗಿ ಸ್ಥಳಾಂತರದ ಕಾರ್ಯಚರಣೆ ನಡೆಸಿತ್ತು. ಆಪರೇಷನ್ ಮೈತ್ರಿ, ನೇಪಾಳದಲ್ಲಿ 2015 ರಲ್ಲಿ ಸಂಭವಿಸಿದ ಭೀಕರ ಭೂಕಂಪ ನೆನಪಿರಬೇಕಲ್ಲ. ಕೇವಲ 15 ನಿಮಿಷದಲ್ಲಿ ಭಾರತ ಸ್ಪಂದಿಸಿತು. ಭಾರತ ಸರ್ಕಾರ ಮತ್ತು ಭೂಸೇನೆ ಸುಮಾರು 5188 ಜನರನ್ನು ಸ್ಥಳಾಂತರಿಸಿತ್ತು. 750 ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರಿಗೆ ಟ್ರಾನ್ಸಿಟ್ ವಿಸಾ ಭಾರತ ನೀಡಿ ಸಹಾಯ ಮಾಡಿತು. 2016 ರಲ್ಲಿ ಬ್ರೂಸೆಲ್ಸ್ ನಲ್ಲಿ ಆತ್ಮಹತ್ಯೆ ಬಾಂಬ್ ದಾಳಿ ನಡೆದಾಗ 242 ಭಾರತೀಯರನ್ನು ಜೆಟ್ ಏರ್ವೇಸ್ ಮೂಲಕ ಸ್ಥಳಾಂತರಿಸಲಾಯ್ತ. 2015 ರ ಯಮೆನ್ ಅಲ್ಲಿ ನಡೆದ ಯುದ್ಧದ ನಡುವೆ 4600ಕ್ಕೂ ಹೆಚ್ಚು ಭಾರತಿಯರನ್ನು ಹಾಗೂ 41 ದೇಶಗಳ 960 ನಾಗರೀಕರನ್ನು ಆಪರೇಷನ್ ರಾಹತ್ ಮೂಲಕ ಸ್ಥಳಾಂತರಿಸಿದ್ದು ನಮ್ಮ ಭಾರತ.

ಇದೆಲ್ಲಾ ಹಳೆಯ ಕಥೆಯಾದರೆ, ಕಳೆದ ಎರಡು ವರ್ಷದಲ್ಲಿ ಭಾರತ ತನ್ನ ದೇಶದವನ್ನಷ್ಟೇ ಅಲ್ಲದೇ ಅನೇಕ ವಿದೇಶಿ ನಾಗರೀಕರನ್ನು ಸುರಕ್ಷಿತವಾಗಿ ಸ್ಥಾಳಾಂತರಿಸಿದೆ. ಇಡೀ ಜಗತ್ತು ಕರೋನಾದ ಎದುರು ಏನು ಮಾಡಲಾಗದೆ ಕಂಗೆಟ್ಟಿದ್ದ ದಿನಗಳು ಅವು. ಆಗ ಭಾರತ ಆಪರೇಷನ್ ಸಮುದ್ರ ಸೇತು ಪ್ರಾರಂಭಿಸಿತು. 2020 ರಲ್ಲಿ 3992 ಜನರನ್ನು ಸುಮಾರು 23 ಸಾವಿರ ಕಿಲೋಮೀಟರ್ ಸಮುದ್ರದ ಪ್ರಯಾಣ ಮೂಲಕ ಭಾರತೀಯರನ್ನು ಕರೆದುಕೊಂಡು ಬರಲಾಯ್ತು. 2021 ರಲ್ಲಿ ಎರಡನೇ ಹಂತದಲ್ಲಿ 09 ನೌಕೆಗಳ ಮೂಲಕ ವಿವಿಧ ದೇಶಗಳಿಂದ ಆಮ್ಲಜನಕ ತುಂಬಿದ ಕ್ರಯೋಜೆನಿಕ್ ಕಂಟೈನರ್‌ಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ತರಲಾಯ್ತು. ವಂದೇ ಭಾರತ್ ಮಿಷನ್ ಅಡಿಯಲ್ಲಿ 1.83 ಕೋಟಿ ಭಾರತೀಯರನ್ನು ವಿವಿಧ ದೇಶಗಳಿಂದ ಅನೇಕ ಹಂತಗಳಲ್ಲಿ ಕರೆದುಕೊಂಡು ಬರಲಾಯ್ತು. ಅಮೇರಿಕಾ ಕಳೆದ ವರ್ಷ ಅಫ್ಘಾನಿಸ್ತಾನವನ್ನು ಅತಂತ್ರವಾಗಿ ತಾಲಿಬಾನಿಗಳ ವಶಕ್ಕೆಕೊಟ್ಟು ತೆರಳಿತು. ಆಗಸ್ಟ್ 16 ರಿಂದ 21 ರವರೆಗೆ 259 ಭಾರತಿಯರನ್ನು, ಅಫ್ಘನ್ ಹಿಂದುಗಳು, ಸಿಖ್ಖರು ಮತ್ತು ನೇಪಾಳಿಗಳನ್ನು ಸಹ ಭಾರತ ಸುರಕ್ಷಿಸಿತು.

ತಮ್ಮ ಅಧಿಕಾರದ ಮದ ಅಥವಾ ವಿಸ್ತರಣವಾದದ ಸಲುವಾಗಿ ಅನೇಕ ದೇಶಗಳು ಯುದ್ಧಗಳನ್ನು ಮಾಡಿದೆ. ಶಾಂತಿಗೆ ಹೆಸರಾದ ಭಾರತ ತನ್ನ ಸುರಕ್ಷತೆಗಾಗಿ ಮಾತ್ರ ಯುದ್ಧ ಮಾಡಿದೆ. ಇಂತಹ ಸಂದರ್ಭದಲ್ಲಿ ತನ್ನ ಜನರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಮುಂದಿನ ನಡೆಯನ್ನು ನಿರ್ಧರಿಸಿದೆ. ಈಗಲೂ ಸಹ ಅಷ್ಟೇ, ಭಾರತ ಉರ್ಕೇನ್ ಅಥವಾ ರಷ್ಯಾ ಪರವಾಗಿ ಮಾತಾಡಲೇ ಇಲ್ಲ. ಮೋದಿ ಪೂತಿನ್ ಜೊತೆಗಿನ ಮಾತುಕತೆಯಲ್ಲೂ ಸಹ ಶಾಂತಿ ಕಾಪಾಡುವಂತೆ ಹೇಳಿ, ತಮ್ಮ ನಾಗರೀಕರ ಸುರಕ್ಷತೆ ಬಗೆಗೆ ಮಾತ್ರ ಮಾತಾಡಿದ್ದಾರೆ. ದುರಾದೃಷ್ಟವಷಾತ್ ಹಾವೇರಿಯ ವಿದ್ಯಾರ್ಥಿಯೋರ್ವನನ್ನು ಕಳೆದುಕೊಂಡಿದ್ದೇವೆ. ಆತನ ಶವವನ್ನು ಭಾರತಕ್ಕೆ ತರುವುದು ಈ ಸಂದರ್ಭದಲ್ಲಿ ಸುಲಭ ಸಾಧ್ಯವಲ್ಲ. ಇಂತಹ ಸಂದರ್ಭದಲ್ಲೂ ಕಾಂಗ್ರೇಸ್, ಕಮ್ಯೂನಿಸ್ಟರು ಮತ್ತು ಇತರ ಸಮಯ ಸಾಧಕರು ಅತ್ಯಂತ ನೀಚರಾಗಿ ನಡೆದುಕೊಂಡಿರುವುದು ನಮ್ಮ ದೌಭಾಗ್ಯ. ಸಿದ್ಧರಾಮಯ್ಯನವರಂತೂ ಉತ್ತರ ಪ್ರದೇಶದ ಚುಣಾವಣೆ ಕಾರಣ ಈ ಸ್ಥಳಾಂತರದ ಪ್ರಕ್ರಿಯೆಗೆ 'ಆಪರೇಷನ್ ಗಂಗಾ' ಎಂಬ ಹೆಸರಿಟ್ಟಿದ್ದಾರೆ ಎಂದು ತುಚ್ಛವಾಗಿ ಟ್ವೀಟ್ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ಬಂದ ನಂತರ ನಮ್ಮ ಸರ್ಕಾರದ ತಾಕತ್ತಿನ ಬಗ್ಗೆ ಮಾತಾಡಿದ್ದಾರೆ. ಇನ್ನೂ ಕೆಲವರು ಶಿಕ್ಷಣ ವ್ಯವಸ್ಥೆ ಕುರಿತು ಪ್ರಧಾನಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಇವರದು 2024 ರಲ್ಲಿ ಮೋದಿಯವರನ್ನು ಸೋಲಿಸುವುದಷ್ಟೇ ಗುರಿ. ಇಂತಹ ಹೊಲಸು ಮನಸ್ಥಿತಿಯವರನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ.

Low level thoughts and statements by opposition

ಏನೇ ಹೇಳಿ, ಯುದ್ಧದ ನಡುವೆ ಭಾರತ ಸರ್ಕಾರ ತನ್ನ ಜನರಿಗಾಗಿ ನಡೆಸುತ್ತಿರುವ ಈ ಕಾರ್ಯಾಚರಣೆಗೆ ನಾವು ತಲೆಬಾಗಲೇ ಬೇಕು. ಓಟ್ಟಿನಲ್ಲಿ ಪಾಶ್ಚಾತ್ಯ ದೇಶಗಳ ಉಪಟಳ ನಿಂತು, ಯುದ್ಧವು ಅಂತ್ಯವಾಗಿ, ಜಗತ್ತಿನಲ್ಲಿ ಶಾಂತಿ ನೆಲೆಸಲಿ ಅಂಬುದಷ್ಟೇ ನಮ್ಮ ಪ್ರಾರ್ಥನೆ.
 

***********************************************************