November 25, 2020

ಕೊರೋನಾ ಲಸಿಕೆ ನೆಪದಲ್ಲಿ ಚೀನಾವನ್ನು ಮರೆಯಬಾರದು

ಕೊರೋನಾ ಎಂಬ ಮಹಾಮಾರಿ ಜಗತ್ತನ್ನು ಕಾಡಲು ಶುರುಮಾಡಿ 1 ವರ್ಷವಾಯ್ತು. ಕಳೆದ ವರ್ಷ ನವೆಂಬರ್ ಅಲ್ಲಿ ಚೀನಾದ ವೂಹಾನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಜಗತ್ತಿಗೆ ಈ ವೈರಸ್ಸಿನ ವಿಚಾರವನ್ನು ತಿಳಿಸದೆ 2-3 ತಿಂಗಳು ತನ್ನಲ್ಲೇ ಮುಚ್ಚಿಟ್ಟುಕೊಂಡಿತ್ತು. ತದ ನಂತರ ಇಡೀ ಜಗತ್ತಿಗೆ ಕೊರೋನಾ ಅಮರಿಕೊಂಡಿತು ಮತ್ತು ಬಹುತೇಕ ಎಲ್ಲಾ ದೇಶಗಳು ಲಾಕ್ಡೌನ್ ಮಾಡಿಕೊಂಡು ಸ್ತಬ್ದವಾಯಿತು. ನೆನಪಿಡಿ, 2020 ಫ಼ೆಬ್ರವರಿ ಹೊತ್ತಿಗೆ ಚೀನಾದ ವೂಹಾನ್ ಹೊರತಾಗಿ ಇಡೀ ದೇಶ ಸಾಮಾನ್ಯ ಸ್ಥಿತಿಗೆ ಮರಳಿತ್ತು ಹಾಗೂ 2 ತಿಂಗಳ ನಂತರ ವೂಹಾನ್ ಕೂಡ ಸಾಮಾನ್ಯವಾಯಿತು.

ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳು ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧ ಬೇಕೆಂದು ಕೇಳಿಕೊಂಡಾಗ 55 ರಾಷ್ಟ್ರಗಳಿಗೆ ಭಾರತ ಔಷಧವನ್ನು ರಫ಼್ತು ಮಾಡಿತ್ತು. ಇದೇ ಸಮಯದಲ್ಲಿ ಸ್ಪೈನ್, ಕ್ರೆಝ್ ರಿಪಬ್ಲಿಕ್ ಮತ್ತು ಭಾರತ ಚೀನಾದಿಂದ ಕೊರೋನಾ ಟೆಸ್ಟಿಂಗ್ ಕಿಟ್ಗಳನ್ನು ಆಮದು ಮಾಡಿಕೊಂಡಿತು. ಆದರೆ 80% ರಷ್ಟು ಕಿಟ್ಗಳು ಕಳಪೆ ಎಂದು ಮೂರೂ ದೇಶಗಳು ತಿರಸ್ಕರಿಸಿತು. ಉತೃಷ್ಟ ಮಟ್ಟದ N-95 ಮಾಸ್ಕ್ಗಳ ಬದಲಾಗಿ ಉಳಡುಪುಗಳಿಂದ ತಯಾರಿಸಿದ ಮಾಸ್ಕ್ಗಳನ್ನು ಪಾಕೀಸ್ತಾನಕ್ಕೆ ರಫ಼್ತು ಮಾಡಿದ್ದು ಇದೇ ಚೀನಾ. ಇಷ್ಟೇ ಅಲ್ಲದೆ ವಿಸ್ತರಣವಾದಕ್ಕೂ ಮುಂದಾಯಿತು. ಏಪ್ರಿಲ್ಲಿನಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ವಿಯಟ್ನಾಂ ಜೊತೆ ಜಗಳ ಶುರು ಮಾಡಿತು. ಹಾಂಕಾಂಗ್ ಅನ್ನು ಆಕ್ರಮಿಸಿಕೊಂಡರು, ತೈವಾನ್ ಜೊತೆಗೆ ಕಿರಿಕಿರಿ ಶುರು ಮಾಡಿದರು. ಬಹುಮುಖ್ಯವಾಗಿ ಲದಾಖ್ ಪ್ರಾಂತ್ಯದ ಗಲ್ವಾನ್ ಕಣಿವೆಯಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬಂತು. ಕೊರೋನಾ ವಿರುದ್ಧವಲ್ಲದೇ ಗಡಿಯಲ್ಲೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಚೀನಾ ಭಾರತಕ್ಕೆ ತಂದೊಟ್ಟಿತು.

2018ರಲ್ಲಿ 8%, 2019 5.7% ರಷ್ಟಿದ್ದ ಭಾರತದ ಜಿ.ಡಿ.ಪಿ 2020 ಜುಲೈ ಹೊತ್ತಿಗೆ -23% ಕ್ಕೆ ಕುಸಿಯಿತು. ಲಕ್ಷಾಂತರ ಮಂದಿ ಉದ್ಯೋಗ ನಷ್ಟ ಅನುಭವಿಸಿದರು. ದೇಶದಾದ್ಯಂತ ಮೆಟ್ರೋ ಸುಮಾರು 2000 ಕೋಟಿಯಷ್ಟು ನಷ್ಟ ಅನುಭವಿಸಿತು. ವಿಮಾನಯಾನ ಇಲಾಖೆಗೆ 3600 ಕೋಟಿಯಷ್ಟು ನಷ್ಟವಾಗಿದೆ.  ಹೋಟೆಲ್ ಉದ್ಯಮ ಸುಮಾರು 1.25 ಲಕ್ಷ ಕೋಟಿ, ರೈಲ್ವೆ ಇಲಾಖೆ 35000 ಕೋಟಿ ನಷ್ಟ ಅನುಭವಿಸಿತು.

ಇಲ್ಲಿಯವರೆಗೆ 9 ದಶಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣ ಮತ್ತು 1.3 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಗಾಯಕ ಎಸ್.ಪಿ.ಬಿ, ಬೆಳಗಾವಿಯ ಸುರೇಶ್ ಅಂಗಡಿ, ಬೀದರಿನ ನಾರಾಯಣ ರಾವ್, ಅಶೋಕ್ ಗಸ್ತಿ ಕೊರೋನಾಕ್ಕೆ ಬಲಿಯಾದ ಕೆಲವು ಖ್ಯಾತ ನಾಮರು. ಇತಿಹಾಸದಲ್ಲೇ ಆತ್ಯಂತ ಸರಳವಾದ ದಸರ ಈ ವರ್ಷದ ಆಚರಿಸಲಾಯಿತು. ವಿಶ್ವವಿಖ್ಯಾತ ಜಂಬೂಸವಾರಿ ಅರಮನೆ ಪ್ರಾಂಗಣ ಬಿಟ್ಟು ಹೊರಬರಲಿಲ್ಲ. 2020-21 ಶೈಕ್ಷಣಿಕ ವರ್ಷ ಮಕ್ಕಳು ಶಾಲೆಗೆ ಹೋಗದಂತಾಯಿತು. ಇತರರೊಂದಿಗೆ ಕಲೆತು ಆಟ ಪಾಠವನ್ನು ಕಲಿಯಬೇಕಿದ್ದ ಮಕ್ಕಳು ಮನೆಯಲ್ಲಿ ಬಂಧಿತರಾದರು. ಸಿನಿಮಾ ಕ್ಷೇತ್ರ 5000 ಕೋಟಿಯಷ್ಟು ನಷ್ಟ ಅನುಭವಿಸಿದೆ. ಹಣದ ಹೊರತಾಗಿ ಸೋಂಕುಪೀಡಿತ ಜನರಿಗೆ ಅವರ ಬಂಧು, ಸ್ನೇಹಿತರಿಗೆ ಆದ ಮಾನಸಿಕ ತುಮುಲ, ಭಯವನ್ನು ವರ್ಣಿಸಲು ಸಾಧ್ಯವಿಲ್ಲ.  ಪುಟ್ಟ ಮಗುವೊಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿದ್ದ ತಾಯಿ ಹತ್ತಿರ ಹೋಗಲಾಗದೆ ಕಣ್ಣೀರಿಟ್ಟ ದೃಶ್ಯ ಇಗಲೂ ಮನಕಲಕುವಂತಿದೆ. ಈ ರೀತಿ ಸಂಕಟ ಅನುಭವಿಸಿದ ಕುಟುಂಬಗಳೆಷ್ಟೋ ದೇವರೆ ಬಲ್ಲ. ಜಗತ್ತಿನಲ್ಲಿ ಈವರೆಗೂ ಕೊರೋನಾ ಕಾರಣದಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 14 ಲಕ್ಷಕ್ಕೂ ಹೆಚ್ಚು! 

ಭಾರತ ಚೀನಾದ 300ಕ್ಕೂ ಹೆಚ್ಚು ಆಪ್ಗಳನ್ನು ಬ್ಯಾನ್ ಮಾಡಿದೆ. ಚೀನಾದಿಂದ ಆಮದಾಗುವ ಅನೇಕ ವಸ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿದೆ. ಚೀನಾದ ವಿದ್ಯುತ್ ಮತ್ತು ಕಮ್ಯುನಿಕೇಷನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡದಂತೆ ಕ್ರಮ ತೆಗೆದುಕೊಂಡಿದೆ. ಚೀನಾ ವಸ್ತುಗಳ ಬಹಿಷ್ಕಾರದ ಕುರಿತು ಸೂಕ್ಷ ಲೇಖನವೊಂದನ್ನು ಚೀನಾದ ಮುಖವಾಣಿ 'ಗ್ಲೋಬಲ್ ಟೈಮ್ಸ್' ವರದಿ ಮಾಡಿತ್ತು. ದೀಪಾವಳಿ ಸಮಯದಲ್ಲಿ ಚೀನಾಕ್ಕೆ 40000 ಕೋಟಿಯಷ್ಟು ನಷ್ಟವಾಗಿದೆ ಎಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ ಸಿ.ಎ.ಐ.ಟಿ ಅಭಿಪ್ರಾಯ ಪಟ್ಟಿದೆ. ಕ್ವಾಡ್ ದೇಶಗಳೂ ಕೂಡ ಚೀನಾವನ್ನು ಎದುರಿಸುವಂತೆ ಸಮರಾಭ್ಯಾಸ ನಡೆಸಿತು.

ಆದರೆ, ಅಮೇರಿಕಾದ ಚುಣಾವಣೆ ನಂತರ ಚೀನಾ ಬಗೆಗಿನ ಮಾತು ಜಗತ್ತಿನಲ್ಲಿ ಕಮ್ಮಿಯಾಗಿದೆ! ಇತ್ತೀಚಿನ ಸುದ್ದಿ ಪ್ರಾಕಾರ ಜನವರಿ 2021 ಹೊತ್ತಿಗೆ ಕೊರೋನಾಕ್ಕೆ ಲಸಿಕೆ ಲಭ್ಯವಿರುತ್ತದೆ. ಜಗತ್ತಿನ ಕೆಲವು ರಾಷ್ಟ್ರಗಳು ಲಸಿಕೆಯನ್ನು ಮುಂಗಡವಾಗಿ ಕಾಯ್ದಿರಿಸಿದೆ ಎಂಬ ವದಂತಿಯೂ ಸಹ ಇದೆ. ಇಂದಲ್ಲ ನಾಳೆ ಕೊರೋನಾವನ್ನು ನಾಶ ಮಾಡುವ ಔಷದ ಬಂದೇ ಬರುತ್ತದೆ.

ರಷ್ಯಾ, ಅಮೇರಿಕಾ ಕೊರೋನಾ ಲಸಿಕೆ ಬಗ್ಗೆ ಹೆಚ್ಚು ಮಾತಾಡುವ ಈ ಸಮಯದಲ್ಲಿ ಚೀನಾದ ಮೌನ ಮತ್ತಷ್ಟು ಅನುಮಾನಕ್ಕೆ ಆಸ್ಪದವಾಗಿದೆ. ಲಸಿಕೆಯ ವಿಚಾರದಲ್ಲೂ ಚೀನಾದೊಂದಿಗೆ ಎಚ್ಚರಿಕೆವಹಿಸಬೇಕು. ಚೀನಾಕ್ಕೆ ಲಸಿಕೆ ಕೊಡುವ ಸಂದರ್ಭ ಬಂದರೆ ಕೊರೋನಾ ಮತ್ತು ಚೀನಾದ ಕಾರಣ ದೇಶದಲ್ಲಾದ ಕಷ್ಟ, ನಷ್ಟಗಳನ್ನು ಒಮ್ಮೆ ನೆನೆಸಿಕೊಳ್ಳುವುದು ಒಳಿತು. ಲಸಿಕೆಯ ನೆಪದಲ್ಲಿ ಪಕ್ಕದಲ್ಲಿರುವ ಶತ್ರುವನ್ನು ಮರೆಯಬಾರದು.

November 20, 2020

ಡಿಜಿಟಲ್ ಯುಗದಲ್ಲೇ ಹೀಗೆ... ಇನ್ನು ತುರ್ತು ಪರಿಸ್ಥಿತಿಯ ಕಾಲದಲ್ಲಿ ಹೇಗಿರಬೇಡ!

ಕೆಲವು ದಿನಗಳಿಂದ ಭಾರತದಲ್ಲಿ ಕೇಳಿ ಬರುತ್ತಿರುವ ಪತ್ರಕರ್ತನ ಹೆಸರು ಅರ್ನಬ್. ಸುಶಾಂತ್ ಸಾವಿನ ಪ್ರಕರಣ, ರಾಜಕೀಯ ಪಕ್ಷಗಳ ಹಗರಣಗಳು, ಬಾಲಿವುಡ್ಡಿನ ಡ್ರಗ್ಸ್ ಮಾಫಿಯ, ಮಾಧ್ಯಮದವರ ಟಿ.ಆರ್.ಪಿ ಹಗರಣ, ಪಾಲ್ಘರ್ ಸಾಧುಗಳ ಕೊಲೆ ಪ್ರಕರಣ ಹಾಗು ಮುಖ್ಯವಾಗಿ ದೇಶದ ಪರವಾಗಿ ಮತ್ತು ಸಮಸ್ಯೆ ಕುರಿತು ಸುಸ್ಪಷ್ಟವಾಗಿ ದನಿ ಎತ್ತುವ ರಾಷ್ಟ್ರೀಯವಾದಿ ಪತ್ರಕರ್ತ ಅರ್ನಬ್. 

ಆತ 2016 ರಲ್ಲಿ ಟೈಮ್ಸ್ ನೌ ಸಂಸ್ಥೆಯಿಂದ ಹೊರಬಂದು ರಿಪಬ್ಲಿಕ್ ಸಂಸ್ಥೆ ಕಟ್ಟಿದ ರೀತಿ ಅದ್ಭುತ. ಕಟ್ಟಡದ ವಿನ್ಯಾಸದ ಸಲುವಾಗಿ ಅನ್ವಯ್ ನಾಯ್ಕರ ಕಾನ್ಕಾರ್ಡ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ ರಿಪಬ್ಲಿಕ್ ಸಂಸ್ಥೆ. ಹಣದ ಕಾರಣವನ್ನು ಕೊಟ್ಟು ಅರ್ನಬ್ ಮತ್ತು ಇನ್ನಿಬ್ಬರ ಹೆಸರು ಬರೆದಿಟ್ಟು ನಾಯ್ಕ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ವರ್ಷ ಅರ್ನಬ್ ಮತ್ತು ಇತರರನ್ನು ಆರೋಪ ಮುಕ್ತಗೊಳಿಸಿತ್ತು. ರಿಪಬ್ಲಿಕ್ ಶುರುವಾದ ನಂತರವಂತೂ ಅರ್ನಬ್ನ ದನಿ ಮತ್ತಷ್ಟು ಜೋರಾಯಿತು. ಶುಶಾಂತ್ ಪ್ರಕರಣವನ್ನು ಪ್ರತಿದಿನ ಜನಮಾನಸದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಅರ್ನಾಬ್ನ ಪಾತ್ರ ದೊಡ್ಡದು. ಬಾಲಿವುಡ್ಡಿನ ಡ್ರಗ್ಸ್ ಪ್ರಕರಣ ಬಗ್ಗೆ ಕೂಡ ಸಾಧ್ಯವಾದಷ್ಟು ಆಳಕ್ಕಿಳಿದು ಅದರ ವಿರುದ್ಧ ದನಿ ಎತ್ತಿದ. ಪಾಲ್ಘರ್ನ ಸಾಧುಗಳ ಕೊಲೆ ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುತ್ತಲೇ ಮುಂದುವರೆದ. ಇತ್ತೀಚಿನ ಟಿ.ಆರ್.ಪಿ ಹಗರಣ ವಿಚಾರದಲ್ಲಿ ರಿಪಬ್ಲಿಕ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಪರಂ ಬಿರ್ ವಿರುದ್ಧ ಸಹ ದನಿ ಎತ್ತಿದ್ದು ಇದೇ ಅರ್ನಬ್. ಕಾಂಗ್ರೆಸಿನ ಸೋನಿಯಾರನ್ನು ಅಂಟೋನಿಯೋ ಮೈನೋ ಎಂದು ಪದೇ ಪದೇ ಕರೆದ. ಈ ದೇಶದ ಕಮ್ಯುನಿಸ್ಟರಿಗಂತೂ ಅರ್ನಬ್ ತನ್ನ ನೇರ ಮತ್ತು ನಿಷ್ಠುರವಾದ ಪ್ರಶ್ನೆಗಳಿಂದ ಸಿಂಹಸ್ವಪ್ನವಾಗಿ ಕಾಡಿದ್ದ.

ಇದೆಲ್ಲದರ ಪರಿಣಾಮ ಎಂಬಂತೆ ಈ ವರ್ಷದ ಏಪ್ರಿಲ್ ಅಲ್ಲಿ ಕೆಲವು ಗೂಂಡಾಗಳಿಂದ ಅರ್ನಬ್ ಮತ್ತು ಆತನ ಪತ್ನಿಯ ಮೇಲೆ ಹಲ್ಲೆ ಪ್ರಯತ್ನವಾಯಿತು. ಮುಚ್ಚಿಹೋದ ಅನ್ವಯ್ ನಾಯ್ಕರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷವಾದ ವಾರೆಂಟ್ ಸಹ ಇಲ್ಲದೆ ಕಳೆದ ವಾರ ಆತನನ್ನು ಮುಂಬೈ ಪೊಲೀಸ್ ಬಂಧಿಸಿತು. ಜೈಲಿನಲ್ಲಿ ತನ್ನ ಜೀವಕ್ಕೆ ಆಪತ್ತಿದೆ ಎಂದು ಅರ್ನಬ್ ಹೇಳಿದನ್ನು ನೋಡಿದ್ದೇವೆ. ಪೊಲೀಸ್ ವ್ಯವಸ್ಥೆ ಬಗೆಗೆ ಸಾಮಾನ್ಯ ಜನರಿಗಿಂತ, ಪತ್ರಕರ್ತನಿಗಿಂತ ನಿಜವಾದ ಅಪರಾಧಿಗಳಿಗೆ, ಭಯೋತ್ಪಾದಕರಿಗೆ ನಂಬಿಕೆ ಹೆಚ್ಚಾಗಿರುವುದು ಆಘಾತಕಾರಿ!

ಮುಂಬೈ ಕೋರ್ಟು ಕೂಡ ಅರ್ನಬ್ ಗೆ ಬೇಲ್ ಕೊಡಲಿಲ್ಲ. ದೇಶದಾದ್ಯಂತ ಅರ್ನಬ್ ಪರವಾಗಿ ಜನ ದನಿ ಎತ್ತಲು ಶುರು ಮಾಡಿದರು. ಮಾರನೇ ದಿವಸ ಅರ್ನಬ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದರು. ಸುಪ್ರೀಂ ಕೋರ್ಟ್ ಅರ್ನಬ್ ಗೆ ಬೇಲ್ ಕೊಟ್ಟಿದ್ದಲ್ಲದೆ, ಕೆಲವು ಗಂಭೀರ ಎಚ್ಚರಿಕೆಯನ್ನೂ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿತು. ಸೈದ್ಧಾಂತಿಕ ವಿರೋಧದ ಕಾರಣ ಸರ್ಕಾರವೊಂದು ವ್ಯಕ್ತಿಯೊಬ್ಬನನ್ನು ಗುರಿಯಾಗಿಸುವುದು ತಪ್ಪು, ಅಂತವರ ರಕ್ಷಣೆಗೆ ಸುಪ್ರೀಂ ಕೋರ್ಟು ನಿಲ್ಲುತ್ತದೆ ಎಂದು ಕೋರ್ಟು ಸ್ಪಷ್ಟಪಡಿಸಿದೆ. ಸಮಾಜದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ಸರ್ಕಾರವೊಂದು ಹತ್ತಿಕ್ಕಲು ಪ್ರಯತ್ನಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. 

ಎಲ್ಲಾ ವಿಚಾರಗಳು ಸುಲಭವಾಗಿ, ಕಡಿಮೆ ಸಮಯದಲ್ಲಿ ಜನರನ್ನು ತಲುಪುವ ಮತ್ತು ಜನರು ಹೆಚ್ಚು ಜಾಗೃತವಾಗಿರುವ ಡಿಜಿಟಲ್ ಯುಗವಿದು. ಹೀಗಿದ್ದೇ ಪತ್ರಕರ್ತನೊಬ್ಬನನ್ನು ಸುಮ್ಮನಾಗಿಸುವ ಪ್ರಯತ್ನಗಳು ಢಾಳಢಾಳಾಗಿ ನಡೆಯುತ್ತಿದೆ. ಇನ್ನು ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿ ದಿನಗಳಲ್ಲಿ ಏನೆಲ್ಲಾ ಆಗಿರಬಹುದು ಎಂದು ಊಹಿಸಿಕೊಳ್ಳಿ.