December 11, 2020

ತಾರ್ಕಿಕ ನೆಲೆಗಟ್ಟಿಲ್ಲದ ಪ್ರತಿಭಟನೆಗೆ ಅರ್ಥವಿಲ್ಲ!

ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯ ಪರ-ವಿರೋಧಗಳ ದನಿ ಸಹಜ. ಆಡಳಿತ ವ್ಯವಸ್ಥೆ ಒಂದನ್ನು ಸರಿ ದಾರಿಯಲ್ಲಿ ನಡೆಸಲು ಮುಖ್ಯವಾಗಿ ಬೇಕಾಗಿರುವುದೇ ವಿರೋಧ ಪಕ್ಷ ಅಥವಾ ದನಿ. ಸಾರ್ವಜನಿಕ ಪ್ರತಿಭಟನೆ, ಬಂದ್ ಮಾಡುವುದು ಕೂಡ ವೈರುಧ್ಯವನ್ನು ತೋರ್ಪಡಿಸುವ ಒಂದು ಸ್ವರೂಪ. ಹಾಗೆಂದು ಮಾಡಿದ್ದನ್ನೆಲ್ಲಾ ವಿರೋಧ ಮಾಡುವುದು ಸಲ್ಲದು ಮತ್ತು ವಿರೋಧಕ್ಕೂ ಒಂದು ತಾರ್ಕಿಕ ನೆಲೆಗಟ್ಟಿರಬೇಕು. ಕಳೆದ 2 ವಾರದಿಂದ ದೇಶದಲ್ಲಿ ರೈತರ ಪ್ರತಿಭಟನೆ, ಭಾರತ್ ಬಂದ್, ಮರಾಠಾ ಪ್ರಾಧಿಕಾರದ ವಿರುದ್ಧ ಕರ್ನಾಟಕ ಬಂದ್ ನಡೆದಿದೆ. ಆದರೆ, ಈ ಪ್ರತಿಭಟನೆ ಮತ್ತು ಬಂದಿನ ಬಲ, ವ್ಯಾಪ್ತಿ ಮತ್ತು ಸಾಗಿದ ರೀತಿ ಬಹಳಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿವೆ. 

ಮರಾಠಾ ಜನಾಂಗದ ಅಭಿವೃದ್ಧಿಗಾಗಿ ಪ್ರಾಧಿಕಾರವೊಂದನ್ನು ಕರ್ನಾಟಕ ಸರ್ಕಾರ ರಚಿಸಿತು. ಈ ಪ್ರಾಧಿಕಾರಕ್ಕೂ ಕನ್ನಡ ಮತ್ತು ಮರಾಠಿ ಭಾಷೆಗೂ ಯಾವುದೇ ಸಂಬಂಧವಿಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿತು. ವಾಟಾಳ್ ನಾಗರಾಜ್ ಮತ್ತು ಇತರ ಕನ್ನಡ ಪರ ಸಂಘಟನೆಗಳು ಕಳೆದ ಶನಿವಾರ ಪ್ರಾಧಿಕಾರದ ವಿರುದ್ಧ ಕರ್ನಾಟಕ ಬಂದ್ ಘೋಷಿಸಿತು. 900ಕ್ಕೂ ಹೆಚ್ಚು ಸಂಘಟನೆಗಳು ಬಂದಿಗೆ ಬೆಂಬಲ ಕೊಟ್ಟಿವೆ ಎಂದು ಬಂದಿನ ಆಯೋಜಕರು ಹೇಳಿಕೆಕೊಟ್ಟರು. ಕನ್ನಡ ಪರ ಎಂಬುದು ನಿಜವಾದ ಉದ್ದೇಶವಾಗಿದ್ದೇ ಆದರೆ 900ಕ್ಕೂ ಹೆಚ್ಚು ವಿವಿಧ ಸಂಘಟನೆಗಳಾಗಿ ವಿಭಜಿಸಿರುವುದು ಯಾಕೆ ಎಂಬ ಆತ್ಮ ವಿಮರ್ಶೆ ಯಾರೂ ಮಾಡಿಕೊಳ್ಳಲಿಲ್ಲ. ಬಂದ್ ಹಿಂದಿನ ದಿವಸದ ತನಕ ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟವಾಗಿ ಬೆಂಬಲ ಘೋಷಣೆ ಮಾಡಲೇ ಇಲ್ಲ. ಬದಲಾಗಿ, ಬಂದಿಗೆ ನಮ್ಮ ನೈತಿಕ ಬೆಂಬಲ ಎಂದಷ್ಟೇ ಹೇಳಿತು. ಕಡೆಯದಾಗಿ ಅನಿವಾರ್ಯವೆಂಬಂತೆ ಬಂದಿಗೆ ಮುಂದಾಯಿತು. ವಾಟಾಳ್ ನಾಗರಾಜ್ ಅಂತೂ ಬಂದಿಗೆ ಎಲ್ಲರ ಬೆಂಬಲವನ್ನು ಬೇಡಿಕೊಳ್ಳುವ ಮಟ್ಟಕ್ಕೆ ಇಳಿದರು. ಕ.ರ.ವೇ ಸಂಘಟನೆ ರಾಮನಗರದಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ, ಮುಷ್ಕರ ಎಂದೆಲ್ಲಾ ಘೋಷಣೆ ಮಾಡಿತು. ಇದರೊಟ್ಟಿಗೆ ಮಾಧ್ಯಮದವರು ಸಹ ಕರ್ನಾಟಕ ಸ್ತಬ್ಧವಾಗುತ್ತಾ? ಬಂದಿನ ದಿವಸ ಏನಿರುತ್ತೆ? ಏನಿರಲ್ಲ? ಎಂಬಂತಹ ಕಾರ್ಯಕ್ರಮವನ್ನೆಲ್ಲಾ ಪ್ರಸಾರ ಮಾಡಿದರು. ಆದರೆ, ಡಿಸೆಂಬರ್ 5 ಕರ್ನಾಟಕ ಸ್ತಬ್ಧವಾಗಲಿಲ್ಲ, ಜನಜೀವನ ಎಂದಿನಂತೆ ಇತ್ತು. ಬೆಂಗಳೂರಿನಲ್ಲಿ ಕೆಲವರು ಮೆರವಣಿಗೆ ಮಾಡಿ ಬಂಧಿತರಾದರು. ರಾಮನಗರದ ಬಸ್ ನಿಲ್ದಾಣದ ಒಂದು ಮೂಲೆಯಲ್ಲಿ ಬೆರಳೆಣಿಕೆಯಷ್ಟು ಜನ ಪ್ರತಿಭಟನೆ ಎಂದು ಟೈರಿಗೆ ಬೆಂಕಿ ಹಾಕಿದ್ದರು. ಪ್ರತಿಭಟನೆಕಾರರಿಗಿಂತಲೂ ಪೋಲೀಸ್ ಮತ್ತು ಮಾಧ್ಯಮದವರ ಸಂಖ್ಯೆ ಹೆಚ್ಚಿತ್ತು! ಕೊಪ್ಪಳದ ಪರಿಸ್ಥಿತಿ ಕೂಡ ಇಷ್ಟೇ ಇತ್ತು. ಇದರ ಹೊರತಾಗಿ ರಾಜ್ಯದ ಯಾವ ಜಿಲ್ಲೆಯಲ್ಲೂ ಪ್ರತಿಭಟನೆ ಎಂದು ಕರೆಸಿಕೊಳ್ಳುವಂತಹದ್ದು ನಡೆಯಲ್ಲಿಲ್ಲ. ವಿಷಾದದ ಸಂಗತಿ ಎಂದರೆ 5ನೇ ತಾರೀಖಿನ ನಂತರ ವಾಟಾಳರಾಗಲಿ, ಕ.ರ.ವೇ. ಆಗಲಿ ಮತ್ತು ಅವರು ಹೇಳಿಕೊಳ್ಳುವ ಸಂಘಟನೆಗಳಾಗಲಿ ಈ ಪ್ರಾಧಿಕಾರಾರದ ಬಗ್ಗೆ ಒಂದೂ ಮಾತಿಲ್ಲ. ಮಾಧ್ಯಮದವರೂ ಸಹ ಇದರ ಕುರಿತು ಮಾತಾಡುತ್ತಿಲ್ಲ. ಹಾಗಿದ್ದಲ್ಲಿ ಕರ್ನಾಟಕ ಬಂದ್ ಘೋಷಣೆ ಮಾಡಿದ್ದಾದರು ಯಾಕೆ? ಇದಕ್ಕೆ ತಾರ್ಕಿಕವಾದ ಅಂತ್ಯವಾದರು ಏನು? ಎಂಬಂತಹ ಪ್ರಶ್ನೆಗಳಿಗೆ ಉತ್ತರ ದೊರೆಯದಿದ್ದಲ್ಲಿ ಇಂತಹ ಸಂಘಟನೆಗಳ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿ, ಕಾಲಕ್ರಮೇಣ ಜನಮಾನಸದಿಂದ ಆಳಿಸಿ ಹೋಗುತ್ತದೆ.

ರೈತರ ಬದುಕನ್ನು ಹಸನುಮಾಡುವ ಉದ್ದೇಶದಿಂದ ಎರಡು ವಿಧೇಯಕಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ಉದ್ದೇಶಿತ ಕಾನೂನುಗಳು ರೈತರನ್ನು ಅನೇಕ ಸಂಕಷ್ಟಗಳಿಂದ ಪಾರು ಮಾಡಲಿವೆ, ದಲ್ಲಾಳಿಗಳ ಕಪಿಮುಷ್ಟಿಯಿಂದ ಮುಕ್ತರಾಗಲಿದ್ದಾರೆ ಎಂಬ ಭರವಸೆ ಪ್ರಧಾನಿ ಮೋದಿ ನೀಡಿದ್ದಾರೆ. ಇದರ ವಿರುದ್ಧ ಅಕಾಲಿದಳ ಎನ್.ಡಿ.ಎ ಮೈತ್ರಿಕೊಟ ಸರ್ಕಾರದಿಂದ ಹೊರ ನಡೆಯಿತು. ಕಳೆದ 15-20 ದಿನಗಳಿಂದ ನಿರ್ದಿಷ್ಟವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ನಡಿಯುತ್ತಿದೆ. ದೆಹಲಿಯಲ್ಲಿ ಪ್ರತಿಭಟನಾ ನಿರತ ಮುಖಂಡರೊಂದಿಗೆ 5-6 ಸುತ್ತು ಮಾತು ಕಥೆ ಕೂಡ ಕೇಂದ್ರ ಸರ್ಕಾರ ಮಾಡಿತು. ಅದಕ್ಕೋಪ್ಪದ ರೈತರ ಗುಂಪು ಡಿಸೆಂಬರ್ 8ನೇ ತಾರೀಖು ಭಾರತ್ ಬಂದ್ ಎಂದು ಘೋಷಿಸಿದರು. ಅಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರ ಗೃಹಬಂಧನವಾಗಿದೆ ಎಂಬ ಸುಳ್ಳು ಸುದ್ಧಿ ಬಂದಿಗಿಂತ ಹೆಚ್ಚು ಸದ್ದು ಮಾಡಿತು. ಪಂಜಾಬ್ ಹೊರತು ಪಡಿಸಿ ಭಾರತದ ಯಾವ ರಾಜ್ಯದಲ್ಲೂ ಸಹ ಬಂದ್ ಎಂಬಂತಹ ಪರಿಸ್ಥಿತಿ ಇರಲಿಲ್ಲ. ಬಿ.ಜೆ.ಪಿ ಆಡಳಿದ ಇಲ್ಲದ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಒಡಿಸ್ಸಾ, ಕಾಶ್ಮೀರ ದಲ್ಲಿ ಕೂಡ ಪ್ರತಿಭಟನೆ ವ್ಯಕ್ತವಾಗಲಿಲ್ಲ. ಹಾಗೆಂದು ಎಲ್ಲಾ ರೈತರು ಮಸೂದೆಯ ಪರವಾಗಿ ಎಂದೋ ಅಥವಾ ಪಂಜಾಬಿನಲ್ಲಿ ಮಾತ್ರ ರೈತರಿದ್ದಾರೆ ಎಂದು ಹೇಳಲಾಗುವುದಿಲ್ಲ. ಅದರೆ, ಪಂಜಾಬಿನ ಈ ಪ್ರತಿಭಟನೆಯ ಸ್ವರೂಪ ಬದಲಾಗುತ್ತಿದೆ. ಮೊದಲು ಕೃಷಿ ಮಸೂದೆ ವಿರುದ್ಧ ಎಂದಿದ್ದ ಪ್ರತಿಭಟನೆ ಗುಂಪಲ್ಲಿ ಪಾಕೀಸ್ತಾನ, ಆರ್ಟಿಕಲ್ 370 ಪರ, ಗೌತಮ್ ನೌಲಖ, ಸುಧಾ ಭರದ್ವಾಜ್, ಉಮರ್ ಖಲಿದ್, ಶರ್ಗೀಲ್ ಇಮಾಮ್ ರಂತಹ ಆರೋಪಿಗಳ ಬಿಡುಗಡೆಯ ಘೋಷಣೆಗಳು ಕೇಳಿಸುತ್ತಿವೆ.

ಜಿಯೋ ಸಿಮ್ಮನ್ನು ಸುಟ್ಟು ಹಾಕುವ ದೃಶ್ಯಗಳು ಕಂಡು ಬಂದವು. ಕೃಷಿ ಮಸೂದೆಗೂ ಅಂಬಾನಿ ಮಾಲಿಕತ್ವದ ಜಿಯೋಗೂ ಇಲ್ಲದ ಸಂಬಂಧ ಇಲ್ಲಿ ಕಲ್ಪಿಸಲಾಗುತ್ತಿದೆ. 

ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೋ ಈ ಪ್ರತಿಭಟನೆ ಪರವಾಗಿ ಮಾತಾಡಿದ್ದಾರೆ, ಲಂಡನ್ನಿನ ಬಿ.ಬಿ.ಸಿ. ಮತ್ತು ಚೀನಾದ ಗ್ಲೋಬಲ್ ಟೈಮ್ಸ್ ಪ್ರತಿಭಟನೆಯ ಸುದ್ದಿಯನ್ನು ಬಿತ್ತರಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತ ಸರ್ಕಾರವನ್ನು ರೈತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇದಾಗಿದೆ. 



ರೈತರು ಮತ್ತು ಬಡವರ ಹೆಗಲ ಮೇಲೆ ಕೋವಿ ಇಟ್ಟು ಇನ್ನೊಬ್ಬರ ಮೇಲೆ ಗುಂಡು ಹಾರಿಸುವ ಪ್ರಯತ್ನ ಭಾರತದಲ್ಲಿ ಕಮ್ಯುನಿಸ್ಟರು ಮತ್ತು ಕೆಲ ವಿರೋಧ ಪಕ್ಷಗಳು ಮಾಡುತ್ತಲೇ ಇವೆ. ಇವರ ರಾಜಕೀಯದ ಷಡ್ಯಂತ್ರದ ನಡುವೆ ನಿಜವಾದ ರೈತನ ದನಿ ಕೇಳಬಹುದೆ ಎಂಬುದು ಪ್ರಶ್ನಾತೀತ. 

ಆಡಳಿತ ವ್ಯವಸ್ಥೆಯ ಯಾವುದೇ ಕ್ರಮ ಜನ ವಿರೋಧಿಯಾದರೆ ಪ್ರತಿಭಟನೆ, ಬಂದ್ ಅಥವಾ ವೈರುಧ್ಯ ಸಹಜವಾಗೆ ವ್ಯಕ್ತವಾಗುತ್ತದೆ. ಸರ್ಕಾರ ಕೊರೋನಾದ ಲಾಕ್ಡೌನ್ ತೆರೆದ ಮೇಲೂ ಕೆಲವು ಜೆಲ್ಲೆಗಳಲ್ಲಿ ಸ್ವಯಂಘೋಷಿತ ಲಾಕ್ಡೌನ್ ಆಗಿದ್ದು ನಾವು ಗಮನಿಸಬಹುದು. ತಮ್ಮ ಶಕ್ತಿಯ ಅರಿವಿಲ್ಲದೆ, ತಮ್ಮ ಹೋರಾಟಕ್ಕೆ ತಾರ್ಕಿಕ ನೆಲಗಟ್ಟಿಲ್ಲದೆ ಮಿತಿಮೀರಿದ ಹೇಳಿಕೆ ಕೊಡುವುದು ತರವಲ್ಲ ಎಂಬುದು ವಾಟಾಳ್ ನಾಗರಾಜ್ ಮತ್ತು ಇತರ ಸಂಘಟನೆಗಳಿಗೆ ಅರಿವಾಗಬೇಕು. ಬೇರೆಯವರ ಹೆಸರಿನಲ್ಲಿ ತಮ್ಮ ಬೇಳೆಬೇಯಿಸಿಕೊಳ್ಳುವ ರಾಜಕೀಯದವರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಭಾರತಕ್ಕೆ ಮಾರಕವಾಗಿರುವಂತಹ ಕಮ್ಮುನಿಸ್ಟರನ್ನು ಹೊರಗಿಡಲೇಬೇಕು. ಸ್ವಾರ್ಥದ ಬುನಾದಿಯ ಮೇಲೆ ಪ್ರಜಾಪ್ರಭುತ್ವ ಯಶಸ್ಸು ಕಾಣುವುದಿಲ್ಲ.

December 2, 2020

ಕಲಿಯುಗದಲ್ಲಿ ಭಾರತದ ಧರ್ಮವನ್ನು ಉಳಿಸಿದ್ದು - ಆಚಾರ್ಯ ಚಾಣಕ್ಯ

ಭಾರತದ ಸಂಸ್ಕೃತಿಯ ಮೂಲ ಬೇರು ಅಥವಾ ಮುಖವಾಣಿ ಎಂದರೆ ರಾಮಾಯಣ ಮತ್ತು ಮಹಾಭಾರತ ಎನ್ನಬಹುದು. ಧರ್ಮಸಂಸ್ಥಾಪನೆಗೆ ಸಂಬಂಧಿಗಳಾದರೂ ಸರಿ ಅಧರ್ಮೀಯರನ್ನು ನಾಶ ಮಾಡಬೇಕು, ರಾಜನಾದವನ ಮೊದಲ ಕರ್ತವ್ಯ ಪ್ರಜಾರಂಜನೆ ಎಂದು ಸ್ಪಷ್ಟಪಡಿಸುತ್ತದೆ. ರಾಮ ಕುಟುಂಬಕ್ಕೋಸ್ಕರ ಬದುಕುವುದು ಹೇಗೆ ಎಂದು ತೋರಿಸಿಕೊಟ್ಟರೆ, ಕೃಷ್ಣ ಸಮಾಜಕ್ಕಾಗಿ ಬದುಕುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಕೃಷ್ಣ ಅಧರ್ಮೀಯರಾದ ಕಂಸ, ದಂತವಕ್ರ, ಶಿಶುಪಾಲರನ್ನು ಸಂಹರಿಸುತ್ತಾನೆ. ಜರಾಸಂಧ, ಜಯಧ್ರತ ಮತ್ತು ಕೌರವ ಸೈನ್ಯವನ್ನು ಪಾಂಡವರ ಮೂಲಕ ನಿರ್ನಾಮ ಮಾಡುತ್ತಾನೆ. ಯುದ್ಧದ ಸಮಯದಲ್ಲಿ ಹಿಂಜರಿದ ಅರ್ಜುನನಿಗೆ ಬೋಧಿಸುವ ಮೂಲಕ ಮಾನವರಿಗೆ ಅಮೃತಮಯವಾದಂತಹ ಭವದ್ಗೀತೆಯನ್ನು ವಿಶ್ವಗುರುವಾಗಿ ನೀಡಿದ್ದು ಕೃಷ್ಣನೇ. ಭಾರತದ ಚರಿತ್ರೆಯ ಪುಟದಲ್ಲಿ ಇಂತಹುದೇ ಒಂದು ವ್ಯಕ್ತಿತ್ವ - 'ಆಚಾರ್ಯ ಚಾಣಕ್ಯ'.

ಆಚಾರ್ಯ ಚಾಣಕ್ಯ

ಬುದ್ಧನ ಕಾಲದ ನಂತರ ತಕ್ಷಶಿಲೆಯಲ್ಲಿ ರಾಜ ಅಂಬಿ, ಹಸ್ತಿನಾವತಿಯ ಪ್ರಾಂತ್ಯದಲ್ಲಿ ಪುರೂರವ ಮತ್ತು ಅತೀ ದೊಡ್ಡ ಸಾಮ್ರಾಜ್ಯವಾದ ಮಗಧದಲ್ಲಿ ನಂದರು ಆಳುತ್ತಿದ್ದರು. ನಂದ ವಂಶದ ಧನನಂದ ಮತ್ತು ಅಂಬಿ ತಾವು ಸುಖವನ್ನು ಅನುಭವಿಸುವ ಸಲುವಾಗಿ ಪ್ರಜಾಪೀಡಕರಾಗಿ, ಬೌದ್ಧಮತದ ಓಲೈಕೆ ಮಾಡುತ್ತಾ, ಮನಬಂದಂತೆ ಕರವನ್ನು ಸಾಮಾನ್ಯ ಜನರ ಮೇಲೆ ಹೇರುತ್ತಿದ್ದರು. ವಿದ್ಯಾಲಯಗಳಲ್ಲಿ ಬೌದ್ಧ ಪೀಠಸ್ಥಾಪನೆ, ಬೌದ್ಧ ಗುರುಗಳಿಗೆ ಮತಾಂತರ ಮಾಡಲು ಅವಕಾಶ ಮಾಡಿಕೊಟ್ಟು ಸಮಾಜದ ಅವನತಿಗೆ ನಾಂದಿ ಹಾಡಿದ್ದರು. ಪುರೂರವ ಪ್ರಜಾಪೀಡಕನಲ್ಲದ್ದಿದ್ದರೂ ತನ್ನಲ್ಲಿ ಸಾಮರ್ಥ್ಯವಿರದಿದ್ದರೂ ನಂದರನ್ನು ಸೋಲಿಸಿ, ಮಗಧವನ್ನು ಆಕ್ರಮಿಸಿಕೊಂಡು ಚಕ್ರವರ್ತಿ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದ. ಮೂವರು ಸಹ ಅಲೆಕ್ಸಾಂಡರಿನ ಆಕ್ರಮಣದ ಬಗೆಗೆ ತಲೆಕೆಡಿಸಿಕೊಂಡಿರಲಿಲ್ಲ. ರಾಜ ಅಂಬಿಯಂತೂ ಅಲೆಕ್ಸಾಂಡರನ ಜೊತೆ ಕೈ ಜೋಡಿಸಿ ಪುರೂರವನನ್ನು ಸೋಲಿಸಲು ಮುಂದಾಗುತ್ತಾನೆ. ವಿದೇಶಿಗರ ಆಕ್ರಮಣವನ್ನು ಎದುರಿಸಲು ಎಲ್ಲರೂ ಒಟ್ಟಾಗಬೇಕೆಂಬ ಯೋಚನೆ ಮೂವರಲ್ಲೂ ಇರಲಿಲ್ಲ. ಧರ್ಮ ಗ್ಲಾನಿಯಾಗುವ ಹೊತ್ತು ಸಮೀಪಿಸುತ್ತಿತ್ತು. ಮುಂದಾಗುವ ಅನಾಹುತವನ್ನು ತಡೆಯಲು ಭಾರತದ ರಾಜರೆಲ್ಲರೂ ಏಕಚಕ್ರಾಧಿಪತ್ಯದಡಿ ಸೇರಬೇಕು, ಎಲ್ಲರೂ ಒಟ್ಟಾಗಿ ಹೋರಾಡಬೇಕು, ರಾಜನೊಬ್ಬ ಪ್ರಜಾ ಸೇವಕ, ಪ್ರಜಾರಕ್ಷಕನಾಗಿರಬೇಕು ಅಂತಹ ಎಂದು ಸಾಮ್ರಾಜ್ಯವನ್ನು ತಾನು ನಿರ್ಮಾಣ ಮಾಡುತ್ತೇನೆ ಎಂದು ಶಪಥ ಮಾಡಿದವನು - ಆಚಾರ್ಯ ಚಾಣಕ್ಯ.

ಧನನಂದನಿಂದ ಚಾಣಕ್ಯನಿಗೆ ಅವಮಾನ

ಚಾಣಕ್ಯ ತಕ್ಷಶಿಲೆಯಲ್ಲಿದ್ದ ಒಬ್ಬ ಅಧ್ಯಾಪಕ. ರಾಜ ಅಂಬಿಯ ಮತಾಂಧತೆಯಿಂದ ರೋಸಿ, ತನ್ನ ತಂದೆ ಚಣಕನನ್ನು ಕೊಂದ ನಂದರ ಆಸ್ತಾನದಲ್ಲಿ ಅವಮಾನಿತನಾಗಿ ಭಾರತದ ಸದೃಢ ಭವಿಷ್ಯಕ್ಕಾಗಿ ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯನ್ನಾಗಿ ಮಾಡಲು ತೀರ್ಮಾನಿಸುತ್ತಾನೆ. ತಾನು ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿ, ಅಧ್ಯಾಪಕನಾಗಿದ್ದ ತಕ್ಷಶಿಲೆಯನ್ನು ಬಿಟ್ಟು ಹೊರಡುತ್ತಾನೆ ಮಥುರಾವನ್ನು ಬಿಟ್ಟು ಹೊರಟ ಕೃಷ್ಣನಂತೆ. ಸ್ವಾರ್ಥಕ್ಕಾಗಿ ಅಲೆಕ್ಸಾಂಡರೊಂದಿಗೆ ಕೈ ಜೋಡಿಸಿದ ಅಂಬಿಯ ಸೇನೆಯನ್ನು ತನ್ನ ಬುದ್ಧಿ ಶಕ್ತಿ ಉಪಯೋಗಿಸಿ ವಿಭಜಿಸಿ, ರಕ್ತಪಾತವಿಲ್ಲದೆ ತಕ್ಷಶಿಲವನ್ನು ಗೆದ್ದು, ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡುತ್ತಾನೆ. ಭೀಮನ ಮೂಲಕ ಕೃಷ್ಣ ಜರಾಸಂಧನನ್ನು ಗೆದ್ದದ್ದು ಇಲ್ಲಿ ನೆನಪಾಗುತ್ತದೆ. ಧನನಂದನ ಹೆಣ್ಣಿನ ಚಾಪಲ್ಯ, ಆತನ ಮಂತ್ರಿ ಶ್ರೀಯಕನ ಮತ್ತು ಅರಮನೆ ವೈದ್ಯನ ದುರಾಸೆ, ಮಹಾಮಾತ್ಯ ರಾಕ್ಷಸನ ಕುರುಡು ಸ್ವಾಮೀ ಭಕ್ತಿ ಚಾಣಕ್ಯನಿಗೆ ಮಗಧವನ್ನು ಗೆಲ್ಲುವ ಅವಕಾಶವಾಗಿ ಕಾಣಿಸಿತು. ಇವರೆಲ್ಲರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಧನನಂದನನ್ನು ಚಂದ್ರಗುಪ್ತನ ಮೂಲಕ ಕೊಲ್ಲುತ್ತಾನೆ. ಕೆಟ್ಟವರಿಗೆ ಕೆಡಕಾಗುತ್ತದೆ ಎಂಬಂತೆ ಅರಮನೆಯ ವೈದ್ಯನನ್ನು ಮಂತ್ರಿ ಶ್ರೀಯಕ ಮತ್ತು ಆತನನ್ನು ಅಮಾತ್ಯ ರಾಕ್ಷಸ ಕೊಲ್ಲುವಂತಾಗುತ್ತದೆ. ಅಮಾತ್ಯ ರಾಕ್ಷಸ ತಲೆಮರಿಸಿಕೊಳ್ಳುತ್ತಾನೆ. ಸಾಮರ್ಥ್ಯವಿಲ್ಲದಿದ್ದರೂ ಮಗಧದ ಅರ್ಧರಾಜ್ಯದ ಆಸೆಗೆ, ಹೆಣ್ಣಿನ ಚಾಪಲ್ಯಕ್ಕೆ ಒಳಗಾಗಿ ಪುರೂರವ ಬಲಿಯಾಗುತ್ತಾನೆ. ತಮ್ಮದೇ ದೌರ್ಬಲ್ಯಗಳನ್ನು ಹೊಂದಿದ್ದ ದುರ್ಯೋಧನ, ಕರ್ಣ, ಶಕುನಿ ಮತ್ತಿತರ ಕೌರವರನ್ನು ಕೊಲ್ಲಿಸಿದ್ದು ಇದೇ ಕೃಷ್ಣ. ಮಂತ್ರಿಯೊಬ್ಬನ ನಿಷ್ಟೆ ವ್ಯಕ್ತಿಗಲ್ಲ ಬದಲಾಗಿ ಸಿಂಹಾಸನಕ್ಕಾಗಿ ಅಥವಾ ರಾಷ್ಟ್ರಕ್ಕಾಗಿ ಎಂಬುದನ್ನು ತಿಳಿಸಿಕೊಟ್ಟು ರಾಕ್ಷಸನನ್ನು ಮತ್ತೆ ಮಗಧದ ಮಹಾಮಾತ್ಯನನ್ನಾಗಿ ಮಾಡಿ ಪುನಃ ತಕ್ಷಶಿಲೆಗೆ ಹಿಂತಿರುಗಿದ್ದು ಇದೇ ಚಾಣಕ್ಯ. ಪಾಂಡವರಿಗೆ ವಿಜಯಮಾಲೆಯನ್ನು ತೊಡಿಸಿ ಅವರನ್ನೇ ರಾಜರನ್ನಾಗಿ ಮಾಡಿ ತನ್ನ ಪಾಡಿಗೆ ಮಥುರಕ್ಕೆ ವಾಪಸ್ಸಾದ ಶ್ರೀ ಕೃಷ್ಣ ಮತ್ತೆ ನೆನಪಾಗುತ್ತಾನೆ. ದಂಡನೀತಿಯನ್ನು ಅಧ್ಯಾಯನ ಮಾಡಿದ್ದ ಚಾಣಕ್ಯ ರಾಜ್ಯದ ಆರ್ಥಿಕ ನೀತಿ, ಸೈನ್ಯದ ಕಾರ್ಯತಂತ್ರ, ಆಡಳಿತ ವ್ಯವಸ್ಥೆಯನ್ನು ಸಂವಿಧಾನದಂತೆಯೇ ವಿವರಿಸುವ ಕೃತಿ 'ಅರ್ಥಶಾಸ್ತ್ರ' ವನ್ನು ರಚಿಸುತ್ತಾನೆ. ಶ್ರೀಕೃಷ್ಣ ಮಾಡಿದ್ದು ಅದೇ ಅಲ್ಲವೇ? ಮಾನವರೆಲ್ಲರಿಗೂ ಮಾರ್ಗದರ್ಶಕವಾಗಿ, ಮೋಕ್ಷ ಮಾರ್ಗವಾದಂತಹ ಬೋಧನೆ ಭಗವದ್ಗೀತೆ.

ಚಾಣಕ್ಯನ ಅರ್ಥಶಾಸ್ತ್ರ

ಚಾಣಕ್ಯನ ಜೀವನ ಪ್ರತಿಯೊಬ್ಬ ಧರ್ಮಿಷ್ಠನುಗೂ ಪಾಠವೇ ಸರಿ. ಬುದ್ಧನ ನಿರ್ವಾಣದ ಕಲ್ಪನೆ ಎಲ್ಲರಿಗೂ, ಎಲ್ಲಾ ಕಾಲಕ್ಕೂ ಹೊಂದುವುದಿಲ್ಲ. ವೇದಕಾಲದ ವರ್ಣಾಶ್ರಮ ಸಮಾಜದ ಒಳಿತಿಗಾಗಿ ಮಾಡಿದ್ದು, ಶಾಸ್ತ್ರವನ್ನು ರಕ್ಷಿಸಲು ಶಸ್ತ್ರ ಅಗತ್ಯ, ರಾಜನೋರ್ವ ಒಂದು ಮತವನ್ನು ಓಲೈಕೆ ಮಾಡಬಾರದು ಎಂಬ ವೈದಿಕ ತತ್ವವನ್ನು ಉಳಿಸಲು ಹೋರಾಡಿದವನೇ ಚಾಣಕ್ಯ. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬುದು ಆತನ ಜೀವನದ ಸಾರಂಶ. ದ್ವಾಪರಯುಗದಲ್ಲಿ ಕೃಷ್ಣ ಮಾಡಿದ ಕೆಲಸವನ್ನು ಕಲಿಯುಗದಲ್ಲಿ ಭಾರತದ ಧರ್ಮವನ್ನು ಉಳಿಸಲು ತನ್ನ ಜೀವನವನ್ನು ಮುಡುಪಿಟ್ಟದ್ದು ಕುಟಿಲ ಗೋತ್ರೋದ್ಭವ ಚಣಕನ ಪುತ್ರ ಆಚಾರ್ಯ ಚಾಣಕ್ಯ!

November 25, 2020

ಕೊರೋನಾ ಲಸಿಕೆ ನೆಪದಲ್ಲಿ ಚೀನಾವನ್ನು ಮರೆಯಬಾರದು

ಕೊರೋನಾ ಎಂಬ ಮಹಾಮಾರಿ ಜಗತ್ತನ್ನು ಕಾಡಲು ಶುರುಮಾಡಿ 1 ವರ್ಷವಾಯ್ತು. ಕಳೆದ ವರ್ಷ ನವೆಂಬರ್ ಅಲ್ಲಿ ಚೀನಾದ ವೂಹಾನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಜಗತ್ತಿಗೆ ಈ ವೈರಸ್ಸಿನ ವಿಚಾರವನ್ನು ತಿಳಿಸದೆ 2-3 ತಿಂಗಳು ತನ್ನಲ್ಲೇ ಮುಚ್ಚಿಟ್ಟುಕೊಂಡಿತ್ತು. ತದ ನಂತರ ಇಡೀ ಜಗತ್ತಿಗೆ ಕೊರೋನಾ ಅಮರಿಕೊಂಡಿತು ಮತ್ತು ಬಹುತೇಕ ಎಲ್ಲಾ ದೇಶಗಳು ಲಾಕ್ಡೌನ್ ಮಾಡಿಕೊಂಡು ಸ್ತಬ್ದವಾಯಿತು. ನೆನಪಿಡಿ, 2020 ಫ಼ೆಬ್ರವರಿ ಹೊತ್ತಿಗೆ ಚೀನಾದ ವೂಹಾನ್ ಹೊರತಾಗಿ ಇಡೀ ದೇಶ ಸಾಮಾನ್ಯ ಸ್ಥಿತಿಗೆ ಮರಳಿತ್ತು ಹಾಗೂ 2 ತಿಂಗಳ ನಂತರ ವೂಹಾನ್ ಕೂಡ ಸಾಮಾನ್ಯವಾಯಿತು.

ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳು ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧ ಬೇಕೆಂದು ಕೇಳಿಕೊಂಡಾಗ 55 ರಾಷ್ಟ್ರಗಳಿಗೆ ಭಾರತ ಔಷಧವನ್ನು ರಫ಼್ತು ಮಾಡಿತ್ತು. ಇದೇ ಸಮಯದಲ್ಲಿ ಸ್ಪೈನ್, ಕ್ರೆಝ್ ರಿಪಬ್ಲಿಕ್ ಮತ್ತು ಭಾರತ ಚೀನಾದಿಂದ ಕೊರೋನಾ ಟೆಸ್ಟಿಂಗ್ ಕಿಟ್ಗಳನ್ನು ಆಮದು ಮಾಡಿಕೊಂಡಿತು. ಆದರೆ 80% ರಷ್ಟು ಕಿಟ್ಗಳು ಕಳಪೆ ಎಂದು ಮೂರೂ ದೇಶಗಳು ತಿರಸ್ಕರಿಸಿತು. ಉತೃಷ್ಟ ಮಟ್ಟದ N-95 ಮಾಸ್ಕ್ಗಳ ಬದಲಾಗಿ ಉಳಡುಪುಗಳಿಂದ ತಯಾರಿಸಿದ ಮಾಸ್ಕ್ಗಳನ್ನು ಪಾಕೀಸ್ತಾನಕ್ಕೆ ರಫ಼್ತು ಮಾಡಿದ್ದು ಇದೇ ಚೀನಾ. ಇಷ್ಟೇ ಅಲ್ಲದೆ ವಿಸ್ತರಣವಾದಕ್ಕೂ ಮುಂದಾಯಿತು. ಏಪ್ರಿಲ್ಲಿನಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ವಿಯಟ್ನಾಂ ಜೊತೆ ಜಗಳ ಶುರು ಮಾಡಿತು. ಹಾಂಕಾಂಗ್ ಅನ್ನು ಆಕ್ರಮಿಸಿಕೊಂಡರು, ತೈವಾನ್ ಜೊತೆಗೆ ಕಿರಿಕಿರಿ ಶುರು ಮಾಡಿದರು. ಬಹುಮುಖ್ಯವಾಗಿ ಲದಾಖ್ ಪ್ರಾಂತ್ಯದ ಗಲ್ವಾನ್ ಕಣಿವೆಯಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬಂತು. ಕೊರೋನಾ ವಿರುದ್ಧವಲ್ಲದೇ ಗಡಿಯಲ್ಲೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಚೀನಾ ಭಾರತಕ್ಕೆ ತಂದೊಟ್ಟಿತು.

2018ರಲ್ಲಿ 8%, 2019 5.7% ರಷ್ಟಿದ್ದ ಭಾರತದ ಜಿ.ಡಿ.ಪಿ 2020 ಜುಲೈ ಹೊತ್ತಿಗೆ -23% ಕ್ಕೆ ಕುಸಿಯಿತು. ಲಕ್ಷಾಂತರ ಮಂದಿ ಉದ್ಯೋಗ ನಷ್ಟ ಅನುಭವಿಸಿದರು. ದೇಶದಾದ್ಯಂತ ಮೆಟ್ರೋ ಸುಮಾರು 2000 ಕೋಟಿಯಷ್ಟು ನಷ್ಟ ಅನುಭವಿಸಿತು. ವಿಮಾನಯಾನ ಇಲಾಖೆಗೆ 3600 ಕೋಟಿಯಷ್ಟು ನಷ್ಟವಾಗಿದೆ.  ಹೋಟೆಲ್ ಉದ್ಯಮ ಸುಮಾರು 1.25 ಲಕ್ಷ ಕೋಟಿ, ರೈಲ್ವೆ ಇಲಾಖೆ 35000 ಕೋಟಿ ನಷ್ಟ ಅನುಭವಿಸಿತು.

ಇಲ್ಲಿಯವರೆಗೆ 9 ದಶಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣ ಮತ್ತು 1.3 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಗಾಯಕ ಎಸ್.ಪಿ.ಬಿ, ಬೆಳಗಾವಿಯ ಸುರೇಶ್ ಅಂಗಡಿ, ಬೀದರಿನ ನಾರಾಯಣ ರಾವ್, ಅಶೋಕ್ ಗಸ್ತಿ ಕೊರೋನಾಕ್ಕೆ ಬಲಿಯಾದ ಕೆಲವು ಖ್ಯಾತ ನಾಮರು. ಇತಿಹಾಸದಲ್ಲೇ ಆತ್ಯಂತ ಸರಳವಾದ ದಸರ ಈ ವರ್ಷದ ಆಚರಿಸಲಾಯಿತು. ವಿಶ್ವವಿಖ್ಯಾತ ಜಂಬೂಸವಾರಿ ಅರಮನೆ ಪ್ರಾಂಗಣ ಬಿಟ್ಟು ಹೊರಬರಲಿಲ್ಲ. 2020-21 ಶೈಕ್ಷಣಿಕ ವರ್ಷ ಮಕ್ಕಳು ಶಾಲೆಗೆ ಹೋಗದಂತಾಯಿತು. ಇತರರೊಂದಿಗೆ ಕಲೆತು ಆಟ ಪಾಠವನ್ನು ಕಲಿಯಬೇಕಿದ್ದ ಮಕ್ಕಳು ಮನೆಯಲ್ಲಿ ಬಂಧಿತರಾದರು. ಸಿನಿಮಾ ಕ್ಷೇತ್ರ 5000 ಕೋಟಿಯಷ್ಟು ನಷ್ಟ ಅನುಭವಿಸಿದೆ. ಹಣದ ಹೊರತಾಗಿ ಸೋಂಕುಪೀಡಿತ ಜನರಿಗೆ ಅವರ ಬಂಧು, ಸ್ನೇಹಿತರಿಗೆ ಆದ ಮಾನಸಿಕ ತುಮುಲ, ಭಯವನ್ನು ವರ್ಣಿಸಲು ಸಾಧ್ಯವಿಲ್ಲ.  ಪುಟ್ಟ ಮಗುವೊಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿದ್ದ ತಾಯಿ ಹತ್ತಿರ ಹೋಗಲಾಗದೆ ಕಣ್ಣೀರಿಟ್ಟ ದೃಶ್ಯ ಇಗಲೂ ಮನಕಲಕುವಂತಿದೆ. ಈ ರೀತಿ ಸಂಕಟ ಅನುಭವಿಸಿದ ಕುಟುಂಬಗಳೆಷ್ಟೋ ದೇವರೆ ಬಲ್ಲ. ಜಗತ್ತಿನಲ್ಲಿ ಈವರೆಗೂ ಕೊರೋನಾ ಕಾರಣದಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 14 ಲಕ್ಷಕ್ಕೂ ಹೆಚ್ಚು! 

ಭಾರತ ಚೀನಾದ 300ಕ್ಕೂ ಹೆಚ್ಚು ಆಪ್ಗಳನ್ನು ಬ್ಯಾನ್ ಮಾಡಿದೆ. ಚೀನಾದಿಂದ ಆಮದಾಗುವ ಅನೇಕ ವಸ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿದೆ. ಚೀನಾದ ವಿದ್ಯುತ್ ಮತ್ತು ಕಮ್ಯುನಿಕೇಷನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡದಂತೆ ಕ್ರಮ ತೆಗೆದುಕೊಂಡಿದೆ. ಚೀನಾ ವಸ್ತುಗಳ ಬಹಿಷ್ಕಾರದ ಕುರಿತು ಸೂಕ್ಷ ಲೇಖನವೊಂದನ್ನು ಚೀನಾದ ಮುಖವಾಣಿ 'ಗ್ಲೋಬಲ್ ಟೈಮ್ಸ್' ವರದಿ ಮಾಡಿತ್ತು. ದೀಪಾವಳಿ ಸಮಯದಲ್ಲಿ ಚೀನಾಕ್ಕೆ 40000 ಕೋಟಿಯಷ್ಟು ನಷ್ಟವಾಗಿದೆ ಎಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ ಸಿ.ಎ.ಐ.ಟಿ ಅಭಿಪ್ರಾಯ ಪಟ್ಟಿದೆ. ಕ್ವಾಡ್ ದೇಶಗಳೂ ಕೂಡ ಚೀನಾವನ್ನು ಎದುರಿಸುವಂತೆ ಸಮರಾಭ್ಯಾಸ ನಡೆಸಿತು.

ಆದರೆ, ಅಮೇರಿಕಾದ ಚುಣಾವಣೆ ನಂತರ ಚೀನಾ ಬಗೆಗಿನ ಮಾತು ಜಗತ್ತಿನಲ್ಲಿ ಕಮ್ಮಿಯಾಗಿದೆ! ಇತ್ತೀಚಿನ ಸುದ್ದಿ ಪ್ರಾಕಾರ ಜನವರಿ 2021 ಹೊತ್ತಿಗೆ ಕೊರೋನಾಕ್ಕೆ ಲಸಿಕೆ ಲಭ್ಯವಿರುತ್ತದೆ. ಜಗತ್ತಿನ ಕೆಲವು ರಾಷ್ಟ್ರಗಳು ಲಸಿಕೆಯನ್ನು ಮುಂಗಡವಾಗಿ ಕಾಯ್ದಿರಿಸಿದೆ ಎಂಬ ವದಂತಿಯೂ ಸಹ ಇದೆ. ಇಂದಲ್ಲ ನಾಳೆ ಕೊರೋನಾವನ್ನು ನಾಶ ಮಾಡುವ ಔಷದ ಬಂದೇ ಬರುತ್ತದೆ.

ರಷ್ಯಾ, ಅಮೇರಿಕಾ ಕೊರೋನಾ ಲಸಿಕೆ ಬಗ್ಗೆ ಹೆಚ್ಚು ಮಾತಾಡುವ ಈ ಸಮಯದಲ್ಲಿ ಚೀನಾದ ಮೌನ ಮತ್ತಷ್ಟು ಅನುಮಾನಕ್ಕೆ ಆಸ್ಪದವಾಗಿದೆ. ಲಸಿಕೆಯ ವಿಚಾರದಲ್ಲೂ ಚೀನಾದೊಂದಿಗೆ ಎಚ್ಚರಿಕೆವಹಿಸಬೇಕು. ಚೀನಾಕ್ಕೆ ಲಸಿಕೆ ಕೊಡುವ ಸಂದರ್ಭ ಬಂದರೆ ಕೊರೋನಾ ಮತ್ತು ಚೀನಾದ ಕಾರಣ ದೇಶದಲ್ಲಾದ ಕಷ್ಟ, ನಷ್ಟಗಳನ್ನು ಒಮ್ಮೆ ನೆನೆಸಿಕೊಳ್ಳುವುದು ಒಳಿತು. ಲಸಿಕೆಯ ನೆಪದಲ್ಲಿ ಪಕ್ಕದಲ್ಲಿರುವ ಶತ್ರುವನ್ನು ಮರೆಯಬಾರದು.

November 20, 2020

ಡಿಜಿಟಲ್ ಯುಗದಲ್ಲೇ ಹೀಗೆ... ಇನ್ನು ತುರ್ತು ಪರಿಸ್ಥಿತಿಯ ಕಾಲದಲ್ಲಿ ಹೇಗಿರಬೇಡ!

ಕೆಲವು ದಿನಗಳಿಂದ ಭಾರತದಲ್ಲಿ ಕೇಳಿ ಬರುತ್ತಿರುವ ಪತ್ರಕರ್ತನ ಹೆಸರು ಅರ್ನಬ್. ಸುಶಾಂತ್ ಸಾವಿನ ಪ್ರಕರಣ, ರಾಜಕೀಯ ಪಕ್ಷಗಳ ಹಗರಣಗಳು, ಬಾಲಿವುಡ್ಡಿನ ಡ್ರಗ್ಸ್ ಮಾಫಿಯ, ಮಾಧ್ಯಮದವರ ಟಿ.ಆರ್.ಪಿ ಹಗರಣ, ಪಾಲ್ಘರ್ ಸಾಧುಗಳ ಕೊಲೆ ಪ್ರಕರಣ ಹಾಗು ಮುಖ್ಯವಾಗಿ ದೇಶದ ಪರವಾಗಿ ಮತ್ತು ಸಮಸ್ಯೆ ಕುರಿತು ಸುಸ್ಪಷ್ಟವಾಗಿ ದನಿ ಎತ್ತುವ ರಾಷ್ಟ್ರೀಯವಾದಿ ಪತ್ರಕರ್ತ ಅರ್ನಬ್. 

ಆತ 2016 ರಲ್ಲಿ ಟೈಮ್ಸ್ ನೌ ಸಂಸ್ಥೆಯಿಂದ ಹೊರಬಂದು ರಿಪಬ್ಲಿಕ್ ಸಂಸ್ಥೆ ಕಟ್ಟಿದ ರೀತಿ ಅದ್ಭುತ. ಕಟ್ಟಡದ ವಿನ್ಯಾಸದ ಸಲುವಾಗಿ ಅನ್ವಯ್ ನಾಯ್ಕರ ಕಾನ್ಕಾರ್ಡ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ ರಿಪಬ್ಲಿಕ್ ಸಂಸ್ಥೆ. ಹಣದ ಕಾರಣವನ್ನು ಕೊಟ್ಟು ಅರ್ನಬ್ ಮತ್ತು ಇನ್ನಿಬ್ಬರ ಹೆಸರು ಬರೆದಿಟ್ಟು ನಾಯ್ಕ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ವರ್ಷ ಅರ್ನಬ್ ಮತ್ತು ಇತರರನ್ನು ಆರೋಪ ಮುಕ್ತಗೊಳಿಸಿತ್ತು. ರಿಪಬ್ಲಿಕ್ ಶುರುವಾದ ನಂತರವಂತೂ ಅರ್ನಬ್ನ ದನಿ ಮತ್ತಷ್ಟು ಜೋರಾಯಿತು. ಶುಶಾಂತ್ ಪ್ರಕರಣವನ್ನು ಪ್ರತಿದಿನ ಜನಮಾನಸದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಅರ್ನಾಬ್ನ ಪಾತ್ರ ದೊಡ್ಡದು. ಬಾಲಿವುಡ್ಡಿನ ಡ್ರಗ್ಸ್ ಪ್ರಕರಣ ಬಗ್ಗೆ ಕೂಡ ಸಾಧ್ಯವಾದಷ್ಟು ಆಳಕ್ಕಿಳಿದು ಅದರ ವಿರುದ್ಧ ದನಿ ಎತ್ತಿದ. ಪಾಲ್ಘರ್ನ ಸಾಧುಗಳ ಕೊಲೆ ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುತ್ತಲೇ ಮುಂದುವರೆದ. ಇತ್ತೀಚಿನ ಟಿ.ಆರ್.ಪಿ ಹಗರಣ ವಿಚಾರದಲ್ಲಿ ರಿಪಬ್ಲಿಕ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಪರಂ ಬಿರ್ ವಿರುದ್ಧ ಸಹ ದನಿ ಎತ್ತಿದ್ದು ಇದೇ ಅರ್ನಬ್. ಕಾಂಗ್ರೆಸಿನ ಸೋನಿಯಾರನ್ನು ಅಂಟೋನಿಯೋ ಮೈನೋ ಎಂದು ಪದೇ ಪದೇ ಕರೆದ. ಈ ದೇಶದ ಕಮ್ಯುನಿಸ್ಟರಿಗಂತೂ ಅರ್ನಬ್ ತನ್ನ ನೇರ ಮತ್ತು ನಿಷ್ಠುರವಾದ ಪ್ರಶ್ನೆಗಳಿಂದ ಸಿಂಹಸ್ವಪ್ನವಾಗಿ ಕಾಡಿದ್ದ.

ಇದೆಲ್ಲದರ ಪರಿಣಾಮ ಎಂಬಂತೆ ಈ ವರ್ಷದ ಏಪ್ರಿಲ್ ಅಲ್ಲಿ ಕೆಲವು ಗೂಂಡಾಗಳಿಂದ ಅರ್ನಬ್ ಮತ್ತು ಆತನ ಪತ್ನಿಯ ಮೇಲೆ ಹಲ್ಲೆ ಪ್ರಯತ್ನವಾಯಿತು. ಮುಚ್ಚಿಹೋದ ಅನ್ವಯ್ ನಾಯ್ಕರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷವಾದ ವಾರೆಂಟ್ ಸಹ ಇಲ್ಲದೆ ಕಳೆದ ವಾರ ಆತನನ್ನು ಮುಂಬೈ ಪೊಲೀಸ್ ಬಂಧಿಸಿತು. ಜೈಲಿನಲ್ಲಿ ತನ್ನ ಜೀವಕ್ಕೆ ಆಪತ್ತಿದೆ ಎಂದು ಅರ್ನಬ್ ಹೇಳಿದನ್ನು ನೋಡಿದ್ದೇವೆ. ಪೊಲೀಸ್ ವ್ಯವಸ್ಥೆ ಬಗೆಗೆ ಸಾಮಾನ್ಯ ಜನರಿಗಿಂತ, ಪತ್ರಕರ್ತನಿಗಿಂತ ನಿಜವಾದ ಅಪರಾಧಿಗಳಿಗೆ, ಭಯೋತ್ಪಾದಕರಿಗೆ ನಂಬಿಕೆ ಹೆಚ್ಚಾಗಿರುವುದು ಆಘಾತಕಾರಿ!

ಮುಂಬೈ ಕೋರ್ಟು ಕೂಡ ಅರ್ನಬ್ ಗೆ ಬೇಲ್ ಕೊಡಲಿಲ್ಲ. ದೇಶದಾದ್ಯಂತ ಅರ್ನಬ್ ಪರವಾಗಿ ಜನ ದನಿ ಎತ್ತಲು ಶುರು ಮಾಡಿದರು. ಮಾರನೇ ದಿವಸ ಅರ್ನಬ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದರು. ಸುಪ್ರೀಂ ಕೋರ್ಟ್ ಅರ್ನಬ್ ಗೆ ಬೇಲ್ ಕೊಟ್ಟಿದ್ದಲ್ಲದೆ, ಕೆಲವು ಗಂಭೀರ ಎಚ್ಚರಿಕೆಯನ್ನೂ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿತು. ಸೈದ್ಧಾಂತಿಕ ವಿರೋಧದ ಕಾರಣ ಸರ್ಕಾರವೊಂದು ವ್ಯಕ್ತಿಯೊಬ್ಬನನ್ನು ಗುರಿಯಾಗಿಸುವುದು ತಪ್ಪು, ಅಂತವರ ರಕ್ಷಣೆಗೆ ಸುಪ್ರೀಂ ಕೋರ್ಟು ನಿಲ್ಲುತ್ತದೆ ಎಂದು ಕೋರ್ಟು ಸ್ಪಷ್ಟಪಡಿಸಿದೆ. ಸಮಾಜದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ಸರ್ಕಾರವೊಂದು ಹತ್ತಿಕ್ಕಲು ಪ್ರಯತ್ನಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. 

ಎಲ್ಲಾ ವಿಚಾರಗಳು ಸುಲಭವಾಗಿ, ಕಡಿಮೆ ಸಮಯದಲ್ಲಿ ಜನರನ್ನು ತಲುಪುವ ಮತ್ತು ಜನರು ಹೆಚ್ಚು ಜಾಗೃತವಾಗಿರುವ ಡಿಜಿಟಲ್ ಯುಗವಿದು. ಹೀಗಿದ್ದೇ ಪತ್ರಕರ್ತನೊಬ್ಬನನ್ನು ಸುಮ್ಮನಾಗಿಸುವ ಪ್ರಯತ್ನಗಳು ಢಾಳಢಾಳಾಗಿ ನಡೆಯುತ್ತಿದೆ. ಇನ್ನು ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿ ದಿನಗಳಲ್ಲಿ ಏನೆಲ್ಲಾ ಆಗಿರಬಹುದು ಎಂದು ಊಹಿಸಿಕೊಳ್ಳಿ. 

October 27, 2020

ದೇಶಭಕ್ತಿಯ ಮುಂದೆ ಜಾತಿ, ಮತ, ಧರ್ಮಗಳು ನಗಣ್ಯ

ನನ್ನ ದೇಶವನ್ನು ನಾನು ಪೂಜಿಸುತ್ತೇನೆ, ಅದಕ್ಕಾಗಿ ನನ್ನ ಸರ್ವಸ್ವವನ್ನೂ ಧಾರೆ ಎರೆಯುತ್ತೇನೆ ಎನ್ನುವವರಿಗೆ ಜಾತಿ, ಮತ, ಪಂಥ, ಶ್ರೀಮಂತ, ಬಡವ ಎಂಬ ಯಾವ ಕಟ್ಟುಪಾಡಾಗಲಿ, ಬೇಲಿಯಾಗಲಿ ಇರುವುದಿಲ್ಲ. ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮ ಧರ್ಮಗಳನ್ನು ಮೀರಿ, ದೇಶದ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ಹೋರಾಡಿ, ಒಟ್ಟಾಗಿ ಪ್ರಾಣಾರ್ಪಣೆ ಮಾಡಿದ ವೀರರು ರಾಂ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಪಾಕ್ ಉಲ್ಲಾ ಖಾನ್. ಉತ್ತರಪ್ರದೇಶದ ಶಹಜಹಾನ್ ಪುರದಲ್ಲಿ ಮೂರು ವರ್ಷದ ಅಂತರದಲ್ಲಿ ಇಬ್ಬರ ಜನನ. ಶಾಲಾ ದಿನಗಳಿಂದಲೇ ಇಬ್ಬರೂ ಸಹ ಒಟ್ಟಾಗಿ ಇದ್ದವರು. ಸಮಾನ ಮನಸ್ಕರಾಗಿದ್ದರಿಂದ ಇಬ್ಬರಲ್ಲೂ ಸ್ನೇಹ ಹೆಮ್ಮರವಾಗಿ ಬೆಳೆಯಿತು. ಬ್ರಿಟೀಷರ ವಿರುದ್ಧ ಒಟ್ಟಿಗೆ ಹೋರಾಡಲು ಈ ಸಖ್ಯವೇ ಮುಖ್ಯ ಅಡಿಪಾಯವಾಯಿತು. ಎಲ್ಲರಿಗೂ ಆಶ್ಚರ್ಯದ ಸಂಗತಿ ಎಂದರೆ ಒರ್ವ ಕಟ್ಟಾ ಆರ್ಯಸಮಾಜಿ, ಮತ್ತೋರ್ವ ಮುಸಲ್ಮಾನ. ಇವರಿಬ್ಬರ ಜೋಡಿ ಹೇಗೆ? ಅದಕ್ಕೆ ಉತ್ತರ ದೇಶಭಕ್ತಿ ಎಂಬ ಮಂತ್ರ.

ಬಾಲ್ಯದಲ್ಲಿ ರಾಂ ಕೆಟ್ಟ ಹುಡುಗರ ಸಹವಾಸಕ್ಕೆ ಬಿದ್ದ ಕಾರಣ ಅವನಲ್ಲಿ ದುರ್ಗುಣಗಳು ಮನೆಮಾಡಿದವು. ಯಾವ ಅಮೃತ ಘಳಿಗೆಯಲ್ಲೋ ರಾಂ ದೇವಸ್ಥಾನಕ್ಕೆ ಹೋಗಲು ಪ್ರಾರಂಭಿಸಿದ. ಆ ಘಳಿಗೆಯಿಂದ ಆವನ ಜೀವನದ ದಿಕ್ಕು ಬದಲಾಯಿತು. ದುಶ್ಚಟಗಳು ದೂರವಾದವು. "ದಯಾನಂದ ಸರಸ್ವತಿಯವರ 'ಸತ್ಯಾರ್ಥ ಪ್ರಕಾಶ'ವನ್ನು ಓದಿ ನನ್ನ ಜೀವನದ ಒಂದು ಹೊಸಪುಟ ತೆರೆಯಿತು" ಎಂದು ರಾಂ ತನ್ನ ಆತ್ಮಕಥೆಯಲ್ಲಿ ಬರೆದ್ದಿದ್ದಾನೆ. ಅಂದಿನಿಂದ ಸಾಧು, ಸಂತರೊಂದಿಗಿನ ಓಡನಾಟ, ಆರ್ಯಸಮಾಜದ ನಿಷ್ಠಾವಂತ ಅನುಯಾಯಿಯಾದ ರಾಂ. ನಂತರದ ದಿನಗಳಲ್ಲಿ ರಾಂ ರಾಜಕೀಯ ಪ್ರವೇಶ ಮಾಡುತ್ತಾನೆ, ದೇಶಭಕ್ತಿ ಪೂರಿತ, ಅಧ್ಯಾತ್ಮದ ಕುರಿತ ಪುಸ್ತಕಗಳನ್ನು ಓದುತ್ತಾನೆ. ಲಕ್ನೋವಿನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಭಾಗಿಯಾಗಿ, ಲೋಕಮಾನ್ಯ ತಿಲಕರ ಮಾತಿನಿಂದ ಪ್ರೇರೆಪಿತನಾಗಿ, ಸ್ವಾತಂತ್ರ್ಯ ಹೋರಾಟದ ಹಾದಿ ಹಿಡಿಯುತ್ತಾನೆ.

ರಾಂ ಪ್ರಸಾದ್ ಬಿಸ್ಮಿಲ್

ರಾಂ ಹುಟ್ಟಿದ ಊರಿನಲ್ಲೇ ಶ್ರೀಮಂತ ಜಮೀನ್ದಾರ, ಮುಸಲ್ಮಾನ್ ಕುಟುಂಬದಲ್ಲಿ ಅಶ್ಪಾಕನ ಜನನವಾಗುತ್ತದೆ. ಕನೈಲಾಲ್ ದತ್ತಾ ಮತ್ತು ಖುದಿರಾಂ ಬೋಸರ ಕ್ರಾಂತಿಕಾರಿ ಜೀವನ ಅಶ್ಪಾಕನನ್ನು ಕ್ರಾಂತಿಕಾರ್ಯ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸುತ್ತದೆ. ಗೆಂಡಲಾಲ್ ದೀಕ್ಷಿತ್ ನೇತೃತ್ವದಲ್ಲಿ ಮೈನ್‌ಪುರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜರಾಮ್ ಭಾರ್ತಿಯಾ ಎಂಬ ವಿದ್ಯಾರ್ಥಿಯನ್ನು ಬಂಧಿಸುವ ಸಲುವಾಗಿ ಅಶ್ಪಾಕನ ಶಾಲೆಯ ಮೇಲೆ ಪೊಲೀಸ್ ದಾಳಿ ನಡೆಯುತ್ತದೆ. ಈ ಘಟನೆಯ ನಂತರ ಆಶ್ಪಾಕ್ ಕ್ರಾಂತಿಕಾರ್ಯಕ್ಕೆ ಧುಮುಕುತ್ತಾನೆ. ಉತ್ತರ ಭಾರತದ ಕ್ರಾಂತಿಕಾರಿ ಗುಂಪನ್ನು ಸೇರಿಕೊಳ್ಳಲು ಹುಡುಕಾಟ ಆರಂಭಿಸಿ, ಬನಾರ್ಸಿಲಾಲ್ ಎಂಬ ಸ್ನೇಹಿತನ ಮೂಲಕ ರಾಂ ಪ್ರಸಾದ್ ಬಿಸ್ಮಿಲ್ ನ ಪರಿಚಯವಾಗುತ್ತದೆ. ಇವರಿಬ್ಬರ ಮಿಲನ ಗದರ್ ಪಾರ್ಟಿಯ ನಂತರ ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ಮತ್ತೊಂದು ಘಟ್ಟ ಪ್ರಾರಂಭವಾಗುತ್ತದೆ.

ಅಶ್ಪಾಕ್ ಉಲ್ಲಾ ಖಾನ್

ಮುಂದಿನ 7 ವರ್ಷಗಳಲ್ಲಿ ರಾಂ ಮತ್ತು ಅಶ್ಪಾಕ್ ನಡುವೆ ಅತ್ಯಂತ ಆತ್ಮೀಯ ಬಾಂಧವ್ಯ ಬೆಳೆಯುತ್ತದೆ. ಇಬ್ಬರೂ ಗಾಂಧೀಜೀ ಕರೆಕೊಟ್ಟ ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಾರೆ, ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರೂರವರ ಸ್ವರಾಜಿಸ್ಟ್ ಪಾರ್ಟಿಯ ಪರವಾಗಿ ಒಟ್ಟಿಗೆ ಪ್ರಚಾರ ಮಾಡುತ್ತಾರೆ. ಇಬ್ಬರಲ್ಲೂ ಸಮಾನವಾಗಿದ್ದ ಸಂಗತಿಗಳೆಂದರೆ - ದೇಶಭಕ್ತಿ ಮತ್ತು ಇಬ್ಬರೂ ಸಹ ಬರಹಗಾರರಾಗಿದ್ದರು. 'ಬೋಲ್ಶೆವಿಕೋಂ ಕೀ ಕರ್ತೂತ್' ಎಂಬ ಬಂಗಾಲಿ ಕೃತಿ, ಅರವಿಂದರ 'ಯೋಗಿಕ್ ಸಾಧನ್' ಎಂಬ ಕೃತಿಗಳ ಅನುವಾದ, 'ಮನ್ ಕೀ ಲಹಾರ್' ಮತ್ತು 'ಸ್ವದೇಶಿ ರಂಗ್' ಎಂಬ ಕವನ ಸಂಕಲನಗಳನ್ನು ರಾಂ ತನ್ನ ಕ್ರಾಂತಿಕಾರಿ ಜೀವನದಲ್ಲಿ ಬರೆಯುತ್ತಾನೆ. ಗೋರಖ್ಪುರ ಬಂದಿಖಾನೆಯಲ್ಲಿ ತನ್ನ ಆತ್ಮಕಥೆಯನ್ನೂ ಸಹ ಬರೆಯುತ್ತಾನೆ. ಬ್ರಿಟೀಷರ ವಿರುದ್ಧ ಯುದ್ಧ ಘೋಷಣೆಯಾಗಿ 'ಸರ್ಫ಼ರೋಶಿ ಕೀ ತಮನ್ನಾ' ಎಂಬ ಪ್ರಸಿದ್ಧ ಕವನವನ್ನು ರಾಂ ರಚಿಸಿದ್ದಾರೆ. ಆಶ್ಪಾಕ್ ಕೂಡ ಉರ್ದು ಕವಿಯಾಗಿದ್ದರು. ವಾರ್ಸಿ ಮತ್ತು ಹಸರತ್ ಎಂಬ ಕಾವ್ಯನಾಮದಲ್ಲಿ ಘಜ಼ಲ್ ಮತ್ತು ಕವನಗಳನ್ನು ಬರೆದಿದ್ದಾರೆ.

ರಾಂ ಮತ್ತು ಅಶ್ಪಾಕ್ 'ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್' ಎಂಬ ಕ್ರಾಂತಿಕಾರಿ ಸಂಸ್ಥೆಯ ಪ್ರಮುಖ ನಾಯಕರಾಗಿದ್ದರು. 1924 ರಲ್ಲಿ ಕೈಹೊತ್ತಿಗೆಯನ್ನು ಮುದ್ರಿಸಿ, ಅದನ್ನು ರಂಗೂನಿನಿಂದ ಪೇಶಾವರ್ ವರೆಗೂ ಹಂಚಿ, ಜನ ಜಾಗೃತಿ ಮೂಡಿಸಲು ಸಂಸ್ಥೆ ಮುಂದಾಗುತ್ತದೆ. ಗದರ್ ಪಾರ್ಟಿಯ ಅಧ್ಯಾಯ ಮುಗಿದ ನಂತರ ಕ್ರಾಂತಿಯ ಕಾಟ ಇಲ್ಲ ಎಂದು ತಿಳಿದಿದ್ದ ಬ್ರಿಟೀಷ್ ಸರ್ಕಾರಕ್ಕೆ ಈ ಕೈಹೊತ್ತಿಗೆಗಳನ್ನು ನೋಡಿ ಛಡಿ ಏಟು ಬಿದ್ದಂತಾಯಿತು. ಅದರಲ್ಲಿದ್ದ ಮಾತುಗಳ ಕಸುವು ಕಂಡು ಬೆಚ್ಚಿಬೀಳುವಂತಾಯಿತು. ಕೈಹೊತ್ತಿಗೆಯ ವಿಷಯ ಸಿದ್ದಪಡಿಸಿದ್ದು ರಾಂ ಮತ್ತು ಅಶ್ಪಾಕ್. ಸಂಸ್ಥೆಗೆ ಹಣದ ಅವಶ್ಯಕತೆ ಹೆಚ್ಚು ಬೀಳುತ್ತದೆ ಅದಕ್ಕಾಗಿ ಸರ್ಕಾರಿ ಹಣವನ್ನು ದರೋಡೆ ಮಾಡಲು ನಿಶ್ಚಯ ಮಾಡುತ್ತಾರೆ. ರಾಂ ನ ಈ ನಿಶ್ಚಯವೇ ನಂತರ ನಡೆದ ಕಾಕೋರಿ ರೈಲು ದರೋಡೆ ಎಂಬ ಪ್ರಮುಖ ಘಟನೆಗೆ ನಾಂದಿಯಾಗುತ್ತದೆ. ಯೋಜನೆ ಸಿದ್ಧಪಡಿಸಿ ಎಲ್ಲರೂ ಉತ್ಸಾಹದಲ್ಲಿ ಮುಂದುವರೆಯಬೇಕಾದರೆ ಅಶ್ಪಾಕ್ - "ನಾವು ಮಾಡಹೊರಟಿರುವ ಈ ಕಾರ್ಯ ಮುಂದೆ ಬಹಳ ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ. ಇಡೀ ಆಂಗ್ಲ ಸಮಾಜಕ್ಕೆ ಸೆಡ್ಡು ಹೊಡೆದು, ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ನಮ್ಮ ಗುರಿ ಮುಟ್ಟುವ ಮುನ್ನವೇ ಸಿಕ್ಕಿಬೀಳಬೇಕಾಗುತ್ತದೆ" ಎಂದು ಶಾಂತನಾಗಿ ಎಚ್ಚರಿಸಿಸುತ್ತಾನೆ. ಆತನ ಮಾತಲ್ಲಿ ಸತ್ಯವಿತ್ತು ಆದರೆ ಸಭೆ ದರೋಡೆ ಮಾಡಲು ನಿರ್ಧರಿಸಿತು. ಅದಕ್ಕೆ ಅನುಗುಣವಾಗಿ ಅಶ್ಪಾಕ್ ದರೋಡೆಗೆ ನಿಲ್ಲುತ್ತಾನೆ. ಸಂಸ್ಥೆಯ ನಿರ್ಧಾರ ಮತ್ತು ರಾಂ ನ ಮಾತು ಆತನಿಗೆ ಕೊನೆಯ ಮಾತು, ತನ್ನ ವಯ್ಯಕ್ತಿಕ ಭಾವನೆಗಿಂತ ರಾಂ, ಸಂಸ್ಥೆ ಮತ್ತು ದೇಶ ದೊಡ್ಡದಾಗಿತ್ತು. ಕಾಕೋರಿ ದರೋಡೆಯಲ್ಲಿ ರಾಂ ಮತ್ತು ಅಶ್ಪಾಕ್ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕಾಕೋರಿಯಲ್ಲಿ ರೈಲನ್ನು ನಿಲ್ಲಿಸಿ ಹಣವನ್ನು ಇಟ್ಟಿದ್ದ ಸಂದೂಕನ್ನು ಒಡೆದು ಪರಾರಿ ಆಗುವುದಾಗಿತ್ತು ಇವರ ಯೋಜನೆ. ಅಶ್ಪಾಕ್ ಮತ್ತು ರಾಂ ದರೋಡೆ ಮಾಡುವ ಕ್ರಿಯೆಯಲ್ಲಿ ಭಾಗವಹಿಸುವ ಎಲ್ಲರನ್ನೂ ಕಾಯುವ ಜವಾಬ್ದಾರಿ ಹೊತ್ತಿದ್ದರು. ಸಂದೂಕನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದರು ಆದರೆ, ಅದು ಒಡೆಯುವ ಸೂಚನೆ ಕಾಣಲಿಲ್ಲ. ಸಂದರ್ಭವನ್ನರಿತ ಅಶ್ಪಾಕ್ ತನ್ನ ಕೈಯ್ಯಲ್ಲಿದ್ದ ಪಿಸ್ತೂಲನ್ನು ರಾಂ ಗೆ ಕೊಟ್ಟು ಸಂದೂಕನ್ನು ಒಡೆಯಲು ಮುಂದಾಗುತ್ತಾನೆ. ಕೆಲವೇ ಪೆಟ್ಟುಗಳ ನಂತರ ಸಂದೂಕು ಒಡೆಯುತ್ತದೆ. ಅಶ್ಪಾಕ್ ಅದನ್ನು ಸಾಧಿಸಿದ್ದ. ಆರಂಭದಲ್ಲಿ ಯಾರು ಬಲವಾಗಿ ವಿರೋಧಿಸಿದ್ದನೋ ಅವನೇ ತನ್ನ ಕೈಯಾರ ಶಿಶ್ತಿನ ಸಿಪಾಯಿಯಂತೆ, ಅಣ್ಣ ರಾಂ ನ ಆಜ್ಞೆಯಂತೆ ಸಂದೂಕನ್ನು ಒಡೆದಿದ್ದ. ನಂತರ ಅದರಲ್ಲಿದ್ದ ಹಣವನ್ನು ದೋಚಿ ಪರಾರಿಯಾಗುತ್ತಾರೆ.

ಕಾಕೋರಿ ದರೋಡೆ ಆಂಗ್ಲ ಸರ್ಕಾರ ತನ್ನ ಪ್ರತಿಷ್ಠೆಗೆ ಎಸೆದ ಸವಾಲು ಎಂದು ಸ್ವೀಕರಿಸಿ ತ್ವರಿತವಾಗಿ ಗುಪ್ತಚರ ಜಾಲವನ್ನು ವಿಶಾಲವಾಗಿ ಹರಡುತ್ತದೆ. ಬಿಸ್ಮಿಲ್ ಶಹಜಹಾನ್ ಪುರದಲ್ಲೇ ತಲೆಮರೆಸಿಕೊಂಡಿದ್ದ ಮತ್ತು ಅಶ್ಪಾಕ್ ಬನಾರಸ್ ನಲ್ಲಿ ತಲೆಮರೆಸಿಕೊಂಡಿದ್ದ. ಕೆಲವೇ ದಿನಗಳಲ್ಲಿ ಆಂಗ್ಲರು ರಾಂಪ್ರಸಾದ್ ಬಿಸ್ಮಿಲ್ ರನ್ನು ಬಂಧಿಸುತ್ತಾರೆ. ಆದರೆ, ಅಶ್ಪಾಕ್ ಬನಾರಸಿನಿಂದ ಬಿಹಾರ್ ಮತ್ತು ಅಲ್ಲಿಂದ ದೆಹಲಿಗೆ ತೆರಳುತ್ತಾನೆ. ಲಂಡನ್ನಿನಲ್ಲಿದ್ದ ಲಾಲ ಹರದಯಾಳ್ ರನ್ನು ಕ್ರಾಂತಿಕಾರ್ಯದ ಸಲುವಾಗಿ ಭೇಟಿಯಾಗಲು ವಿದೇಶಕ್ಕೆ ತೆರಳಲು ತಯಾರಿ ನಡೆಸುತ್ತಿದ್ದ ಅಶ್ಪಾಕ್. ದೆಹಲಿಯಲ್ಲಿ ಪಠಾನ್ ಸ್ನೇಹಿತ ಅನ್ನಿಸಿಕೊಂಡವನು ದ್ರೋಹ ಮಾಡಿದ ಕಾರಣ ಅಶ್ಪಾಕ್ ಪೋಲಿಸರಿಗೆ ಸಿಕ್ಕಿ ಬೀಳುತ್ತಾನೆ. ತಸಾದುಖ್ ಹುಸೇನ್ ಎಂಬ ಪೋಲೀಸ್ ಅಧಿಕಾರಿ ರಾಂ ಮತ್ತು ಅಶ್ಪಾಕ್ ಮಧ್ಯೆ ಹಿಂದೂ ಮತ್ತು ಮುಸಲ್ಮಾನ್ ಬೇಧವನ್ನು ಬಿತ್ತಲು ಪ್ರಯತ್ನಿಸುತ್ತಾನೆ. "ಬ್ರಿಟೀಷರ ನೌಕರಿ ಮಾಡುತ್ತಿರುವ ನಿಮ್ಮಂತಹವರು ಖಾಫ಼ಿರ್ ಹೊರತು ಭಾರತಕ್ಕಾಗಿ ಹೋರಾಡುವ ನನ್ನ ರಾಂ ಅಲ್ಲ" ಎಂದು ಉತೃಷ್ಟವಾಗಿ ಪ್ರತಿಕ್ರಿಯಿಸುತ್ತಾನೆ ಅಶ್ಪಾಕ್. ರಾಂ ಕೂಡ ಅಶ್ಪಾಕನ ಬಗ್ಗೆ ಅತೀ ಉನ್ನತ ಭಾವನೆಯನ್ನು ತನ್ನ ಅತ್ಮಕಥೆಯಲ್ಲಿ ವಿವರಿಸಿದ್ದಾನೆ.

ಕಾಕೋರಿ ಮತ್ತು ಇತರ ಕ್ರಾಂತಿಕಾರಿ ಚಟುವಟಿಕೆ ಕಾರಣದಿಂದಾಗಿ ರಾಂ ಮತ್ತು ಅಶ್ಪಾಕನಿಗೆ ಮರಣದಂಡನೆ ವಿಧಿಸುತ್ತದೆ ಬ್ರಿಟೀಷ್ ಸರ್ಕಾರ. ಡಿಸೆಂಬರ್ 11, 1927 ರಂದು ಗೋರಖ್ಪುರದಲ್ಲಿ ರಾಂ ಮತ್ತು ಲಕ್ನೋವಿನ ಫ಼ಸಿಯಾಬಾದಿನಲ್ಲಿ ಅಶ್ಪಾಕರನ್ನು ಒಂದೇ ದಿನ ನೇಣಿಗೇರಿಸುತ್ತಾರೆ. ರಾಂ ಯಾವಾಗಲೂ ಆಶ್ಪಾಕನನ್ನು ತಮ್ಮನಂತೆ ಕಂಡರೆ, ಅಶ್ಪಾಕ್ ರಾಂ ನನ್ನು ಅಣ್ಣ ಮತ್ತು ತನ್ನ ನಾಯಕನನ್ನಾಗಿ ಗೌರವಿಸುತ್ತಿದ್ದ. ಅವರಿಬ್ಬರ ಸ್ನೇಹವನ್ನು ಪರಮಾತ್ಮನಿಂದಲೂ ಬೇರ್ಪಡಿಸಲು ಆಗುತ್ತಿರಲಿಲ್ಲ. ಅದಕ್ಕೆ ಕಾರಣ ಅವರಿಬ್ಬರಲ್ಲಿ ಸಮಾನವಾಗಿ ಉರಿಯುತ್ತಿದ್ದ ಭಾರತದ ಸ್ವಾತಂತ್ರ್ಯದ ಸಂಕಲ್ಪ. ಇಬ್ಬರಲ್ಲೂ ಒಂದೇ ಧ್ಯೇಯ ಮತ್ತು ಆರಾಧ್ಯ ದೈವ - ಭಾರತಮಾತೆ, ಹೃದಯದಲ್ಲಿದ್ದದ್ದು ದೇಶಭಕ್ತಿ. ಅಶ್ಪಾಕ್ ಮತ್ತು ರಾಂ ಪ್ರಸಾದನ ಜೀವನ ಭಾರತೀಯರಿಗೆ ಒಂದು ಪಾಠ. ದೇಶಭಕ್ತಿಯ ಮುಂದೆ ಜಾತಿ, ಮತ, ಧರ್ಮಗಳು ನಗಣ್ಯ.

October 5, 2020

ಜಗತ್ತಿನ ಪತ್ರಿಕಾ ಮಾಧ್ಯಮದ ಮೇಲೆ ಸವಾರಿ ಮಾಡುತ್ತಿದೆ ಚೀನಾ!

ಜಗತ್ತು ಕೊರೋನಾ ಎಂಬ ಮಹಾಮಾರಿಯಿಂದಾಗಿ 10 ಲಕ್ಷಕ್ಕೂ ಹೆಚ್ಚು ಸಾವನ್ನು ಕಂಡಿದೆ. ಜಗತ್ತಿಗೆ ಇದೊಂದು ಶಾಪವಾಗಿ ಪರಿಣಮಿಸಿದೆ. ಚೀನಾ, ಕೊರೋನಾ ವಿಚಾರವನ್ನು ಮುಚ್ಚಿಟ್ಟುಕೊಳ್ಳದೆ, ಸತ್ಯವನ್ನು ಜಗತ್ತಿಗೆ ತಿಳಿಸಿ ತನ್ನಲ್ಲೇ ಆದಷ್ಟೂ ತಡೆಹಿಡಿಯಬಹುದಿತ್ತು. ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಇತರ ವಾಮ ಮಾರ್ಗವನ್ನು ಬಳಸುತ್ತಿದೆ. ಒಂದೆಡೆ ಕೊರೋನಾ ಮತ್ತೊಂದು ಕಡೆ ಲದಾಖ್ ಭಾಗದಲ್ಲಿ ಚೀನಾದ ಅಪ್ರಚೋದಿತ ಆಕ್ರಮಣವನ್ನು ಭಾರತ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಎಡಪಂಕ್ತಿಯ ಚಿಂತನೆಯುಳ್ಳ ಪತ್ರಿಕೆಯಾದಂತಹ 'ದಿ ಹಿಂದೂ', ಅಕ್ಟೋಬರ್ 1 ರಂದು ಚೀನಾದ ರಾಷ್ಟ್ರೀಯ ದಿನದ ಪ್ರಯುಕ್ತ ಮುಖಪುಟವನ್ನೊಳಗೊಂಡಂತೆ ಬರೊಬ್ಬರಿ 3 ಪುಟಗಳ ಜಾಹಿರಾತನ್ನು ಪ್ರಕಟಿಸಿತು! ಚೀನಾದಿಂದ ಹಣ ಪಡೆಯುತ್ತಿರುವ ಈ ಪತ್ರಿಕೆ ತನ್ನ ಓದುಗರಲ್ಲಿ ಚೀನಾ ಅಥವಾ ಕಮ್ಯೂನಿಸಂ ಪರವಾದ ಚಿಂತನೆಯನ್ನು ಪ್ರಚಾರ ಮಾಡುತ್ತಿದೆ.

ಕೊರೋನಾ ವೈರಸ್ ಹರಡುವಿಕೆಯಲ್ಲಿ ತನ್ನ ಪಾತ್ರದ ಕುರಿತಂತೆ ವಿಶ್ವದಾದ್ಯಂತ ದೇಶಗಳು ಚೀನಾವನ್ನು ಪ್ರಶ್ನಿಸುತ್ತಿದ್ದಂತೆ ಅದು ಪ್ರತಿವಾದ ಮತ್ತು ಇತರ ದೇಶಗಳು ತಮ್ಮ ಜನರನ್ನು ರಕ್ಷಿಸುವಲ್ಲಿ ವಿಫ಼ಲವಾಗಿದೆ ಎಂದು ಆರೋಪ ಮಾಡಲು ಶುರುಮಾಡಿದೆ. ಇದಕ್ಕಾಗಿ ಅಯಾ ದೇಶದ ಪತ್ರಿಕಾ ಮಾಧ್ಯಮಗಳನ್ನೇ ಉಪಯೋಗಿಸಿಕೊಳ್ಳುತ್ತದೆ. ತನ್ನ ವಿಚಾರವನ್ನು ಜಗತ್ತಿನಾದ್ಯಂತ ಹರಡಲು ಇತರ ದೇಶಗಳ ಮಾಧ್ಯಮವನ್ನು ಸಹ ಖರೀದಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾಧ್ಯಮದ ಮೇಲೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಶತಕೋಟಿ ಡಾಲರ್ಗಳಷ್ಟು ಮೊತ್ತವನ್ನು ಚೀನಾ ಹೂಡಿಕೆ ಮಾಡುತ್ತಿದೆ. ಒಂದು ವರದಿಯ ಪ್ರಕಾರ, ಚೀನಾ ಆಡಳಿತವು ವಾರ್ಷಿಕವಾಗಿ 1.3 ಶತಕೋಟಿ ಡಾಲರ್ ಗಳನ್ನು ಹೂಡಿಕೆ ಮಾಡುತ್ತಿದೆ. ಅಮೇರಿಕಾದ ನ್ಯಾಯಾಲಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಚೀನಾ ಆಡಳಿತ ಮುಖವಾಣಿಯಾದ 'ಚೀನಾ ಡೈಲಿ' ಕಳೆದ 4 ವರ್ಷಗಳಲ್ಲಿ ಜಾಹಿರಾತು ಮತ್ತು ಮುದ್ರಣಕ್ಕಾಗಿ ಅಮೇರಿಕಾದ ಪತ್ರಿಕೆಗಳಿಗೆ 19 ದಶಲಕ್ಷ ಡಾಲರ್ ಪಾವತಿಸಿದೆ. 'ದಿ ವಾಲ್ ಸ್ಟ್ರೀಟ್ ಜರ್ನಲ್' ಅಮೇರಿಕಾದ ಹೆಚ್ಚು ಪ್ರಚಲಿತ ಹೊಂದಿರುವ ಪತ್ರಿಕೆಗಳಲ್ಲೋಂದು. ಈ ಪತ್ರಿಕೆ, ಚೀನಾದ ಜಾಹಿರಾತುಗಳ ಮೂಲಕವೇ 2016 ನವೆಂಬರ್ ನಿಂದ 6 ದಶಲಕ್ಷ ಡಾಲರ್ ಅಷ್ಟು ಮೊತ್ತವನ್ನು ಸಂಪಾದಿಸಿದೆ. ಲಾಸ್ ಏಂಜೆಲ್ಸ್, ಬೋಸ್ಟನ್, ಚಿಕಾಗೋದ ಪ್ರಮುಖ ಪತ್ರಿಕೆಗಳು ಚೀನಾ ಡೈಲಿಯ ಗ್ರಾಹಕರು ಎಂದು ಪಟ್ಟಿ ಮಾಡಲಾಗಿದೆ.

ಯೂರೋಪ್ ರಾಷ್ಟ್ರಗಳಲ್ಲೂ ಸಹ ಚೀನಾ ತನ್ನ ಡ್ರಾಗನ್ ಹಸ್ತವನ್ನು ಚಾಚಿದೆ. ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಗಳ ಚಿತ್ರಣವನ್ನು ಬದಲಾಯಿಸಲು ಚೀನಾದ ಪ್ರಯತ್ನಗಳು ಯೂರೋಪಿನ ಮಾಧ್ಯಮದ ಮೇಲೆ ಪ್ರಭಾವ ಸಾಧಿಸುವ ಕಾರ್ಯತಂತ್ರಕ್ಕೆ ಉದಾಹರಣೆಯಾಗಿದೆ. 2019ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಹಾಂಗ್‌ಕಾಂಗ್‌ ಪ್ರತಿಭಟನೆಯ ಸಮಯದಲ್ಲಿ, ಮಧ್ಯ ಮತ್ತು ಪೂರ್ವ ಯುರೋಪಿನ ಚೀನಾ ರಾಯಭಾರ ಕಚೇರಿಗಳು ಸ್ಥಳೀಯ ಮಾಧ್ಯಮಗಳನ್ನು ರಾಯಭಾರಿಗಳ ಲೇಖನ ಅಥವಾ ಸಂದರ್ಶನಗಳನ್ನು ಪ್ರಕಟಿಸುವ ಪ್ರಸ್ತಾಪದೊಂದಿಗೆ ಸಂಪರ್ಕಿಸಿವೆ ಎಂದು ಚೀನಾದ ತಜ್ಞರು ಹೇಳಿದ್ದಾರೆ. ಜೆಕ್ ಗಣರಾಜ್ಯದಲ್ಲಿ, ಚೀನಾದ ರಾಯಭಾರಿ ಜಾಂಗ್ ಜಿಯಾನ್ಮಿನ್ ಹಾಂಗ್‌ಕಾಂಗ್‌ ಪ್ರತಿಭಟನೆಯನ್ನು ಟೀಕಿಸಿ, ವಿದೇಶಿ ಪ್ರಭಾವವನ್ನು ಉಲ್ಲೇಖಿಸಿ ಬರೆದ ಲೇಖನ ಅಲ್ಲಿನ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಎಸ್ಟೋನಿಯಾದಲ್ಲಿ, ಚೀನಾದ ರಾಯಭಾರಿಯ ಲೇಖನ ದೇಶದ ಅತಿದೊಡ್ಡ ಪತ್ರಿಕೆ 'ಪೋಸ್ಟ್‌ಮೀಸ್‌' ನಲ್ಲಿ ಪ್ರಕಟವಾಯಿತು. ಲಿಥುವೇನಿಯಾದ 'ವಿಲ್ನಿಯಸ್ ಡೀನಾ', ಎಡಪಂಕ್ತಿಯ ಚಿಂತನೆಯುಳ್ಳ ಪೋಲಾಂಡಿನ 'ಟ್ರೈಬುನಾ' ಮತ್ತು ಸ್ಲೊವಾಕಿಯಾದ 'ನೋವೆ ಸ್ಲೊವೊ' ಚೀನಾದ ಹಣ ಪಡೆದು ಅವರ ಪರವಾದ ಲೇಖನಗಳನ್ನು ಪ್ರಕಟಮಾಡಿದೆ. ಇದಕ್ಕೆಲ್ಲ ಸ್ಲೊವಾಕಿಯಾದಲ್ಲಿದ್ದ ಚೀನಾದ ಅಂದಿನ ರಾಯಭಾರಿ ಲಿನ್ ಲಿನ್ ಸಾಕ್ಷಿ. ಇದಲ್ಲದೇ, ಉತ್ತರ ಮ್ಯಾಸಿಡೋನಿಯಾ, ಬೋಸ್ನಿಯಾ, ಹರ್ಜೆಗೋವಿನಾ ಮತ್ತು ಮಾಂಟೆನೆಗ್ರೊಗಳಲ್ಲಿನ ಮಾಧ್ಯಮಗಳಲ್ಲಿ ಇದೇ ರೀತಿಯ ಲೇಖನಗಳು ಪ್ರಕಟವಾಗಿವೆ. 

ಆಸ್ಟ್ರೇಲಿಯಾ ಮತ್ತು ಚೀನಾಕ್ಕೂ ವ್ಯಾವಹಾರಿಕವಾಗಿ ನಿಕಟ ಸಂಬಂಧವಿದೆ. ಆಸ್ಟ್ರೇಲಿಯಾದ ಮೂರನೇ ಒಂದು ಭಾಗದಷ್ಟು ರಫ್ತನ್ನು ಚೀನಾ ಕೊಂಡುಕೊಳ್ಳುತ್ತದೆ. ಚೀನಾ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುತ್ತದೆ. ಆಸ್ಟ್ರೇಲಿಯಾದಲ್ಲಿ ವ್ಯಾಸಾಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳಿಂದ 17% ರಷ್ಟು ಆದಯವನ್ನು ಅಲ್ಲಿನ ವಿಶ್ವವಿದ್ಯಾಲಯಗಳು ಸಂಪಾದಿಸಿದರೆ, ಚೀನಿ ಪ್ರವಾಸಿಗರಿಂದ ಸುಮಾರು 11 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಅಷ್ಟು ಆದಾಯವನ್ನು ಆಸ್ಟ್ರೇಲಿಯಾ ಸಂಪಾದಿಸುತ್ತದೆ. ಆಸ್ಟ್ರೇಲಿಯಾದ ರಾಜಕೀಯ ನೀತಿಯನ್ನು ಬದಲಾಯಿಸಲು ದೊಡ್ಡ ಮೊತ್ತದ ದೇಣಿಗೆಗಳನ್ನು ನೀಡಿ, ನಾಗರೀಕ ಸಮಾಜದ ಚರ್ಚೆಗಳಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಪಟ್ಟಿವೆ. ದಕ್ಷಿಣ ಚೀನಾ ಸಮುದ್ರ ನೀತಿಯ ಕುರಿತು 2017 ಅಲ್ಲಿ ಸರ್ಕಾರದ ಚಟುವಟಿಕೆ ಸಂಬಂಧಿತ ರಾಜಕೀಯ ಸುಳಿವನ್ನು ಚೀನಾದ ಮಾಧ್ಯಮಕ್ಕೆ ಬಿಟ್ಟುಕೊಟ್ಟರೆಂದು ಜನಪ್ರಿಯ ರಾಜಕಾರಣಿ; ಸ್ಯಾಮ್ ಡಸ್ತಾರಿ ಅವರನ್ನು ಆಸ್ಟ್ರೇಲಿಯಾದ ಸಂಸತ್ತಿನಿಂದ ಹೊರಹಾಕಲಾಯಿತು. ಈ ಘಟನೆ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯಗಳ ಮೇಲೆ ಮತ್ತು ಅಲ್ಲಿನ ಮಾಧ್ಯಮಗಳ ಮೇಲೆ ಬೆಳೆಯುತ್ತಿರುವ ಚೀನಾದ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಇನ್ನು 'ದಿ ಹಿಂದೂ' ಪತ್ರಿಕೆಯ ವರದಿಯ ವಿಚಾರಕ್ಕೆ ಬರೋಣ. ಭಾರತದಲ್ಲಿ 'ದಿ ಹಿಂದೂ' ಪತ್ರಿಕೆ ಚೀನಾದ ಗ್ರಾಹಕವಾಗಿದೆ. ಅಗತ್ಯವಾದ ಹಕ್ಕು ಮತ್ತು ಇತರ ನಿಯಮಗಳನ್ನು ಪಾಲಿಸಿಕೊಂಡು ಜಾಹಿರಾತುಗಳನ್ನು ಪ್ರಕಟಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೇ, ಚೀನಾದಂತಹ ಶತ್ರು ರಾಷ್ಟ್ರದ ಹಣ ಪಡೆದುಕೊಂಡು ಅದರ ಪರವಾಗಿ ನಮ್ಮ ದೇಶದ ದೈನಂದಿನ ಪತ್ರಿಕೆಯ ಮುಖವಾಣಿಯಲ್ಲಿ ಸುದ್ಧಿ ಪ್ರಕಟವಾಗುವುದು ನಿಜಕ್ಕೂ ಅಪಾಯಕಾರಿ. ಅಕ್ಟೋಬರ್ 1 ರಂದು ಪ್ರಕಟವಾದ ಆ ಜಾಹಿರಾತಿನ ಆರಂಭದಲ್ಲಿ ಚೀನಾದ ರಾಯಭಾರಿ - ಚೀನಾ ಕೋರೋನಾ ವಿರುದ್ಧ ಜಗತ್ತಿಗೆ ಎಷ್ಟು ಧೈರ್ಯದಿಂದ ಸಹಾಯ ಮಾಡಿದೆ, ಕೊರೋನಾ ವೈರಸ್ ಹರಡುವಿಕೆಯಲ್ಲಿ ಚೀನಾದ ಪಾತ್ರವಿಲ್ಲ ಎಂದು ಹೇಳುತ್ತಾ ಭಾರತ- ಚೀನಾ ಸಂಬಂಧ ಮತ್ತು ಇತ್ತೀಚಿನ ಗಡಿ ಉದ್ವಿಗ್ನತೆಯ ಬಗ್ಗೆ ಮತಾಡಿದ್ದಾರೆ. ಗಲ್ವಾನ್ ಪ್ರದೇಶದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ, ಭಾರತೀಯ ಸೈನ್ಯದ ಮೇಲೆ ಆಕ್ರಮಣ ಮಾಡಿ, ಈಗ ಶಾಂತಿ, ಸಹಕಾರ ಮತ್ತು ಸಂವಹನದ ಅಗತ್ಯತೆಯ ಕುರಿತು ಭಾರತಕ್ಕೆ ಪಾಠ ಮಾಡುವಂತಹ ಮಾತುಗಳನ್ನು ಆ ಜಾಹಿರಾತಿನಲ್ಲಾಡಿದೆ. ಬಡತನವನ್ನು ನಿರ್ಮೂಲನೆ ಮಾಡಿ, ಹೇಗೆ ತನ್ನನ್ನು ಸಮೃದ್ಧ ರಾಷ್ಟ್ರವನ್ನಾಗಿ ಪರಿವರ್ತಿಸಿಕೊಂಡಿದೆ ಎಂಬುದರ ಬಗ್ಗೆ ಆ ಜಾಹಿರಾತಿನಲ್ಲಿ ಚೀನಾ ಹೇಳಿಕೊಂಡಿದೆ.

'ದಿ ಹಿಂದೂ' ಪತ್ರಿಕೆ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮುಖವಾಣಿ ಎಂಬಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಆದರೆ, ಚೀನಾದಲ್ಲಿ ಮಸೀದಿಯನ್ನು ಒಡೆದು ಶೌಚಾಲಯವನ್ನಾಗಿ ಪರಿವರ್ತಿಸಿದ ಕುರಿತು, ಖುರಾನ್ ಅನ್ನು ತಿದ್ದುತ್ತಿರುವ ಕುರಿತು, ಉಯ್ಘರ್ ಮುಸಲ್ಮಾನರನ್ನು ಸಾಯಿಸುತ್ತಿರುವ ಕುರಿತು ಮತ್ತು ಚೀನಾದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಎಂದೂ ಮಾತಾಡುವುದಿಲ್ಲ. ಜಗತ್ತಿನಲ್ಲಿ ಭಯೋತ್ಪಾದನೆಯ ಮೂಲವಾಗಿರುವ ಪಾಕೀಸ್ತಾನದ ಆಪ್ತಮಿತ್ರ ಚೀನಾ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಭಯೋತ್ಪಾದನೆಯನ್ನು ಹತ್ತಿಕ್ಕಲು ಮುಂದಾಗಿರುವ ಜಾಗತಿಕ ಶಕ್ತಿ - ಚೀನಾ ಎಂದು ಹೇಳುವುದನ್ನು 'ದಿ ಹಿಂದೂ' ಮರೆಯಲಿಲ್ಲ. ಗಲ್ವಾನ್ ಘರ್ಷಣೆ ಕುರಿತು ಚೀನಾ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಯು ತನ್ನ ಮುಖಪುಟವನ್ನೇ ಬಿಟ್ಟುಕೊಟ್ಟಿದೆ ಮತ್ತು ಈ ಕ್ರಮಕ್ಕಾಗಿ ಚೀನಾ 'ದಿ ಹಿಂದೂ' ಗೆ ಧನ್ಯವಾದವನ್ನೂ ತಿಳಿಸಿದೆ. ರಾಷ್ಟ್ರದ ಹಿತಾಸಕ್ತಿ ಮತ್ತು ಸತ್ಯಾಂಶ ಹೊರತಾಗಿ ಹಣ ಮಾತ್ರ ಈ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯವನ್ನು ನಿರ್ಧರಿಸುತ್ತದೆ ಎಂಬುದು ಸಾಬೀತಾಗಿದೆ. ಜಗತ್ತಿಗೆ ಕೊರೋನಾವನ್ನು ಹರಡಿದ ದೇಶ - ಚೀನಾ ಎಂದು ಬಿಂಬಿಸುವ ಬದಲು, ಜಾಗತಿಕ ನಾಯಕ - ಚೀನಾ ಎಂದು ಬಿಂಬಿಸಲು ಹೊರಟಿದೆ 'ದಿ ಹಿಂದೂ' ಪತ್ರಿಕೆ! ಇದು ಭಾರತದ ಕಳಂಕ ಎಂದೇ ಹೇಳಬಹುದು. 

ಚೀನಾ, ಕೊರೋನಾ ವಿಚಾರವಾಗಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು, ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪರದೇಶದ ಪತ್ರಿಕೆಗಳಿಗೆ ಹಣದ ಆಮಿಷ ಒಡ್ಡುತ್ತಿದೆ. ತಾನು ಬೆಳೆಯುವುದಕ್ಕಾಗಿ ಇತರರನ್ನು ಹಾಳು ಮಾಡುವುದರಲ್ಲಿ ಎತ್ತಿದ ಕೈ ಚೀನಾ. ಅದಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಉಪಯೋಗಿಸಿಕೊಳ್ಳುತ್ತಿದೆ. ಅವರ ಆಮಿಷಕ್ಕೆ ಒಳಗಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಟ್ಟು ಚೀನಾದ ಪರವಾಗಿ ನಿಲ್ಲುವವರು ಎಡಪಂಕ್ತಿಯ ಕಮ್ಮ್ಯುನಿಸ್ಟರು. ಇಂತಹ ದೇಶದ್ರೋಹಿ ಪತ್ರಿಕೆಗಳನ್ನು ಪ್ರತ್ಯೇಕವಾಗಿರಿಸಿ ನಾವು ಎಚ್ಚರಿಕೆಯಿಂದರಬೇಕು. ಸರ್ಕಾರ ಮತ್ತು ತಂತ್ರಜ್ಞಾನ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಮುಖ್ಯವಾಗಿ ಚೀನಾದ ಪ್ರಭಾವವನ್ನು ತಗ್ಗಿಸಲು ಮುಂದಾಗಬೇಕು. ಪತ್ರಿಕಾ ಮಾಧ್ಯಮದ ಮೇಲೆ ಸವಾರಿ ಮಾಡುತ್ತಿರುವ ಚೀನಾದ ಆಟಾಟೋಪ ಅಂತ್ಯವಾಗಬೇಕು.

September 5, 2020

ಆಜಾದರಿಂದ ಸ್ಪೂರ್ತಿ ಪಡೆದ ಕ್ರಾಂತಿ 'ಸೂರ್ಯ'

1930 ರ ಹೊತ್ತಿನಲ್ಲಿ ಭಾರತದ ಎಲ್ಲಾ ಕ್ರಾಂತಿಕಾರಿಗಳಿಗೂ ಚಂದ್ರಶೇಖರ ಅಜಾದನ ಹಿರಿಮೆ, ಸಂಘಟನ ಕೌಶಲ್ಯ, ಆತನ ವ್ಯಕ್ತಿತ್ವ ಮತ್ತು ದೇಶಕ್ಕಾಗಿ ಸಮರ್ಪಿತ ಜೀವನದ ಬಗ್ಗೆ ಗೌರವ ಭಾವನೆ ಮೂಡಿತ್ತು. ಆಜಾದರಿಂದ ಸ್ಪೂರ್ತಿ ಪಡೆದುಕೊಂಡು ಕ್ರಾಂತಿಕಾರಿಯಾಗಿ ಬ್ರಿಟೀಷರ ವಿರುದ್ಧ ಸೆಟೆದು ನಿಂತವರಲ್ಲಿ ಮುಂಚೂಣಿಯಲ್ಲಿ ಬರುವ ಹೆಸರೇ ಬಂಗಾಳದ 'ಮಾಸ್ತರ್ ದಾ'; ಸೂರ್‍ಯಸೇನ್

Master Suryasen

ಸೂರ್ಯಸೇನ್ 22 ಮಾರ್ಚ್ 1894 ರಲ್ಲಿ ಚಿತ್ತಗಾಂಗ್ ನಲ್ಲಿ ಜನಿಸುತ್ತಾರೆ. 1916 ರಲ್ಲಿ ಬಿ.ಎ. ಪದವಿ ಪಡೆದು ತಮ್ಮ ಉಪನ್ಯಾಸಕರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ. ತಮ್ಮ ವಿದ್ಯಾಭ್ಯಾಸದ ನಂತರ 1918 ರಲ್ಲಿ  ಚಿತ್ತಗಾಂಗಿನ ನಂದಂಕನಾನ್ ನಲ್ಲಿ ಗಣಿತದ ಶಿಕ್ಷಕರಾಗಿ ಕೆಲಸಕ್ಕೆ ಸೇರುತ್ತಾರೆ. ಕ್ರಾಂತಿಕಾರಿ ಆದರ್ಶಗಳ ಕಡೆ ಆಕರ್ಷಿತರಾದ ಅವರು ಬಂಗಾಳದ ಕ್ರಾಂತಿಕಾರಿ ಸಮಿತಿಯಾದ 'ಅನುಶಿಲನ ಸಮಿತಿ' ಗೆ ಸೇರುತ್ತಾರೆ. ಅವರಿಗೆ ಗುಮಾಸ್ತರನ್ನು ತಯಾರಿಸುವ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ. ವಿದ್ಯಾರ್ಥಿಗಳಲ್ಲಿ ದೇಶ, ಸಮಾಜ ಹಾಗೂ ರಾಜಕೀಯ ಪರಿಸ್ಥಿತಿಯ ಬಗ್ಗೆ ಜಾಗೃತಿಯನ್ನು ಮಾಡುವುದೇ ಶಿಕ್ಷಕನ ಕೆಲಸ ಎಂದೇ ಅವರ ಬಲವಾದ ನಂಬಿಕೆ. ಅದರಂತೆ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಶಿಕ್ಷಣ ನೀಡುವುದರ ಜೊತೆಗೆ ದೇಶಭಕ್ತಿ ವಿಚಾರಗಳನ್ನೂ ಅವರಲ್ಲಿ ಬಿತ್ತಲಾರಂಭಿಸುತ್ತಾರೆ. ದಿನವೂ ಯುವಕರೊಂದಿಗೆ ಸಂಪರ್ಕ, ಹೊಸ ಯುವಕರ ಭೇಟಿ ಮಾಡುತ್ತಾ ಸ್ವಾತಂತ್ರ್ಯ ಮತ್ತು ಕ್ರಾಂತಿಯ ಮಹತ್ವವನ್ನು ಬೋಧಿಸುತ್ತಾ ತಮ್ಮದೇ ಆದ ಕ್ರಾಂತಿ ಪಡೆಯನ್ನು ಕಟ್ಟುತ್ತಾರೆ. ಬಂಗಾಲದಲ್ಲಿ ಕಮ್ಯುನಿಸಂ ಪ್ರಭಾವವಿತ್ತಾದರೂ ಈ ನೆಲಕ್ಕೆ ಆ ವಿಚಾರಧಾರೆ ಹೊಂದುವುದಿಲ್ಲ ಎಂದು ಸ್ವಾಮೀ ವಿವೇಕಾನಂದ ಮತ್ತು ಅರವಿಂದರ ರಾಷ್ಟ್ರೀಯ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದರು.

ಚಿತ್ತಗಾಂಗಿನ ಬೆಟ್ಟಗುಡ್ಡ ಪ್ರದೇಶದಲ್ಲಿ ಸೂರ್ಯಸೇನರ ಸಂಗಾತಿಗಳು ಸೇರಿ ತಮ್ಮ ಭವಿಷ್ಯದ ಕ್ರಾಂತಿಕಾರ್ಯದ ರೂಪುರೇಷೆಯನ್ನು ಚರ್ಚಿಸುತ್ತಿದ್ದರು. ಇದೇ ಸಮಯದಲ್ಲಿ ಉತ್ತಮ ತರುಣರನ್ನು ಆರಿಸಿ ತರಪೇತು ಕೊಡುತ್ತಿದ್ದರು. ಆಗಲೇ ಗಣೇಶ್ ಘೋಷ್, ಅನಂತ ಸಿಂಗ್ ಮತ್ತು ಕಲ್ಕತ್ತಾದ ದೇವೇನ್ ಡೇ ಮಾಸ್ತರಿಗೆ ಸಿಗುತ್ತಾರೆ. ದೇವೇನ್ ದರೋಡೆ ನಿಭಾಯಿಸುವುದರಲ್ಲಿ ನಿಪುಣ. ಇವರ ಆಗಮನದಿಂದಾಗಿ ಮಾಸ್ತರರಿಗೆ ಹೆಚ್ಚು ಬಲ ಬಂದಂತಾಗುತ್ತದೆ. ಇವರ ಕ್ರಾಂತಿಯ ಚಟುವಟಿಗೆ ನಡೆಯುತ್ತಿದ್ದರೂ ಅದರ ಸುಳಿವು ಮಾತ್ರ ಪೊಲೀಸರಿಗಾಗಲಿ ಸರ್ಕಾರಕ್ಕಾಗಲಿ ಸ್ವಲ್ಪವೂ ಸಿಗುತ್ತಿರಲಿಲ್ಲ. ಎಲ್ಲಾ ಕ್ರಾಂತಿಕಾರಿ ಸಂಘಟನೆಗಳಿಗೆ ಎದುರಾಗುವಂತೆ ಹಣದ ಸಮಸ್ಯೆ ಇವರಿಗೂ ಎದುರಾಗುತ್ತದೆ.

ಒಮ್ಮೆ ರೈಲ್ವೇ ಇಲಾಖೆಯ ವಾಹನ ಚಿತ್ತಗಾಂಗಿನಲ್ಲಿ ತಿಂಗಳ ಸಂಬಳ ತೆಗೆದುಕೊಂಡು ಹೋಗುತ್ತಿತ್ತು. ನಾಲ್ವರು ಯುವಕರು ಆ ಗಾಡಿಗೆ ಅಡ್ಡ ಹಾಕಿ ಪಿಸ್ತೂಲು ತೋರಿಸಿ ಚಾಲಕನನ್ನು ಇಳಿಸುತ್ತಾರೆ. ನಂತರ ಒಬ್ಬ ಗಾಡಿಯನ್ನು ಓಡಿಸಿಕೊಂಡು, ಹಣದ ಪೆಟ್ಟಿಗೆಯನ್ನು ದರೋಡೆ ಮಾಡಿಕೊಂಡು ಅಲ್ಲಿಂದ ನಾಪತ್ತೆಯಾಗುತ್ತಾರೆ. ಈ ಕೆಲಸ ಮಾಡಿದವರು ದೇವೇನ್ ಡೇ ಮತ್ತು ಅನಂತ್ ಸಿಂಗ್. ಈ ಕಾರ್ಯಾಚರಣೆಯಲ್ಲಿ ಕ್ರಾಂತಿಕಾರಿಗಳಿಗೆ 17000 ರೂಪಾಯಿ ಸಿಗುತ್ತದೆ. ಈ ಘಟನೆಯಿಂದಾಗಿ ಚಿತ್ತಗಾಂಗಿನಲ್ಲೊಂದು ಕ್ರಾಂತಿಕಾರಿಗಳ ದಳ ಅಸ್ತಿತ್ವದಲ್ಲಿದೆ ಎಂದು ಸರ್ಕಾರಕ್ಕೆ ಅನುಮಾನ ಹುಟ್ಟಿಕೊಳ್ಳುತ್ತದೆ. ಹುಡುಕಾಟ ನಡೆಸಿದರೂ ಮಾಸ್ತರ್ ಅಥವಾ ಅವರ ಸಂಗಾತಿಗಳಾರೂ ಸಿಕ್ಕಿ ಬೀಳುವುದಿಲ್ಲ. ಅಪಾರ ಆತ್ಮೀಯರ ಬಳಗ ಹೊಂದಿದ ಮಾಸ್ತರ ಜಾಡನ್ನು ಹಿಡಿಯಲು ಪೋಲೀಸರಿಗೆ ಸಾಧ್ಯವಾಗುವುದಿಲ್ಲ. ಮಾಸ್ತರ್ ಪೋಲಿಸರಿಗೆ ಸಿಕ್ಕಿ ಬೀಳದಿದ್ದಕ್ಕೆ ಕಾರಣ ಅವರು ಹೆಚ್ಚು ಕಾಲ ಚಿಕ್ಕಚಿಕ್ಕ ಹಳ್ಳಿಗಳಲ್ಲಿ ಇರುತ್ತಿದ್ದದ್ದು. ಆಜಾದರಿಗಿದ್ದಂತೆ ಸಾಮಾನ್ಯರು ಮತ್ತು ಹಳ್ಳಿಗಳು ಮಾಸ್ತರರಿಗೆ ರಕ್ಷಣಾ ಕೋಟೆಯಾಗಿತ್ತು.

ಪೋಲಿಸರು ಗುಮಾನಿಯಿಂದ ಮಾಸ್ತರರಿದ್ದ ಹಳ್ಳಿಗೂ ಪ್ರವೇಶಿಸುತ್ತಾರೆ. ಇದನ್ನು ಗಮನಿಸಿದ ಡೇವೇನ್ ಡೇ ಎಲ್ಲರನ್ನು ಎಚ್ಚರಿಸುತ್ತಾನೆ. ಮರುಕ್ಷಣದಲ್ಲೇ ಕ್ರಾಂತಿಕಾರಿ ಗೆಳೆಯರು ಜೋಪಾನವಾಗಿ ಬಾಂಬು, ಪಿಸ್ತೂಲು ರಿವಾಲ್ವರ್ ಮುಂತಾದ ವಸ್ತುಗಳನ್ನು ಕೊಂಡೊಯ್ದು ಗುಡ್ಡಗಾಡಿನಲ್ಲಿ ಮಾಯವಾಗುತ್ತಾರೆ. ಪೋಲಿಸರಿಗೆ ಇದರ ಸುಳಿವು ಸಿಕ್ಕಿ ಹಿಂಬಾಲಿಸುತ್ತಾರೆ. ಮಾಸ್ತರ್ ಮತ್ತು ಗೆಳೆಯರು ದರೋಡೆಕೋರರ ಗುಂಪು ಎಂದು ಹಳ್ಳಿಗರಿಗೆ ಹೇಳಿ ಅವರನ್ನು ತಮ್ಮ ಜೊತೆ ಸೇರಿಸಿಕೊಂಡು 'ಕಳ್ಳರು, ಕಳ್ಳರು! ' ಎಂದು ಹಿಡಿಯಲು ಪ್ರಯತ್ನಿಸುತ್ತಾರೆ. ಇದು ಪೋಲಿಸರ ಆಟ ಎಂದು ತಿಳಿದು,  ಹಳ್ಳಿಗರ ಬಳಿ ತಮ್ಮ ಹತ್ತಿರವಿದ್ದ 2000 ರೂಪಾಯಿ ಹಣವನ್ನು ಎಸೆದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಿಟ್ಟೂ ಬಿಡದೆ ಹಿಂಬಾಲಿಸಿದ ಹಳ್ಳಿಗರಿಂದ ತಪ್ಪಿಸಿಕೊಂಡು ಬೆಟ್ಟದ ಒಂದು ಭಾಗಕ್ಕೆ ಹೋಗಿ ಬಂಡೆಗಳ ಹಿಂದೆ ಅಡಗಿಕೊಂಡು ಗುಂಡು ಹಾರಿಸಲು ಪ್ರಾರಂಭಿಸುತ್ತಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಳ್ಳುತ್ತಾರೆ. ಆದರೂ ಮಾಸ್ತರರ ಚಾಕಚಕ್ಯತೆಯಿಂದ ಎಲ್ಲರೂ ತಪ್ಪಿಸಿಕೊಳ್ಳುತ್ತಾರೆ.

ಕ್ರಾಂತಿಕಾರಿಗಳು ಕೆಲವರು ಅಹಿಂಸಾತ್ಮಕವಾಗಿ ಕಾಂಗ್ರೇಸಿನ ಚಟುವಟಿಕೆಗಲ್ಲಿ ಒಲವು ತೋರಿಸಿದ್ದರು. ಮಾಸ್ತರರು ಹಿಂಸಾತ್ಮಕ ಮಾರ್ಗದಲ್ಲೇ ಸ್ವಾತಂತ್ರ್ಯ ಬರಬೇಕೆಂಬ ವಾದ ಮಾಡುತ್ತಿರಲಿಲ್ಲ. ಯಾವುದಾದರು ಸರಿ ಸ್ವಾತಂತ್ಯ್ರ ದೊರಕಬೇಕು ಎಂಬುದು ಅವರ ಆಶಯವಾಗಿತ್ತು. ಈ ದಿಕ್ಕಿನಲ್ಲಿ ಮಾಸ್ತರರು ಕಾಂಗ್ರೇಸಿನ ಅಧಿವೇಶನದಲ್ಲೂ ಭಾಗವಹಿಸಿದ್ದರು. ಆದರೆ, ಕಾಂಗ್ರೇಸಿನ ಒಳಹೊಕ್ಕಂತೆಲ್ಲ ಅದರ ಕಾರ್ಯವಿಧಾನದಲ್ಲಿ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತೊಮ್ಮೆ ಕ್ರಾಂತಿಕಾರ್ಯಕ್ಕೆ ಧುಮುಕುತ್ತಾರೆ. ಹಳೆಯ ಗೆಳೆಯರನ್ನು ಸೇರಿಸಿಕೊಂಡು ತನ್ನ ಎಲ್ಲಾ ಚಟುವಟಿಕೆಗಳಿಗೂ ಚಿತ್ತಗಾಂಗ್ ಕೇಂದ್ರ ಮಾಡಿಕೊಂಡು ಯುವಕರನ್ನು ಸಂಘಟಿಸಬೇಕು ಎಂದು ನಿರ್ಧಾರ ಮಾಡುತ್ತಾರೆ.

ತಮ್ಮ ಸಂಘಟನೆ ಸೇನೆಯ ರೀತಿಯಲ್ಲಿ ಶಿಸ್ತು ಬದ್ಧವಾಗಿರಬೇಕು. ಅಜಾದರ ರೀತಿಯಲ್ಲಿ 'ಇಂಡಿಯನ್ ರಿಪಬ್ಲಿಕನ್ ಆರ್ಮಿ' ಎಂಬ ಹೆಸರಿನಲ್ಲಿ ಸೇನೆ ಸ್ತಾಪಿಸುವುದು ಅವರ ಯೋಜನೆಯಾಯಿತು. ತನ್ನನ್ನು ಕ್ರಾಂತಿಕಾರಿ ಎನ್ನುವ ಬದಲು ಸೈನಿಕ ಎಂದು ಕರೆದುಕೊಳ್ಳಲಾರಂಭಿಸಿದರು. ಸೈನಿಕ ಸಂಘಟನೆ, ಗೆರಿಲ್ಲ ಯುದ್ದ ತಂತ್ರ ಮುಂತಾದ ವಿಷಯದ ಬಗ್ಗೆ ಅಧ್ಯಯನ ನಡೆಸುತ್ತಾರೆ. ದರೋಡೆಯ ಬದಲು ಹಣಕ್ಕಾಗಿ ಜನರಿಂದ ಚಂದ ರೂಪದಲ್ಲಿ ಹಣ ಸಂಗ್ರಹಣೆ ಮಾಡುತ್ತಾರೆ. ಹೀಗೆ ಸುಮಾರು 40000 ರೂಪಾಯಿ ಅಷ್ಟು ಸಂಗ್ರಹವಾಗುತ್ತದೆ.  ಸೈನಿಕ ತರಬೇತಿಯನ್ನು ಆರಂಭಿಸಿ ತನ್ನ ಸಹಕಾರಿಗಳಿಗೆ ಸುತ್ತಮುತ್ತಲಿನ ಪರಿಸರವನ್ನು ಅಭ್ಯಸಿಸಲು ಹೇಳುತ್ತಾರೆ. ಅಲ್ಲಿನ ಬೆಟ್ಟಗುಡ್ಡಗಳು, ರಹಸ್ಯ ಸ್ಥಳಗಳು, ಆಯಾಕಟ್ಟಿನ ಸ್ಥಳ, ವನ ಪ್ರದೇಶ ಇವೆಲ್ಲವನ್ನೂ ಚಿರಪರಿಚಿತ ಮಾಡಿಕೊಳ್ಳಲು ಸೂಚಿಸುತ್ತಾರೆ. ಸರ್ಕಾರದ ಯಾವ ಯಾವ ಇಲಾಖೆ ಎಲ್ಲಿಲ್ಲಿವೆ, ಸೈನಿಕ ಶಕ್ತಿ, ಬ್ರಿಟೀಷರ ಕ್ಲಬ್ಬುಗಳು, ಟೆಲಿಗ್ರಾಫ಼್ ಮತ್ತು ರೈಲುಗಳ ವ್ಯವಸ್ಥೆ, ಅದರ ಓಡಾಟದ ಸಮಯಗಳ ಮಾಹಿತಿಯನ್ನೂ ಸಂಗ್ರಹಿಸುತ್ತಾರೆ.

ಮಾಸ್ತರರ ಕಾರ್ಯ ವಿಧಾನ ವಿಶಿಷ್ಟವಾಗಿತ್ತು. ಅವರ ಮನಸ್ಸಿನಲ್ಲಿದ ಯೋಜನೆಗಳನ್ನು ತನ್ನ ಸಹಕಾರಿಗಳಿಗೆ ತಿಳಿಸುತ್ತಿರಲಿಲ್ಲ. ಸಮಯಕ್ಕೆ ಸೂಚನೆಕೊಟ್ಟು ಕೆಲಸ ಮಾಡಿಸುತ್ತಿದ್ದರು. ತಮ್ಮ ಸಂಘಟನೆಯ ಬಲ ಅರಿತುಕೊಂಡ ಮಾಸ್ತರರು ಆಂಗ್ಲರಿಗೆ ಸೆಡ್ಡು ಹೊಡೆಯುವಂತಹ ಐತಿಹಾಸಿಕ ಕಾರ್ಯಕ್ಕೆ ಮುಂದಾದರು. ಅದೇ ಚಿತ್ತಗಾಂಗ್ ಶಸ್ತ್ರಾಗಾರದ ದರೋಡೆ! ಎಪ್ರಿಲ್ 18ರ ರಾತ್ರಿ ಎಲ್ಲರೂ ಹೊರಟರು. ಆ ತಂಡದಲ್ಲಿ ದೇವಪ್ರಸಾದ್, ಅನಂದ ಪ್ರಸಾದ್ ಗುಪ್ತ ಸಹೋದರರು, ಗಣೇಶ್ ಘೋಷ್, ಅನಂತ ಸಿಂಗ್, ಲೋಕನಾಥ್ ಬಲ್ ಮತ್ತಿತರರು ಇದ್ದರು. ಇವರಿಗೆಲ್ಲ ನಾಯಕರಾಗಿ ಮಾಸ್ತರ್ ಸೂರ್‍ಯಸೇನ್ ಇದ್ದರು. ಗಣೇಶ್ ಮತ್ತು ಅನಂತ ಸಿಂಗ್ ಒಂದು ಟ್ಯಾಕ್ಸಿಯಲ್ಲಿ ಹೊರಟು ಮಧ್ಯದಲ್ಲಿ ಚಾಲಕನಿಗೆ ಪಿಸ್ತೂಲು ತೋರಿಸಿ, ಹೆದರಿಸಿ ಒಂದು ಮನೆಯಲ್ಲಿ ಕೈ ಕಾಲು ಕಟ್ಟಿಹಾಕುತ್ತಾರೆ. ನಂತರ ಅದೇ ಟ್ಯಾಕ್ಸಿಯನ್ನು ತೆಗೆದುಕೊಂಡು ಮಾಯವಾದರು. ಮತ್ತೊಂದು ಕಡೆ ಲೋಕನಾಥರ ತಂಡ ಮತ್ತೊಂದು ಟ್ಯಾಕ್ಸಿಯಲ್ಲಿ ಹೊರಟು ಆ ಚಾಲಕನನ್ನು ಕ್ಲೋರೋಫ಼ಾರ್ಮ್ ಬಳಸಿ ಎಚ್ಚರ ತಪ್ಪಿಸಿ, ರಸ್ತೆಯಲ್ಲಿ ಇಳಿಸಿ ಟ್ಯಾಕ್ಸಿಯನ್ನು ತೆಗೆದುಕೊಂಡು ಹೊರಡುತ್ತಾರೆ. ತುಸು ಹೊತ್ತಿನಲ್ಲೆ ಎಲ್ಲರೂ ಗುಡ್ಡದ ಮೇಲಿದ್ದ ಶಸ್ತ್ರಾಗಾರದ ಬಳಿ ಬಂದು ಸೇರುತ್ತಾರೆ. ಕೆಲ ಹೊತ್ತಿನಲ್ಲೇ ಮಾಸ್ತರರು ತಮ್ಮ ಗಾಡಿಯಲ್ಲಿ ಅಲ್ಲಿಗೆ ಬಂದು ಸೇರುತ್ತಾರೆ.

ಎಲ್ಲರೂ ಸೈನಿಕ ಸಮವಸ್ತ್ರ ಧರಿಸಿದ್ದರು. ಸೊಂಟದಲ್ಲಿ ಪಿಸ್ತುಗಳಿದ್ದವು. ಶಸ್ತ್ರಾಗಾರದ ಬಳಿಯಿದ್ದ ನಾಲ್ಕು ಪೋಲೀಸ್ ಕಾವಲುಗಾರರು ಇವರನ್ನು ನೋಡಿ ಯಾರೋ ಮೇಲಧಿಕಾರಿ ಎಂದುಕೊಳ್ಳುತ್ತಾರೆ. ಮುಂದೆ ಹೋಗುತ್ತಿದ್ದಂತೆ ಪಿಸ್ತೂಲು ತೆಗೆದು ಕಾವಲುಗಾರರ ಮೇಲೆ ಗುಂಡು ಹಾರಿಸುತ್ತಾ 'ಫ಼ೈರ್' ಎಂದು ಆದೇಶಿಸುತ್ತಾರೆ. ಒಬ್ಬ ಕಾವಲುಗಾರ ಬಿದ್ದಮೇಲೆ ಇತರರ ಮೇಲೆ ಬಾಂಬನ್ನು ಎಸೆಯಲಾಗುತ್ತದೆ. ಹೊರಾಟದ ಮಧ್ಯದಲ್ಲಿ ಮಾಸ್ತರರು ಮತ್ತು ಜೊತೆಯಲಿದ್ದ 30 ಕ್ರಾಂತಿಯೋಧರು ಶಸ್ತ್ರಾಗಾರ ಪ್ರವೇಶಿಸುತ್ತಾರೆ. ಅಲ್ಲಿದ್ದ ಪೆಟ್ಟಿಗೆಗಳನ್ನು ಒಡೆದು ಯಥೇಚ್ಛ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಾರೆ. ಇದೇ ರೀತಿ ಲೋಕನಾಥ್ ತಂಡ ಆಕ್ಸಿಲರಿ ಮಿಲಿಟರಿ ಶಸ್ತ್ರಾಗಾರದ ಬಳಿ ಆಕ್ರಮಣ ಮಾಡುತ್ತಾರೆ. ಅಲ್ಲಿನ ಅಧಿಕಾರಿಯನ್ನು ಕೊಂದು ಅಲ್ಲಿಗೆ ಕಾರಿನಲ್ಲಿ ಬಂದ ಮೂವರು ಆಂಗ್ಲರ ಮೇಲೆ ಗುಂಡಿನ ಸುರಿಮಳೆಗೆರೆಯುತ್ತಾರೆ. ಕ್ರಾಂತಿಯೋಧರನ್ನು ಕಂಡು ಕಾರನ್ನು ಅಲ್ಲಿಯೇ ಬಿಟ್ಟು ಓಡುತ್ತಾರೆ ಆಂಗ್ಲರು. ಶಸ್ತ್ರಾಗಾರದ ಬಾಗಿಲನ್ನು ಓಡೆಯುವ ಮುನ್ನ ಮತ್ತೊಂದು ದಿಕ್ಕಿನಲ್ಲಿ ದಾಳಿಯಾಗುತ್ತದೆ. ಬೇರೆ ದಾರಿ ಇಲ್ಲದೆ ಶಸ್ತ್ರಾಗಾರಕ್ಕೆ ಕ್ರಾಂತಿಯೋಧರು ಬೆಂಕಿ ಹಚ್ಚುತ್ತಾರೆ. ಕೈಗೆ ಸಿಕ್ಕ ಕೆಲವು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾರೆ. ಮತ್ತೊಂದು ತಂಡ ಟೆಲಿಫ಼ೋನ್ ಎಕ್ಸ್ ಛೇಂಜ್ ಮೆಲೆ ದಾಳಿ ಮಾಡಿ ಕೆಲಸ ಮುಗಿಸಿ ಮರಳುತ್ತಾರೆ. ಸೈನಿಕ ರೀತಿಯಲ್ಲಿ ತಮ್ಮ ನಾಯಕ ಮಾಸ್ತರ್ ಸೂರ್ಯಸೇನರಿಗೆ ವಂದನೆ ಸಲ್ಲಿಸುತ್ತಾರೆ.

ಆಕ್ರಮಣದ ಸುದ್ಧಿ ಕೇಳಿ ಆಂಗ್ಲರು ತತ್ತರಿಸಿ ಹೋಗುತ್ತಾರೆ. ತಮ್ಮ ಮಡದಿ ಮಕ್ಕಳೊಡನೆ ಮನೆಗಳನ್ನು ತೊರೆದು ನದಿದಡಕ್ಕೆ ಧಾವಿಸುತ್ತಾರೆ. ಅಷ್ಟರಲ್ಲಿ ಲೂಯಿಸ್ ಗನ್ ಎಂಬಲ್ಲಿ ಗುಂಡಿನ ಹಾರಾಟ ಕೇಳಿಸುತ್ತದೆ. ಗಾಯಾಳುಗಳನ್ನು ಗುಪ್ತ ಸ್ಥಳಗಳಿಗೆ ತಲುಪಿಸಲು ಹೋಗಿದ್ದ ತಂಡ ಹಿಂತಿರುಗಿರಲಿಲ್ಲ. ಮಾಸ್ತರರ ಚಿಂತೆ ಹೆಚ್ಚಾಗುತ್ತದೆ. ಗುಡ್ಡಗಳಲ್ಲಿ ತಲೆಮರೆಸಿಕೊಂಡು ಬೆಳಗಾದ ಮೇಲೆ ಯೋಚಿಸುವುದು ಸರಿ ಎಂದು ತೀರ್ಮಾನಿಸುತ್ತಾರೆ. ನಂತರ ಗುಡ್ಡಗಾಡುಗಳಲಿ ಎಲ್ಲರೂ ತಪ್ಪಿಸಿಕೊಳ್ಳುತ್ತಾರೆ.

ಈ ಘಟನೆ ಆಂಗ್ಲರಿಗೆ ಸಿಡಿಲು ಬಡಿದಂತಾಗುತ್ತದೆ. ಕ್ರಾಂತಿಕಾರಿಗಳನ್ನು ಬಂಧಿಸಲು ಸಹಾಯ ಮಾಡುವವರಿಗೆ 5000 ರೂಪಾಯಿ ಕೊಡುವುದಾಗಿ ಘೋಷಿಸುತ್ತಾರೆ. ಎಲ್ಲಾ ಕಡೆ ಈ ಸುದ್ಧಿ ಕಳಿಸಿ ವಿಮಾನದಲ್ಲಿ ಸೈನಿಕರನ್ನು ಕರೆಸಿಕೊಳ್ಳುತ್ತಾರೆ. ಇದನ್ನು ಗಮನಿಸಿದ ಮಾಸ್ತರ್ ಕ್ರಾಂತಿಕಾರರನ್ನು ಒಂದೆಡೆ ಸೈನಿಕ ರೀತಿಯಲ್ಲಿ ನಿಲ್ಲಿಸುತ್ತಾರೆ. ಅವರಿಗೆಲ್ಲ ಪರಿಸ್ಥಿತಿಯನ್ನು ವಿವರಿಸಿ ಅಂತಿಮ ಹೋರಾಟಕ್ಕೆ ಎಲ್ಲರನ್ನು ಅಣಿಮಾಡುತ್ತಾರೆ. ಶತ್ರು ಸೈನ್ಯ ತಮಗಿಂತಲೂ ಅನೇಕ ಪಟ್ಟು ಉತ್ತಮವಾದರೂ ಚಿಂತಿಸದೆ ತಮ್ಮ ಶೌರ್ಯ, ಸಾಹಸ, ದೇಶಭಕ್ತಿಯನ್ನು ಪ್ರದರ್ಶಿಸುವ ಸಮಯ ಬಂದಿದೆ ಎಂದು ಸೇನಾನಾಯಕನಂತೆ ಅವರಲ್ಲಿ ಉತ್ಸಾಹ ತುಂಬುತ್ತಾರೆ.

ಸಂಜೆ 4:30ರ ಹೊತ್ತು, ಅವರ ಬಳಿ ಕೆಲವು ಮೆಷಿನ್ಗನ್ಗಳು ಇದ್ದವು. ಅವುಗಳನ್ನು ಬಳಸಿಕೊಂಡು ಲೋಕನಾಥರ ತಂಡ ಹೋರಾಟ ಮಾಡಬೇಕು ಎಂದು ಆದೇಶಿಸಿದರು. ಒಂದು ಕಡೆ ಶತ್ರಸಜ್ಜಿತ ಆಂಗ್ಲ ಸೈನ್ಯ ಮಾತ್ತೊಂದು ಕಡೆ 1-2 ದಿನಗಳಿಂದ ಊಟವಿಲ್ಲದ, ಕೇವಲ ಮನೋಬಲದ ಮೇಲೆ ಜೀವಿಸಿದ್ದ ಕ್ರಾಂತಿಯೋಧರು! ಆಂಗ್ಲರ ತೋಪುಗಳು ಬೆಂಕಿ ಉಗುಳಲು ಶುರುಮಾಡಿದವು. ಮೊದಲ ಸುತ್ತಿನಲ್ಲೇ 11 ಜನ ಅಸುನೀಗಿದರು. ಒಬ್ಬೊಬ್ಬರೂ 'ವಂದೇ ಮಾತರಂ' ಎಂದು ಘೊಷಿಸುತ್ತಾ ಭಾರತ ಮಾತೆಗೆ ಬಲಿದಾನ ನೀಡಿದರು. ಕೆಲವರು ಗಾಯಗೊಂಡು ಪರಾರಿಯಾದರು. ಆಂಗ್ಲರ ಕೈಗೆ 1933 ರಲ್ಲಿ ಮಾಸ್ತರ್ ಸೂರ್ಯಸೇನರು ಆಂಗ್ಲರಿಗೆ ಸಿಕ್ಕಿ ಬೀಳುತ್ತಾರೆ. ಅವರಿಗೆ ಮರಣದಂಡನೆ ವಿಧಿಸಲಾಗುತ್ತದೆ. 1934 ಜನವರಿ 14 ರಂದು ಮಾಸ್ತರ್ ಸೂರ್‍ಯಸೇನರನ್ನು ಗಲ್ಲಿಗೇರಿಸುತ್ತಾರೆ! ಇತಿಹಾಸಸಲ್ಲಿ ಕ್ರಾಂತಿಯ 'ಸೂರ್ಯ' ಅಮರರಾಗುತ್ತಾರೆ!


Master Suryasen's Grave

August 26, 2020

ಕಮ್ಯುನಿಸ್ಟ್ ಡ್ರಾಗನ್ ಅನ್ನು ಭೇಟೆಯಾಡುವ ಕಾಲಬಂದಿದೆ

ಚೀನಾದ ಅಧ್ಯಕ್ಷ ಇತ್ತಿಚಿನ ತನ್ನ ಭಾಷಣದಲ್ಲಿ 2020 ಇಸವಿ ಒಂದು ಮೈಲಿಗಲ್ಲು ಎಂದು ಹೇಳಿದ್ದ. ದುರಾದೃಷ್ಟವಶಾತ್, ಜೀಪಿಂಗ್ ಅಂದುಕೊಂಡಂತೆ 2020 ಅವರ ಪರವಾಗಿನ ಮೈಲಿಗಲಾಗುತ್ತಿಲ್ಲ. ಬದಲಾಗಿ, ಚೀನಾ ಕೊರೋನಾ ಮತ್ತು ತನ್ನ ಆಕ್ರಮಣಕಾರಿ ಧೋರಣೆ ಇಂದಾಗಿ ಜಗತ್ತಿನಲ್ಲಿ ತನ್ನ ಖ್ಯಾತಿಯನ್ನು ಕಳೆದುಕೊಳ್ಳುತ್ತಿದೆ. ಕೊರೋನಾದ ಕಾರಣದಿಂದಾಗಿ ಅನೇಕ ದೇಶಗಳು ಚೀನಾ ಅವಲಂಬಿತ ಬಗ್ಗೆ ಕಠಿಣ ಪಾಠಗಳನ್ನು ಕಲಿತವು ಮತ್ತು ಚೀನಾದ ಕಮ್ಯೂನಿಸ್ಟ್ ಆಡಳಿತದ ಬಗೆಗಿನ ಅಂತಾರಾಷ್ಟ್ರೀಯ ಧೋರಣೆಗಳು ಬದಲಾದವು. ಚೀನಾ, ವೂಹಾನ್ ನಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ಬಗೆಗಿನ ಪ್ರಮುಖ ಮಾಹಿತಿಯನ್ನು ಜಗತ್ತಿನೆದುರಿಗೆ ಬಿಚ್ಚಿಡಲೇ ಇಲ್ಲ. ಇಂದಿಗೂ ಸಹ, ತನ್ನ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 4634 ಎಂದೇ ಪ್ರತಿಪಾದಿಸುತ್ತಿದೆ. ಇದಲ್ಲದೇ, ಈ ಸಾಂಕ್ರಾಮಿಕವನ್ನೇ ಬಂಡವಾಳ ಮಾಡಿಕೊಂಡು ಇತರೆ ದೇಶಗಳಿಗೆ ಕಳಪೆ ಗುಣಮಟ್ಟದ ಕಿಟ್ಗಳನ್ನು ರಫ಼್ತು ಮಾಡಿತು ಮತ್ತು ಆಕ್ರಮಣಕಾರಿಯಾಗಿ ಇಂಡೋ ಪೆಸಿಫ಼ಿಕ್ ಪ್ರದೇಶದಲ್ಲಿ ವಿಸ್ತರಣೆಯನ್ನು ತೀವ್ರಗೊಳಿಸಿತು. ತೈವಾನ್, ಹಂಕಾಂಗ್ ಮತ್ತು ಭಾರತದ ಗಲ್ವಾನಲ್ಲಿ ನಡೆದ ಘಟನೆಗಳೇ ಇವಕ್ಕೆ ಸಾಕ್ಷಿಯಾಗಿವೆ. ಹತ್ತು ಸಾವಿರಕ್ಕೂ ಹೆಚ್ಚು ಸೈನಿಕರನ್ನು ಲದಾಕ್ ಪ್ರಾಂತ್ಯದಲ್ಲಿ ಜಮಾಯಿಸಿ, ಭಾರತದ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಈ ಎಲ್ಲಾ ಕಾರಣದಿಂದಾಗಿಯೇ ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡದ ಕೆಲವು ಪ್ರಮುಖ ದೇಶಗಳು ಚೀನಾವನ್ನು ಎದುರಿಸಲು ಸಿದ್ಧವಾಗಿವೆ.

ಜಪಾನ್, ಆಸ್ಟೇಲಿಯಾ, ಭಾರತ ಮತ್ತು ಅಮೇರಿಕಾ (ಕ್ವಾಡ್-4) ತಮ್ಮ ನಡುವಿನ ರಾಜತಾಂತ್ರಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸಿಕೊಳ್ಳುವತ್ತ ಗಮನಹರಿಸಿದೆ. ಜಗತ್ತಿನ ದೊಡ್ಡ ಮಾರುಕಟ್ಟೆಯಾಗಿರುವ ಭಾರತದ ಪರವಾದ ಗಮನಾರ್ಹ ಬದಲಾವಣೆ ಇದಾಗಿದೆ. ಚೀನಾವನ್ನು ಹತ್ತಿಕ್ಕಲು ಪ್ರಯತ್ನಿಸುವೆಡೆಗೆ ಇದು ಮೊದಲ ಹೆಜ್ಜೆ ಅನ್ನುವಂತಿದೆ. ಅಮೇರಿಕಾ ಕೂಡ - ''ಚೀನೀಯರು ಭಾರತದದೊಂದಿಗೆ ಬಹಳ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ, ಪೀಪಲ್ಸ್ ಲಿಬರೇಷನ್ ಆರ್ಮಿಯು ಲದಾಖ್ ನ ಅನೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಇದು ದೀರ್ಘಕಾಲದ ಗಡಿ ಸಂಘರ್ಷದ ಕಾವನ್ನು ಏರಿಸುತ್ತಿದೆ" ಎಂಬ ಎಚ್ಚರಿಕೆಯ ಹೇಳಿಕೆ ಕೊಟ್ಟಿದೆ. ಈ ವಷಾಂತ್ಯದಲ್ಲಿ ಜಪಾನ್, ಅಮೇರಿಕಾ ಮತ್ತು ಭಾರತೀಯ ಪಡೆಯೊಂಡಿಗೆ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾವನ್ನು ಆಹ್ವಾನಿಸಲು ಪ್ರಧಾನಿ ಮೋದಿಯವರು ಆಲೋಚಿಸಿದ್ದಾರೆ. 2015 ರಲ್ಲಿ ಜಪಾನಿನ ಪಾಲ್ಗೊಳ್ಳುವಿಕೆಯನ್ನು ನಿಯತಗೊಳಿಸಲಾಗಿದ್ದರೂ ಚೀನಾವನ್ನು ಪ್ರಚೋದಿಸಬಾರದು ಎಂಬ ಕಾರಣದಿಂದಾಗಿ ಆಸ್ಟ್ರೇಲಿಯಾವನ್ನು ಆಹ್ವಾನಿಸಿರಲಿಲ್ಲ. ಜೂನಿನಲ್ಲಿ ಭಾರತ ಆಸ್ಟ್ರೇಲಿಯಾದೊಂದಿಗೆ ಮಿಲಿಟರಿ ಚಟುವಟಿಕೆಯನ್ನು ಹೆಚ್ಚಿಸಲು ಕೆಲವು ಒಪ್ಪಂದಗಳನ್ನು ಮಾಡಿಕೊಂಡಿತು. ಅಮೇರಿಕಾದೊಂದಿಗೆ ಅದಾಗಲೆ ಕೆಲವು ಒಪ್ಪಂದಗಳು ಚಾಲ್ತಿಯಲ್ಲಿವೆ. ಇನ್ನು ಕೆಲವು ದಿನಗಳಲ್ಲಿ ಜಪಾನಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಭಾರತ ತಯಾರಿ ನಡೆಸುತ್ತಿದೆ.


ಅತ್ತ ಜಪಾನ್ ಕೂಡ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಭಾರತವನ್ನು ತನ್ನ ಗುಪ್ತಚರ ಮಾಹಿತಿ ಹಂಚಿಕೊಳ್ಳುವ ಪಾಲುದಾರರಾಗಿ ಸೇರಿಸಿಕೊಂಡಿದೆ. ಈ ಹಿಂದೆ ಜಪಾನ್ ಇಂತಹ ಒಪ್ಪಂದ ಅಮೇರಿಕಾದೊಂದಿಗೆ ಮಾತ್ರ ಮಾಡಿಕೊಂಡಿತ್ತು ಎಂಬುದು ಗಮನಿಸಬೇಕಾದ ಅಂಶ. ಈ ಒಪ್ಪಂದ ಜಪಾನಿನ ಗುಪ್ತಚರ ಮತ್ತು ಭದ್ರತಾ ಇಲಾಖೆ ಮತ್ತಷ್ಟು ಬಲಗೊಳ್ಳುತ್ತದೆ. ಇದರೊಟ್ಟಿಗೆ ಜಪಾನ್ ಆಕ್ರಮಣಕ್ಕೊಳಗಾಗುವ ಮಿತ್ರ ರಾಷ್ಟ್ರಗಳಿಗೆ ತನ್ನ ಸಹಾಯ ಹಸ್ತವನ್ನು ಚಾಚಬಹುದು. ಈಗ, ಚೀನಾ ವಿರುದ್ಧ ಈ ಕ್ವಾಡ್-4 ಅಂತೂ ಸ್ಪಷ್ಟವಾದ ದಾರಿಯಲ್ಲಿ ಕ್ರಮಿಸುತ್ತಿದೆ. ಮುಂದಿನ ಹೆಜ್ಜೆಯಾಗಿ ಈ ನಾಲ್ಕೂ ದೇಶಗಳು ಭದ್ರತೆ ಹೆಚ್ಚಿಸಿಕೊಳ್ಳುವಲ್ಲಿ ಸಂಘಟಿತ ಕಾರ್ಯಗಳಿಗೆ ಮುಂದಾಗಬೇಕಾಗಿದೆ.

ಈಗಿರುವ ಸಮಸ್ಯೆ ಅಂದರೇ - ನಾಲ್ಕೂ ದೇಶಗಳ ಭದ್ರತಾ ಹಿತಾಸಕ್ತಿಗಳು ಸಂಪೂರ್ಣವಾಗಿ ಹೊಂದಾಣಿಕೆಯಾಗಿಲ್ಲ! ಭಾರತ ಮತ್ತು ಜಪಾನ್ ಚೀನಾದೊಂದಿಗೆ ನೇರವಾಗಿ ಗಡಿಯನ್ನು ಹಂಚಿಕೊಳ್ಳುತ್ತದೆ. ಆದ ಕಾರಣ, ಈ ಎರಡೂ ದೇಶಗಳು ಗಡಿ ಭದ್ರತಾ ದೃಷ್ಟಿಯಿಂದ ಹೆಚ್ಚು ಅಪಾಯದಲ್ಲಿದೆ. ಜಪಾನ್ ಜಲಪ್ರದೇಶಗಳಲ್ಲಿ ಚೀನಾದ ಆಕ್ರಮಣ ಎದುರಿಸಬೇಕಾಗುತ್ತದೆ. ಆದರೇ, ಭಾರತ ಮಾತ್ರ ಭೂ ಪ್ರದೇಶಗಳಲ್ಲಿ ಚೀನಾದ ಆಕ್ರಮಣವನ್ನು ಎದುರಿಸಬೇಕಾಗುತ್ತದೆ. ಹಿಮಾಲಯದ ಗಡಿಯಲ್ಲಿ ಚೀನಾದೊಂದಿಗೆ ಗಂಭೀರ ಸಂಘರ್ಷದ ನೈಜ ಸಾಧ್ಯತೆಯನ್ನು ಭಾರತ ಎದುರಿಸಬೇಕಾಗಿದೆ. ಅಮೇರಿಕಾಕ್ಕೆ ಚೀನಾದ ವಿರುದ್ಧ ಭೂ ಯುದ್ಧವನ್ನು ಮಾಡುವ ಯಾವುದೇ ಅನಿವಾರ್ಯತೆ ಇಲ್ಲ. ಚೀನಾದ ಭೌಗೋಳಿಕ, ರಾಜಕೀಯ, ಸೈದ್ಧಾಂತಿಕ ಮತ್ತು ಆರ್ಥಿಕ ಸವಾಲುಗಳನ್ನು ಜಾಗತಿಕ ಮಟ್ಟದಲ್ಲಿ ಎದುರಿಸುವುದು ಅಮೇರಿಕಾದ ಮುಖ್ಯ ಉದ್ದೇಶವಾಗಿದೆ. ಅತ್ತ ಆಸ್ಟ್ರೇಲಿಯಾ ಆರ್ಥಿಕವಾಗಿ ಚೀನಾದ ಮೇಲೆ ಅವಲಂಬಿತವಾಗಿದೆ. ತನ್ನ ರಫ಼್ತಿನ ಮೂರನೆ ಒಂದು ಭಾಗ ಚೀನಾದೊಂದಿಗೆ ಇದೆ. ಕ್ವಾಡ್-4 ನ ಇತರ ದೇಶದೊಂದಿಗಿನ ಒಪ್ಪಂದಗಳಾಗಿದ್ದರೂ ಸಹ, "ಚೀನಾದೊಂದಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳುವ ಉದ್ದೇಶವಿಲ್ಲ" ಎಂದು ಹೇಳಿದೆ.

ಭಾರತ ಈಗಾಗಲೇ ಚೀನಾದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೊದಲನೇ ಹೆಜ್ಜೆಯಾಗಿ ಚೀನಾದ 59 ಆಪ್ಗಳನ್ನು ಬ್ಯಾನ್ ಮಾಡಿದೆ. ಬಿ.ಸಿ.ಸಿ.ಐ ನ ಪ್ರತಿಷ್ಟಿತ ಐ.ಪಿ.ಎಲ್ ಪಂದ್ಯಾವಳಿಯಿಂದ ಚೀನಾದ ವಿವೋದ 2200 ಕೋಟಿ ಮೊತ್ತದ ಪ್ರಾಯೊಜಿಕತ್ವವನ್ನು ಈ ವರ್ಷದ ಮಟ್ಟಿಗೆ ಹಿಂಪಡೆದುಕೊಂಡಿದೆ. ಭಾರತ ಸರ್ಕಾರ ಚೀನಾದಿಂದ ಆಮದಾಗುವ ಲಾಪ್ಟಾಪ್, ಕ್ಯಾಮೆರಾ, ಜವಳಿ ಮತ್ತು ಅಲ್ಯೂಮಿನಿಯಂ ಮತ್ತಿತರ 30 ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವ ತಯಾರಿಯಲ್ಲಿದೆ. ಚೀನಾ ವಿರೋಧ ಭಾವನೆ ಹೆಚ್ಚುತ್ತಿದೆ ಮತ್ತು ಸ್ವದೇಶಿ ಉತ್ಪನ್ನಗಳನ್ನು ಉಪಯೋಗಿಸುವತ್ತ ಜನರ ಮನಸ್ಸು ವಾಲುತ್ತಿರುವುದು ಚೀನೀ ಬಂಡವಾಳ ಹೂಡಿಕೆ ಕುಸಿತಕ್ಕೆ ಕಾರಣವಾಗುತ್ತದೆ. ಹುವಾಯಿ ಮತ್ತು ಅದರ ಮಿತ್ರ ಸಂಸ್ಥೆಗಳ ವಿರುದ್ಧ ಅಮೇರಿಕಾ ಕ್ರಮ ಕೈಗೊಂಡಿದ್ದು, ಚೀನಾದ ವಿದ್ಯುತ್ ಮತ್ತು ಕಮ್ಯುನಿಕೇಷನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡದಂತೆ ಭಾರತ ಕ್ರಮ ತೆಗೆದುಕೊಂಡಿದೆ. ತೈಲ ಮತ್ತು ಅನಿಲ ಕಂಪನಿಗಳು ಕಚ್ಚಾ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸರಬರಾಜು ಮಾಡಲು ಚೀನಾ ಟ್ಯಾಂಕರ್ ಗಳನ್ನು ಬುಕ್ಕಿಂಗ್ ಮಾಡುವುದನ್ನು ನಿಷೇಧಿಸಲು ನಿರ್ಧರಿಸಿವೆ.

ಕೊರೋನಾ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಎಲೆಕ್ಟ್ರಾನಿಕ್ಸ್ ವಿಭಾಗದ ಸ್ಯಾಂಸಂಗ್, ಅಪಲ್, ಫ಼ಾಕ್ಸ್ಕಾನ್, ಕಂಪನಿಗಳು ಕೂಡ ತಮ್ಮ ಉತ್ಪಾದನ ಘಟಕಗಳನ್ನು ಚೀನಾದಿಂದ ಹೊರತರಲು ತಯಾರಾಗಿವೆ. ಈ ಕಂಪನಿಗಳು ಸುಮಾರು 1.5 ಬಿಲಿಯನ್ ಡಾಲರ್ ಅಷ್ಟು ಹೂಡಿಕೆ ಮಾಡಿ ಭಾರತದಲ್ಲಿ ಮೊಬೈಲ್ ಫ಼ೋನ್ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗಳಿವೆ ಎಂಬ ಸುದ್ದಿಯೂ ಇದೆ. ಕಳೆದ ಮೂರು ದಿನಗಳ ಸುದ್ದಿಯ ಪ್ರಕಾರ ಸ್ಯಾಂಸಂಗ್ ತನ್ನ ಉತ್ಪಾದನಾ ಘಟಕದ ಬಹುಭಾಗವನ್ನು ವಿಯೆಟ್ನಾಂ ಮತ್ತು ಇತರ ದೇಶಗಳಿಂದ ಭಾರತಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದೆ. ಭಾರತ ಸರ್ಕಾರ ಘೋಷಿಸಿರುವ Production Linked Incentive (PIL) ಯೋಜನೆ ಆಡಿಯಲ್ಲಿ ಸುಮಾರು 3 ಲಕ್ಷ ಕೋಟಿ ಅಷ್ಟು ಮೊಬೈಲ್ ಅನ್ನು ಮುಂದಿನ 5 ವರ್ಷಗಳಲ್ಲಿ ತಯಾರಿಸುವ ಅಂದಾಜು ಮಾಡಲಾಗಿದೆ. ಇದೇ ಯೋಜನೆ ಅಡಿಯಲ್ಲಿ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಉತ್ಪಾದನಾ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ ಮತ್ತು ಅದೇ ಸಮಯದಲ್ಲಿ ಉತ್ಪನ್ನಗಳ ಜೋಡಣೆ, ಪರೀಕ್ಷೆ, ಗುರುತು ಮತ್ತು ಪ್ಯಾಕೇಜಿಂಗ್ ಗಾಗಿ ವಿದೇಶಿ ಉತ್ಪಾದಕರನ್ನು ಆಕರ್ಷಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಘೋಷಣೆ ಮಾಡಿದೆ.

ಜಪಾನ್, ಕೊರಿಯಾ ಮತ್ತು ಭಾರತದ ಈ ಕ್ರಮಗಳು ಚೀನಾಕ್ಕೆ ಸ್ವಲ್ಪ ಮಟ್ಟಿಗಾದರೂ ಬಿಸಿ ಮುಟ್ಟಿಸಿದೆ ಎಂಬುದು ಸತ್ಯ. ಚೀನಾದ್ದೆ ಮುಖವಾಣಿಯಾಗಿರುವ 'ಗ್ಲೋಬಲ್ ಟೈಮ್ಸ್' ಪತ್ರಿಕೆ ಇತರೆ ದೇಶಗಳಿಗೆ ಉಪದೇಶ ನೀಡುವಂತಹ, ಸೌಹಾರ್ದತೆ ಇಂದ ಮುಂದುವರೆಯಬೇಕು ಎಂಬಂತಹ ಲೇಖನಗಳನ್ನು ದಿನಕ್ಕೊಂದರಂತೆ ಪ್ರಕಟ ಮಾಡುತ್ತಿದೆ. ಇದನ್ನೆಲ್ಲ ಬದಿಗಿಟ್ಟು ನೋಡಿದರೂ ಚೀನಾ ತನ್ನ ಆಕ್ರಮಣಕಾರಿ ಧೋರಣೆಯನ್ನು ಈಗಲೂ ಮುಂದುವರೆಸಿದೆ. ಭಾರತದ ಕ್ರಮಗಳು ಚೀನಾ ವಿರುದ್ಧ ಇನ್ನೂ ಬಿಗಿಯಾಗಬೇಗಾಗಿದೆ.




ಅಮೇರಿಕಾದ ವಾಷಿಂಗ್ಟನ್ ಅಲ್ಲಿ, ಕೆಲವು ಭಾರತ ಮತ್ತು ಅಮೇರಿಕನ್ನರು ಚೀನಾದ ಆಕ್ರಮಣಕಾರಿ ಧೋರಣೆ ಮತ್ತು ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಉಯ್ಗುರ್ ಮುಸಲ್ಮಾನರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ಕುರಿತು ಪ್ರತಿಭಟನೆ ಮಾಡಿದರು. ಇತ್ತೀಚಿನ ಸುದ್ಧಿ ಪ್ರಕಾರ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಚೀನಿ ಅಧಿಕಾರಿಗಳು ಮಸೀದಿಯನ್ನು ಧ್ವಂಸ ಮಾಡಿ ಅಲ್ಲೊಂದು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ. ಕಳೆದ 2-3 ವರ್ಷಗಳಲ್ಲಿ 70% ರಷ್ಟು ಮಸೀದಿಗಳನ್ನು ಧ್ವಂಸ ಮಾಡಿದ್ದಾರೆ. 2015 ರಲ್ಲಿ ಅಜ಼್ನ ಮಸೀದಿಯನ್ನು ಧ್ವಂಸ ಮಾಡಿ ಸಿಗರೇಟ್ ಮತ್ತು ಮದ್ಯ ಮಾರಟ ಮಾಡುವ ಕೇಂದ್ರವನ್ನಾಗಿ ಪರಿವರ್ತಿಸಿದೆ. ಹೊರ್ಟನ್ ಎಂಬ ಪ್ರದೇಶದಲ್ಲಿ ಮಸೀದಿ ಇದ್ದ ಜಾಗದಲ್ಲಿ ಒಳ ಉಡುಪನ್ನು ತಯಾರಿಸುವ ಘಟಕವನ್ನು ಚೀನಿ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಚೀನಾದ ಅಧಿಕಾರಿಗಳು 1.8 ಮಿಲಿಯನ್ ಉಯ್ಗುರ್ ಗಳನ್ನು ಜೈಲಿಗೆ ತಳ್ಳಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಪುರುಷರಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಲಾಗುತ್ತಿದೆ. ಚೀನಾದ ಬಹುಸಂಖ್ಯಾತ ಜನಾಂಗವಾದ ಹಾನ್ ಸಮಾಜದೊಂದಿಗೆ ಉಯ್ಗುರ್ ಮುಸಲ್ಮಾನರನ್ನು ಬೆಸೆಯಬೇಕೆಂದು ಚೀನಾ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದೆ. ಸೌದಿ ಅರೇಬಿಯಾ, ಟರ್ಕಿ ಅಥವಾ ಪಾಕಿಸ್ತಾನ ಇದರ ವಿರುದ್ದ ದನಿ ಎತ್ತುತ್ತಿಲ್ಲ ಎಂಬುದು ದುರಾದೃಷ್ಟಕರ ಸಂಗತಿ. ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ ಚೀನಾದ ಈ ಕ್ರಮ ಅತ್ಯಂತ ಅಮಾನವೀಯ ಮತ್ತು ಖಂಡನೀಯ.


ಇತ್ತೀಚಿನ ಕೆಲವು ವರ್ಷಗಳಲ್ಲಿ ಅನೇಕ ರಾಷ್ಟ್ರಗಳಿಗೆ ಆರ್ಥಿಕವಾಗಿ ಸಹಾಯದ ರೂಪದಲ್ಲಿ ಶತಕೋಟ್ಯಾಂತರ ಡಾಲರ್ಗಳನ್ನು ಚೀನಾ ಹೂಡಿಕೆ ಮಾಡಿದೆ. ಈ ಕ್ರಮದ ಮೂಲಕ ದಕ್ಷಿಣ ಆಫ಼್ರಿಕಾ, ನೈಜೀರಿಯಾ, ಶ್ರೀಲಂಕಾ, ಮಲೇಷ್ಯಾ ಮತ್ತಿತರ ದೇಶಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಇತ್ತೀಚೆಗೆ ಚೀನಾ ಪಾಕಿಸ್ತಾನಕ್ಕೆ 14 ಬಿಲಿಯನ್ ಡಾಲರ್ ರಷ್ಟು ಮೊತ್ತವನ್ನು ಗಿಲ್ಗಿಟ್-ಬಾಲ್ಟಿಸ್ತಾನ ಪ್ರಾಂತ್ಯದಲ್ಲಿ ಡೈಮರ್-ಭಾಷಾ ಅಣೆಕಟ್ಟಿನ ಹೆಸರಿನಲ್ಲಿ ಹೂಡಿಕೆ ಮಾಡಿದೆ. ಮೇಲುನೋಟಕ್ಕೆ ಇದು ಅಭಿವೃದ್ಧಿಯ ಸಂಕೇತವಾದರೂ ಪಾಕೀಸ್ತಾನವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಕಬ್ಜಾ ಮಾಡುವ ಹುನ್ನಾರವಾಗಿದೆ. ವಾಸ್ತವವಾಗಿ ಡೈಮರ್-ಭಾಷಾ ಅಣೆಕಟ್ಟು ಚೀನಾದ ಅಣೆಕಟ್ಟು! 70% ರಷ್ಟು ಆಣೆಕಟ್ಟಿನ ಷೇರನ್ನು ಚೀನಾ ಹೊಂದಿದೆ. ಭಾರತ ಇದನ್ನು ಪ್ರತಿಭಟಿಸಿದೆ. ಗಿಲ್ಗಿಟ್ ಮತ್ತು ಬಾಳ್ಟಿಸ್ತಾನ ಪಾಕೀಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿರುವ ಪ್ರದೇಶಗಳು, ಅವು ಭಾರತಕ್ಕೆ ಸೇರಬೇಕಾದದ್ದು. ಸಾಲದ ಸುಳಿಯಲ್ಲಿ ಸಿಲುಕಿಸುವ ಈ ಹುನ್ನಾರವನ್ನು ಅಲ್ಲಿನ ಸ್ಥಳಿಯರು ಮತ್ತು ಭಾರತ ಕಠಿಣವಾಗಿ ವಿರೋಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಿನ ಸುದ್ದಿಗಳ ಪ್ರಕಾರ ತೀಸ್ತಾ ನದಿ ನಿರ್ವಹಣಾ ಯೋಜನೆಗೆ ಚೀನಾ ಢಾಕಾಗೆ 1 ಶತಕೋಟಿ ಡಾಲರ್ ಸಾಲ ನೀಡುತ್ತಿದೆ. ಸುಮಾರು 2 ಕೋಟಿಯಷ್ಟು ಬಾಂಗ್ಲಾದ ಜನ ತೀಸ್ತಾ ನದಿಯ ಮೇಲೆ ಅವಲಂಬಿತವಾಗಿದ್ದಾರೆ. ಈ ವರ್ಷದ ಡಿಸೆಂಬರ್ ಹೊತ್ತಿಗೆ ಅಲ್ಲಿ ಕೆಲಸವನ್ನು ಶುರುಮಾಡುವ ತಯಾರಿ ಮಾಡಿಕೊಳ್ಳುತ್ತಿದೆ ಚೀನಾ. ಈ ನದಿಯಿಂದ ಚೀನಾಕ್ಕೆ ನೈಸರ್ಗಿಕವಾಗಿ ಯಾವುದೇ ಉಪಯೋಗವಿಲ್ಲವಾದರೂ ಬಾಂಗ್ಲಾವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ, ಭಾರತದ ವಿರುದ್ಧ ಎತ್ತಿಕಟ್ಟುವ ಹುನ್ನಾರ ಇದರಲ್ಲಿ ಅಡಗಿದೆ.

ತನ್ನ ಆಕ್ರಮಣಕಾರಿ ಧೋರಣೆ, ವಿಸ್ತರಣಾವಾದ, ಸಾಲದ ಬಲೆಗಳ ಮೂಲಕ ಇಡೀ ಜಗತ್ತನ್ನು ಆಕ್ರಮಿಸಿಕೊಳ್ಳುತ್ತಿದೆ ಚೀನಾ. ಕೊರೋನಾ ಎಂಬ ಮಹಾಮಾರಿಯನ್ನು ಹರಡಿಸುವುದರ ಮೂಲಕ ಜಗತ್ತಿನ ಆರ್ಥಿಕತೆಯನ್ನು ಬುಡಮೇಲು ಮಾಡುವ ಷಡ್ಯಂತ್ರದ ಅನುಮಾನ ಈಗ ದಟ್ಟವಾಗುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಚೀನಾದ ಮೇಲೆ ಅವಲಂಭಿತವಾಗಿರುವುದು ಆತಂಕಕಾರಿ ಸಂಗತಿ. ಈಗಾಗಲೇ ಭಾರತ, ಅಮೇರಿಕಾ, ಜಪಾನ್, ಆಸ್ಟ್ರೇಲಿಯಾ ಚೀನಾ ವಿರುದ್ಧ ಗಟ್ಟಿಯಾಗಿ ನಿಲ್ಲುವತ್ತ ಕೆಲಸ ಮಾಡುತ್ತಿವೆ. ಜಗತ್ತು ಈ ನಾಲ್ಕು ರಾಷ್ಟ್ರಗಳೊಂದಿಗೆ ಕೈಜೋಡಿಸಬೇಕು. ಚೀನಾವನ್ನು ಒಬ್ಬಂಟ್ಟಿಯಾಗಿ ನಿಲ್ಲಿಸಿ ಬೇಟೆಯಾಡಬೇಕು. ಕಮ್ಯುನಿಸ್ಟ್ ಡ್ರಾಗನ್ ಅನ್ನು ಮಣಿಸಲೇಬೇಕು.

July 27, 2020

ವೃತ್ತಿ ಬದುಕಿನ ಕಲಿಕೆ

07/11/2019 ರಂದು ಕಚೇರಿ ಅಲ್ಲಿ ಒಂದು ತರಬೇತಿ ಕಾರ್ಯಾಗಾರಕ್ಕೆ (training workshop) ಹೋಗಿದ್ದೆ. ತರಬೇತುಗಾರರನ್ನು ತಯಾರಿಸುವ ತರಬೇತಿ ಅರ್ಥಾತ್ Train the Trainers. ಒಂದಷ್ಟು ತತ್ವಗಳನ್ನು ಹೇಳಿ ತರಬೇತಿ ಸಮಯದಲ್ಲಿ ಹೇಗಿರಬೇಕು, ಸಮಯದ ಮಹತ್ವದ ಬಗ್ಗೆ ಇಡೀ ದಿವಸ ಕ್ಲಾಸ್ ರೂಮ್ ಪಾಠ ಆಗತ್ತೆ ಎಂದು ತಿಳಿದಿದ್ದೆ. ಆದರೆ, ಅಲ್ಲಿ ನಾನು ಕಲಿತಿದ್ದೆ ಬೇರೆ. ವಿಚಾರ ಹಳೆಯದಾದರೂ ಕಲಿತ ರೀತಿ ಹೊಸದಾಗಿತ್ತು.

ನಮ್ಮಲ್ಲಿ ನಾಲ್ಕು ತರಹದ ಜನ/ಇರುತ್ತಾರೆ
  • ನಾನು ಸರಿ, ನೀನು ಸರಿಯಿಲ್ಲ.
  • ನಾನು ಸರಿಯಿಲ್ಲ, ನೀನು ಸರಿ.
  • ನಾನೂ ಸರಿಯಿಲ್ಲ, ನೀನು ಸರಿಯಿಲ್ಲ.
  • ನಾನೂ ಸರಿ, ನೀನೂ ಸರಿ.


ತಂಪು ಅಥವಾ ತಣ್ಣಗಿನ ವಾತಾವರಣದಲ್ಲಿ ಏಕಾಗ್ರತೆ ಹೆಚ್ಚು ಎಂಬುದು ಅನುಭವದಿಂದ ತಿಳಿದಿದ್ದೆ. ಆದರೆ, ಮತ್ತೊಬ್ಬರಿಗೆ ಹೇಳಲು ಬರುತ್ತಿರಲಿಲ್ಲ. ಅಲ್ಲೊಂದು ಅದ್ಭುತವಾದ ಉದಾಹರಣೆ ಕೊಟ್ಟರು. 'ತಪಸ್ಸು ಮಾಡಲು ಹಿಮಾಲಯಕ್ಕೆ ಹೋಗುತ್ತಾರೋ ಅಥವಾ ಮರುಭೂಮಿಗೆ ಹೋಗುತ್ತಾರೋ?' ಎಂದು ಕೇಳಿದಾಗ ಎಷ್ಟು ಸರಳ ಮತ್ತು ಅದ್ಭುತ ಅನ್ನಿಸಿತು.


"ನಾನೂ ಸರಿ ನೀನು ಸರಿ" ಅನ್ನುವ ಒಂದು ತತ್ವ ಭಾರತ ಅಥವಾ ಹಿಂದೂ ಧರ್ಮ ಹೇಳುವುದೇ ಆಗಿದೆ. ಎಲ್ಲ ಮಾರ್ಗಗಳು ಒಂದೇ ಭಗವಂತನೆಡೆಗೆ ಹೋಗುತ್ತದೆ ಎಂಬ ಹಿಂದೂ ತತ್ವ ಎಲ್ಲ ಕಡೆ ಪ್ರಚಲಿತ ಎಂಬುದು ಸಾಬೀತಾಯಿತು.

Body, Mind, Thoughts, Action ಬಗೆಗೆ ಮಾತಾಡಿದರು. ಇದು ನನಗೆ ಚೆನ್ನಾಗೆ ಅರ್ಥವಾಯಿತು. ಭಾರತೀಯ ವೇದ ಪರಂಪರೆ ಹೇಳಿದ ತತ್ವವೇ ಅದು. ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ಬುದ್ಧಿಮಯ ಕೋಶ ವಿಜ್ಞಾನಮಯ ಕೋಶ, ಆನಂದಮಯ ಕೋಶ.


ಈ ತರಬೇತಿ ಜರ್ಮನ್ ಮಾದರಿ ಆದ್ದರಿಂದ ಬುದ್ಧಿಮಯ ಕೋಶದ ತನಕ ವಿಚಾರ ದಾಖಲಾಗಿದೆ. ಭಾರತೀಯ ವೇದ ಪರಂಪರೆಯನ್ನು ನಾವು ಅರ್ಥೈಸಿಕೊಂಡು ಪಾಲಿಸುವುದೇ ಆದರೆ ಬುದ್ದಿ ಮಟ್ಟವನ್ನು ಮೀರಿ ಆನಂದದ ಮಟ್ಟವನ್ನು ತಲುಪುವ ಪ್ರಯತ್ನ ಮಾಡಬಹುದು. ಭಾರತೀಯ ಪರಂಪರೆ ಅರ್ಥಾತ್ ವೇದ ಪರಂಪರೆ ನಿಜಕ್ಕೂ ಆಳದಲ್ಲಿ ಅಧ್ಯಯನ ಮಾಡಬೇಕು. ಭಗವದ್ಗೀತೆಯನ್ನು ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದ್ಭುತವನ್ನು ಸಾಧಿಸಬಹುದು.

ಒಟ್ಟಾರೆ ನನಗೆ ಈ ತರಬೇತಿ ಮತ್ತು ಭಾರತೀಯ ಪರಂಪರೆ ಅದ್ಭುತ ಅನ್ನಿಸಿತು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ "ನಾನು ಚಿಕ್ಕವನಾದರೆ ಏನು ಓದುವುದಿಲ್ಲ. ಬದಲಾಗಿ, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದನ್ನು ಅಭ್ಯಾಸ ಮಾಡುತ್ತೇನೆ" ಎಂದು. ಹಾಗೆ, ಈ ರೀತಿಯ ತರಬೇತಿ ನಮಗೆ ವಿದ್ಯೆ ಕಲಿಸುವ ಮೊದಲೇ ಆಗಿದ್ದರೆ ಒಳಿತು.

July 9, 2020

Generation After Independence




1. ಭಾರತದಿಂದ ಎಲ್ಲವನ್ನು ಪಡೆದುಕೊಂಡು, ಭಾರತಕ್ಕಾಗಿ ಏನು ಮಾಡದೆ, ವಿದೇಶದಲ್ಲಿ ಜೀವನ ಮಾಡುವುದನ್ನು ಅವರು "ಸಾಧನೆ" ಅನ್ನುತ್ತಾರೆ...!!!

Learn in India and Earn in foreign countries.
They call this an "Achievement" in life...!!!

2. ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚು ಅನ್ನುವುದು ಅವರಿಗೆ "ಖುಷಿ"ಯ ಸಂಗತಿ.
ವಾಹ್... ಎಂತಹ ಸಕಾರಾತ್ಮಕ ಯೋಚನೆ...!!!

Dollar is more valued than Indian Rupee. They call this "Happiness".
Wow... What an Optimistic thought...!!!

3. ತಾವು ತಮ್ಮ ಬಂಧು ಹಾಗೂ ಸ್ನೇಹ ವರ್ಗದವರಿಗಿಂತ ಆರ್ಥಿಕವಾಗಿ ಹೆಚ್ಚು ಸಬಲರಾಗಿರಬೇಕು. ಇದನ್ನು ಅವರು "ಯಶಸ್ಸು" ಅನ್ನುತ್ತಾರೆ.

We should be financially better compared to our friends and relatives. This they call "Success".

4. ಸರ್ಕಾರಕ್ಕೆ ತೆರಿಗೆ ಕಟ್ಟವುದಷ್ಟೇ ತಮ್ಮ "ಸಾಮಾಜಿಕ ಜವಾಬ್ದಾರಿ"ಎಂದು ಅವರ ನಂಬಿಕೆ.

They believe that "Social Responsibility" is paying tax to the government and nothing else.

5. ಕಲಿತ ವಿದ್ಯೆಗಿಂತ ಗಳಿಸಿದ ಅಂಕ ಮುಖ್ಯ. ಇದನ್ನು ಅವರು "ಬುದ್ಧಿವಂತಿಕೆ" ಅನ್ನುತ್ತಾರೆ.

Grades are more important than your learning. This they call as "Intelligence".

6. ಸತ್ಯ ಮಾತಾಡಿದರೆ "ಅಧಿಕ ಪ್ರಸಂಗಿ". ಪ್ರಶ್ನೆ ಕೇಳಿದರೆ "ತಲೆಹರಟೆ" ಅವರ ಪ್ರಕಾರ.

7. ಸಿನಿಮಾದಲ್ಲಿ ಆದ್ರೆ ಚಪ್ಪಾಳೆ ತಟ್ಟು.
ಜೀವನದಲ್ಲಿ ಆದ್ರೆ ತಲೆ ಮೇಲೆ ತಟ್ಟು.

Applaud if it is Cinema.
Criticize if it is Life.

8. ನಾವು ಹೇಳಿದ್ದಷ್ಟನ್ನೇ ಮಕ್ಕಳು ಮಾಡಬೇಕು. ಮಕ್ಕಳಿಗೆ ಇಷ್ಟವಿರಲಿ ಬಿಡಲಿ.
ಅವರ ಪ್ರಕಾರ ಇದು "ವಿಧೇಯತೆ".

Children should only do what elders say irrespective of children's likes and dislikes.
This they call as "Obedience".

9. ಮಾಡುವ ಎಲ್ಲ ಒಳ್ಳೆ ಕೆಲಸಗಳನ್ನು ಅವರು ಪ್ರೋತ್ಸಾಹಿಸುತ್ತಾರೆ ಎನ್ನುವುದು ಬರೀ 'ಭ್ರಮೆ'

It is a 'Myth' that they ecourage all good deeds that are done.

10. ಅವರ ಪ್ರಕಾರ ಮಕ್ಕಳು ಸ್ನೇಹಿತರೊಂದಿಗೆ ಸಿನಿಮಾಕ್ಕೆ ಹೋಗುವುದಕ್ಕಿಂತ ಆಶ್ರಮಕ್ಕೆ ಹೋಗುವುದು 'ಭಯಾನಕ'.

According to them its 'Dangerous' if children goes to Ashram than to movie with friends.

11. ಅವರಿಗೆ ಸಮಾಜವನ್ನು ದೂಷಿಸುವುದು ಗೊತ್ತೆ ಹೊರತು, ಪರಿಹಾರ ಕೊಡಲು ಎಂದಿಗೂ ಪ್ರಯತ್ನಿಸುವುದಿಲ್ಲ...!!!

They always COMPLAIN society but never try SOLVE...!!!

12. "ವಾಸ್ತವದಲ್ಲಿ ಬದುಕು" ಎಂಬುದು ಆದರ್ಶಗಳನ್ನು ಪಾಲಿಸದಿರುವುದಕ್ಕೆ ಅವರು ನೀಡುವ ದೊಡ್ಡ ಕ್ಷಮತೆ.

"Being Practical" is the biggest excuse they give for not following principles.

13. ನಮ್ಮ ಭಾಷೆ ಮರೆತರೂ ವಿದೇಶದವರಿಗೆ ಅರ್ಥವಾಗಬೇಕು ಎಂದು ಆಂಗ್ಲ ಭಾಷೆಯಲ್ಲಿ ಮಾತಾಡಬೇಕು. ಇದು ಅವರ ಪ್ರಕಾರ "ಸಹಕಾರ"

Learn and Converse in English so that we are understandable by foreigners even though we forget our language. They call this "Co-Operation"

14. ಮಾಡೋ ಕೆಲಸ ಮಾಡದೆ, ದೇವರ ಪೂಜೆ ಮಾಡುವುದು. ಹರಕೆ ಎಂಬ ಲಂಚವನ್ನು ಕೊಡುತ್ತೇವೆ ಎಂದು ದೇವರಿಗೆ ಆಮಿಷ ಒಡ್ಡುವುದು. ಇದನ್ನು ಅವರು 'ಭಕ್ತಿ' ಎನ್ನುತ್ತಾರೆ.

15. ನಮ್ಮ ಭಾಷೆ ಮರೆತರೂ ವಿದೇಶದವರಿಗೆ ಅರ್ಥವಾಗಬೇಕು ಎಂದು ಆಂಗ್ಲ ಭಾಷೆಯಲ್ಲಿ ಮಾತಾಡಬೇಕು. ಇದು ಅವರ ಪ್ರಕಾರ "ಸಹಕಾರ".

June 23, 2020

ದೂಷಿಸುವ ಮುನ್ನ ತಮ್ಮ ಇತಿಹಾಸವನ್ನು ತಿಳಿದುಕೊಳ್ಳುವುದು ಮೇಲು

ಅದೊಂದು ದುರ್ಗಮವಾದ ಪರ್ವತ ಶ್ರೇಣಿ. ಹಿಮದಿಂದಲೇ ಆವೃತವಾದ ಬೆಟ್ಟಗಳು. ಹಿಮ ಕರಗಿ ಬೆಟ್ಟದ ಮೇಲಿಂದ ನೀರು ಹರಿದು ನದಿಯಾಗಿ ಮಾರ್ಪಾಟಾದ ಪ್ರದೇಶ. ಪ್ರತಿಯೊಂದು ಬೆಟ್ಟವೂ ಸರಿಸುಮಾರು 10000-16000 ಅಡಿ ಎತ್ತರ. ಆ ಎತ್ತರದಲ್ಲಿ ಆಮ್ಲಜನಕ ಕಡಿಮೆ ಇರುವುದರಿಂದ ಉಸಿರಾಟವೂ ಸಹ ಕಷ್ಟ. ಈ ಎಲ್ಲಾ ಪರ್ವತ ಶ್ರೇಣಿಗಳನ್ನು ನಡೆದೆ ಕ್ರಮಿಸಬೇಕು. ಬುಡದಿಂದ ಪರ್ವತದ ತುದಿಯನ್ನು ತಲುಪಲು ಬರೋಬ್ಬರಿ 21 ದಿನಗಳು ಬೇಕು. ಇಲ್ಲಿನ ದೂರವನ್ನು ಮೈಲಿಗಳಲ್ಲಿ ಅಳೆಯುವುದಿಲ್ಲ, ದಿನಗಳಲ್ಲಿ ಆಳೆಯುತ್ತಾರೆ! ಮೊದಲು ಸಿಕ್ಕುವ ಬೆಟ್ಟ ಸುಮಾರು 7000 ಅಡಿ. ಅದನ್ನು ಹತ್ತಿ ಆ ಇಳಿಜಾರಿನಲ್ಲಿ ಕ್ರಮಿಸಿದರೆ ನಮ್ಮೆದುರಿಗೆ ಸಿಗುವುದು ಮತ್ತೊಂದು ದೈತ್ಯ. ಆ ಬೆಟ್ಟ ಸುಮಾರು 14000 ಅಡಿ ಎತ್ತರ. ದಾರಿಯುದ್ದಕ್ಕೂ ಒಂದೆಡೆ ಹಿಮಾಚ್ಚಾದಿತ ಬೆಟ್ಟ, ಮಳೆ ಮತ್ತು ಹಿಮದಿಂದ ಒದ್ದೆಯಾಗಿ ಪಾಚಿ ಕಟ್ಟಿರುವ ಇಳಿಜಾರು. ಮತ್ತೊಂದು ಕಡೆ ಬೃಹತ್ ಪ್ರಪಾತ. ಬಿದ್ದರೆ ಹೆಣ ಸಿಗುವುದು ಅಸಾಧ್ಯ ಎನ್ನುವಷ್ಟು ದುರ್ಗಮ. ಮಧ್ಯಾಹ್ನ 3 ಘಂಟೆಗೆ ಕತ್ತಲಾಗುವಂತಹ ಪ್ರದೇಶವದು. ಕಾಲ್ನಡಿಗೆ ಬಿಟ್ಟು ಜೀಪಲ್ಲಿ ಹೋದರೆ ದಾರಿ ಮಧ್ಯೆ ಗಾಡಿ ಹೂತು ಹೋಗುವ ಸಂಭವವೇ ಹೆಚ್ಚು. ಅದನ್ನು ರಿಪೇರಿ ಮಾಡಿ ಮತ್ತೆ ಮುಂದುವರೆಯುವುದು ಯಮಸಾಹಸವೇ ಸರಿ. ಇಷ್ಟೆಲ್ಲಾ ಕಷ್ಟಪಟ್ಟು ಪರ್ವತದ ತುದಿ ತಲುಪಿದಾಗ ಸಿಗುವುದೇ ನಮ್ಮ ಪಕ್ಕದ ಎರಡು ರಾಷ್ಟ್ರಗಳು!

ಹೌದು, ಖಂಡಿತವಾಗಿಯೂ ಈ ವಿವರಣೆ ಭಾರತದ ಈಶಾನ್ಯ ರಾಜ್ಯದ ಕಣಿವೆಯದ್ದೇ. ಅದನ್ನು NFEA (North East Frontier Agency - ನೇಫ಼ಾ) ಎಂದು ಕರೆಯುತ್ತಾರೆ. ಥಾಗ್ಲಾ ಪರ್ವತ ಶ್ರೇಣಿ ನಿಜಕ್ಕೂ ದುರ್ಗಮ. ಮಿಸಾಮಾರಿ ಎಂಬ ತಪ್ಪಲು ಪ್ರದೇಶದಿಂದ ಭಾರತದ ತುತ್ತ ತುದಿಯ ಗಡಿಯಲ್ಲಿರುವ ಸೈನಿಕ ನೆಲೆ; ತವಾಂಗ್ ಸುಮಾರು ಹತ್ತೂವರೆ ಸಾವಿರದಷ್ಟು ಅಡಿಗಳ ಎತ್ತರದಲ್ಲಿದೆ. ತಪ್ಪಲು ಮತ್ತು ತುದಿಯ ಮಧ್ಯೆ ಸಿಗುವುದೆ ಹದಿನಾಲ್ಕು ಸಾವಿರ ಅಡಿಯಿರುವ 'ಸೇಲಾ ಪಾಸ್', ಏಳು ಸಾವಿರ ಅಡಿ ಇರುವ 'ಚಾಕೋ' ಎಂಬ ಪ್ರದೇಶ. ಇದನೆಲ್ಲಾ ದಾಟಿದರೆ ಸಿಗುವುದು ನಮ್ಕಾ ಚು ನದಿ. ಅದರ ಆಚೆ ಇರುವ ತವಾಂಗ್ ತಲುಪಿದರೆ ಸಿಗುವುದೇ ಭಾರತದ ಪಾಲಿನ ದುರಾದೃಷ್ಟ ಫ಼ಾರ್ವರ್ಡ್ ಪೋಸ್ಟ್ - 'ಧೋಲಾ ಪೊಸ್ಟ್'! ಅದು ಭಾರತ, ಭೂತಾನ್ ಮತ್ತು ಚೀನಾ (ಟಿಬೆಟ್) ಸೇರುವ ಗಡಿ ಪ್ರದೇಶ. ಒಂದು ಸಣ್ಣ ಹುಲ್ಲು ಕಡ್ಡಿ ಅಲ್ಲಾಡಿದರೂ ಸಹ ಬೆಂಕಿ ಹತ್ತಿಕೊಳ್ಳುವಂತಹ ಜಾಗವದು. ಅಂತಹ ಜಾಗದಲ್ಲಿ ಭಾರತದ ಒಂದು ಸೇನಾ ನೆಲೆಯನ್ನು ಸ್ಥಾಪಿಸಿ, ಅದರ ರಕ್ಷಣೆಯ ಹೊಣೆಯನ್ನು ಸೈನ್ಯಕ್ಕೆ ಒಪ್ಪಿಸಿ, ಸೈನ್ಯಕ್ಕೆ ಮದ್ದು ಗುಂಡುಗಳನ್ನು ಬಿಡಿ, ಆ ವಾತಾವರಣಕ್ಕೆ ಹೊಂದಿಕೊಳ್ಳುವ ಉಣ್ಣೆಯ ಬಟ್ಟೆ ಅಥವಾ ಶೂಗಳನ್ನು ಕೊಟ್ಟಿರಲಿಲ್ಲ ದಿಲ್ಲಿಯ ಏ.ಸಿ. ಕೋಣೆಯಲ್ಲಿ ಕೂತಿದ್ದ ಭಾರತದ ಅಂದಿನ ಪ್ರಧಾನಿಯಾದ ಜವಾಹರಲಾಲ್ ನೆಹರೂ, ರಕ್ಷಣಾ ಮಂತ್ರಿ ಕೃಷ್ಣ ಮೇನನ್ ಮತ್ತು ಲೆಫ಼್ಟಿನೆಂಟ್ ಜನರಲ್ ಬಿ.ಎನ್. ಕೌಲ್. 


ಚೀನಾ 1950ರಲ್ಲಿ ಟಿಬೆಟ್ ಮೇಲೆ ಆಕ್ರಮಣ ಮಾಡಿತು. ಚೀನಾದ ದಾಳಿಗೆ ತತ್ತರಿಸಿದ ಟಿಬೇಟ್, ತಮ್ಮನ್ನು ರಕ್ಷಿಸಿ ಎಂದು ಭಾರತವನ್ನು ಅಂಗಲಾಚಿ ಬೇಡಿಕೊಂಡರು. ಆದರೆ, ನೆಹರೂ ಅದಕ್ಕೆ ಬೆಲೆಕೊಡಲಿಲ್ಲ. ನೆನೆಪಿಡಿ, ಟಿಬೆಟ್ ಭಾರತ ಮತ್ತು ಚೀನಾ ನಡುವೆ ಒಂದು ತಡೆಗೋಡೆಯಾಗಿತ್ತು (buffer country). ಚೀನಾ ಟಿಬೆಟ್ ಅನ್ನು ಆಕ್ರಮಿಸಿಕೊಳ್ಳುವುದೆಂದರೆ ಮುಂದೆ ಭಾರತಕ್ಕೆ ತೊಂದರೆ ಎಂದರ್ಥ. ಟಿಬೆಟ್ ನೆಲದಲ್ಲಿ ನಿಂತು ಭಾರತದೆಡೆಗೆ ಫ಼ಿರಂಗಿ ಇಟ್ಟು ಉಡಾಯಿಸುತ್ತಾರೆಂದು ರಾಜತಾಂತ್ರಿಕತೆ ತಿಳಿದಿರುವ ಪ್ರತಿಯೊಬ್ಬರೂ ಉಹಿಸಬಹುದಾದದ್ದೇ. ಈ ವಿಚಾರ ತಿಳಿದಿದ್ದ ಬ್ರಿಟೀಷರು ಟಿಬೆಟ್ ಅನ್ನು ತುಂಬ ಜಾಗರೂಕರಾಗಿ ಕಾಯ್ದುಕೊಂಡು ಬಂದಿದ್ದರು. ಟಿಬೆಟ್ ಆಕ್ರಮಣದ ಕುರಿತು ಭಾರತ ತಕ್ಕಮಟಿಗೆ ಪ್ರತಿಕ್ರಿಯಿಸಲಿಲ್ಲ. 1950, ಸೆಪ್ಟೆಂಬರ್ ಅಲ್ಲಿ ನಡೆದ ಸಂಯುಕ್ತ ರಾಷ್ಟ್ರ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ 'ಅದರ ಚರ್ಚೆಯೇ ಬೇಡ, ಅದು ಚೀನಾದ ಆಂತರಿಕ ವಿಚಾರ. ಅವರವರೇ ಶಾಂತಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುತ್ತಾರೆ' ಎಂದಿತ್ತು ಭಾರತ! ನೆರೆ ರಾಷ್ಟ್ರವಾದ ಭಾರತವೇ ಇದರ ಬಗೆಗೆ ಆಸಕ್ತಿ ತೋರದಿದ್ದಾಗ ಇನ್ಯಾವ ದೇಶ ತಾನೆ ಇದರ ಕುರಿತು ವಿಚಾರ ಮಾಡೀತು? ಅಲ್ಲಿಗೆ ಟಿಬೇಟ್ ನಿರಾತಂಕವಾಗಿ ಚೀನಿಯರ ವಶವಾಗಿತ್ತು. ಶತ್ರುವೊಬ್ಬ ನಮ್ಮ ಪಕ್ಕದಲ್ಲೇ ಬಂದು ಕೂತಿದ್ದ! ನಂತರ, ನಿಧಾನವಾಗಿ ಚೀನಾ ಭಾರತದ ಗಡಿ ಹತ್ತಿರ ರಸ್ತೆ ಹಾಕುವ, ಯುದ್ಧ ವಿಮಾನ ನೆಲೆಗಳನ್ನು ನಿರ್ಮಿಸುವ, ದೂರವಾಣಿ ಸಂಪರ್ಕ ಕಲ್ಪಿಸುವ ಕೆಲಸಗಳನ್ನು ಸಮರ್ಪಕವಾಗಿ ಮುಂದುವರೆಸಿತು. ಹೆದ್ದಾರಿಯನ್ನು ನಿರ್ಮಿಸಲು ತೊಡಗಿದ ಚೀನಾ ಅಕ್ಸಾಯ್ ಚಿನ್ ಪ್ರದೇಶದ ಗಡಿ ಭಾಗವನ್ನು ಸದ್ದಿಲ್ಲದೇ ಕಬಳಿಸಿತು. ಕೆಲವೇ ವರ್ಷಗಳಲ್ಲಿ ಭಾರತ ಟಿಬೆಟ್ ಗಡಿಯಲ್ಲಿ ಮೂರು ಟನ್ ತೂಕದ ವಾಹನಗಳು ಸಂಚಾರ ಮಾಡಬಹುದಾದಂತಹ ಹೆದ್ದಾರಿಯನ್ನು ನಿರ್ಮಿಸಿಬಿಟ್ಟಿತು. ಇದೆಲ್ಲವನ್ನು ತಿಳಿದಿದ್ದ ನೆಹರೂ, ಸಂಸತ್ತಿನ ಮುಂದೆ ಈ ವಿಚಾರ ಪ್ರಸ್ತಾಪಿಸಲೇ ಇಲ್ಲ. ಭಾರತ ಅನ್ನುವುದಕ್ಕಿಂತಲೂ ನೆಹರೂ ಈ ವಿದ್ಯಮಾನಗಳಿಗೆ ಕುರುಡಾಗಿದ್ದರು! ಟಿಬೇಟ್ ವಶಪಡಿಸಿಕೊಂಡ 12 ವರ್ಷಕ್ಕೆ ಭಾರತದ ನೇಫ಼ಾ ಗಡಿಯೊಳಕ್ಕೆ ನುಗ್ಗಿತ್ತು ಚೀನಾ.

ಅತ್ತ ಚೀನಾ ಯುದ್ಧಕ್ಕೆ ವ್ಯವಸ್ಥಿತವಾಗಿ ತಯಾರಾಗುತ್ತಿದ್ದರೆ ಇತ್ತ ನೆಹರೂ ಗಡಿ ತಂಟೆ ತೆಗೆಯಲೇ ಇಲ್ಲ. 'ಹಿಂದೀ ಚೀನಿ ಭಾಯಿ ಭಾಯಿ' ಎಂಬ ಚೀನಾದ ತಾಳಕ್ಕೆ ನೆಹರೂ ಮುಂದಾಳತ್ವದ ಭಾರತ ಕುಣಿಯುತ್ತಿತ್ತು. ಕಾಂಗ್ರೇಸಿನ ಶಶಿ ತರೂರ್ ಅವರೇ ಹೇಳಿದಂತೆ ಯುನೈಟೆಡ್ ನೇಷನ್ಸ್ನ ಶಾಶ್ವತ ಸದಸ್ಯತ್ವವನ್ನು ಚೀನಾಕ್ಕೆ ಬಿಟ್ಟೂಕೊಟ್ಟಿದ್ದು ಇದೇ ನೆಹರೂ. ಚೀನಾ ಬರೆದು ಕೊಟ್ಟದ್ದನ್ನೆಲ್ಲಾ ನೆಹರೂ ನಂಬಿದ್ದರು. ಟಿಬೆಟ್ ಮೇಲಿದ್ದ ಮಿಲಿಟರಿ, ಪೋಸ್ಟಲ್ ಮತ್ತು ಟೆಲಿಗ್ರಾಫ಼ಿಕ್ ಹಕ್ಕನ್ನು ತಕರಾರಿಲ್ಲದೆ ಚೀನಾಕ್ಕೆ ಬಿಟ್ಟುಕೊಟ್ಟರು ನೆಹರೂ. ನೆಹರೂ ಅವರ ಜೀವಿತಾವದಿಯಲ್ಲಿ ಭಾರತ ಮತ್ತು ಚೀನಿಯರ ನಡುವೆ ಯುದ್ಧವಿಲ್ಲ ಎಂಬುದು ದೇಶದಾತ್ಯಂತ ಘೋಷವಾಕ್ಯವಾಗಿತ್ತು. 'ಚೀನಾದೊಂದಿಗೆ ಯುದ್ಧವಿಲ್ಲ' ಎಂಬುದನ್ನು ನೆಹರೂ ತಮಗೆ ತಾವೆ ತೀರ್ಮಾನಿಸಿಕೊಂಡು ಅದನ್ನೇ ಭಾರತದ ರಾಷ್ಟ್ರೀಯ ನೀತಿ ಎಂಬಂತೆ ಮಾಡಿದರು. 1955 ರಲ್ಲಿ ಚೀನಾ 'ನಮ್ಮ ಗಡಿ ಇನ್ನೂ ಇತ್ಯರ್ಥವಾಗಿಲ್ಲ' ಎಂದು ಅಪಸ್ವರವೆತ್ತಿತು. ಆಗಲೂ ಎಚ್ಚೆತ್ತುಕೊಳ್ಳದ ನೆಹರೂ 'ಹಿಂದೀ ಚೀನಿ ಭಾಯಿ ಭಾಯಿ' ಎಂಬ ಮಂತ್ರವನ್ನೇ ಹೇಳುತ್ತಾ ಹೋದರು. ಯುದ್ಧವಿಲ್ಲದಿದ್ದರೂ ಭಾರತದ ಗಡಿ ಭಾಗದಲ್ಲಿ ಒಂದು ರಸ್ತೆ ಮಾಡುವ ಯೋಜನೆ ಸಹ ತಯಾರಿಸಲಿಲ್ಲ ನೆಹರೂ! ಆಕ್ಸಾಯ್ ಚಿನ್ ಭಾಗ ಮಂಜಿನಿಂದ ಆವೃತವಾಗಿದೆ ಅಲ್ಲೊಂದು ಹುಲ್ಲು ಕಡ್ಡಿ ಸಹ ಬೆಳೆಯುವುದಿಲ್ಲ, ಅದನ್ನು ಕಳೆದುಕೊಂಡರೆ ಭಾರತಕ್ಕೆ ನಷ್ಟವಿಲ್ಲ, ಚೀನಿಯರಿಗೆ ಲಾಭವಿಲ್ಲ ಎಂಬಂತಹ ಬೇಜವಾಬ್ದಾರಿ ಹೇಳಿಕೆಯನ್ನು ಸಂಸತ್ತಿನಲ್ಲೇ ಕೊಟ್ಟಿದ್ದರು ನೆಹರೂ. ಸ್ವಾತಂತ್ರ್ಯದ ಹೊಸತರಲ್ಲಿ ಪಾಕೀಸ್ತಾನ ದಾಳಿ ಮಾಡಿದಾಗ ಭಾರತದ ಸೇನೆ ಅವರನ್ನು ಹಿಮ್ಮೆಟ್ಟಿತು. 'ಯುದ್ಧ ನಿಲ್ಲಿಸಿ, ಈ ವಿಷಯವನ್ನು ನಾನು ಸಂಯುಕ್ತ ರಾಷ್ಟ್ರ ಸಂಸ್ಥೆಯ ಮುಂದಿಟ್ಟು ಬಗೆಹರಿಸಿಕೊಳ್ಳುತ್ತೇನೆ' ಎಂದು ಪಾಕ್ ಆಕ್ರಮಿತ ಕಾಶ್ಮೀರ ಎಂಬ ವಿವಾದಿತ ಪ್ರದೇಶವನ್ನು ಸೃಷ್ಟಿ ಮಾಡಿದ್ದೇ ನೆಹರೂ. ಜಗತ್ತಿನೆದುರಿಗೆ ತಾವು ಶಾಂತಿ ಪ್ರಿಯರು ಎಂದು ಮೆರೆಯಲು ನೆಹರೂ ಅಲಿಪ್ತ ನೀತಿಯನ್ನು ಅನುಸರಿಸಿದರು. ಯಾವ ರಾಷ್ಟ್ರದೊಂದಿಗೂ ಶಸ್ತ್ರಾಸ್ತ್ರದ ಒಪ್ಪಂದಗಳಿಗೆ ಮುಂದಾಗಲಿಲ್ಲ. ಪದೇ ಪದೇ ಸೈನ್ಯಾಧಿಕಾರಿಗಳು ಒತ್ತಾಯ ಮಾಡಿದ ಪರಿಣಾಮವಾಗಿ 'ಭಾರತ ಒಂದಷ್ಟು ಯುದ್ಧ ಸಾಮಗ್ರಿ ಖರಿದಿಸಬಹುದು. ಪಾಕೀಸ್ತಾನದೊಂದಿಗೆ ನಾವು ಶಸ್ತ್ರಾಸ್ತ್ರ ಸಂಗ್ರಹಣೆಯ ಪೈಪೋಟಿ ನಡೆಸಬೇಕಿಲ್ಲ' ಎಂದರು ನೆಹರೂ.

1962ರ ಹೊತ್ತಿಗೆ ಗಡಿ ತಂಟೆ ತೆಗೆದ ಚೀನಾ ದೊಡ್ಡ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಭಾರತಕ್ಕೆ ಮನವರಿಕೆಯಾಯಿತು. ತಕ್ಷಣ ಸೇನೆಯ ಪರಿಸ್ಥಿತಿಯನ್ನು ಪರಿಗಣಿಸದೆ ನೇಫ಼ಾ ಗಡಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ಸೈನ್ಯಕ್ಕೆ ಕೊಟ್ಟಿದ್ದೇವೆ ಎಂದು ಘೋಷಿಸಿ ಎಲ್ಲಕ್ಕೂ ಮುಂಚೆಯೆ ಯುದ್ಧಕ್ಕೆ ಸಿದ್ಧ ಎಂದು ಜಗತ್ತಿಗೆ ಸಾರಿತು ಭಾರತ ಸರ್ಕಾರ. ನೆನಪಿಡಿ, ನೇಫ಼ಾ ಗಡಿ ಹತ್ತಿರ ಬಲಿಷ್ಟವಾದ ಸೈನ್ಯ ಜಮಾವಣೆ ಮಾಡಿದ ಚೀನಾ 'ಅಲ್ಲಿ ನಮ್ಮ ಗಡಿ ರಕ್ಷಣಾ ಪಡೆ ಮಾತ್ರ ಇದೆ' ಎಂದು ಸುಳ್ಳು ಹೇಳಿಕೆ ಕೊಡುತ್ತಿತ್ತು. ಚೀನಾದ ಯುದ್ಧ ಸಿದ್ಧತೆ ಕಂಡು ಗಾಬರಿಗೊಂಡ ಭಾರತದ ಸೇನಾ ಮುಖ್ಯಸ್ಥ ಜನರಲ್ ತಿಮ್ಮಯ್ಯ - 'ನೇಫ಼ಾ ಗಡಿಯನ್ನು ಕಾಯಲು ಹೆಚ್ಚಿನ ಸೈನ್ಯಕೊಡಿ, ಮದ್ದುಗೊಂಡು ಕೊಡಿ, ಅಲ್ಲಿನ ವ್ಯವಸ್ಥೆ ಸರಿ ಮಾಡಿ' ಎಂದು ಕೇಳುತ್ತಲೇ ಬಂದರು. ಅವರ ಮಾತನ್ನು ಕಡೆಗಣಿಸಿ, ಅವರನ್ನೇ ಅವಮಾನಿಸಿ, ಅನಾಮಧೇಯರಾಗಿ ನಿವೃತ್ತಿ ಹೊಂದುವಂತೆ ಮಾಡಿದರು ನೆಹರೂ, ಮೆನನ್! ಅವರ ಜಾಗಕ್ಕೆ 1959ರಲ್ಲಿ ಮೇಜರ್ ಜನರಲ್ ಬಿ.ಎಂ.ಕೌಲ್ ಎಂಬ ಅಧಿಕಾರಿಗೆ ಲೆಫ಼್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ನೀಡಿ ಭಾರತ ಸೈನ್ಯದ ಮುಖ್ಯಸ್ಥನನ್ನಾಗಿ ಮಾಡಿದರು. ನೇಫ಼ಾ ಗಡಿಯಲ್ಲಿ ಚೀನಾ 600 ಸೈನಿಕರೊಂದಿಗೆ ಯುದ್ಧ ಮಾಡುತ್ತದೆ ಎಂದು ತಮಗೆ ತಾವೆ ಊಹಿಸಿಕೊಂಡು ಬಿಸಿಲು ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂಜಾಬ್ ಮತ್ತು ರಜಪೂತ ದಳಕ್ಕೆ ಯಾವುದೇ ಪೂರ್ವ ತಯಾರಿ ಇಲ್ಲದೆ ಹಿಮಾಚ್ಚಾಧಿತ ನೇಫ಼ಾ ಗಡಿಯ ಜವಾಬ್ದಾರಿಯನ್ನು ಭಾರತ ಸರ್ಕಾರ ನೀಡಿತು. 1962ರ ಹೊತ್ತಿಗೆ ಭಾರತ ಚೀನಾ ಯುದ್ಧ ಥಾಗ್ಲಾ ಪರ್ವತ ಶ್ರೇಣಿಯಲ್ಲಿ ಶುರುವಾಗುತ್ತದೆ. ಯುದ್ಧದಲ್ಲಿ ಭಾರತದ ಕಡೆ ಇದ್ದ ಸೈನಿಕರ ಸಂಖ್ಯೆ ಸುಮಾರು 1000, ಒಂದಷ್ಟು ಕಾಡತೂಸು ಮತ್ತು ಗ್ರೆನೇಡ್ಗಳು ಮತ್ತು ಪಾಕಿಸ್ತಾನದ ಗಡಿಯಲ್ಲಿ ಬಳಸಬಹುದಾದಂತಹ ಬಟ್ಟೆಗಳು. ಇಷ್ಟು ಸಂಖ್ಯೆ ಬಳಸಿಕೊಂಡು ಚೀನಿಯರ 600 ಸೈನಿಕರನ್ನು ಸೋಲಿಸಬಹುದು ಎಂಬ ಅರ್ಥವಿಲ್ಲದ ಲೆಕ್ಕಾಚಾರ ನೆಹರೂ, ಮೆನನ್ ಮತ್ತು ಕೌಲ್ರದ್ದು. ಆದರೆ, ಯುದ್ಧಕ್ಕೆಂದು ನೇಫ಼ಾ ಗಡಿಯಲ್ಲಿ 20000 ಚೀನಿ ಸೈನಿಕರು ಜಮಾಯಿಸಿದ್ದರು! 

ಸೆಪ್ಟಂಬರ್ ತಿಂಗಳಲ್ಲಿ ಯುದ್ಧ ಶುರುವಾದಾಗ ನೆಹರೂ ಲಂಡನ್ನಿನ ಕಾಮನ್ವೆಲ್ತ್ ದೇಶಗಳ ಪ್ರಧಾನಮಂತ್ರಿಗಳ ಸಮಾವೇಶದಲ್ಲಿದ್ದರು. ನಂತರ ನೈಜೀರಿಯಾದ ಲಾಗೋಸ್ ನಗರಕ್ಕೆ ಹೋಗಿ ಭಾರತಕ್ಕೆ ವಾಪಸ್ಸಾದದ್ದು ಅಕ್ಟೋಬರ್ 2 ರಂದು! ಅದೇ ತಿಂಗಳು ಸಂಯುಕ್ತ ರಾಷ್ಟ್ರ ಸಂಸ್ಥೆಯ ವಾರ್ಷಿಕ ಸಭೆ ನಡೆಯುವುದಿತ್ತು. ರಕ್ಷಣಾ ಮಂತ್ರಿ ಮೇನನ್ ಅದರಲ್ಲಿ ತಾವು ಮಾಡಬೇಕಿದ್ದ ಭಾಷಣಕ್ಕೆ ಅಣಿಯಾಗುತ್ತಿದ್ದರು. ವಿದೇಶದ ಮೋಜು ಅವರ ನೆತ್ತಿಗೇರಿತ್ತು. ಹಣಕಾಸು ಸಚಿವ ಮೊರಾಜಿ ದೇಸಾಯಿ ಕೂಡ ನೆಹರೂರೊಂದಿಗೆ ಲಂಡನ್ನಿಗೆ ಹೋದವರು ಯುದ್ಧದ ಸುದ್ದಿ ತಿಳಿದ ಮೇಲೂ ವಿಶ್ವ ಬ್ಯಾಂಕ್ ಮೀಟಿಂಗ್ ಎಂದು ಅಮೇರಿಕಾಕ್ಕೆ ತೆರಳಿದರು. ರಾಜಕಾರಣಿಗಳು ಹೀಗಾದರೆ ಭಾರತದ ಸೈನ್ಯದ ಮುಖ್ಯಸ್ಥ ಕೌಲ್ ಅಕ್ಟೋಬರ್ 2ರ ತನಕ ಅಂದರೇ, ನೆಹರೂ ಹಿಂತಿರುಗುವ ತನಕ ಕಾಶ್ಮೀರದಲ್ಲಿ ರಜೆಯೆಂದು ಕಾಲಕಳೆಯುತ್ತಿದ್ದರು! ಥಗ್ಲಾ ಎಂಬ ಹಿಮಾಲಯದಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳುವುದರಲ್ಲಿತ್ತು, ಭಾರತದ ಸರ್ಕಾರ ವಿದೇಶದಲ್ಲಿ ಮತ್ತು ಸೈನಿಕ ಮುಖ್ಯಸ್ಥ ರಜೆಯಲ್ಲಿದ್ದರು! ಚೀನಾಕ್ಕೆ ಭಾರತದ ಸೈನಿಕರು ಬಲಿಯಾದರು. ಸೈನಿಕ ಬಲಿಷ್ಟನಾದರೂ ರಾಜಕಾರಣಿಗಳು ಭಾರತವನ್ನು ಸೋಲಿಸಿದರು.


ಲದಾಖ್ ಗಡಿ ಭಾಗದಲ್ಲಿ ತಂಟೆ ಮಾಡುತ್ತಿರುವ ಚೀನಾವನ್ನು ಭಾರತದ ಸೈನ್ಯವಿಂದು ಹಿಮ್ಮೆಟ್ಟಿದೆ. ಹಿಂದೆಂದಿಗಿಂತಲೂ ಭಾರತ ಮತ್ತು ಅದರ ಸೈನ್ಯ ಬಲಿಷ್ಟವಾಗಿದೆ. ಭಾರತ ಸರ್ಕಾರ ಸುಮಾರು 500 ಕೋಟಿಯಷ್ಟು ಮೊತ್ತವನ್ನು ಸೈನ್ಯಕ್ಕೆ ಕೊಟ್ಟು ಯುದ್ಧ ತಂತ್ರ ರೂಪಿಸಲು ಪೂರ್ಣ ಸ್ವಾತಂತ್ರ ಕೊಟ್ಟಿದೆ. ಯುದ್ಧದಲ್ಲಿ ಸೈನಿಕರ ಹೋರಟ ಎಷ್ಟು ಮುಖ್ಯವೋ ಅದರ ಪೂರ್ವ ತಯಾರಿಯೂ ಅಷ್ಟೇ ಮುಖ್ಯ. #BoycottChina ಮೂಲಕ ಭಾರತೀಯರ ರಾಷ್ಟ್ರೀಯತೆಯ ಭಾವ ಚೀನಾಕ್ಕೆ ತಲೆ ಬಿಸಿ ಮಾಡಿದಂತಿದೆ. ತನ್ನ ಮುಖವಾಣಿಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಭಾರತ ಚೀನಾ ಸಂಬಂಧದ ಕುರಿತು ದಿನಕ್ಕೆ 2-3 ಲೇಖನಗಳನ್ನು ಪ್ರಕಟಿಸುತ್ತಲೇ ಇದೆ. ನಾವು ಶಾಂತಿಯನ್ನು ಬಯಸುತ್ತೇವೆ ಎಂದು ಹೇಳಿದರೂ ಗಲ್ವಾನ್ ವ್ಯಾಲಿ ತನ್ನದು ಎಂದು ಚೀನಾ ತನ್ನ ಗೋಮುಖ ವ್ಯಾಘ್ರತ್ವವನ್ನು ತೋರಿಸುತ್ತಿದೆ. ಭಾರತ ಸರ್ಕಾರ ಚೀನಾದ ಮಾತನ್ನು ಎಂದೂ ನಂಬಬಾರದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

 
ಈ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಕಾಂಗ್ರೇಸ್ ಪಕ್ಷವು ವಿರೋಧ ಪಕ್ಷದ ಕರ್ತವ್ಯಕ್ಕಿಂತಲೂ ಹೆಚ್ಚಾಗಿ ಪ್ರಧಾನಿ ಮೋದಿಯವರನ್ನು ಧೂಷಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ಇಷ್ಟಕ್ಕೂ, ಕಾಂಗ್ರೇಸಿಗೆ ಈ ರೀತಿ ಮಾತಾಡುವ ನೈತಿಕ ಯೋಗ್ಯತೆ ಇದೆಯೆ ಎಂಬುದು ಪ್ರಶ್ನಾರ್ಹ. ನೆಹರೂ ಮಾಡಿದ ಪ್ರಮಾದಗಳ ಸರಮಾಲೆ 'ಹಿಮಾಲಯನ್ ಬ್ಲಂಡರ್' ನಮ್ಮ ಕಣ್ಣೆದುರಿಗೆ ಇದೆ. ಅವರು ಇತರರನ್ನು ಧೂಷಿಸುವ ಮುನ್ನ ತಮ್ಮ ಇತಿಹಾಸವನ್ನು ತಿಳಿದುಕೊಳ್ಳುವುದು ಮೇಲು.

June 14, 2020

ಜಗತ್ತು ಮೈಮರೆಯಿತು, ಚೀನಾ ಸದ್ದಿಲ್ಲದೇ ಆವರಿಸಿಕೊಂಡಿತು!

ಕ್ರಿಶ್ಟಿಯನ್ನರ ಆಕ್ರಮಣದ ಹೊತ್ತಲ್ಲಿ ಜಗತ್ತಿನ ಸುಮಾರು 33% ರಷ್ಟು GDP ಭಾರತದ್ದೇ ಆಗಿತ್ತು. ನಮ್ಮಲ್ಲಿ ಉತ್ಪನ್ನವಾಗುತ್ತಿದ್ದ ವಸ್ತುಗಳು ಜಗತ್ತಿನ ಮೂಲೆ ಮೂಲೆಗೆ ರಫ಼್ತಾಗುತ್ತಿತ್ತು. 200 ವರ್ಷಗಳ ಬ್ರಿಟೀಷ್ ಆಳ್ವಿಕೆಯ ನಂತರ ಅಂದರೆ 1947ರ ಹೊತ್ತಿಗೆ ಜಗತ್ತಿನ GDP ಅಲ್ಲಿ 2% ರಷ್ಟು ಮಾತ್ರ ಭಾರತದ ಪಾಲಿತ್ತು. ಸ್ವತಂತ್ರ್ಯ ಬಂದ ಮೊದಲು 15 ವರ್ಷಗಳ ಕಾಲ ಟೀ, ಹಗ್ಗ (Jute) ಮತ್ತು ಹತ್ತಿಯನ್ನು ಮಾತ್ರ ಭಾರತ ರಫ಼್ತು ಮಾಡುತ್ತಿತ್ತು. ಅದೇ ಸಮಯದಲ್ಲಿ, ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳ ಆಮದು ಹೆಚ್ಚಾಯಿತು. ನಂತರದ ದಿನಗಳಲ್ಲಿ ಭಾರತ ಪಾಕೀಸ್ತಾನದೊಂದಿಗೆ 1948, 1965, 1971 ರಲ್ಲಿ 3 ಸಲ ಮತ್ತು ಚೀನಾದೊಂದಿಗೆ 1962ರಲ್ಲಿ ಯುದ್ಧ ಮಾಡಿತು. 1975-77 ರಲ್ಲಿ 21 ತಿಂಗಳುಗಳ ಕಾಲ ಭಾರತ ತುರ್ತು ಪರಿಸ್ಠಿತಿಗೆ ತನ್ನನ್ನು ತಾನು ಒಡ್ಡುಕೊಂಡಿತು. ಈ ಎಲ್ಲಾ ಕಾರಣದಿಂದಾಗಿ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸುಮಾರು 90ರ ದಶಕದ ಹೊತ್ತಿಗೆ ಜಗತ್ತಿನ ವ್ಯವಹಾರದ ಸ್ವರೂಪ ಬದಲಾಯಿತು. ಭಾರತ ಜಗತ್ತಿನ ಮಾರುಕಟ್ಟೆಗೆ ತೆರೆದು ಕೊಂಡಿತು. 2016-17ರ ಹೊತ್ತಿಗೆ ಭಾರತ ಜಗತ್ತಿನ 3.4% ರಷ್ಟು ಮಾರುಕಟ್ಟೆ ಹೊಂದುವಷ್ಟು ಶಕ್ತವಾಯಿತು.

20ನೇ ಶತಮಾನದ ಆಧುನಿಕ ಜಗತ್ತಿನಲ್ಲಿ 1949ರ ತನಕ ಚೀನಾ ತನ್ನ ಮೇಲಾಗುತ್ತಿದ್ದ ಅನ್ಯ ದೇಶಿಯ ಆಕ್ರಮಣವನ್ನು ತಡೆಯುವುದರಲ್ಲಿ ಮಗ್ನವಾಗಿತ್ತು. People's Republic of China ಎಂದು 1949ರಲ್ಲಿ ಸ್ಥಾಪಿತವಾದ ಮೇಲೆ, ಚೀನಾ ತನ್ನನ್ನು ತಾನು ಗಟ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಿತು. 1950ರ ನಂತರ ತನ್ನ ಸುತ್ತ ಇರುವ ದೇಶಗಳ ಮೇಲೆ ಆಕ್ರಮಣಕಾರಿ ಧೋರಣೆ ತೋರಲು ಶುರುಮಾಡಿತು. 1950ರಲ್ಲಿ ಟಿಬೇಟ್, ದಕ್ಷಿಣ ಕೊರಿಯಾ, 1962ರಲ್ಲಿ ಭಾರತದ ಮೇಲೆ, 1974, 76, 79, 88 ರಲ್ಲಿ ನಾಲ್ಕು ಬಾರಿ ವಿಯಟ್ನಾಂ ಮೇಲೆ ದಾಳಿ ಮಾಡಿತು. 1995ರಲ್ಲಿ 'ವಿಶ್ವ ವಾಣಿಜ್ಯ ಸಂಸ್ಥೆ' ಸ್ಥಾಪಿತವಾದ ಮೇಲೆ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು, ತನ್ನನ್ನು ತಾನು ಪ್ರತ್ಯೇಕಿಸಿಕೊಂಡು ಗಟ್ಟಿಯಾಗುವತ್ತ ಸಾಗಿತು. 1989ರಲ್ಲಿ ಜಗತ್ತಿನ 9ನೇ 1 ಭಾಗದಷ್ಟು GDP ಹೊಂದಿದ್ದ ಚೀನಾ 2015 ಹೊತ್ತಿಗೆ ಅಮೇರಿಕಾದ ನಂತರ ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾಗಿ ಬೆಳೆದಿದೆ.

ಚೀನಾ ಜಗತ್ತಿನ 'ಉತ್ಪಾದನ ಫ಼ಾಕ್ಟರಿ' ಎಂದರೆ ಅತಿಶಯೋಕ್ತಿ ಅಲ್ಲ. ತನ್ನ ರಾಷ್ಟ್ರದ 30% ರಷ್ಟು ಕೆಲಸಗಾರರನ್ನು ಉತ್ಪಾದನಾ ಕೆಲಸಕ್ಕೆ ಬಳಸಿಕೊಳ್ಳುತ್ತದೆ. ರಾಸಾಯನಿಕ ಗೊಬ್ಬರ, ಸಿಮಿಂಟ್ ಮತ್ತು ಉಕ್ಕಿನ ತಯಾರಿಕೆಯಲ್ಲಿ ಚೀನಾ ಜಗತ್ತಿನ ಪ್ರಮುಖ ಅಥವಾ ನಂ 1 ರಾಷ್ಟ್ರವಾಗಿದೆ. ಕೈಗಾರಿಕಾ ಉತ್ಪಾದನೆಯಲ್ಲೂ ಸಹ ಚೀನಾ ವಿಶ್ವದಾದ್ಯಂತ ಮೊದಲ ಸ್ಥಾನದಲ್ಲಿದೆ. ಗಣಿಗಾರಿಕೆ ಮತ್ತು ಅದಿರು ಸಂಸ್ಕರಣೆ, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ, ಕಲ್ಲಿದ್ದಲು, ಯಂತ್ರೋಪಕರಣ, ಶಸ್ತ್ರಾಸ್ತ್ರಗಳು, ಜವಳಿ ಮತ್ತು ಊಡುಪು, ಪೆಟ್ರೋಲಿಯಂ ಸಿಮೆಂಟ್, ಆಹಾರ ಸಂಸ್ಕರಣೆ, ರೈಲು, ಕಾರು ಮತ್ತದರ ಇಂಜಿನ್ಗಳು, ಹಡಗುಗಳು, ವಿಮಾನ ಸೇರಿದಂತೆ ವಾಹನಗಳು ಮತ್ತು ಇತರ ಸಾರಿಗೆ ಉಪಕರಣಗಳು, ಪಾದರಕ್ಷೆ, ಆಟಿಕೆ, ಎಲೆಕ್ಟ್ರಾಸಿಕ್ಸ್ ಮತ್ತು ಗ್ರಾಹಕ ಉತ್ಪನ್ನಗಳು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಷ್ಟರಲ್ಲೂ ಚೀನಾ ಸಾರ್ವಭೌಮತ್ವ ಸಾಧಿಸಿದೆ. ಅಮೇರಿಕಾ ಕೃಷಿ ಉತ್ಪನ್ನ, ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳು, ಆಟಿಕೆ, ಹಾಸಿಕೆ, ಪೀಟೋಪಕರಣ ಮತ್ತು ವಿದ್ಯುತ್ ಯಂತ್ರೋಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ತನಗೆ ಬೇಕಾಗಿರುವ ಅಂಟಿಬಯೋಟಿಕ್ಸ್ ಔಷಧಿಗಾಗಿ ಅಮೇರಿಕಾ ಶೇ 92ರಷ್ಟು ಚೀನಾದ ಮೇಲೆ ಅವಲಂಬಿತವಾಗಿದೆ! ಇತ್ತ ಭಾರತ ಕೂಡ ಚೀನಾದ ಪ್ರಮುಖ ಮಾರುಕಟ್ಟೆಯಾಗಿದೆ. ಚೀನಾದಿಂದ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ಫ಼ೋನ್ಗಳು, ಯಂತ್ರಗಳು, ಎಂಜಿನ್ಗಳು, ಪಂಪ್ಗಳು, ಸಾವಯವ ರಸಗೊಬ್ಬರ, ಕಬ್ಬಿಣ ಮತ್ತು ಉಕ್ಕು, ಪ್ಲಾಸ್ಟಿಕ್, ವೈದ್ಯಕೀಯ ಮತ್ತು ತಾಂತ್ರಿಕ ಉಪಕರಣಗಳು, ಆಟಿಕೆಗಳು, ಆಂಟಿಬಯೋಟಿಕ್ಸ್ ಔಷಧಿಗಳು ಭಾರತವೂ ಸಹ ಆಮದು ಮಾಡಿಕೊಳ್ಳುತ್ತದೆ. ನಾವು ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳು ಅತ್ಯಂತ ಅಗತ್ಯ ವಸ್ತುಗಳೇ ಆಗಿವೆ. ಅದಕ್ಕಾಗಿ ಚೀನಾ ಮೇಲೆ ಅವಲಂಬಿತವಾಗಿರುವುದು ನಮ್ಮ ದುರಾದೃಷ್ಟ. ಭಾರತ ಅಮೇರಿಕಾ ಅಲ್ಲದೆ ಯೂರೋಪಿನ ದೇಶಗಳು, ಹಾಂಗ್ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ವಿಯಟ್ನಾಂ, ಜರ್ಮನಿ, ನೆದರ್ಲಾಂಡ್ಸ್, ಯು.ಕೆ, ಸಿಂಗಾಪುರ, ರಷ್ಯಾ, ಆಸ್ಟ್ರೇಲಿಯಾ, ಮಲೇಷ್ಯಾ, ಮೆಕ್ಸಿಕೊ, ಇಂಡೋನೇಷ್ಯಾ, ಥೈಲಾಂಡ್, ಕೆನಡಾ, ಫಿಲಿಫೈನ್ಸ್, ಬ್ರಜ಼ಿಲ್, ಇಟಾಲಿ, ಫ಼್ರಾನ್ಸ್, ಪೋಲಾಂಡ್, ಟರ್ಕಿ, ಸ್ಪೇನ್ ದೇಶಗಳು ಚೀನಾದಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.

Made in PRC!

ಟೆಲಿಕಾಂ ಸಾಧನಗಳ ಮೂಲಕ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಮೇಲೆ ಚೀನಾ ಪ್ರಭುತ್ವವನ್ನು ಸಾಧಿಸಿದೆ. 2019ರಲ್ಲಿ ಸುಮಾರು 125 ಬಿಲಿಯನ್ ಡಾಲರ್ ಅಷ್ಟು ಮೊಬೈಲ್ ಫ಼ೋನ್ಗಳನ್ನು ಚೀನಾ ಮಾರಾಟ ಮಾಡಿದೆ. ಅದರಲ್ಲಿ ಶೇ 46.9ರಷ್ಟು ಜಗತ್ತಿನ ಇತರೆ ರಾಷ್ಟ್ರಗಳಿಗೆ ರಫ಼್ತಾಗಿವೆ. ಹುವಾಯ್ ಮತ್ತು ZTE ಕ್ರಮವಾಗಿ ಜಗತ್ತಿನ ಎರಡನೇ ಮತ್ತು ನಾಲ್ಕನೇ ದೊಡ್ಡ ದೂರಸಂಪರ್ಕ ಪೂರೈಕೆ ಮಾಡುವ ಕಂಪನಿಗಳಾಗಿವೆ. ಇವುಗಳ ಆದಾಯದ ಶೇ 70ರಷ್ಟು ಹೊರದೇಶದ್ದಾಗಿದೆ. ಈ ಎರಡೂ ಕಂಪನಿಗಳು ಚೀನಾದ ಸರ್ಕಾರ ಮತ್ತು People Liberation Army (PLA) ಜೊತೆಗೆ ನಿಕಟ ಸಂಪರ್ಕ ಹೊಂದಿದೆ. ಇದು ಜಗತ್ತಿನ ಅನೇಕ ದೇಶಗಳಿಗೆ ಭದ್ರತಾ ತೊಡಕಾಗಿ ಪರಿಣಮಿಸಿದೆ. ಭಾರತದಲ್ಲಿ ಈ ಎರಡೂ ಕಂಪನಿಗಳು 1998-99 ರಲ್ಲಿ ಹೂಡಿಕೆ ಮಾಡಿದವು. 2005 ಹೊತ್ತಿಗೆ ಕಡಿಮೆ ಬೆಲೆ ಮತ್ತು ಗ್ರಾಹಕರನ್ನು ಸೆಳೆಯುವ ಇತರ ತಂತ್ರಗಳನ್ನು ಬಳಸಿಕೊಂಡು ಐ.ಟಿ.ಐ, ಬಿ.ಎಸ್.ಎನ್.ಎಲ್, ಎಮ್.ಟಿ.ಎನ್.ಲ್ ಸಂಸ್ಥೆಗಳಿಗಿಂತಲೂ ಹೆಚ್ಚು ಲಾಭವನ್ನು ಭಾರತದಲ್ಲಿ ಮಾಡಿದರು. ಹುವಾಯ್ ಸಂಸ್ಥೆ ಭಾರತದ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೂ ತನ್ನ ಬಾಹುವನ್ನು ವಿಸ್ತರಿಸಿತು. ನೋಕಿಯಾ ತನ್ನ ಮಾರುಕಟ್ಟೆ ಕಳೆದುಕೊಂಡ ಮೇಲೆ ಮೈಕ್ರೋಮಾಕ್ಸ್, ಲಾವ, ಕಾರ್ಬನ್ ಕಂಪನಿಗಳು ಬಂದವು. ಆದರೆ, ಕಾಲಕ್ರಮೇಣ ಚೀನಾದ ಒಪ್ಪೋ, ವಿವೋ, ಕ್ಸಿಯೊಮೀ, ರೀಯಲ್ ಮೀ ಜೊತೆಗೆ ಸ್ಪರ್ಧಿಸಲಾಗದೆ ಸೋಲಬೇಕಾಯಿತು.

Huwaei; the silent killer

ಐದೇ ವರ್ಷಗಳಲ್ಲಿ ಟಿಕ್ ಟಾಕ್ ಎಂಬ ಆಪ್ ಸುಮಾರು 200 ಮಿಲಿಯನ್ ಬಳಕೆದಾರದನ್ನು ಹೊಂದಿದೆ. ಇತ್ತೀಚೆಗೆ ಟಿಕ್ ಟಾಕ್ ಆಪ್ ವಿರುದ್ಧ ಬಹುತೇಕ ಭಾರತೀಯರು ಕಳಪೆ (1 star) ಎಂದು ರೇಟ್ ಮಾಡಿದ್ದರು. ಜಗತ್ತಿನಾದ್ಯಂತ ಅದರ ರೇಟಿಂಗ್ 4.5 ರಿಂದ 1.3ಗೆ ಇಳಿದಿತ್ತು. ಚೀನಾದ ಆಪ್ಗಳು ನಮ್ಮ ಫ಼ೋನ್ಗಳಲ್ಲಿ ಇರಬಾರದು ಎಂದು 'Remove China Apps' ಎಂಬ ಆಪ್ ಹೊರತಂದರು. ಇದು ಕೇವಲ 2-3 ದಿನಗಳಲ್ಲಿ 50 ಲಕ್ಷಕ್ಕೂ ಮೀರಿದ ಡೌನ್ಲೋಡ್ ಕಂಡಿತ್ತು.  ಆದರೇ, ಚೀನಾ ತನ್ನ ಪ್ರಭಾವವನ್ನು ಬಳಸಿ 1 ಸ್ಟಾರ್ ರೇಟಿಂಗಳನ್ನು ಮತ್ತು 'Remove China Apps' ಅನ್ನು ತೆಗೆದು ಹಾಕಿಸಿತು. ಜಗತ್ತಿಗೆ ಕರೋನಾ ಕೊಟ್ಟ ಚೀನಾದ ವಿರುದ್ಧ ಇಡೀ ಜಗತ್ತು ಒಟ್ಟಾಗುವ ಸಮಯ ಹತ್ತಿರವಾಗುತ್ತಿದೆ. ಚೀನಾದ ಪ್ರಭಾವದಿಂದ ಹೊರಬರಲು ಅನೇಕ ರಾಷ್ಟ್ರಗಳು ತಯಾರಿ ನಡೆಸಿವೆ. ಜಗತ್ತಿನಲ್ಲಿ ಜನಸಂಖ್ಯೆಯ ಲೆಕ್ಕದಲ್ಲಿ 2ನೇ ಸ್ಥಾನದಲ್ಲಿರುವ ಭಾರತ ವ್ಯಾವಹಾರಿಕವಾಗಿ ಬೆಳೆದು ನಿಲ್ಲಲು ಇದು ಒಳ್ಳೆಯ ಅವಕಾಶ. ಚೀನಾ ನಮ್ಮ ಅಗತ್ಯ ವಸ್ತುಗಳ ಮೂಲಕ ನಮ್ಮ ಮನೆಗಳನ್ನು ಹೊಕ್ಕಿದೆ. ಬೆಂಗಳೂರನ್ನು ಸಾಫ಼್ಟ್ವೇರ್ ಹಬ್ ಎಂದು ಕರೆಯುತ್ತಾರೆ. ಆದರೆ, ಚೀನಾದಂತೆ ಹಾರ್‍ಡ್ವೇರ್‍ ತಯಾರಿಸುವಂತಹ ಕಂಪನಿಗಳು ಇಲ್ಲ. ಜಗತ್ತಿನ ಅನೇಕ ಬಡ ರಾಷ್ಟ್ರಗಳಿಗೆ ಸಾಲವನ್ನು ಕೊಟ್ಟು ಚೀನಾ ಆ ದೇಶಗಳ ದಿವಾಳಿಗೂ ಕಾರಣವಾಗುತ್ತಿದೆ. ಅಂತಹ ಬಡ ರಾಷ್ಟ್ರಗಳಿಗೆ ಮತ್ತು ಶ್ರೀಮಂತ ರಾಷ್ಟ್ರಗಳಿಗೆ ಒಳಿತಾಗಿ ನಿಲ್ಲಬಹುದಾದ ರಾಷ್ಟ್ರ ಭಾರತ.

India vs china

ಜಾಗತೀಕರಣದ ನಂತರ ಕಡಿಮೆ ವೆಚ್ಚದ ಕಾರ್ಯ ಮತ್ತು ವ್ಯವಹಾರದ ಸರಳತೆಯ ಕಾರಣದಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಚೀನಾದಲ್ಲಿ ಹೂಡಿಕೆ ಮಾಡಿದವು. ಇದರ ಫ಼ಲವಾಗಿ ಅಗತ್ಯವಸ್ತುಗಳ ತಯಾರಿಕ ಘಟಕವಾಗಿ ಚೀನಾ ಬೆಳೆಯಿತು. ಭಾರತವಾಗಲಿ ಮತ್ತಿತರ ದೇಶವಾಗಲಿ ಅಗತ್ಯವಸ್ತುಗಳನ್ನು ತಯಾರಿಸುವ ಯೋಜನೆಯನ್ನು ಮಾಡದೆ ಚೀನಾದ ಮೇಲೆ ಅವಲಂಬಿತವಾದವು. ಅತ್ತ, ಚೀನಾ ತನ್ನ ಉತ್ಪಾದನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಮುಂದುವರೆಯಿತು. ಅನೇಕ ರಾಷ್ಟ್ರಗಳಿಗೆ ತನ್ನ ಅಗತ್ಯತೆಯನ್ನು ಸೃಷ್ಟಿಸಿ ಎಲ್ಲರನ್ನು ಆಳಲು ಹೊರಟಿದೆ ಚೀನಾ! ಜಾಗತೀಕರಣದ ಸೋಗಿನಲ್ಲಿ ಮೈಮರೆತದ್ದು ನಾವು, ಸದ್ದಿಲ್ಲದೆ ನಮ್ಮನ್ನು ಆಕ್ರಮಿಸಿಕೊಂಡದ್ದು ಚೀನಾ! ಕೊರೋನಾ ಸಮಯದಲ್ಲಿ ಯೂರೋಪ್, ಭಾರತ, ಪಾಕೀಸ್ತಾನಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಕೊಟ್ಟ ಮೇಲೆ ಜಗತ್ತು ಸ್ವಾವಲಂಬಿ ಆಗುವ ಅಗತ್ಯತೆಯನ್ನು ಕಂಡಿದೆ. 

May 26, 2020

ಭಾರತಕ್ಕೆ ಮಗ್ಗುಲು ಮುಳ್ಳಾಗಿ ಕಾಡುತ್ತಿರುವ ಚೀನಾ

ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲೇ ಪಾಕಿಸ್ತಾನದ ಜೊತೆ ಭಾರತ ಹಗ್ಗ ಜಗ್ಗಾಟ ನಡಿಸಿತ್ತು. ಭಾರತದ ರಾಜತಾಂತ್ರಿಕ ನಡೆ ಹಾದಿ ತಪ್ಪಿದ್ದ ಕಾರಣ ಕಾಶ್ಮೀರ ನಮಗೆ ಸಮಸ್ಯೆಯಾಗಿ ಪರಿಣಮಿಸಿತು. ಆ ತೊಂದರೆಯನ್ನು ಸಹಿಸಿಕೊಂಡು ನೆಹರುರವರ ಅಲಿಪ್ತ ನೀತಿಯೊಂದಿಗೆ ಭಾರತ ತನ್ನ ಪಾಡಿಗೆ ಇತ್ತು. ಹಿಂದಿ-ಚೀನಿ ಭಾಯಿ ಭಾಯಿ ಅನ್ನುತ್ತಾ ಮೂರ್ಖತನದಿಂದ, ಚೀನಾ ನಮ್ಮ ಮೇಲೆ ಆಕ್ರಮಣ ಮಾಡುವುದಿಲ್ಲ ಅಂದುಕೊಂಡು ಸುಮ್ಮನಿತ್ತು. ಆದರೆ, 1962 ರಲ್ಲಿ ಚೀನಾ ಭಾರತಕ್ಕೆ ಮೋಸ ಮಾಡಿತು. ನಮ್ಮ ಆ ನಂಬಿಕೆಯ ಪರಿಣಾಮ 10-20 ಸಾವಿರ ಭಾರತ ಸೈನಿಕರು 80 ಸಾವಿರ ಚೀನಿ ಸೈನ್ಯವನ್ನು ಎದುರಿಸಬೇಕಾಯಿತು!
 


1949ರಲ್ಲಿ People's Republic of China ಎಂದು ಸ್ಥಾಪಿತವಾದ ನಂತರ ಚೀನಾದೊಂದಿಗೆ ಒಂದು ಸೌಹಾರ್ದಯುತವಾದ ಸಂಬಂಧ ಹೊಂದುವುದು ಭಾರತ ಸರ್ಕಾರದ ನಿಲುವಾಗಿತ್ತು. ಟಿಬೆಟ್ ದೇಶವನ್ನು ತಾನು ಆಕ್ರಮಿಸಿಕೊಳ್ಳುವುದಾಗಿ ಚೀನಾ ಘೋಷಿಸಿದಾಗ ಭಾರತ ಇದನ್ನು ವಿರೋಧಿಸಿ ಪತ್ರವೊಂದನ್ನು ಬರೆದಿತ್ತು. ಆದರೆ, ಚೀನಾ ಆಕ್ಸೈಚಿನ್ ಗಡಿಯಲ್ಲಿ ತನ್ನ ಸೈನ್ಯವನ್ನು ಭಾರತಕ್ಕಿಂತಲೂ ಹೆಚ್ಚು ಒಟ್ಟುಮಾಡಲು ಶುರುಮಾಡಿತು. ಇಷ್ಟಾದರೂ, ಭಾರತ ಸರ್ಕಾರಕ್ಕೆ ಚೀನಾದೊಂದಿಗಿನ ಸಂಬಂಧದ ಕುರಿತು ಕಾಳಜಿ ಇತ್ತು. ಚೀನಾ ಬರಲಿಲ್ಲ ಎಂಬ ಕಾರಣದಿಂದಾಗಿ ಜಪಾನ್ ನೊಂದಿಗಿನ ಶಾಂತಿ ಮಾತುಕತೆಯ ಚರ್ಚೆಗೂ ಭಾರತ ಸರ್ಕಾರ ಹೋಗಲಿಲ್ಲ. 1954 ರಲ್ಲಿ ಭಾರತದ ಗಡಿಯನ್ನು ಸ್ಪಷ್ಟಪಡಿಸಿಸುತ್ತಾ ನೆಹರು ಜಗತ್ತಿಗೆ ಒಂದು ಸಂದೇಶ ಹೊರಡಿಸುತ್ತಾರೆ. ಆದರೆ, ಚೀನಾ, ಭಾರತದ 1,20,000 ಚದರ ಕಿ.ಮೀ. ರಷ್ಟು ಜಾಗವನ್ನು ತಮ್ಮದೆಂದು ಹೇಳಿಕೊಂಡು ತನ್ನ ನಕ್ಷೆಯನ್ನು ಘೋಷಿಸಿತ್ತು. ಇದರ ಕುರಿತು ಪ್ರಶ್ನಿಸಿದಾಗ ಚೀನಾ ತನ್ನ ನಕ್ಷೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಖಡಾಖಂಡಿತವಾಗಿ ಹೇಳಿತ್ತು. 1959ರಲ್ಲಿ ಟಿಬಿಟ್ನಿಂದ ಓಡಿಬಂದ ದಲೈ ಲಾಮಗೆ ಭಾರತ ಆಶ್ರಯ ನೀಡಿತ್ತು. ಈ ನಡೆ ಭಾರತ ತನಗೆ ಮಾಡಿದ ಅವಮಾನ ಎಂದು ಚೀನಾ ಭಾವಿಸಿತು. ಲಾಹ್ಸಾದಲ್ಲಿ ನಡೆದ ದಂಗೆಗೆ ಭಾರತವೇ ಕಾರಣ ಎಂದು ಚೀನಾದ ನಾಯಕ ಮಾವೊ ಜ಼ೆಡಾಂಗ್ ಹೇಳಿಕೆಯನ್ನು ನೀಡುತ್ತಾನೆ. ಟಿಬೆಟ್ಟನ್ನು ಆಕ್ರಮಿಸಿಕೊಂಡ ತನ್ನ ನಿಲುವಿಗೆ ಭಾರತವೇ ತನ್ನ ಪ್ರಮುಖ ವಿರೋಧಿ ಎಂದುಕೊಂಡ ಚೀನಾ, ಭಾರತದ ಮೇಲೆ ಯುದ್ಧ ಮಾಡಲು ಪ್ರಮುಖ ಕಾರಣ. ಇನ್ನಿತರ ಸೈನ್ಯದ ಚಟುವಟಿಕೆ ಮತ್ತು ಭಿನ್ನಾಭಿಪ್ರಾಯದ ಕಾರಣದಿಂದಾಗಿ 1962 ರಲ್ಲಿ ಯುದ್ಧ ಶುರುವಾಯಿತು. ಜುಲೈ ನಲ್ಲಿ, 350 ಚೀನಾ ಸೈನಿಕರು ಚುಶೂಲ್ ಎಂಬ ಹಳ್ಳಿಯಲ್ಲಿ ಲೌಡ್ ಸ್ಪೀಕರ್ಗಳನ್ನು ಹಾಕಿ ಗೂರ್ಖ ಸೈನಿಕರು ಭಾರತಕ್ಕಾಗಿ ಹೋರಾಡಬಾರದೆಂದು ಘೋಷಿಸುತ್ತಿದ್ದರು. 1962 ರ ಅಕ್ಟೋಬರ್ ಹೊತ್ತಿಗೆ ಚೀನಾದ ಸೈನ್ಯ ಭಾರತದ ಲದಾಕ್ ಪ್ರಾಂತ್ಯ ಮತ್ತು ಪೂರ್ವ ಭಾಗದ ಮೆಖ್ಮಹೋನ್ ಗಡಿ ಪ್ರದೇಶದಲ್ಲಿ ಆಕ್ರಮಣ ಮಾಡಿತು. ಭಾರತದ ರಾಜತಾಂತ್ರಿಕತೆಯ ಮೂರ್ಖತನದಿಂದಾಗಿ ಭಾರತದ ಸೈನ್ಯ ಚೀನಾದೆದುರು  ಮಂಡಿಯೂರಿ ಸೋಲಬೇಕಾಯಿತು. ಸುಮಾರು 3,250 ಸೈನಿಕರನ್ನು ಭಾರತ ಯುದ್ಧದ ಹೋರಾಟದಲ್ಲಿ ಕಳೆದುಕೊಂಡಿತು. ಇಂದಿಗೂ ಕಾಶ್ಮೀರದ ಮೂರನೇ ಒಂದು ಭಾಗವನ್ನು 'ಚೀನಾ ಆಕ್ರಮಿತ ಕಾಶ್ಮೀರ' (China Occupied Kashmir - COK) ಎಂದೇ ಕರೆಯುತ್ತಾರೆ.


ಈ ಯುದ್ಧದ ನಂತರ ಜಾಗತಿಕವಾಗಿ ಚೀನಾ ತನ್ನ ಹೆಸರನ್ನು ಉಳಿಸಿಕೊಳ್ಳಲು ನೇರವಾದ ಆಕ್ರಮಣ ಮಾಡುವುದನ್ನು ನಿಲ್ಲಿಸಿತು. ಇದರ ಬದಲಾಗಿ ಮಯನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ದೇಶಗಳ ಮೂಲಕ ಭಾರತವನ್ನು ಕಾಡಲು ಶುರುಮಾಡಿತು. ಮಯನ್ಮಾರಿನ ಕ್ಯಾಕ್ಪ್ಯು ಪೋರ್ಟಿನಲ್ಲಿ ಚೀನಾ ತನ್ನ ನೆಲೆಯುರಿತು. ಬೇ ಆಫ಼್ ಬೆಂಗಾಲಿನಲ್ಲಿರುವ ಈ ಪೋರ್ಟಿನಲ್ಲಿ ನೌಕಾಬಂದರಿನ ಸೌಲಭ್ಯವಿದೆ. ಇಲ್ಲಿ ಸುಮಾರು 2400 ಕಿ.ಮೀ ರಷ್ಟು ಗ್ಯಾಸ್ ಪೈಪನ್ನು ಚೀನಾ ಎಳೆದು ಕ್ಯಾಕ್ಪ್ಯು ಮತ್ತು ಕುನ್ಮಿಂಗ್ ಪ್ರದೇಶವನ್ನು ಜೋಡಿಸಿಕೊಂಡಿತು. ಇದಲ್ಲದೇ ಭಾರತಕ್ಕೆ ಹತ್ತಿರವಿರುವ ಅಂಡಮಾನ್ ನಿಕೋಬಾರ್ ಉತ್ತರದಲ್ಲಿರುವ ಕೋಕೋ ದ್ವೀಪದಲ್ಲೂ ಸಹ ಚೀನಾ ತನ್ನ ಸೇನಾ ನೆಲೆಯನ್ನು ಸ್ಥಾಪಿಸಿತು. ಬಂಗ್ಲಾದೇಶದ ಚಿತ್ತಗಾಂಗಿನಲ್ಲೋಂದು ಪೋರ್ಟನ್ನು ಚೀನಾ ಸ್ಥಾಪಿಸಿತು. ಬಾಂಗ್ಲಾದೇಶದಲ್ಲಿ ಹೆಚ್ಚು ಹಣವನ್ನು ಚೀನಾ Bangladesh-China-India-Mayanmar (BCIM) ಯೋಜನೆ ಮೂಲಕ ಹೂಡಿತು. ಇನ್ನು ಶ್ರೀಲಂಕಾದ ಹಂಬಂಟೋಟಾದಲ್ಲೂ ಚೀನಾ ಒಂದು ಪೂರ್ಟನ್ನು ಸ್ಥಾಪಿಸಿತು. ಲಂಕಾದ ಸರ್ಕಾರ ಕೂಡ ಸಾಲದ ಹೊರೆ ತಾಳಲಾರದೆ ಚೀನಾ ಕಂಪನಿಯೊಂದಕ್ಕೆ ಆ ಜಾಗವನ್ನು ಬಿಟ್ಟುಕೊಡಲು ಮುಂದಾಯಿತು. ಇದೇ ಜಾಗದಲ್ಲಿ ಚೀನಾ ನೌಕಾನೆಲೆಯನ್ನು ಸಹ ಸ್ಥಾಪಿಸಲು ಮುಂದಾಗಿತ್ತು. ಆದರೇ, ಭಾರತದ ರಾಜತಾಂತ್ರಿಕತೆಯ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಇನ್ನೂ ಚೀನಾ-ಪಾಕಿಸ್ತಾನದ ಸಂಬಂಧದ ಕುರಿತು ಹೇಳಲೇಬೇಕಾಗಿಲ್ಲ. ಪಾಕಿಸ್ತಾನದ ಗದ್ವಾರಲ್ಲಿ ಒಂದು ಪೋರ್ಟನ್ನು ಸ್ಥಾಪಿಸಿತು. ಇದರ ಮೂಲಕ ಪಾಕಿಸ್ತಾನಕ್ಕೆ ನೌಕಾ ಸೈನ್ಯಕ್ಕೆ ಸಹಾಯ ಮಾಡಿ ಭಾರತದ ವಿರುದ್ಧ ಬಳಸಲು ತಯಾರಿ ನಡೆಸಿದೆ ಚೀನಾ. ಇಷ್ಟೇ ಅಲ್ಲದೆ ಚೀನಾ ಆಫ಼್ರಿಕಾ ಖಂಡದ ತೀರದಲ್ಲೂ ತನ್ನ ಸೈನ್ಯದ ನೆಲೆಯನ್ನು ಕಟ್ಟಿತು. ಸುಡಾನ್ ಮತ್ತು ಕೀನ್ಯಾ ದೇಶಕ್ಕೂ ತನ್ನ ಪ್ರಭಾವವನ್ನು ವಿಸ್ತರಿಸಿತು ಚೀನಾ. ಈ ರೀತಿ ಭಾರತದ ಸೂತ್ತಲ್ಲೂ 'String of Pearls' ಎಂಬ ಮೃತ್ಯು ಬಲೆಯನ್ನು ಹೆಣೆದಿತ್ತು ಚೀನಾ! ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತ ತನ್ನ ವಿದೇಶಾಂಗ ನೀತಿಯಿಂದ ತನ್ನನ್ನು ಈ ಬಲೆಯಿಂದ ರಕ್ಷಿಸಿಕೊಳ್ಳುತ್ತಿದೆ ಎಂಬುದು ಸಮಾಧಾನಕರ ವಿಚಾರ.


ಕಳೆದ 5 ವರ್ಷಗಳಿಂದ ಚೀನಾ ಭಾರತದ ವಾಣಿಜ್ಯ ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿದೆ. ಮೊಬೈಲ್ ಫ಼ೋನ್ ಮತ್ತು ಅದರ ಅಪ್ಲಿಕೇಷನ್ಗಳ ಮೂಲಕ ಭಾರತವನ್ನು ಹೊಕ್ಕಿದೆ. ಭಾರತದ ಸ್ಟಾರ್ಟಪ್ಗಳಲ್ಲಿ ಸುಮಾರು 4 ಬಿಲಿಯನ್ ಡಾಲರ್ ಅಷ್ಟು ಹೂಡಿಕೆ ಮಾಡಿದೆ. ಐದೇ ವರ್ಷಗಳಲ್ಲಿ ಟಿಕ್ ಟಾಕ್ ಎಂಬ ಆಪ್ ಸುಮಾರು 200 ಮಿಲಿಯನ್ ಬಳಕೆದಾರದನ್ನು ಹೊಂದಿದೆ. ಈ ಸಂಖ್ಯೆ ಭಾರತದಲ್ಲಿ Youtube ಬಳಕೆದಾರರ ಸಂಖ್ಯೆಗಿಂತಲೂ ಹೆಚ್ಚು! ಚೀನಾದ ಒಪ್ಪೊ (Oppo) ಮತ್ತು ಕ್ಸಿಯೊಮೀ (Xiaomi) ಮೊಬೈಲ್ ಫ಼ೋನ್ಗಳು ಭಾರತದ  ಸುಮಾರು 72% ರಷ್ಟು ಪಾಲು ಹೊಂದಿದೆ ಎಂದು ಅಂದಾಜಿಸಲಾಗಿದೆ. ಸುಮಾರು 2 ಡಜ಼ನ್ರಷ್ಟು ಚೀನಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿದೆ. Paytm, Byju's, Oyo, Ola, MX Player, Flipkart, Hike, MakemyTrip, Bigbasket, Policy Bazzar, Swiggy, Snapdeal, Zomato, Quikr ಹೀಗೆ ಹಲವು ವಾಣಿಜ್ಯ ಕ್ಷೇತ್ರದಲ್ಲಿ ಚೀನಾದ ಹೂಡಿಕೆ ಇದೆ.  2015 ರಲ್ಲೇ ಹುವಾಯಿ ಬೆಂಗಳೂರಿನಲ್ಲಿ 1051 ಕೋಟಿಯಷ್ಟು ಮೊತ್ತವನ್ನು ಹೂಡಿ ತನ್ನ ಸಂಶೋಧನ ಕೇಂದ್ರವನ್ನು (Research and Development Center) ಸ್ಥಾಪಿಸಲು ಮುಂದಾಯಿತು. 2012 ರಲ್ಲಿ ಪವರ್ ಗ್ರಿಡ್ ವೈಫ಼ಲ್ಯ ಎಂದು 2-3 ದಿನಗಳ ಕಾಲ ವಿದ್ಯುತ್ ಸರಬರಾಜು ಇಲ್ಲದೆ ಉತ್ತರ ಭಾರತ ಸಂಪೂರ್ಣ ಕತ್ತಲಲ್ಲಿ ಮುಳುಗಿತ್ತು. ಪವರ್ ಗ್ರಿಡ್ಗೆ ಬಳಸುತ್ತಿದ್ದ ಹಾರ್ಡ್ವೇರ್ ಚೀನೀ ಕಂಪನಿಯೊಂದು ತಯಾರಿಸಿತ್ತು. ಚೀನಾ 'ಸೆಟ್ನೆಟ್' ಎಂಬ ವೈರಸ್ ಒಂದನ್ನು ಹಾರ್ಡ್ವೇರ್ ಮೂಲಕ ಬಿಟ್ಟು, ಭಾರತವನ್ನು ಕತ್ತಲಲ್ಲಿ ಇರಿಸಿತು ಎಂದು ಇಂದಿಗೂ ಹಲವರು ಅನುಮಾನ ವ್ಯಕ್ತಪಡಿಸುತ್ತಾರೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಸುಮಾರು 10,000 ವಿಂಟಿಲೇಟರ್ಗಳನ್ನು ಮತ್ತು Personal Protection Equipment (PPE) ಅನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಆದರೆ, ಅದರಲ್ಲಿ ಶೇಖಡ 30ರಷ್ಟು ಕಿಟ್ಗಳು ಕಳಪೆ ಗುಣಮಟ್ಟದ್ದು ಎಂದು ಸಾಬೀತಾಯಿತು.

ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ 1950ರ ನಂತರ ಚೀನಾ ಭಾರತವನ್ನು ಮತ್ತು ಜಗತ್ತನ್ನು ನಾನಾ ರೀತಿಯಲ್ಲಿ ಕಾಡುತ್ತಲೇ ಬಂದಿದೆ.  ಮೊದಲು ಯುದ್ಧದ ಮೂಲಕ, ನಂತರ ನಮ್ಮ ಸುತ್ತ ಇರುವ ದೇಶಗಳನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿ ತನ್ಮೂಲಕ ಭಾರತದ ಕುತ್ತಿಗೆಯನ್ನು ಹಿಸುಕಲು ಪ್ರಯತ್ನ ಪಡುತ್ತಲೇ ಇದೆ. ಭಾರತದ ವಿದೇಶಾಂಗ ಮತ್ತು ರಾಜತಾಂತ್ರಿಕ ನಡೆ ಬದಲಾದ ನಂತರ ಎಚ್ಚೆತ್ತುಕೊಂಡ ಚೀನಾ ತನ್ನ ವರೆಸೆಯನ್ನು ಬದಲಾಯಿಸಿತು. ಭಾರತದ ವಾಣಿಜ್ಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಸದ್ದಿಲ್ಲದೆ ನಮ್ಮನ್ನು ಆವರಿಸಿಕೊಂಡಿತು. ಕೊರೋನಾ ಸಮಯದಲ್ಲೂ ಚೀನಾ ಕಳಪೆ ವಸ್ತುಗಳ ಕೊಟ್ಟು ಭಾರತಕ್ಕೆ ಮತ್ತೊಮ್ಮೆ ಮೊಸವನ್ನೇ ಮಾಡಿತು. ನಾವು ಬಳಸುವ ಅನೇಕ ದಿನ ಬಳಕೆ ವಸ್ತುಗಳು ಚೀನಾದ್ದೆ ಆಗಿವೆ. ಹೌದು, ಚೀನಾ ನಮಗೆ ಮೋಸವೇ ಮಾಡುತ್ತಿದ್ದರೂ ಆ ದೇಶ ತಯಾರಿಸುವ ಪದಾರ್ಥಗಳನ್ನು ಬಿಟ್ಟು ಬದಕಲು ಸಾಧ್ಯವಿಲ್ಲ ಎಂಬ ಸ್ಥಿತಿ ಇಂದಿಗೂ ಇದೆ. ಚೀನಾದ ಪ್ರಭಾವದಿಂದ ಭಾರತ ಹೊರಬರಬೇಕಾಗಿದೆ. ಅದಕ್ಕಾಗಿ ನಾವು ಹೆಚ್ಚು ದುಡಿಯಬೇಕಾಗಿದೆ. ಪ್ರಧಾನ ಮಂತ್ರಿ ಮೋದಿಜೀ ಹೇಳಿದಂತೆ ನಾವೆಲ್ಲರೂ ಸ್ವಾವಲಂಭಿ, ಆತ್ಮ ನಿರ್ಭರ ಭಾರತವನ್ನು ಕಟ್ಟಬೇಕಾಗಿದೆ. ನೆನಪಿಡಿ, ಚೀನಾ ಬೆಳೆದರೆ ಜಗತ್ತಿಗೆ ಮಾರಕ. ಭಾರತ ಬೆಳೆದರೆ ಜಗತ್ತಿಗೆ ಶಾಂತಿ, ನೆಮ್ಮದಿ ಮತ್ತು ಒಳಿತು.