July 16, 2021

ಕಾರ್ಗಿಲ್ ಕದನಕ್ಕೆ ಮುನ್ನುಡಿಯಂತಿತ್ತು ಫೋಖ್ರಾನ್ ಪರಮಾಣು ಪರೀಕ್ಷೆ!

ಜೂನ್-ಜುಲೈ ತಿಂಗಳು ಬಂತೆಂದರೆ ತಕ್ಷಣ ನೆನಪಾಗುವುದು ಕಾರ್ಗಿಲ್! ಭಾರತ ಪಾಕೀಸ್ತಾನದೊಟ್ಟಿಗೆ ಎಷ್ಟೇ ಶಾಂತಿ ಮತ್ತು ಸೌಹಾರ್ದತೆಯಿಂದ ಇರಬೇಕೆಂದು ಪ್ರಯತ್ನಪಟ್ಟರೂ ಸಹ ತಾನು ಅದಕ್ಕೆ ಅರ್ಹನಲ್ಲ ಎಂದು ಆ ಪಾಪಿ ದೇಶ 1999 ರಲ್ಲಿ ಮತ್ತೊಮ್ಮೆ ಸಾಬೀತು ಮಾಡಿತು. ಕವಿ ಹೃದಯದ ಪ್ರಧಾನಿ ಅಟಲ್ ಜೀ ಪಾಕೀಸ್ತಾನದ ನವಾಜ್ ಶರೀಫ್ಗೆ ಸ್ನೇಹದ ಹಸ್ತ ಚಾಚಿದರೂ ಆ ದೇಶ ನಮ್ಮ ಬೆನ್ನಿಗೆ ಚೂರಿ ಇರಿಯಿತು. ಸೈನಿಕರನ್ನೂ ಭಯೋತ್ಪಾದಕರ ವೇಶದಲ್ಲಿ ಕಾರ್ಗಿಲ್ ಬೆಟ್ಟಗಳ ಮೇಲೆ ನುಗ್ಗಿಸಿದ ಹೇಡಿ ರಾಷ್ಟ್ರವೆಂದರೆ ಅದುವೆ ಪಾಕೀಸ್ತಾನ!

Indian PM Atal Bihari Vajapayee greeting Pakistan counter part Nawaz Sharif 

ಚಳಿಗಾಲದಲ್ಲಿ ಮಂಜಿನಿಂದ ಆವೃತವಾಗಿ, -10 ರಿಂದ -20 ಡಿಗ್ರಿ ಅಷ್ಟು ತಾಪಾಮಾನಕ್ಕೆ ಜಾರುವ ಪ್ರದೇಶ ಕಾರ್ಗಿಲ್. ಸೆಪ್ಟೆಂಬರ್ 15 ರಿಂದ ಎಪ್ರಿಲ್ 15ರ ನಡುವೆ ಚಳಿಗಾಲದ ಕಾರಣ ಭಾರತ ಮತ್ತು ಪಾಕೀಸ್ತಾನದ ಸೈನಿಕರು ಬೆಟ್ಟದಿಂದ ಕೆಳಗಿಳಿದು ಹೋಗುತ್ತಾರೆ. ಚಳಿಗಾಲ ಮುಗಿದ ನಂತರ ಮತ್ತೆ ಸೈನಿಕರು ಬೆಟ್ಟವನ್ನು ಹತ್ತಿ ಕಾವಲು ಕಾಯುತ್ತಾರೆ. ಇದು 1977 ರಿಂದ ನಮ್ಮ ಮತ್ತು ಪಾಕೀಸ್ತಾನದ ನಡುವೆ ಇದ್ದಂತಹ ಒಂದು ಒಪ್ಪಂದ. ಆ ಒಪ್ಪಂದದ ಹೆಸರೇ 'ಜೆಂಟಲ್ಮೆನ್ಸ್ ಅಗ್ರಿಮೆಂಟ್' ಎಂದು. ಈ ಒಪ್ಪಂದದ ಹೆಸರಿಗೆ ಅಪವಾದ ಪಾಕೀಸ್ತಾನ ಎಂಬ ವಂಚಕ ರಾಷ್ಟ್ರ! 
 
1974ರ ಮೇ 18 ರಂದು ಭಾರತ ರಾಜಾಸ್ತಾನಿನ ಫೋಖ್ರಾನ್ ಅಲ್ಲಿ ಮೊದಲ ಬಾರಿಗೆ ಪರಮಾಣು ಪರೀಕ್ಷೆಯನ್ನು ನಡೆಸಿತು. ಇಂತಹ ಪರೀಕ್ಷೆಗಳು ಪರಮಾಣು ಪ್ರಸರಣಕ್ಕೆ ಕಾರಣವಾಗುತ್ತದೆ ಎಂದು ಅಮೇರಿಕಾ ಭಾರತದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿತ್ತು. ಈ ನಿರ್ಬಂಧಗಳ ನಡುವೆಯೂ ಸಹ 1998, ಮೇ 11 ರಂದು ಭಾರತ ಅಟಲ್ ಜೀ ನೇತೃತ್ವದಲ್ಲಿ ಅದೇ ಫೋಖ್ರಾನಿನಲ್ಲಿ 5 ಪರಮಾಣು ಪರೀಕ್ಷೆಗಳನ್ನು ನಡೆಸುತ್ತದೆ. 1974 ರ ನಂತರ, ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿತು ಹಾಗೂ ಚೀನಾ ಕೂಡ ಪಾಕೀಸ್ತಾನದೊಂದಿಗೆ ಪರಮಾಣು ಕುರಿತ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತಿತ್ತು. ಈ ಹಿನ್ನಲೆಯಲ್ಲಿ ಫೋಖ್ರಾನ್ ಪರಮಾಣು ಪರೀಕ್ಷೆ ದೇಶದ ರಕ್ಷಣೆ ಮತ್ತು ಸ್ವಾವಲಂಭನೆಯ ದೃಷ್ಟಿಯಿಂದ ಬಹು ಮುಖ್ಯವಾಗಿತ್ತು.

Pokhran Nuclear Test 1998

1995 ರಿಂದಲೇ ಅಮೇರಿಕಾದ ಗುಪ್ತಚರ ಇಲಾಖೆ ಸಾಟೆಲೈಟ್ಗಳ ಮೂಲಕ ಭಾರತ ಪರಮಾಣು ಪರೀಕ್ಷೆ ಕುರಿತ ಸಿದ್ಧತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಆದ್ದರಿಂದ ಭಾರತ ಅಮೇರಿಕಾ ಮತ್ತು ಇತರ ರಾಷ್ಟ್ರಗಳ ಕಣ್ಣು ತಪ್ಪಿಸಿ ಸಿದ್ಧತೆ ಮತ್ತು ಪರೀಕ್ಷೆಯನ್ನು ನಡೆಸುವ ಅಗತ್ಯವಿತ್ತು. ಪರೀಕ್ಷೆಯ ಸಿದ್ಧತೆ ಬಹಳ ಗೌಪ್ಯವಾಗೆ ನಡೆದಿತ್ತು. ಕೆಲವು ವಿಜ್ಞಾನಿಗಳು, ಹಿರಿಯ ಮಿಲಿಟರಿ ಅಧಿಕಾರಿಗಳು, ಅಟಲ್ಜೀ ಮತ್ತು ಒಂದಿಬ್ಬರು ಸರ್ಕಾರಿ ಅಧಿಕಾರಿಗಳ ಹೊರತಾಗಿ ಕ್ಯಾಬಿನೆಟ್ ಸಚಿವರು ಸೇರಿದಂತೆ ಯಾವುದೇ ರಾಜಕಾರಣಿಗೂ ಸಹ ವಿಚಾರ ತಿಳಿದಿರಲಿಲ್ಲ. ಡಿ.ಆರ್.ಡಿ.ಒ ಮತ್ತು ಬಾರ್ಕ್ ನ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಪರಮಾಣು ಶಸ್ತ್ರಾಸ್ತ್ರಗಳ ಜೋಡಣೆ, ವಿನ್ಯಾಸ, ಆಸ್ಫೋಟನ ಮತ್ತು ಪರೀಕ್ಷಾ ದತ್ತಾಂಶಗಳನ್ನು ಪಡೆಯುವಲ್ಲಿ ಭಾಗಿಯಾಗಿದ್ದರು. ಮತ್ತೊಂದು ತಂಡ ಆಸ್ಫೋಟನ ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು. ಸಿದ್ಧತೆಯ ಪ್ರಕ್ರಿಯೆಗಳು ಹೆಚ್ಚಾಗಿ ರಾತ್ರಿ ಹೊತ್ತು ನಡೆಯುತ್ತಿತ್ತು. ಅಮೇರಿಕಾದ ಸ್ಯಾಟೆಲೈಟ್ಗಳ ಕಣ್ತಪ್ಪಿಸಲು ಪ್ರತಿದಿನವೂ ಬಳಸಿದ ಉಪಕರಣಗಳನ್ನು ಅದರ ಮೂಲ ಸ್ಥಾನದಲ್ಲಿ ಇಡಲಾಗುತ್ತಿತ್ತು. ಕೇಬಲ್ಗಳನ್ನು ನೆಲದಲ್ಲಿ ಹೂತು, ಅದರ ಮೇಲೆ ಗಿಡಗಳನ್ನು ಇಡಲಾಗುತ್ತಿತ್ತು. ವಿಜ್ಞಾನಿಗಳು ಪೋಖ್ರಾನ್ ಹೊರತುಪಡಿಸಿ ಇತರ ಸ್ಥಳಗಳಿಗೆ ಗುಪ್ತನಾಮಗಳಲ್ಲಿ ಸೈನ್ಯದ ನೇತೃತ್ವದಲ್ಲಿ ಪ್ರಯಾಣಿಸುತ್ತಿದ್ದರು. ಮುಂಬೈನ ಚತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಂಬ್‌ಗಳನ್ನು ಎಎನ್ -32 ವಿಮಾನದಲ್ಲಿ ಜೈಸಲ್ಮೇರ್ ಸೇನಾ ನೆಲೆಗೆ, ಅಲ್ಲಿಂದ ಮೂರು ಹಂತಗಳಲ್ಲಿ ನಾಲ್ಕು ಟ್ರಕ್‌ಗಳಲ್ಲಿ ಸೈನ್ಯದ ಬೆಂಗಾವಲಿನಲ್ಲಿ ಪೋಖ್ರಾನ್‌ಗೆ ಸಾಗಿಸಲಾಯಿತು.

ಫೆಡರೇಶನ್ ಆಫ್ ಅಮೇರಿಕನ್ ಸೈಂಟಿಸ್ಟ್ಸ್‌ನ ಗುಪ್ತಚರ ತಜ್ಞ ಜಾನ್ ಪೈಕ್ ಈ ಪ್ರಸಂಗವನ್ನು "ಅಮೇರಿಕಾದ ಗುಪ್ತಚರ ಇಲಾಖೆಯ ದಶಕದ ವೈಫಲ್ಯ" ಎಂದು ಬಣ್ಣಿಸಿದ್ದಾನೆ. ಭಾರತ ಪರಮಾಣು ಪರೀಕ್ಷೆ ನಡೆಸಿದ ಬೆನ್ನಲ್ಲೆ 1998 ಮೇ ತಿಂಗಳಲ್ಲಿ ಅಮೇರಿಕಾದ ಸಹಾಯದೊಂದಿಗೆ ಪಾಕೀಸ್ತಾನವೂ ಸಹ ಬಲೂಚೀಸ್ತಾನದಲ್ಲಿ ಪರಮಾಣು ಪರೀಕ್ಷೆ ನಡೆಸುತ್ತದೆ. ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳು ಪರಮಾಣು ಪ್ರಕ್ರಿಯೆಯಲ್ಲಿ ನಿರತರಾಗಿರುವುದನ್ನು ನೋಡಿ ಜಗತ್ತು ಅಚ್ಚರಿಪಟ್ಟಿತು. ಇದದೊಟ್ಟಿಗೆ ಭಾರತವೂ ಸಶಕ್ತ ಮತ್ತು ಸ್ವಾಭಿಮಾನಿ ರಾಷ್ಟ್ರ ಎಂಬ ಸ್ಪಷ್ಟ ಸಂದೇಶ ಜಗತ್ತಿಗೆ ರವಾನೆಯಾಯಿತು. ಶಾಂತಿ ಸೌಹಾರ್ದತೆ ಇನ್ನು ಸಾಧ್ಯವಿಲ್ಲ ಎಂದು ಬಹುತೇಕರು ಅಂದುಕೊಂಡರು. ಅದೇ ಸಮಯದಲ್ಲಿ 'ಸಮರಕ್ಕೂ ಸಿದ್ಧ, ಸ್ನೇಹಕ್ಕೂ ಬದ್ಧ' ಎಂಬ ಸಂದೇಶ ಜಗತ್ತು ಅಚ್ಚರಿ ಪಡುವಂತೆ ಅಟಲ್ಜೀಯ ಮೂಲಕ ಭಾರತ ನೀಡಿತು.

ಭಾರತ ಮತ್ತು ಪಾಕೀಸ್ತಾನಗಳ ನಡುವೆ ಸ್ನೇಹ ಗಟ್ಟಿಯಾಗಿರಬೇಕೆಂದು ಅಟಲ್ಜೀ 17 ಜನ ಭಾರತೀಯರೊಂದಿಗೆ ದೆಹಲಿಯಿಂದ ಲಾಹೋರಿಗೆ ಬಸ್ಸಲ್ಲಿ ತೆರಳಿದರು. ಪಾಕೀಸ್ತಾನದ ಪ್ರಧಾನಿ ನವಾಜ್ ಶರೀಫ಼್ ರನ್ನು ಸ್ನೇಹದ ಸಂಕೇತವಾಗಿ ತಬ್ಬಿಕೊಳ್ಳುತ್ತಾರೆ. ಅಟಲ್ಜೀ ಅವರೊಂದಿಗೆ ಚಲನಚಿತ್ರ, ಕಲೆ, ಸಂಸ್ಕೃತಿ ಮತ್ತು ಕ್ರಿಕೆಟ್ ಕ್ಷೇತ್ರಗಳ ಪ್ರಖ್ಯಾತರುಗಳಾದ ಶತ್ರುಘನ್ ಸಿನ್ಹಾ, ಮಲ್ಲಿಕಾ ಸರಭಾಯ್, ಅರುಣ್ ಶೌರಿ, ಜಾವೇದ್ ಅಖ್ತರ್, ಸತೀಶ್ ಗುಜ್ರಾಲ್, ಕುಲದೀಪ್ ನಾಯರ್ ಮತ್ತು ಕಪಿಲ್ ದೇವ್ ಸಹ ಹೋಗಿದ್ದರು. ಅಟಲ್ಜೀ ಅವರ ಕುಟುಂಬದೊಂದಿಗೆ ಮೊಮ್ಮಗಳು ನಿಹರಿಕಾ, ಸಾಕು-ಮಗಳು ನಮಿತಾ ಮತ್ತು ಅವರ ಪತಿ ರಂಜನ್ ಭಟ್ಟಾಚಾರ್ಯರನ್ನು ಕರೆದುಕೊಂಡು ಹೋಗಿದ್ದರು. ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ವಿದೇಶಾಂಗ ಕಾರ್ಯದರ್ಶಿ ಕೆ. ರಘುನಾಥ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯ ಇತರ ಹಿರಿಯ ಅಧಿಕಾರಿಗಳು ತೆರಳಿದ್ದರು. ವಾಗಾ ಗಡಿಭಾಗದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಎರಡೂ ದೇಶಗಳ ನಡುವಿನ 21 ವರ್ಷಗಳ ದ್ವೇಷದ ಕೊಳೆ ತೊಳೆದುಹಾಕುವ ಇರಾದೆ ಭಾರತದ್ದಾಗಿತ್ತು. "ಉಭಯ ದೇಶಗಳ ನಡುವೆ ಬಸ್ ಸೇವೆಯನ್ನು ನಡೆಸುವುದು ನಮ್ಮ ಸಂಬಂಧವನ್ನು ಸುಧಾರಿಸುವ ಮತ್ತು ನಮ್ಮ ಜನಗಳನ್ನು ಒಗ್ಗೂಡಿಸುವ ಸಂಕೇತವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧ ಹಿಂಸಾಚಾರದ ಮೂಲಕ ಅಲ್ಲ ಬದಲಾಗಿ ಶಾಂತಿ ಮತ್ತು ಸ್ನೇಹದಿಂದ ಪರಿಹರಿಸಿಕೊಳ್ಳಬಹುದು" ಎಂದು ಅಟಲ್ಜೀ ಹೇಳಿದ್ದರು.

Prime Minister Atal Bihari Vajapayee and team towards Pakistan

ಎಲ್ಲವೂ ಸರಿಯಾಗಿತ್ತು, 1947 ರಲ್ಲಿ ಭಾರತ ತುಂಡಾಗಿ, 3 ಯುದ್ಧಗಳು ನಡೆದ ನಂತರ ಎರಡೂ ದೇಶಗಳು ಪರಸ್ಪರ ಹೊಂದಿಕೊಂಡು ಶಾಂತವಾಗಿ ಮುಂದುವರೆಯುವ ಭಾವನೆ ಭಾರತವನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಇಂಗ್ಲೆಂಡಿನಲ್ಲಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗುವುದರಲ್ಲಿತ್ತು. ಜಗತ್ತಿನ ಗಮನ ಕ್ರಿಕೆಟ್ ಕಡೆ ಹರಿದಿತ್ತು. ಮೇ ತಿಂಗಳಲ್ಲಿ ಕಾರ್ಗಿಲ್ ಕಣಿವೆಯಲ್ಲಿ ಭಾರತಕ್ಕೆ ಬಂದು ಅಪ್ಪಳಿಸಿತು ನಂಬಿಕೆ ದ್ರೋಹದ ಭಯಂಕರ ಸುದ್ಧಿ! ಚಳಿಗಾಲ ಮುಗಿಯುವ ಮುನ್ನವೇ ಪಾಕೀಸ್ತಾನದ ಸೇನೆ ಭಯೋತ್ಪಾದಕರ ವೇಷದಲ್ಲಿ ಕಾರ್ಗಿಲ್ ಬೆಟ್ಟವನ್ನು ಹತ್ತಿ ಭಾರತದ್ದೇ ಬಂಕರ್ಗಳಲ್ಲಿ ಅವಿತು ಕುಳಿತಿದ್ದರು. ಕಾರ್ಗಿಲ್ ಬೆಟ್ಟದ ಮೇಲೆ ಭಾರತೀಯರಲ್ಲದವರು ಬಂದಿದ್ದಾರೆ ಎಂಬ ಸೂಚನೆಯನ್ನು ಆ ಊರಿನ ದನ ಕಾಯುವ ಹುಡುಗರು ಸೈನ್ಯಕ್ಕೆ ಕೊಡುತ್ತಾರೆ. ಅನುಮಾನದಿಂದ ಸೌರಭ್ ಕಾಲಿಯಾ ನೇತೃತ್ವದಲ್ಲಿ 5 ಜನರ ಪಡೆಯನ್ನು ಭಜರಂಗಿ ಪೋಸ್ಟ್ ಕಡೆಗೆ ಸೇನೆ ಕಳಿಸುತ್ತದೆ. ಪಾಕೀಸ್ತಾನ ಐದು ಜನ ಸೈನಿಕನ್ನೂ ಸೆರೆಹಿಡಿದು ಎಳೆದೊಯ್ಯುತ್ತದೆ. ಭಾರತೀಯ ಸೈನಿಕರಿಗೆ ಅತ್ಯಂತ ಬರ್ಬರವಾಗಿ ಹಿಂಸೆ ಮಾಡಲಾಗುತ್ತದೆ. ಸೈನಿಕರ ಮೂಗು-ನಾಲಿಗೆ ಕತ್ತರಿಸಿ, ಕಣ್ಣು ಕಿತ್ತೆಸೆದು, ಕೈಕಾಲು ಬೆರಳುಗಳನ್ನು ಕತ್ತರಿಸಿ, ಸೌರಭ್ ಕಾಲಿಯಾ ಜೀವಂತವಾಗಿರುವಾಗಲೇ ಅವರ ಮರ್ಮಾಂಗವನ್ನು ಕತ್ತರಿಸಿ ತುಂಡು ತುಂಡಾದ ದೇಹವನ್ನು ಭಾರತಕ್ಕೆ ಪಾಕೀಸ್ತಾನ ಕಳಿಸಿತು! ಭಾರತ ಸರ್ಕಾರಕ್ಕೆ ಆಗ ಅರ್ಥವಾಗಿತ್ತು ತನ್ನ ಬೆನ್ನಿಗೆ ಪಾಕಿಸ್ತಾನ ಚೂರಿ ಇರಿದಿದೆ ಎಂದು!

2 comments:

  1. History has taught us many lessons, only thing is we should learn from our own mistakes and should never repeat it again. Pakistan is not a country to be trusted anymore, it's a terrorists producing factory

    ReplyDelete
  2. ಲೇಖನ ಚೆನ್ನಾಗಿ ಮೂಡಿ ಬಂದಿದೆ

    ReplyDelete