June 30, 2021

ಇಸ್ರೋ ವಿಜ್ಞಾನಿಯ ಮೇಲೆ ಸುಳ್ಳು ಕೇಸಿನ ಮರ್ಮಾಘಾತ!

ಕಳೆದ ವಾರ ತಿರುವನಂತಪುರದ ನ್ಯಾಯಾಲಯದಲ್ಲಿ 18 ಮಾಜಿ ಪೋಲೀಸ್ ಅಧಿಕಾರಿಗಳ ಮೇಲೆ ಸಿ.ಬಿ.ಐ. ಅಧಿಕಾರಿಗಳು ಎಫ಼್.ಐ.ಆರ್ ದಾಖಲಿಸಿದರು. ಇವರಲ್ಲಿ ಎಸ್.ವಿಜಯನ್, ಥಂಪಿ ದುರ್ಗದತ್, ಎ.ಅರ್. ರಾಜಿವನ್, ಕೆ.ಕೆ. ಜೋಶುವಾ, ರವೀಂದ್ರನ್ ನಾಯರ್, ಅರ್.ಬಿ. ಶಿವಕುಮಾರ್, ಅಪರಾಧ ವಿಭಾಗದ ಡಿ.ಐ.ಜಿ. ಆಗಿದ್ದ ಸಿಬಿ ಮ್ಯಾಥಿವ್ಸ್ ಮತ್ತು ಕೇರಳದಲ್ಲಿ ಐ.ಬಿ. ಮುಖ್ಯಸ್ಥರಾಗಿದ್ದ ಮ್ಯಾಥಿವ್ ಜಾನ್ ಪ್ರಮುಖ 7 ಆರೋಪಿಗಳು ಎಂದು ದಾಖಲಾಗಿದ್ದಾರೆ. ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದ ಮೇಲೆ ನಡೆದ ಷಡ್ಯಂತ್ರದ ಕೇಸಿನ ಅಡಿಯಲ್ಲಿ ಈ ಅಧಿಕಾರಿಗಳ ಮೇಲೆ ಕೇಸ್ ದಾಖಲಾಗಿದೆ. ಇಸ್ರೋ ಸಂಸ್ಥೆಗೂ, ಈ ಪೋಲೀಸ್ ಅಧಿಕಾರಿಗಳಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರ? ಇದು 1994 ರಲ್ಲಿ ಇಸ್ರೋದ ವಿಜ್ಞಾನಿಗಳಾದ ನಂಬಿ ನಾರಾಯಣನ್, ಸಸಿಕುಮಾರನ್ ಮತ್ತು ಮಾಲ್ಡೀವ್ಸ್ನ ಫೌಸಿಯಾ ಹಸನ್ ಮತ್ತು ಮಾರಿಯಂ ರಶೀದಾ ಎಂಬುವವರನ್ನು ಬಂಧಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸಬೇಕಿದ್ದ ಭಾರತಕ್ಕೆ ಮರ್ಮಾಘಾತವನ್ನು ನೀಡಿದ ಘಟನೆಯಾಗಿದೆ. ಈ ಕೇಸಿನ ಕೇಂದ್ರ ಬಿಂದು ನಮ್ಮ ದೇಶದ ಶ್ರೇಷ್ಠ ವಿಜ್ಞಾನಿ; ನಂಬಿ ನಾರಾಯಣನ್.

Shri Nambi Narayanan

1969 ರಲ್ಲಿ ಇಸ್ರೋ ಸ್ಥಾಪನೆಯಾಯಿತು. ಅಬ್ದುಲ್ ಕಲಾಂ, ಅಬ್ದುಲ್ ಮಜೀದ್, ಸಿ.ಆರ್.ಸತ್ಯ, ವಿ.ಸುಧಾಕರ್ ರಂತಹ ಶ್ರೇಷ್ಠ ವಿಜ್ಞಾನಿಳೊಂದಿಗೆ ಕೆಲಸ ಮಾಡಿಕೊಂಡು ಇಸ್ರೋವನ್ನು ತಳಮಟ್ಟದಿಂದ ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ನಂಬಿಜೀ. ರಷ್ಯಾ ಮತ್ತು ಅಮೇರಿಕಾ ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಕಾಲದಲ್ಲಿ ಭಾರತವೂ ಅಗ್ರಣಿಯಾಗಬೇಕು ಎಂಬುದಷ್ಟೇ ಇಸ್ರೋದ ವಿಜ್ಞಾನಿಗಳ ಉದ್ದೇಶವಾಗಿತ್ತು. ಪಿ.ಎಸ್.ಎಲ್.ವಿ ರಾಕೆಟ್ಗಳ ವಿನ್ಯಾಸವನ್ನು ತಯಾರಿಸಿ, ಅದನ್ನು ಉಡಾವಣೆ ಮಾಡಬೇಕು ಎಂಬುದು ಅವರ ಯೋಜನೆಯಾಗಿತ್ತು. ಈ ರಾಕೆಟ್ಗಳ ಉಡಾವಣೆಗೆ ಬೇಕಾದಂತಹ ಇಗ್ನೈಟರ್ಗಳ ವಿನ್ಯಾಸವನ್ನು ತಯಾರು ಮಾಡುವ ಮಹತ್ವದ ಜವಾಬ್ದಾರಿ ನಂಬಿಜೀ ಅವರ ಮೇಲಿತ್ತು. 20 ಸೆಪ್ಟೆಂಬರ್ 1993 ರಂದು ಭಾರತ ತನ್ನ ಮೊದಲ ಪಿ.ಎಸ್.ಎಲ್.ವಿ. ರಾಕೆಟ್ಟನ್ನು ಉಡಾವಣೆ ಮಾಡಲು ತಯಾರಿ ಮಾಡಿಕೊಂಡಿತ್ತು. ಬಾಹ್ಯಾಕಾಶದಲ್ಲಿನ ಒತ್ತಡದ ಪ್ರಮಾಣದಲ್ಲಿ ಗನ್ ಪೌಡರ್ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ರಾಕೆಟ್ ಪೂರ್ಣ ಉಡಾವಣೆಯಾಗದೆ ಸಮುದ್ರಕ್ಕೆ ಬಿತ್ತು. ಈ ರೀತಿ ಆಗುತ್ತದೆ ಎಂದು ಪ್ರಯೋಗದ ಹಂತದಲ್ಲಿ ನಂಬಿಜೀ ಪತ್ತೆಮಾಡಿ ಕಲಾಂ ರವರಿಗೆ ತಿಳಿಸಿದ್ದರು. ತಮ್ಮ ಪ್ರಯತ್ನ ವಿಫಲವಾಗುತ್ತದೆ ಎಂದು ತಿಳಿದಿದ್ದರೂ ಜಗತ್ತಿನೆದುರಿಗೆ ನಾವು ಮಾಡುವ ಕೆಲಸ ನಿಂತಿದೆ ಎಂದು ತೋರಿಸಿಕೊಳ್ಳಬಾರದೆಂದು ರಾಕೆಟ್ ಉಡಾವಣೆಯ ಪ್ರಕ್ರಿಯೆ ನಿಲ್ಲಿಸಲಿಲ್ಲ. ಅದಾದ ಒಂದೇ ವರ್ಷಕ್ಕೆ ಅಂದರೆ; 15 ಅಕ್ಟೋಬರ್ 1994 ಕ್ಕೆ ಭಾರತ ತಾನು ಕಲಿತ ಪಾಠದಿಂದ ಮೊದಲ ಬಾರಿಗೆ ಪಿ.ಎಸ್.ಎಲ್.ವಿ ರಾಕೆಟ್ಟನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. 2021 ಹೊತ್ತಿಗೆ 51 ಪಿ.ಎಸ್.ಎಲ್.ವಿ ರಾಕೆಟ್ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂಬುದು ಇಸ್ರೋ ಇತಿಹಾಸದ ಹೆಗ್ಗಳಿಕೆ. ಇದಾದ 10-12 ದಿನಗಳಲ್ಲಿ ಭಾರತದ ಪ್ರಧಾನಮಂತ್ರಿಗಳು ಕಸ್ತೂರಿ ರಂಗನ್ ಮತ್ತು ತಂಡದವರನ್ನು ಕರೆದು ಅಭಿನಂದಿಸಿ ಸನ್ಮಾನಿಸಿದ್ದರು. ಹಾಂ, ಆ ತಂಡದಲ್ಲಿ ನಂಬಿಜೀ ಕೂಡ ಇದ್ದರು. 26 ನೇ ತಾರೀಖು ಸನ್ಮಾನ ಸ್ವೀಕರಿಸಿದ ನಂಬಿಜೀಯವರನ್ನು 30 ನೇ ತಾರೀಖು ಪೋಲೀಸರು ಬಂಧಿಸಿ ಕರೆದೊಯ್ಯುತ್ತಾರೆ!

ರಷ್ಯಾ ಮಾತ್ತು ಅಮೇರಿಕಾಕ್ಕೆ ಬಾಹ್ಯಾಕಾಶದ ಕ್ಷೇತ್ರದಲ್ಲಿ ಸವಾಲನ್ನು ಒಡ್ಡಬಹುದಾಗಿದ್ದು ಆ ಕಾಲದಲ್ಲಿ ಭಾರತ ಮಾತ್ರ. ರಷ್ಯಾ ನಮ್ಮ ಮಿತ್ರ ರಾಷ್ಟ್ರವಾಗಿತ್ತು ಆದರೆ, ಅಮೇರಿಕಾ ನಮ್ಮ ಏಳಿಗೆಯನ್ನು ಸಹಿಸದ ರಾಷ್ಟ್ರವಾಗಿತ್ತು. ಹೇಗಾದರೂ ಮಾಡಿ ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಎಲ್ಲಾ ಪ್ರಯತ್ನವನ್ನು ವಿಫಲಗೊಳಿಸಲು ಅದು ಯೋಜನೆ ರೂಪಿಸಿತ್ತು. ರಾಕೆಟ್ ಉಡಾವಣೆಗೆ ಬೇಕಾಗಿದ್ದ ಕ್ರಯೋಜೆನಿಕ್ ಇಂಜಿನ್ನನ್ನು ಅಮೇರಿಕಾ ಭಾರತಕ್ಕೆ ಕೊಡಲು ನಿರಾಕರಿಸಿತ್ತು ಆದ್ದರಿಂದ, ಭಾರತ ರಷ್ಯಾದ ಬಳಿ ಕೇಳಿಕೊಂಡಿತ್ತು. ರಷ್ಯಾ ನಮಗೆ 230 ಕೋಟಿ ರೂಗಳಿಗೆ ಇಂಜಿನ್ನನ್ನು ಕೊಡಲು ಒಪ್ಪಿತ್ತು. ಇದು ಅಮೇರಿಕಾ ಹೇಳಿದ್ದ ಬೆಲೆಗಿಂತ ಶೇಕಡ 400 ರಷ್ಟು ಕಡಿಮೆ ಬೆಲೆಯಾಗಿತ್ತು. ಎಂ.ಟಿ.ಸಿ.ಆರ್ ಒಪ್ಪಂದದ ಪ್ರಕಾರ ಭಾರತಕ್ಕೆ ಈ ಇಂಜಿನ್ನನ್ನು ಕೊಡಬಾರದು ಎಂದು ಅಮೇರಿಕಾ ರಷ್ಯಾದ ಮೇಲೆ ಒತ್ತಡ ಹಾಕಿತು. ಆದರೂ ರಷ್ಯಾ ಭಾರತಕ್ಕೆ ಗುಪ್ತವಾಗಿ ಸಹಾಯ ಮಾಡಿತು. 3 ಇಂಜಿನ್ಗಳು ಭಾರತಕ್ಕೆ ಬಂದವು ಮತ್ತು ಇದನ್ನು ಉಪಯೋಗಿಸಿಕೊಂಡು 1994 ರಲ್ಲಿ ಭಾರತ ರಾಕೆಟ್ ಉಡಾವಣೆ ಮಾಡಿ ಯಶಸ್ಸು ಕಂಡಿತು. ವಿದೇಶದಿಂದ ಇಂಜಿನ್ನನ್ನು ಖರೀದಿ ಮಾಡಿದರೆ ಹೆಚ್ಚು ಹಣ ಖರ್ಚಾಗುತ್ತದೆ ಆದ್ದರಿಂದ, ನಾವೇ ಅದನ್ನು ತಯಾರಿಸುವಂತಾಗಬೇಕು ಎಂದು ಫ್ರಾನ್ಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಆ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದರು ನಂಬಿಜೀ. ಈ ಎಲ್ಲಾ ಬಗೆಯ ಏಳಿಗೆಯನ್ನು ಸಹಿಸದ ಅಮೇರಿಕಾ ಭಾರತದ ಪ್ರಮುಖ ವಿಜ್ಞಾನಿಗಳನ್ನು ಸಂಕಷ್ಟಕ್ಕೆ ಸಿಕ್ಕಿಹಾಕಿಸಬೇಕು ಎಂಬ ಷಡ್ಯಂತ್ರವನ್ನು ರೂಪಿಸಿತು. ಈ ಪಿತೂರಿಗೆ ಬಲಿಯಾದವರೇ Liquid Propulsion Engine ವಿಭಾಗದ ಮುಖ್ಯಸ್ಥರಾಗಿದ್ದ ನಂಬಿ ನಾರಯಣನ್!

ಈಗ ಕೇಸಿನ ಮುಖ್ಯ ವಿಚಾರವನ್ನು ಗಮನಿಸೋಣ. ಒಂದು ಕಾಲದಲ್ಲಿ ಗೂಢಾಚಾರರಾಗಿ ಕಾರ್ಯನಿವಹಿಸಿದ್ದ ಮಾಲ್ಡೀವ್ಸ್ ದೇಶದ ಮಾರಿಯಂ ರಶೀದಾ ಮತ್ತು ಫೌಸಿಯಾ ಹಸನ್ ವೀಸಾ ಅವಧಿ ಮುಗಿದ ಮೇಲೆ ಭಾರತದಲ್ಲಿದ್ದಾರೆಂದು ಕೇರಳದ ಪೋಲೀಸರು ಬಂಧಿಸುತ್ತಾರೆ. ಅವರ ಡೈರಿಯಲ್ಲಿ ನಂಬಿಜೀ ಮತ್ತು ಸಸಿಕುಮಾರ್ ರವರ ದೂರವಾಣಿ ಸಂಖ್ಯೆ ಇತ್ತು ಮತ್ತು ಇವರ ಮೂಲಕ ನಂಬಿ ಮತ್ತು ಸಸಿಕುಮಾರ್ ರಾಕೆಟ್ ತಯಾರಿಸುವ ವಿನ್ಯಾಸವನ್ನು ಪಾಕೀಸ್ತಾನಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಸುಳ್ಳು ಮೊಕದ್ದಮೆಯನ್ನು ದಾಖಲಿಸಿ, ಕೇರಳದ ಅಂದಿನ ಡಿ.ಐ.ಜಿ. ಸಿಬಿ ಮ್ಯಾಥಿವ್ಸ್ ಅವರ ಆದೇಶದ ಮೇಲೆ ಪೋಲಿಸರು ವಿಜ್ಞಾನಿಗಳನ್ನು ಬಂಧಿಸುತ್ತಾರೆ. ಯಾಕೆ ಬಂಧಿಸಿದ್ದಾರೆಂದು ಹೇಳದೆ ತಮ್ಮ ಹೆಸರನ್ನು ಸತ್ಯ ಮತ್ತು ಧರ್ಮ ಎಂದು ವಿಚಾರಣೆ ವೇಳೆ ಪೋಲೀಸರು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಏನು ತಪ್ಪು ಮಾಡಿದ್ದಾರೆಂದು ಹೇಳದೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವಂತೆ ಪೋಲೀಸರು ನಂಬಿಜೀಯವರ ಕತ್ತಿನ ಮೇಲೆ ಏಟನ್ನು ಹಾಕುತ್ತಾರೆ. ಅಕ್ಷರಶಃ ಕನ್ನಡದಲ್ಲಿ ಸಾಯಿಕುಮಾರ್ ರವರ ಸಿನಿಮಾಗಳಲ್ಲಿ ತೋರಿಸುವ ರೀತಿಯಲ್ಲಿ ಪೋಲೀಸರು ನಡೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ರಾಕೆಟ್ ಇಂಜಿನ್ನಿನ ವಿನ್ಯಾಸ, ಅದರ ಹಿಂದಿನ ತಂತ್ರಜ್ಞಾನ ಮತ್ತು ಬಿಡಿ ಭಾಗಗಳನ್ನು ತಯಾರಿಸಲು ಆ ವಿನ್ಯಾಸವನ್ನು ಇತರ ಖಾಸಗಿ ಕಂಪನಿಗೆ ಕೊಟ್ಟಿರುವ ವಿಚಾರಗಳನೆಲ್ಲಾ ಪೋಲೀಸರಿಗೆ ನಂಬಿಜೀ ತಿಳಿಸುತ್ತಾರೆ. ವಿನ್ಯಾಸ ಇದ್ದ ಮಾತ್ರಕ್ಕೆ ಇಂಜಿನ್ ತಯಾರಿಸಲು ಸಾಧ್ಯವಿಲ್ಲ ಮತ್ತು ಅದನ್ನು ಯಾರೂ ಕೊಳ್ಳುವುದಿಲ್ಲ ಎಂಬುದನ್ನೂ ಸಹ ಸ್ಪಷ್ಟಪಡಿಸುತ್ತಾರೆ. ಆದರೆ, ಪೋಲಿಸರು ಅವರ ಮಾತಿಗೆ ಬೆಲೆಕೊಡದೆ ತಮ್ಮದೇ ಆದ ಕಥೆ ಕಟ್ಟಿದ್ದರು, ಮಾರಿಯಂ ರಶೀದಾರನ್ನು ಭೇಟಿಯಾಗಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಸೂಚಿಸುತ್ತಾರೆ. ಯಾವುದನ್ನು ಒಪ್ಪಿಕೊಳ್ಳದ ನಂಬಿಜೀಗೆ ಕಡೆಯದಾಗಿ ಯಾವುದಾದರು ಒಬ್ಬ ಮುಸಲ್ಮಾನ್ ಗೆಳೆಯರೊಬ್ಬರ ಹೆಸರನ್ನು ಹೇಳಿದರೆ ಬಿಟ್ಟುಬಿಡುತ್ತೇವೆ ಎಂಬಂತಹ ಆಮಿಷಗಳನ್ನು ಒಡ್ಡುತ್ತಾರೆ. ನಂಬಿಜೀಗೆ ಪರಿಚಯವಿದ್ದ ಮುಸಲ್ಮಾನ್ ಗೆಳೆಯ ಎಂದರೆ ಅಬ್ದುಲ್ ಕಲಾಂ ಮಾತ್ರ! ಪೋಲಿಸರು ಹೆದರಿಸಿ ಮತ್ತು ಚಿತ್ರಹಿಂಸೆ ಮುಂದುವರೆಸುತ್ತಾರೆ. ಆದರೆ, ನಂಬಿಜೀ ಸತ್ಯವನ್ನು ಮಾತ್ರ ನುಡಿಯುತ್ತೇನೆ ಎಂದು ಪೋಲಿಸರಿಗೆ ಪ್ರತಿಕ್ರಯಿಸುವುದಿಲ್ಲ ಎಂದು ಪ್ರತಿಭಟಿಸುತ್ತಾರೆ. ನಂಬಿಜೀ ತುಂಬಾ ತಾಕೀತು ಮಾಡಿದರ ಕಾರಣ ಸಿಬಿ ಮ್ಯಾಥಿವ್ಸ್ ಭೇಟಿಯಾಗುತ್ತಾರೆ ಅದೂ ಕೂಡ 3 ನಿಮಿಷ ಮಾತ್ರ!

ಇದೆಲ್ಲದರ ನಡುವೆ ಕೇರಳದ ಕಮ್ಯುನಿಸ್ಟ್ ರಿಂದ ಪ್ರೇರೇಪಿತವಾದ ಪತ್ರಿಕೆಗಳು ಇವರ ಕಥೆಯನ್ನು ಅಸಹ್ಯವಾಗುವ ರೀತಿ ಲೇಖನಗಳನ್ನು ಪ್ರಕಟಿಸುತ್ತದೆ. ಮಾರಿಯಂ ರಶೀದಾ ಜೊತೆಗೆ ಹಾಸಿಗೆ ಹಂಚಿಕೊಂಡಿದ್ದಾರೆ ಎಂದು ತಮ್ಮದೇ ಅದ ರೀತಿ ಪತ್ರಿಕೆಗಳು ವರದಿ ಮಾಡಿದವು. ರಾಷ್ಟ್ರದ ಮುಂದೆ ನಂಬಿಜೀಯವರನ್ನು ದೇಶದ್ರೋಹಿಯಂತೆ ಚಿತ್ರಿಸಲಾಯಿತು. ಸಮಾಜ ಅವರ ಮನೆಯವರನ್ನು ಕೆಟ್ಟ ರೀತಿ ನೋಡಲು ಪ್ರಾರಂಭ ಮಾಡಿತು. ಅವರ ಹೆಂಡತಿ ಖಿನ್ನತೆಗೆ ಒಳಗಾಗಿ, ಮಾತಾಡುವುದನ್ನೇ ನಿಲ್ಲಿಸುತ್ತಾರೆ. ತೀವ್ರತೆ ಹೆಚ್ಚಿದಂತೆ ಸಿಬಿ ಮ್ಯಾಥಿವ್ಸ್ ಕೇಸನ್ನು ಸಿ.ಬಿ.ಐ. ಗೆ ವಹಿಸುತ್ತಾರೆ. ಅವರ ವಿಚಾರಣೆಯಲ್ಲಿ ನಂಬಿಜೀ ವಿವರವಾಗಿ ಸತ್ಯವನ್ನು ಬಿಚ್ಚಿಡುತ್ತಾರೆ. ಎಲ್ಲಾ ರೀತಿಯ ಪರೀಕ್ಷೆಯಲ್ಲಿ ಅವರು ಸತ್ಯ ನುಡಿದಿದ್ದಾರೆಂದು ಸಿ.ಬಿ.ಐ ಅಧಿಕಾರಿಗಳಿಗೆ ಮನವರಿಕೆಯಾಗುತ್ತದೆ. ಅಲ್ಲಪ್ಪಿಯಲ್ಲಿ ಎಲ್ಲಾ ರೀತಿಯ ವಿಚಾರಣೆ ಮುಗಿಸಿ ಜೈಲಿನಲ್ಲಿ 27 ದಿನಗಳ ಕಾಲ ಕಳೆದ ನಂತರ ಕಡೆಗೆ ನಂಬಿಜೀ, ಸಸಿಕುಮಾರ್, ಎಸ್.ಕೆ.ಶರ್ಮಾ, ಚಂದ್ರಶೇಖರ್ ರವರಿಗೆ ಬೇಲಿನ ಮೇಲೆ ಬಿಡುಗಡೆಯಾಗುತ್ತದೆ. ಬೇಲಿನ ಮೇಲೆ ಬಿಡುಗಡೆಯಾದರೂ ಸಮಾಜ ಅವರನ್ನು ಕೀಳಾಗೆ ನೋಡುತ್ತಿತ್ತು. ಮನೆಗೆ ಬಂದ ನಂಬಿಜೀ ಹೆಂಡತಿ ಹತ್ತಿರ ತೆರಳುತ್ತಾರೆ. ಗಂಡನನ್ನು ನೋಡಿದ ಆಕೆ ಪ್ರಾಣಿಯೂ ಅಲ್ಲದ ಮನುಷ್ಯನೂ ಅಲ್ಲದ ವಿಚಿತ್ರವಾದ ರೀತಿಯಲ್ಲಿ ಕಿರುಚಿದರು ಎಂದು ನಂಬಿಜೀ ತಮ್ಮ ಆತ್ಮಕತೆಯಲ್ಲಿ ಹೇಳುತ್ತಾರೆ. ಕೆಲ ದಿನಗಳ ನಂತರ ಸತ್ಯಕ್ಕಾಗಿ ಹೋರಾಡಬೇಕೆಂದು ಭಾರತದ ಪ್ರಸಿದ್ದ ವಕೀಲರಾದ ಹರೀಶ್ ಸಾಳ್ವೆಯವರ ಮುಂದೆ ತಮ್ಮ ಪ್ರಕರಣವನ್ನು ಬಿಚ್ಚಿಟ್ಟು, ತಮ್ಮ ಪರವಾಗಿ ವಾದ ಮಾಡಲು ಕೇಳಿಕೊಳ್ಳುತ್ತಾರೆ. ಕೋರ್ಟಿನಲ್ಲಿ ವಿಚಾರಣೆ, ವಾದ ನಡೆದ ನಂತರ ಇದೊಂದು ಷಡ್ಯಂತ್ರವಾಗಿದ್ದು ನಂಬಿ ನಾರಾಯಣನ್ ಮತ್ತಿತರ ಆರೋಪಿಗಳು ನಿರಪರಾಧಿಗಳೆಂದು ಸಾಬೀತಾಗಿ ಬಿಡುಗಡೆಯಾಗುತ್ತಾರೆ.

ಕಾಂಗ್ರೇಸಿನ ಕರುಣಾಕರನ್ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಬೇಕೆಂದು ಕಾಂಗ್ರೇಸಿನವರೇ ಆದ, ನಂತರ ದಿನಗಳಲ್ಲಿ ಭಾರತದ ರಕ್ಷಣಾ ಮಂತ್ರಿಯಾದ ಏ.ಕೆ.ಆಂಟನಿ, ಒಮನ್ ಶ್ಯಾಂಡಿ ಮತ್ತವರ ತಂಡ ಅಮೇರಿಕಾದ ಸಿ.ಐ.ಏ ಹೆಣೆದ ಈ ಷಡ್ಯಂತ್ರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತು. ನಮ್ಮಲ್ಲಿರುವ ರಾಜಕೀಯದ ದುರುದ್ದೇಶ ಮತ್ತು ಭ್ರಷ್ಟ ಮನಸ್ಥಿತಿ ಈ ದೇಶದ ವಿಜ್ಞಾನಿಗಳ ಉತ್ಸಾಹದ ನಾಶ ಮತ್ತು ಪ್ರತಿಷ್ಠಿತ ಸಂಸ್ಥೆಯಾದ ಇಸ್ರೋದ ಮಾನನಷ್ಟಕ್ಕೆ ಕಾರಣವಾಯಿತು. ಇಸ್ರೋ ವಿರುದ್ಧ ಇಂತಹ ಷಡ್ಯಂತ್ರ ನಡೆಯದಿದ್ದರೆ ಜಿ.ಎಸ್.ಎಲ್.ವಿ ರಾಕೆಟ್ಟನ್ನು ಉಡಾವಣೆ ಮಾಡಲು ಮುಂದಿನ 15 ವರ್ಷ ಬೇಕಾಗಿರಲಿಲ್ಲ. 2018 ರಲ್ಲಿ ಭಾರತದ ಸುಪ್ರೀಂಕೋರ್ಟು ನಂಬಿಜೀಗೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ತೀರ್ಪು ನೀಡಿತು. ಇದರ ಮುಂದುವರೆದ ಭಾಗವಾಗಿ 18 ಮಾಜಿ ಪೋಲೀಸ್ ಅಧಿಕಾರಿಗಳ ಮೇಲೆ ಸಿ.ಬಿ.ಐ. ಎಫ್.ಐ.ಆರ್ ದಾಖಲಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಸೇವೆಗಾಗಿ ಭಾರತ ಸರ್ಕಾರ 2019 ರಲ್ಲಿ ನಂಬಿಜೀ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಈ ರೀತಿಯ ಪರಿಸ್ಥಿತಿ ಭಾರತದ ಯಾವ ಕ್ಷೇತ್ರಕ್ಕೂ ಬರದಿರಲಿ ಎಂದು ಆಶಿಸೋಣ. ಭಾರತ ಇಂತಹ ಭ್ರಷ್ಟತೆ, ಕಾಂಗ್ರೇಸ್ ಮತ್ತು ಕಮ್ಯೂನಿಸ್ಟ್ ರಂತಹ ಹೊಲಸು ರಾಜಕೀಯದಿಂದ ಮುಕ್ತವಾಗಲಿ. ನಮ್ಮ ಪೋಲೀಸ್, ಸಿ.ಬಿ.ಐ, ಗುಪ್ತಚರ ಇಲಾಖೆ ಸ್ವಾಭಿಮಾನಿ ಮತ್ತು ಗಟ್ಟಿಯಾಗಲಿ.

****************************************************************************

Nambi Narayanan's Autobiography - 

Ready To Fire: How India and I Survived the ISRO Spy Case

The Autobiography

"Know WHY is More Important Than Know HOW" - Nambi Narayanan

June 23, 2021

ಹೊಸದೊಂದು ಸಾಮಾಜಿಕ ಜಾಲತಾಣ ಬಂದಿದೆ - ಕ್ಲಬ್ ಹೌಸ್

ಕಳೆದ 4-5 ವಾರದಿಂದ ಅಂದರೆ ಮೇ ತಿಂಗಳಲ್ಲಿ ಭಾರತದಲ್ಲಿ ಹೊಸದಂದು ಸಾಮಾಜಿಕ ಜಾಲತಾಣ ಹೆಚ್ಚು ಸುದ್ಧಿಯಲ್ಲಿದೆ. ಕಳೆದ ವರ್ಷ ಲಾಕ್ಡೌನ್ ಶುರುವಾದಾಗ ಗೂಗಲ್ ಮೀಟ್, ವಾಟ್ಸಪ್ ವೀಡಿಯೋ ಕಾಲ್, ಜೂಮ್, ಸ್ಕೈಪ್ ಆಪ್ಗಳು ಹೆಚ್ಚು ಉಪಯೋಗಿಸಲ್ಪಟ್ಟವು. ಎರಡನೆಯ ಅಲೆಯ ಈ ಹೊತ್ತಲ್ಲಿ ನಮಗೆ ಪರಿಚಯವಾದದ್ದೇ ಕ್ಲಬ್ ಹೌಸ್. ಈ ಆಪ್ ಬಂದದ್ದೇ ತಡ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾ ಗ್ರಾಮ್  ಮತ್ತು ಟ್ವಿಟರ್ ಬಳಿಕೆ ಕಮ್ಮಿಯಾಗಿರುವುದಂತು ನಿಜ. ಕಳೆದ ತಿಂಗಳು ಕಾಂಗ್ರೇಸ್ ನಾಯಕ ದಿಗ್ವಿಜಯ ಸಿಂಗ್ ಪಾಕೀಸ್ತಾನದ ಪತ್ರಕರ್ತನೊಂದಿಗೆ ಆರ್ಟಿಕಲ್ 370 ಬಗ್ಗೆ ವಿವಾದಾತ್ಮಕ ಚರ್ಚೆ ಮಾಡಿದ್ದು ಇದೇ ಕ್ಲಬ್ ಹೌಸಲ್ಲಿ!

Clubhouse Logo

ಏನಿದು ಕ್ಲಬ್ ಹೌಸ್? ಇದೊಂದು ಸಾಮಾಜಿಕ ಜಾಲತಾಣವಾಗಿದ್ದು, ಬಳಕೆದಾರರು ಚರ್ಚಾ ಕೋಣೆಗಳಲ್ಲಿ ಸಂವಹನ ಮಾಡಬಹುದು. ಒಂದು ಚರ್ಚಾ ಕೋಣೆಯಲ್ಲಿ ಸುಮಾರು 5000 ಜನ ಪಾಲ್ಗೊಳ್ಳಬಹುದಾಗಿದೆ. ಚರ್ಚೆಯ ಆಯೋಜಕರು ಯಾರು ಮಾತಾಡಬಹುದು ಎಂಬುದನ್ನು ನಿಯಂತ್ರಣ ಮಾಡಬಹುದಾಗಿದೆ. ಕಳೆದ ವರ್ಷ ಮಾರ್ಚಿನಲ್ಲಿ ಐ-ಫೋನ್ ಬಳಕೆದಾರರಿಗೆ ಈ ಆಪ್ ಬಿಡುಗಡೆಯಾದರೆ, ಈ ತಿಂಗಳ ಮೇ ಅಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಇದು ಲಭ್ಯವಾಯಿತು. ಕೆಲವರು ಎರಡು-ಮೂರು ಗಂಟೆ ಕ್ಲಬ್ ಹೌಸ್ ಅಲ್ಲಿ ಕಾಲ ಕಳೆಯುತ್ತಿದ್ದಾರೆ, ಇನ್ನು ಕೆಲವರು ದಿನವಿಡೀ ಇದರಲ್ಲೇ ಕಾಲಕಳೆಯುವುದನ್ನು ನೋಡಬಹುದು. ಮತ್ತೂ ಕೆಲವರು ಒಂದು ಚರ್ಚಾ ಕೋಣೆಯಿಂದ ಮತ್ತೊಂದಕ್ಕೆ ಜಿಗಿಯುವುದನ್ನು ಗಮನಿಸಬಹುದು. ನಾನು ಗಮನಿಸಿರುವ ಹಾಗೆ ಸಂಜೆ ಆರರ ನಂತರ ಕೆಲವು ಮುಖ್ಯ ಎನ್ನಬಹುದಾದ ಚರ್ಚೆಗಳು ನಡೆಯುತ್ತವೆ. ರಾತ್ರಿ 10 ನಂತರ ಇದು ಮತ್ತಷ್ಟು ರಂಗು ಪಡೆದುಕೊಳ್ಳುತ್ತದೆ. ಹಾಸ್ಯ, ಹಾಡು, ಕಾಲಹರಟೆ, ಲವ್ ಗುರು, ಅಂತ್ಯಾಕ್ಷರಿ, ಕಥೆ ಅದರಲ್ಲೂ ದೆವ್ವ, ಭೂತ ಅಥವಾ ಮಾಟ ಮಂತ್ರದ ಕಥೆ ಹೇಳೋದು ಮುಂತಾದ ಅನೇಕ ರೀತಿ ರೂಮ್ಗಳು ಇಲ್ಲಿ ಶುರುವಾಗುತ್ತವೆ. ಪರಿಚರಯಸ್ಥರಿಗಿಂತ ಅಪರಿಚಿತರೇ ಹೆಚ್ಚು ಸಿಗಬಹುದಾದಂತಹ ತಾಣವಿದು. ನಮಗೆ ಆಸಕ್ತಿ ಇರುವ ವಿಚಾರಗಳನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ತಕ್ಕ ಚರ್ಚ ಕೋಣೆಯಲ್ಲಿ ಕೇಳುಗನಾಗಿ ಭಾಗವಹಿಸುವ ಅವಕಾಶವೂ ಇದೆ. ಇದರೊಟ್ಟಿಗೆ ನಮ್ಮ ಮೊಬೈಲ್ ಕ್ಯಾಲೆಂಡರ್ ಅಲ್ಲಿ ಮುಂಬರುವ ಕಾರ್ಯಕ್ರಮದ ವಿವರವನ್ನು ದಾಖಲಿಸಿಕೊಳ್ಳಬಹುದು.

ಯಾವುದೇ ವಿಚಾರವಾಗಲಿ ಕೆಟ್ಟದ್ದು, ಒಳ್ಳೆಯದು ಎಂಬುದು ಇದ್ದೇ ಇರುತ್ತದೆ. ಯಾವುದನ್ನು ಉಪಯೋಗಿಸಿಕೊಳ್ಳಬೇಕು ಅಥವಾ ಬಿಡಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟದ್ದು. ಈ ವಿಚಾರ ಕ್ಲಬ್ ಹೌಸ್ಗೆ ಕೂಡ ಅನ್ವಯವಾಗುತ್ತದೆ. ಇಲ್ಲಿ ಕೂಡ ಅನೇಕ ಒಳ್ಳೆಯ ಸಂಗತಿ ಮತ್ತು ಕೆಟ್ಟದ್ದು ಸಿಗುತ್ತದೆ. ಕೆಲವು ದಿನಗಳಿಂದ ನಾನು ಕೆಲವು ಚರ್ಚಾ ಕೋಣೆಯಲ್ಲಿ ಕೇಳುಗನಾಗಿ ಇದ್ದೆ. 'Coffee with ಭಟ್ರು' ಅಲ್ಲಿ ವಿಶ್ವವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ಟರು ಮುದ್ರಣ ಮಾಧ್ಯಮ ಕುರಿತು ವಿಚಾರವನ್ನು ಹಂಚಿಕೊಂಡರು. ಕನ್ನಡದಲ್ಲಿ ಗಣಿತ ಮತ್ತು ವಿಜ್ಞಾನ, ಜೂನ್ 21 ರಂದು ಯೋಗದ ಬಗೆಗಿನ ವಿಚಾರಗಳು, ಭಾರತದಲ್ಲಿ ಪೆಟ್ರೋಲ್ 100 ಗಡಿ ದಾಟಿದರ ಬಗ್ಗೆ, ಡಾ.ಎಸ್.ಎಲ್.ಭೈರಪ್ಪನವರ ಸಾಹಿತ್ಯ ಕುರಿತು, ರೈತ ಮಸೂದೆಯ ಪರ ಹಾಗೂ ವಿರೋಧ ಕುರಿತು, ವೇದ-ಉಪನಿಷತ್ತು ಮತ್ತು ಸಂಸ್ಕೃತ ಭಾಷೆ, ಒಂದು ದಿನ ಚಕ್ರವರ್ತಿ ಸೂಲಿಬೆಲೆಯವರ ಪರ ಮತ್ತೊಂದು ದಿನ ವಿರೋಧವಾಗಿರುವ ಚರ್ಚ ಕೋಣೆಯಲ್ಲೂ ಇದ್ದೆ. ಹೀಗೆ ಕೆಲವು ವಿಚಾರಗಳ ಮೇಲೆ ಜನರ ದೃಷಿಕೋನ, ಅಭಿಪ್ರಾಯಗಳನ್ನು ಮತ್ತು ಮುಖ್ಯವಾಗಿ ನಮಗೆ ತಿಳಿಯದಿರುವ ವಿಚಾರವನ್ನು ತಿಳಿದಂತಾಯಿತು. ವಿಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ದಿಮತೆ (Artificial Intelligence) ಕುರಿತು ಇಲ್ಲಿ ಹೆಚ್ಚು ಚರ್ಚೆ ನಡೆಯುವುದನ್ನು ಗಮನಿಸಬಹುದು.

ದುರಾದೃಷ್ಟವೆಂದರೆ ಇಲ್ಲೂ ಸಹ ಕೆಲವು ಕಿಡಿಗೇಡಿಗಳು ಫೇಕ್ ಅಕೌಂಟುಗಳ ಮೂಲಕ ಒಳಬಂದಿದ್ದಾರೆ. ಕೆಲವು ಸಲ ಮುಖ್ಯವಾದ ವಿಚಾರದ ಚರ್ಚೆ ಮಧ್ಯೆ ಕೀಟಲೇ ಮಾಡಿ ತೊಂದರೆ ಕೊಟ್ಟಿದ್ದಾರೆ. ಮಿಮಿಕ್ರಿ ಮಾಡಿ ಕೆಲವರನ್ನು ಮರುಳು ಮಾಡಿದ್ದು ಇದೆ. ಇನ್ನೂ ಕೆಲವು ಚರ್ಚಾ ಕೋಣೆಗಳಲ್ಲಿ ಕೆಲಸಕ್ಕೆ ಬಾರದ ವಿಚಾರವನ್ನು ಚರ್ಚಿಸಿದ್ದು ಇದೆ. ಈ ಚರ್ಚ ಕೋಣೆಯೊಳಗೆ ಯಾರು ಬೇಕಾದರೂ ಬರಬಹುದಾದ್ದರಿಂದ ಇಲ್ಲಿ ಖಾಸಗೀತನದ ರಕ್ಷಣೆ ಬಗ್ಗೆ ಇನ್ನೂ ಉತ್ತರವಿಲ್ಲ. ಸಾಮಾಜಿಕವಾಗಿ ಸೂಕ್ಷ್ಮವಾದ ವಿಚಾರಗಳು ಚರ್ಚೆ ಆಗಬಹುದಾದಂತಹ ಇದರಲ್ಲಿ ಮಾತುಗಳನ್ನು ಕಳ್ಳಗಿವಿಗಳು ಕೇಳಿಸಿಕೊಳ್ಳುವ ಸಾಧ್ಯತೆಗಳಿವೆ. ಫೇಕ್ ಅಕೌಂಟ್ಗಳನ್ನು ಈ ಆಪ್ ಹೇಗೆ ನಿಗ್ರಹಿಸುತ್ತದೆ ಎಂಬುದು ಕೂಡ ಪ್ರಶ್ನೆಯಾಗಿದೆ.

ಕ್ಲಬ್ ಹೌಸ್ ನಲ್ಲಿ ಈಗ ನಡೆಯುತ್ತಿರುವ ಚರ್ಚೆಗಳ ಪ್ರಕ್ರಿಯೆ ನೋಡಿದರೆ ಇದೊಂದು ಅದ್ಭುತವಾದ ವೇದಿಕೆಯೇ ಹೌದು. ಅಮೇರಿಕಾದ ಅಧ್ಯಕ್ಷೀಯ ಚುಣಾವಣೆ ಮೇಲೆ ಫೇಸ್ಬುಕ್ ಹಾಗೂ ಟ್ವಿಟ್ಟರ್ ಪ್ರಭಾವ ಬೀರಿರುವುದು ಸತ್ಯ. ಹೀಗೆ ಮುಂದೊಂದು ದಿವಸ ಕ್ಲಬ್ ಹೌಸ್ ಕೂಡ ರಾಜಕೀಯವಾಗಿ ಪ್ರಭಾವ ಬೀರಬಲ್ಲ ಆಪ್ ಆದರೆ ಆಶ್ಚರ್ಯವಿಲ್ಲ. ಹೌದು, ಹೊಸದೊಂದು ಸಾಮಾಜಿಕ ಆಪ್ ಬಂದಿದೆ. ಇದರಲ್ಲಿ ಒಳಿತು ಇದೆ, ಕೆಟ್ಟದ್ದು ಇದೆ ಆದರೆ, ಇದರಲ್ಲಿರುವ ಒಳಿತನ್ನು ಮಾತ್ರ ಉಪಯೋಗಿಸಿಕೊಳ್ಳೋಣ. ಜಗತ್ತು ತುಂಬಾ ಚಿಕ್ಕದಾಗಿದೆ, ಬನ್ನಿ, ಯಾವುದಾದರೂ ಕ್ಲಬ್ಬಿನಲ್ಲಿ ನಾವು ಭೇಟಿಯಾಗೋಣ.

ಇದನ್ನೂ ಓದಿ: ಮುಂಬರುವ ಚುನಾವಣೆ ಕ್ಲಬ್‌ ಹೌಸ್‌ನಲ್ಲಿ ನಡೆದರೆ ಆಶ್ಚರ್ಯಪಡಬೇಡಿ!

June 19, 2021

ಹುಲಿಯ ಮೀಸೆ

ಊರಿನ ಹೊರಗೆ ಹನುಮಂತನ ಗುಡಿ. ಆ ಗುಡಿಯಲ್ಲೊಬ್ಬ ಸನ್ಯಾಸಿ. ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಎದ್ದು ಹತ್ತಿರದಲ್ಲಿದ್ದ ಹೊಳೆಯಲ್ಲಿ ಸ್ನಾನ ಮಾಡಿ ಬಂದು, ಹನುಮಂತನಿಗೆ ಪೂಜೆಮಾಡಿ, ಧ್ಯಾನಕ್ಕೆ ಕೂರುತ್ತಿದ್ದ. ಧ್ಯಾನದ ನಂತರ ಊರ ಸುತ್ತಾ ಭಿಕ್ಷಾಟನೆ ಮಾಡಿಕೊಂಡು ದೇವಸ್ಥಾನಕ್ಕೆ ಮರಳಿ ಬರುತ್ತಿದ್ದ. ನಂತರ, ಮಕ್ಕಳಿಗೆ ದೇವಾಲಯದಲ್ಲಿ ಪಾಠ ಮಾಡುತ್ತಿದ್ದ. ಮಧ್ಯಾಹ್ನದ ಹೊತ್ತಿಗೆ ಊರ ಸಾಹುಕಾರ ಮನೆಯಿಂದ ಊಟ ಬರುತ್ತಿತ್ತು. ಸಂಜೆವರೆಗೆ ಮತ್ತೊಮ್ಮೆ ಧ್ಯಾನ. ಸಂಜೆ ದೇವಾಲಯಕ್ಕೆ ಬಂದ ಹಳ್ಳಿಗರಿಗೆ ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳನ್ನು ಹೇಳುತ್ತಾ, ಪ್ರವಚನವನ್ನೂ ಮಾಡುತ್ತಿದ್ದ. ಸಂಜೆಯ ನಂತರ ಅಧ್ಯಯನ, ರಾತ್ರಿ ಊಟವಿಲ್ಲ. 

ಅದೊಂದು ದಿನ ಊರ ಹೆಣ್ಣು ಮಗಳೊಬ್ಬಳು ಸನ್ಯಾಸಿ ಹತ್ತಿರ ಬಂದು ಅಳುತ್ತಾ ಕೂರುತ್ತಾಳೆ. ಆಕೆಯನ್ನು ಸಮಾಧಾನಿಸಿ, ಸಮಸ್ಯೆಯನ್ನು ಸನ್ಯಾಸಿ ಕೇಳುತ್ತಾನೆ. ಸಮಸ್ಯೆ ಇಷ್ಟೇ, ಆಕೆಯ ಗಂಡನಿಗೆ ಸಿಟ್ಟು ಜಾಸ್ತಿ, ಇದೇ ಕಾರಣಕ್ಕೆ ಗಂಡ ಹೆಂಡತಿ ನಡುವೆ ಜಗಳ, ಮನಸ್ತಾಪ. ಹೊಂದಾಣಿಕೆ ಮಾಡಿಕೊಳ್ಳಲು ಆಗುವುದಿಲ್ಲ ಎನ್ನುವ ಮಟ್ಟಕ್ಕೆ ಆಕೆ ತಲುಪಿದ್ದಳು. ಈ ಸಮಸ್ಯೆಯನ್ನು ಮುಂದಿಟ್ಟು "ನಾನು, ನನ್ನ ಗಂಡ ಆರಾಮಾಗೆ ಬಾಳಲು ಏನು ಮಾಡಬೇಕು?" ಆ ಹೆಣ್ಣು ಮಗಳು ಕೇಳುತ್ತಾಳೆ. ಸಂಸಾರದ ಸಮಸ್ಯೆಗಳಿಂದ ದೂರವಿರುವ ಸನ್ಯಾಸಿಗಳಿಗೆ ಇಂತಹ ವಿಚಾರ ಬರುತ್ತದೆ ಎಂದು ಮನಸ್ಸಿನಲ್ಲೇ ಅಂದುಕೊಂಡು ಮುಗುಳ್ನಗುತ್ತಾನೆ.

ಒಂದೆರಡು ನಿಮಿಷ ಯೋಚಿಸಿ "ಸರಿ, ಇದಕ್ಕೊಂದು ಪರಿಹಾರ ಎಂದು ಒಂದು ಪೂಜೆ ಮಾಡೋಣ. ಆ ಪೂಜೆಗೆ ಒಂದು ಪದಾರ್ಥ ಬೇಕು. ಅದನ್ನು ನೀನೇ ತರಬೇಕು" ಎಂದು ಹೇಳುತ್ತಾನೆ. ಏನೋ ಒಂದು ಪರಿಹಾರ ಇದೆಯಲ್ಲ ಎಂಬ ಖುಷಿಯಲ್ಲಿ "ಏನದು ಪದಾರ್ಥ ಹೇಳಿ, ನಾನು ತಂದೇ ತರುತ್ತೇನೆ" ಎಂದು ಹೇಳುತ್ತಾಳೆ. "ಸರಿ ಹಾಗಾದರೆ, ಕಾಡಿಗೆ ಹೋಗಿ ಹುಲಿಯೊಂದರ ಮೀಸೆ; ಎರಡೇ ಎರಡು ಮೀಸೆಯ ಕೂದಲನ್ನು ತರಬೇಕು" ಎಂದು ಸನ್ಯಾಸಿ ಹೇಳುತ್ತಾನೆ.

ಸನ್ಯಾಸಿ ಹೇಳಿದ್ದನ್ನು ಕೇಳಿದ ಆಕೆ "ಹುಲಿಯ ಮೀಸೆನಾ! ಅದನ್ನು ಹೇಗೆ ತರುವುದು? ಬೇರೆ ಏನಾದ್ರು ಹೇಳಿ " ಎಂದು ಗಾಬರಿಗೊಂಡು ಹೇಳುತ್ತಾಳೆ. "ಇಲ್ಲ, ಇದು ಬಿಟ್ಟರೆ ಬೇರೆ ಪರಿಹಾರ ನನಗೆ ತಿಳಿದಿಲ್ಲ. ನೀನೇ ಸ್ವತಃ ಹುಲಿಯ ಮೀಸೆಯನ್ನು ತರಬೇಕು" ಎಂದು ಸನ್ಯಾಸಿ ಖಡಾಖಂಡಿತವಾಗಿ ಹೇಳುತ್ತಾನೆ. ಸರಿ, ತರುತ್ತೇನೆ ಎಂದು ಆಕೆ ನಮಸ್ಕರಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.

ಮಾರನೇ ದಿನದಿಂದಲೇ ಕಾಡಿಗೆ ಹೋಗಿ ಹುಲಿಯೊಂದನ್ನು ಗುರುತಿಸಿಕೊಳ್ಳುತ್ತಾಳೆ. ಅಂದಿನಿಂದ ಪ್ರತಿದಿನವೂ ಹುಲಿಯೊಂದಕ್ಕೆ ಕಾಡಿನ ಗುರುತಾದ ಒಂದು ಜಾಗದಲ್ಲಿ ಮಾಂಸವನ್ನು ತಂದಿಟ್ಟು ಮರದ ಮೇಲೆ ಕೂರುತ್ತಿದ್ದಳು. ಹುಲಿ ಮಾಂಸವನ್ನು ತಿಂದ ಮೇಲೆ ಮನೆಗೆ ಹಿಂದಿರುಗುತ್ತಿದ್ದಳು. ಕೆಲ ದಿನಗಳು ಹೀಗೆ ಮುಂದುವರೆದು, ಒಂದು ದಿನ ಮರ ಹತ್ತದೆ ಹುಲಿ ಮಾಂಸವನ್ನು ತಿನ್ನುವುದನ್ನು ದೂರದಿಂದಲೇ ನೋಡಿ ಹಿಂದಿರುಗಿದಳು. ಇದನ್ನೇ ಮುಂದುವರೆಸಿ ಕೆಲ ದಿನಗಳ ನಂತರ ಆ ಹುಲಿಯ ಸಮೀಪ ತೆರಳಿ, ಅದು ತಿನ್ನುವುದನ್ನು ನೋಡಿ ವಾಪಸ್ಸಾಗುತ್ತಿದ್ದಳು. ಆಕೆಯ ದೇಹದ ವಾಸನೆಯನ್ನು ಗುರುತಿಸಿದ ಹುಲಿ ಆಕೆಯನ್ನು ನೋಡಿ ಸುಮ್ಮನೆ ಇರುತ್ತಿತ್ತು. ಒಂದೆರಡು ತಿಂಗಳು ಹೀಗೆ ಮುಂದುವರೆದು, ನಂತರ ಆಕೆ ಹುಲಿಯ ಪಕ್ಕದಲ್ಲೇ ಇದ್ದು, ಅದರ ಮೈಯನ್ನು ಸವರುತ್ತ ಕೂತಿದ್ದು, ಹುಲಿ ಮಾಂಸವನ್ನು ತಿಂದ ನಂತರ ಆಕೆ ಹಿಂತಿರುಗುತ್ತಿದ್ದಳು.

ಒಂದು ದಿವಸ ಹುಲಿ ತಿನ್ನಬೇಕಾದರೆ ಆಕೆ ಹುಲಿಯ ಎರಡು ಮೀಸೆಯನ್ನು ಕೀಳುತ್ತಾಳೆ. ಹುಲಿ ಕೊಸರಾಡಿತೆ ವಿನಹ ಆಕೆಗೆ ಏನು ಹಾನಿ ಮಾಡದೇ ಮಾಂಸವನ್ನು ತಿಂದು ಹೊರಟಿತು. ಮೀಸೆ ಸಿಕ್ಕ ಖುಷಿಯಲ್ಲಿ ಆಕೆ ಸಂಜೆ ಹೊತ್ತಿಗೆ ಸನ್ಯಾಸಿ ಬಳಿಗೆ ಓಡೋಡಿ ಬರುತ್ತಾಳೆ. ಸನ್ಯಾಸಿ ಆ ಮೀಸೆಯ ಕೂದಲನ್ನು ಜೋಪಾನವಾಗಿ ಇಡಲು ಹೇಳಿ ಮಾರನೇ ದಿವಸ ಬೆಳಿಗ್ಗೆ ಪೂಜೆಗೆ ಬರಲು ತಿಳಿಸುತ್ತಾನೆ. 

ಮಾರನೇ ದಿವಸ ಹುಲಿಯ ಮೀಸೆಯೊಂದಿಗೆ ಆಕೆ ದೇವಸ್ಥಾನಕ್ಕೆ ಬರುತ್ತಾಳೆ. ಸನ್ಯಾಸಿಗೆ ಆ ಮೀಸೆಯನ್ನು ಕೊಟ್ಟು ತನ್ನ ಸಮಸ್ಯೆಯನ್ನು ಪರಿಹರಿಸುವಂತೆ ಕೈ ಮುಗಿಯುತ್ತಾಳೆ. ಹುಲಿಯ ಮೀಸೆಯನ್ನು ತೆಗೆದುಕೊಂಡ ಸನ್ಯಾಸಿ ಅಲ್ಲೇ ಹಣತೆಯಲ್ಲಿ ಉರಿಯುತ್ತಿದ್ದ ದೀಪದಲ್ಲಿ ಎರಡೂ ಕೂದಲನ್ನು ಸುಡುತ್ತಾನೆ. ಇದನ್ನು ನೋಡಿದ ಆ ಹೆಣ್ಣು ಮಗಳಿಗೆ ಸಿಟ್ಟು ಬಂದು "ಎಷ್ಟು ಕಷ್ಟ ಪಟ್ಟು, ತಾಳ್ಮೆಯಿಂದ, ತಿಂಗಳುಗಟ್ಟಲೆ ಕಷ್ಟ ಪಟ್ಟು ಹುಲಿಯ ಮೀಸೆಯನ್ನು ತಂದೆ. ಏನು ಮಾಡದೆ ಅದನ್ನು ಸುಟ್ಟು ಹಾಕಿದ್ದಿರಲ್ಲ" ಎಂದು ರೇಗುತ್ತಾಳೆ.

ಆಕೆಯ ಮಾತನ್ನು ಕೇಳಿದ ಸನ್ಯಾಸಿ "ನಿನ್ನ ಬುದ್ಧಿವಂತೆಕೆ ಮತ್ತು ತಾಳ್ಮೆಯಿಂದ ಆ ಕಾಡಿನ ಹುಲಿಯನ್ನೇ ಸಂಭಾಳಿಸಿ, ಅದರ ಮೀಸೆಯನ್ನು ತಂದೆ. ಇನ್ನು ನಿನ್ನ ಗಂಡನನ್ನು ಪಳಗಿಸಲು ನಿನ್ನಿಂದ ಸಾಧ್ಯವಿಲ್ಲವಾ? ಖಂಡಿತ ನಿನ್ನಿಂದ ಸಾಧ್ಯವಿದೆ. ಹೋಗು, ತಾಳ್ಮೆಯಿಂದ ಬಾಳು, ಜೀವನದಲ್ಲಿ ಜಯಿಸು" ಎಂದು ಹೇಳಿ ಸನ್ಯಾಸಿ ಆ ಹೆಣ್ಣು ಮಗಳಿಗೆ ಜೀವನದಲ್ಲಿ ಒಳಿತಾಗಲೆಂದು ಆಶೀರ್ವಾದ ಮಾಡಿ ಕಳಿಸಿಕೊಡುತ್ತಾನೆ.

~ ಅನಾಮಿಕ